Sunday, June 8, 2025
Homeರಾಜ್ಯಆರ್‌ಸಿಬಿ ವಿಜಯೋತ್ಸವದ ದುರಂತ : ಮೃತರ ಕುಟುಂಬಗಳಿಗೆ ಹೆಚ್ಚಿನ ಪರಿಹಾರ ನೀಡುವಂತೆ ಹೆಚ್ಡಿಕೆ ಒತ್ತಾಯ

ಆರ್‌ಸಿಬಿ ವಿಜಯೋತ್ಸವದ ದುರಂತ : ಮೃತರ ಕುಟುಂಬಗಳಿಗೆ ಹೆಚ್ಚಿನ ಪರಿಹಾರ ನೀಡುವಂತೆ ಹೆಚ್ಡಿಕೆ ಒತ್ತಾಯ

RCB Victory Tragedy: HDK demands more compensation for families of deceased

ಬೆಂಗಳೂರು, ಜೂ.7 ಆರ್‌ಸಿಬಿ ವಿಜಯೋತ್ಸವದ ಸಂದರ್ಭದಲ್ಲಿ ಸಂಭವಿಸಿದ ಕಾಲ್ತುಳಿತದ ದುರಂತದಲ್ಲಿ ಮೃತಪಟ್ಟವರ ಕುಟುಂಬದವರಿಗೆ ವಿಶೇಷ ಪ್ರಕರಣ ಎಂದು ಪರಿಗಣಿಸಿ ರಾಜ್ಯ ಸರ್ಕಾರ ಹೆಚ್ಚಿನ ಪರಿಹಾರ ನೀಡಬೇಕೆಂದು ಕೇಂದ್ರ ಬೃಹತ್ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಣದ ಆಧಾರದ ಮೇಲೆ ಜೀವಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಸರ್ಕಾರ ಮಾಡಿರುವ ತಪ್ಪಿಗೆ 11 ಮಂದಿ ಅಭಿಮಾನಿಗಳು ಮೃತಪಟ್ಟಿದ್ದಾರೆ. ಮತ್ತೆ ಅವರ ಪ್ರಾಣವನ್ನು ಸಾಧ್ಯವಿಲ್ಲ ಎಂದರು. ಹಲವು ಬಾರಿ ವಿಶೇಷ ಪ್ರಕರಣ ಎಂದು ಪರಿಗಣಿಸಿ ಸರ್ಕಾರ ಪರಿಹಾರ ಒದಗಿಸಿರುವ ನಿದರ್ಶನಗಳಿವೆ. ಹೀಗಾಗಿ ಪರಿಹಾರದ ವಿಚಾರದಲ್ಲಿ ಸರ್ಕಾರ ಸೂಕ್ತ ತೀರ್ಮಾನ ಮಾಡಿ ಮೃತರ ಕುಟುಂಬದವರಿಗೆ ಹೆಚ್ಚಿನ ಪರಿಹಾರ ನೀಡಬೇಕು ಎಂದು ಅವರು ಹೇಳಿದರು.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಏನು ಸಾಧನೆ ಮಾಡಿದ್ದಾರೆ ಎಂದು ಸದನದಲ್ಲಿ ಮಾತನಾಡತ್ತಾರೆ. ರಾಜ್ಯಕ್ಕೆ ಹಾಗೂ ಬೆಂಗಳೂರಿಗೆ ಎರಡು ವರ್ಷದಲ್ಲಿ ಕೊಟ್ಟಿರುವ ಕೊಡುಗೆ ಏನು ಎಂದು ಅವರು ಪ್ರಶ್ನಿಸಿದರು. ಹೆಣದ ಮೇಲೆ ರಾಜಕೀಯ ಮಾಡುವಂಥ ದುರ್ಗತಿ ನಮಗೆ ಬಂದಿಲ್ಲ.ಬರುವುದೂ ಇಲ್ಲ ಎಂದು ಅವರು ತಿರುಗೇಟು ನೀಡಿದರು.

ನೈತಿಕತೆ ಇದ್ದರೆ ರಾಜೀನಾಮೆ ನೀಡಲಿ
ಕಾಲ್ತುಳಿತದ ದುರಂತದ ಬಗ್ಗೆ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಗೃಹಸಚಿವ ಡಾ.ಜಿ.ಪರಮೇಶ್ವರ್ ಅವರು ರಾಜೀನಾಮೆ ನೀಡಬೇಕು. ಅವರು ರಾಜೀನಾಮೆ ನೀಡುತ್ತಾರೆ ಎಂಬ ನಿರೀಕ್ಷೆಯೂ ಇಲ್ಲ, ರಾಜಕಾರಣಿಗಳು ಭಂಡರು ಎಂಬುದು ಗೊತ್ತಿದೆ ಎಂದು ಹೇಳಿದರು.

