ಬೆಂಗಳೂರು,ಜೂ.6- ಹೆಣದ ಮೇಲೆ ರಾಜಕಾರಣವನ್ನು ನಾವು ಹಿಂದೆಯೇ ಮಾಡಿಲ್ಲ. ಮುಂದೆಯೂ ಮಾಡುವುದಿಲ್ಲ ಎಂದು ಕೇಂದ್ರ ಬೃಹತ್ ಕೈಗಾರಿಕಾ ಸಚಿವ ಎಚ್.ಡಿ. ಕುಮಾರಸ್ವಾಮಿ ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ-ಜೆಡಿಎಸ್ ಮೈತ್ರಿ ಸುಭದ್ರವಾಗಿದ್ದು, ಸರ್ಕಾರಕ್ಕೆ ಛಾಟಿ ಬೀಸುವ ಕೆಲಸವನ್ನು ಮಾಡುತ್ತೇವೆ ಎಂದರು. ಎರಡು ಪಕ್ಷಗಳು ಒಗ್ಗಟ್ಟಿನಿಂದ ಇದ್ದು ವಿಭಜಿಸಲು ಯಾರಿಂದಲೂ ಸಾಧ್ಯವಿಲ್ಲ. ಮಿತ್ರ ಪಕ್ಷಗಳೆರಡು ರಾಜ್ಯದಲ್ಲಿ ಒಳ್ಳೆಯ ಸರ್ಕಾರ ತರಲು ರಾಜ್ಯದ ಅಭಿವೃದ್ಧಿಗಾಗಿ ಕಾನೂನು ಹೋರಾಟ ಮಾಡುವುದರ ಜೊತೆಗೆ ರಾಜ್ಯಾದ್ಯಂತ ಸರ್ಕಾರದ ವೈಫಲ್ಯಗಳ ವಿರುದ್ಧ ಜನಜಾಗೃತಿ ಮೂಡಿಸುತ್ತೇವೆ ಎಂದು ಹೇಳಿದರು.
ಕರ್ನಾಟಕವು ಚಿನ್ನದಂತ ಸುಭೀಕ್ಷಾ ರಾಜ್ಯವಾಗಿದ್ದು, ಕೆಟ್ಟ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ನಿಂದ ರಾಜ್ಯವನ್ನು ಉಳಿಸಬೇಕಿದೆ ಎಂದರು. ಆರ್ಸಿಬಿ ವಿಜಯೋತ್ಸವದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 11 ಅಮಾಯಕರು ಬಲಿಯಾದರು. ಪೊಲೀಸರ ಸಲಹೆಯನ್ನು ಧಿಕ್ಕರಿಸಿದ ಕಾಂಗ್ರೆಸ್ ಸರ್ಕಾರವೇ ದುರಂತಕ್ಕೆ ಕಾರಣ. ನಗರ ಪೊಲೀಸ್ ಆಯುಕ್ತ ದಯಾನಂದ್ ಅವರನ್ನು ಅಮಾನತು ಮಾಡಿರುವುದಕ್ಕೆ ಜನರೇ ವಿರೋಧ ಮಾಡುತ್ತಿದ್ದಾರೆ. ಅಮಾನತಿನ ನಾಟಕವಾಡಿರಬಹುದು ಎಂಬುದು ನನ್ನ ಅಭಿಪ್ರಾಯ ಎಂದರು.
ಕೆಎಸ್ಸಿಎ ವತಿಯಿಂದ ಜೂ.3ರಂದು ಆರ್ಸಿಬಿ ಗೆದ್ದರೆ, ಜೂ.4ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾರ್ಯಕ್ರಮ ಮಾಡಲು ಅವಕಾಶ ಕೊಡಿ ಎಂದು ಕೋರಿದ್ದರು ಎಂಬುದನ್ನು ಎಫ್ಐಆರ್ನಲ್ಲಿ ದಾಖಲಿಸಲಾಗಿದೆ. ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಗೆ ಅನುಮತಿ ಕೋರಿರುವುದಾಗಿ ಉಲ್ಲೇಖಿಸಲಾಗಿದೆ. ಎರಡು ಕಡೆ ಕಾರ್ಯಕ್ರಮ ಮಾಡಲು ಪೊಲೀಸ್ ಅಧಿಕಾರಿಗಳು ಒಪ್ಪದಿದ್ದಾಗ ಮುಖ್ಯಮಂತ್ರಿಯವರೇ ನಗರ ಪೊಲೀಸ್ ಆಯುಕ್ತರಿಗೆ ಆದೇಶ ಮಾಡಿ ಕಾರ್ಯಕ್ರಮ ಮಾಡಲು ಅನುಮತಿ ಕೊಟ್ಟು ಬಂದೋಬಸ್ತ್ ಮಾಡಬೇಕೆಂದು ಸೂಚಿಸಿದ್ದಾರೆಂದು ಹೇಳಿದರು.
