ಬೆಂಗಳೂರು, ಜೂ.6-ನೂತನ ನಗರ ಪೊಲೀಸ್ ಕಮಿಷನರ್ ಆಗಿ ಹಿರಿಯ ಐಪಿಎಸ್ ಅಧಿಕಾರಿ ಸೀಮಂತ್ಕುಮಾರ್ ಸಿಂಗ್ ಅವರು ಅಧಿಕಾರ ಸ್ವೀಕರಿಸಿದ್ದಾರೆ. ವರ್ಗಾವಣೆ ಆದೇಶ ಹೊರಬರುತ್ತಿದ್ದಂತೆ ತಡರಾತ್ರಿ ಸೀಮಂತ್ ಕುಮಾರ್ ಸಿಂಗ್ ಅವರು ಕಮಿಷನರ್ ಕಚೇರಿಗೆ ಬಂದು 39ನೇ ಪೊಲೀಸ್ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.
ಬೆಂಗಳೂರು ನಗರದಲ್ಲಿ ಡಿಸಿಪಿ, ಹೆಚ್ಚುವರಿ ಪೊಲೀಸ್ ಆಯುಕ್ತರಾಗಿ, ಕೇಂದ್ರವಲಯದ ಐಜಿಪಿಯಾಗಿ ಕರ್ತವ್ಯ ನಿರ್ವಹಿಸಿದ್ದ ಸೀಮಂತ್ಕುಮಾರ್ ಸಿಂಗ್ ಅವರು ಬಳಿಕ ಎಸಿಬಿ, ಕೆಎಸ್ಆರ್ಪಿ ಹೆಚ್ಚುವರಿ ಪೊಲೀಸ್ ಮಾಹಾ ನಿದೇರ್ಶಕರಾಗಿ ಹಾಗೂ ಬಿಎಂಟಿಎಫ್ ಎಡಿಜಿಪಿಯಾಗಿ ಹಲವು ಹುದ್ದೆಗಳನ್ನು ನಿರ್ವಹಿಸಿದ್ದಾರೆ.
ಕಠಿಣ ಪರಿಸ್ಥಿತಿಯಲ್ಲಿ ಅಧಿಕಾರ ಸ್ವೀಕಾರ:
ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮಾತನಾಡಿದ ಸೀಮಂತ್ ಕುಮಾರ್ ಸಿಂಗ್ ಅವರು, ಇಂತಹ ಕಠಿಣ ಪರಿಸ್ಥಿತಿಯಲ್ಲೂ ಸಿಎಂ ಹಾಗೂ ಗೃಹ ಸಚಿವರ ಆದೇಶದ ಮೇರೆಗೆ ಅಧಿಕಾರ ಸ್ವೀಕರಿಸಿದ್ದೇನೆ, ಹಿಂದಿನ ಕಮಿಷನರ್ ದಯಾನಂದ್ ಅವರು ಉತ್ತಮ ಕೆಲಸ ಮಾಡಿದ್ದಾರೆ.ಅದನ್ನು ಮುಂದುವರೆಸಿಕೊಂಡು ಹೋಗುತ್ತೇನೆ ಎಂದರು.
ಕಾಲ್ತುಳಿತದ ಬಗ್ಗೆ ಪ್ರತಿಕ್ರಿಯಿಸಲ್ಲ:
ಈ ಹಿಂದೆ ನಗರದಲ್ಲಿ ಕೆಲಸ ಮಾಡಿದ್ದೇನೆ,ಈಗಿನ ಪರಿಸ್ಥಿತಿ ಬೇರೆ ರೀತಿಯೇ ಇದೆ. ಕಾಲ್ತುಳಿತ ಪ್ರಕರಣದ ಬಗ್ಗೆ ಈಗಲೇ ನಾನು ಏನನ್ನೂ ಪ್ರತಿಕ್ರಿಯೆ ನೀಡುವುದಿಲ್ಲ. ಅಧಿಕಾರಿಗಳೊಂದಿಗೆ ಸಭೆ ಮಾಡಿ ಆ ನಂತರ ಪ್ರತಿಕ್ರಿಯಿಸುತ್ತೇನೆಂದು ಸುದ್ದಿಗಾರರಿಗೆ ಅವರು ತಿಳಿಸಿದರು.