ರಾಜ್ಯ ಸರ್ಕಾರ ತೆಗೆದುಕೊಂಡ ತೀರ್ಮಾನ, ಮಾಡಿದ ತಪ್ಪು ನಿರ್ಧಾರದಿಂದ ಅಹಿತಕರ ಘಟನೆ ಸಂಭವಿಸಿದೆ. ತಪ್ಪು ಮಾಡಿದ್ದಾರೆಂದು ಐವರು ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸುವ ಅವಶ್ಯಕತೆ ಇರಲಿಲ್ಲ, ಈ ರೀತಿಯ ನಿರ್ಧಾರ ಎಷ್ಟರ ಮಟ್ಟಿಗೆ ಸರಿ? ಇದರಿಂದ ಅಧಿಕಾರಿಗಳು ಶ್ರದ್ದೆಯಿಂದ ಕೆಲಸ ಮಾಡಲು ಅಧ್ಯವಿದೆಯೇ? ಸರ್ಕಾರ ಯೋಚಿಸಬೇಕಾಗಿತ್ತು ಎಂದರು.

ಐಪಿಎಲ್ ಫೈನಲ್ ಪಂದ್ಯ ಸಂಜೆ 7 ಗಂಟೆಗೆ ಆರಂಭವಾಗಿದೆ. ಆದರೆ ಅಂದೇ ಸಂಜೆ 6 ಗಂಟೆಗೆ ಕೆಎಸಿಎನಿಂದ ಕಾರ್ಯಕ್ರಮಕ್ಕೆ ಅನುಮತಿ ಕೋರಲಾಗಿದೆ ಹಾಗೆಯೇ ವಿಧಾನಸೌಧದ ಮುಂಭಾಗದ ಕಾರ್ಯಕ್ರಮಕ್ಕೂ ಅನುಮತಿ ಕೋರಿ ಅರ್ಜಿ ಸಲ್ಲಿಸಲಾಗಿದೆ. ಮರುದಿನ ಬೆಳಗ್ಗೆ 7 ಗಂಟೆಗೆ ನಗರ ಪೊಲೀಸ್ ಆಯುಕ್ತರ ಮೇಲೆ ಒತ್ತಡ ಹಾಕಿ ಕಾರ್ಯಕ್ರಮ ನಡೆಸಲು ಮುಂದಾಗಿದ್ದವರು ಯಾರು ಎಂದು ಪ್ರಶ್ನಿಸಿದರು.

ನಾನು ಅಸೂಯೆಯಿಂದ ಮಾತನಾಡಿಲ್ಲ. ನಾನು ವಾಸ್ತವಾಂಶಗಳನ್ನು ಕುರಿತು ಮಾತನಾಡಿದ್ದೇನೆ ಎಂದರು. ವರನಟ ಡಾ.ರಾಜ್‌ಕುಮಾರ್ ನಿಧನವಾದ ಸಂದರ್ಭಕ್ಕೂ ಈ ದುರ್ಘಟನೆಗೂ ಹೋಲಿಕೆ ಮಾಡುವುದು ಸರಿಯಲ್ಲ ಎಂದು ಹೇಳಿದರು.

ಜ್ಞಾನೋದಯವಾಗಿದೆ:
ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ಗೋವಿಂದರಾಜು ಅವರನ್ನು ಬಿಡುಗಡೆಗೊಳಿಸಿ ಸರ್ಕಾರ ಕ್ರಮ ಕೈಗೊಂಡಿದೆ. ನಾನು ಹೇಳಿದ ಮೇಲೆ ಸರ್ಕಾರಕ್ಕೆ ಜ್ಞಾನೋದಯವಾಗಿದೆ ಎಂದರು. ಸರ್ಕಾರ ಮಾಡಿರುವ ತಪ್ಪಿಗೆ ಅಧಿಕಾರಿಗಳ ತಲೆದಂಡ ಮಾಡಿರುವುದು ಎಷ್ಟರಮಟ್ಟಿಗೆ ಸರಿ? ಇದರ ಬಗ್ಗೆ ಜನಾಭಿಪ್ರಾಯ ಏನಿದೆ ಎಂಬುದನ್ನು ಸರ್ಕಾರ ಅರ್ಥ ಮಾಡಿಕೊಳ್ಳಬೇಕಿದೆ ಎಂದು ಹೇಳಿದರು.

RELATED ARTICLES

Latest News