ಮುಖ್ಯಮಂತ್ರಿಗಳ ರಾಜಕೀಯ ಕಾರ್ಯ ದರ್ಶಿ ಈ ವಿಚಾರದಲ್ಲಿ ಸಿಎಂ ಮೇಲೆ ಒತ್ತಡ ತಂದಿದ್ದಾರೆ. ಕನಕಪುರದಲ್ಲಿ ಡಿ.ಕೆ.ಶಿವಕುಮಾರ್ ಅವರು ನೇರವಾಗಿ ಎಚ್ಎಎಲ್ ವಿಮಾನ ನಿಲ್ದಾಣಕ್ಕೆ ಬಂದು ಆರ್ಸಿಬಿ ತಂಡವನ್ನು ಸ್ವಾಗತಿಸಿದ್ದಾರೆ. ಬ್ರ್ಯಾಂಡ್ ಬೆಂಗಳೂರನ್ನು ದೇಶಕ್ಕೆ ತೋರಿಸುವ ಉದ್ದೇಶದಿಂದ ಈ ರೀತಿ ಮಾಡಿದ್ದಾರೆ ಎಂದು ವ್ಯಂಗ್ಯವಾಡಿದರು.
11 ಅಮಾಯಕರ ಸಾವಿಗೆ ಕಣ್ಣೀರು ಸುರಿಸಿ ಡ್ರಾಮ ಮಾಡಿದರೆ ನ್ಯಾಯ ಸಿಗುತ್ತದೆಯೇ? ವಿಧಾನಸೌಧ ಮುಂಭಾಗ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳ ಕುಟುಂಬದವರೇ ಇದ್ದು ಫೋಟೋ ತೆಗೆಸಿಕೊಳ್ಳಲು ಪೈಪೋಟಿ ನಡೆಸಿದ್ದಾರೆ. ಆಟಗಾರರಿಗೆ ಸನಾನವನ್ನು ಗೌರವ ಕೊಡುವ ರೀತಿಯಲ್ಲಿ ಮಾಡಿಲ್ಲ ಎಂದರು.
ಕಾಲ್ತುಳಿತದಲ್ಲಿ ಸಾವಾಗಿರುವುದು ಗೊತ್ತಿದ್ದರೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ವಿಜೇತ ಕಪ್ಗೆ ಮುತ್ತಿಟ್ಟಿದ್ದಾರೆ. ಮುಖ್ಯಮಂತ್ರಿ ಮೊಮಗನೊಂದಿಗೆ ಹೋಟೆಲ್ನಲ್ಲಿ ತಿಂಡಿ ತಿಂದಿದ್ದಾರೆ. ಇವರ ಮಾನವೀಯತೆ ಎಷ್ಟಿದೆ ಎಂಬುದು ಇದರಿಂದ ಗೊತ್ತಾಗುತ್ತದೆ ಎಂದರು.
ದುರಂತದ ಬಗ್ಗೆ ಡಿಸಿ ಮೂಲಕ ತನಿಖೆ, ಸಿಐಡಿ ಹಾಗೂ ನಿವೃತ್ತ ನ್ಯಾಯಾಧೀಶರ ಮೂಲಕ ತನಿಖೆ ಮಾಡಿಸಲಾಗುತ್ತದೆ. ಮೂರರಲ್ಲಿ ಯಾವುದನ್ನು ಸ್ವೀಕಾರ ಮಾಡುತ್ತಾರೆ? ಪೊಲೀಸ್ ಅಧಿಕಾರಿಗಳ ತಪ್ಪಿಲ್ಲ ಎಂಬುದಕ್ಕೆ ಎಫ್ಐಆರ್ ಒಂದೇ ಸಾಕು. ಇಂಥ ತನಿಖೆಯಿಂದ ಸತ್ಯಾಂಶ ಹೊರಬಂದು ಮೃತಪಟ್ಟವರ ಕುಟುಂಬಕ್ಕೆ ನ್ಯಾಯ ಸಿಗಲು ಸಾಧ್ಯವಿಲ್ಲ ಎಂದು ಆರೋಪಿಸಿದರು.
ಎಚ್ಎಂಟಿ ಪುನಶ್ಚೇತನ:
ಎಚ್ಎಂಟಿ ಕಾರ್ಖಾನೆ ಪುನಶ್ಚೇತನಗೊಳಿಸಲಾಗು ವುದು. ಐಎಫ್ಎಸ್ ಅಧಿಕಾರಿಯನ್ನು ಅಮಾನತು ಮಾಡಿದೆ. ಅವರು ಏನೂ ತಪ್ಪು ಮಾಡದಿದ್ದರೂ ಸರ್ಕಾರದಿಂದ ಈ ಕ್ರಮ ಆಗಿದೆ. ವಿಶ್ವೇಶ್ವರಯ್ಯ ಕೈಗಾರಿಕೆಯನ್ನು ಪುನಶ್ಚೇತನಗೊಳಿಸಲು ವಿಸ್ತೃತ ಯೋಜನಾ ವರದಿಯನ್ನು ಸಿದ್ದಪಡಿಸಲಾಗುತ್ತಿದೆ ಎಂದು ಅವರು ಇದೇ ವೇಳೆ ತಿಳಿಸಿದರು.