Sunday, June 8, 2025
Homeರಾಜ್ಯಕಾಲ್ತುಳಿತ ಪ್ರಕರಣದ ತನಿಖೆ, ಸಿಐಡಿ ಅಧಿಕಾರಿಗಳ ಸಭೆ

ಕಾಲ್ತುಳಿತ ಪ್ರಕರಣದ ತನಿಖೆ, ಸಿಐಡಿ ಅಧಿಕಾರಿಗಳ ಸಭೆ

Investigation into the stampede case, CID officials meet

ಬೆಂಗಳೂರು,ಜೂ.7- ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತ ಪ್ರಕರಣದ ಬಗ್ಗೆ ಸಿಐಡಿ ವಿಶೇಷ ತಂಡವು ತನಿಖೆಯನ್ನು ಚುರುಕುಗೊಳಿಸಿದೆ. ಸಿಐಡಿ ಕಚೇರಿಯಲ್ಲಿ ಇಂದು ವಿಶೇಷ ತನಿಖಾ ತಂಡದ ಅಧಿಕಾರಿಗಳು ಸಭೆ ನಡೆಸಿ ಚರ್ಚಿಸಿ ಹಲವು ಮಾಹಿತಿಗಳನ್ನು ಪಡೆದುಕೊಂಡಿದ್ದಾರೆ.

ಸಿಐಡಿಯ ಎಸ್‌‍ಪಿ ಶುಭನ್ವಿತಾ,ಡಿವೈಎಸ್‌‍ಪಿಗಳಾದ ಪುರುಷೋತ್ತಮ್‌, ಗೌತಮ್‌ ಸೇರಿದಂತೆ 15ಮಂದಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಈ ವಿಶೇಷ ತಂಡದಲ್ಲಿದ್ದಾರೆ.ಕಬ್ಬನ್‌ ಪಾರ್ಕ್‌ ಪೊಲೀಸ್‌‍ ಠಾಣೆಗೆ ನಿನ್ನೆ ಸಂಜೆ ತನಿಖಾಧಿಕಾರಿಗಳು ಆಗಮಿಸಿ ಈ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಪಡೆದುಕೊಂಡಿದ್ದಾರೆ.

ಈಗಾಗಲೇ ಕಬ್ಬನ್‌ ಪಾರ್ಕ್‌ ಹಾಗೂ ಸಿಸಿಬಿ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ಕೈಗೊಂಡು ಡಿಎನ್‌ಎ ಇವೆಂಟ್‌ ಮ್ಯಾನೇಜೆಂಟ್‌ನ ಸುನೀಲ್‌ ಮ್ಯಾಥ್ಯೂ, ಕಿರಣ್‌ , ವಿನೋದ್‌, ಆರ್‌ಸಿಬಿ ಮಾರ್ಕೆಟಿಂಗ್‌ ಹೆಡ್‌ ನಿಖಿಲ್‌ರನ್ನು ಬಂಧಿಸಿದ್ದು, ಎಲ್ಲರೂ ನ್ಯಾಯಾಂಗ ಬಂಧನದಲ್ಲಿದ್ದಾರೆ.

ಸದ್ಯದಲ್ಲೇ ಈ ನಾಲ್ವರನ್ನು ಸಿಐಡಿ ವಿಶೇಷ ತಂಡವು ಬಾಡಿ ವಾರೆಂಟ್‌ ಮೇಲೆ ವಶಕ್ಕೆ ಪಡೆದು ವಿಚಾರಣೆ ಮಾಡಲಿದೆ.ಕೆಎಸ್‌‍ಸಿಎ ಆಡಳಿತ ಮಂಡಳಿಯ ಪದಾಧಿಕಾರಿಗಳಿಗೂ ಸಹ ವಿಚಾರಣೆಗೆ ಹಾಜರಾಗುವಂತೆ ಸಿಐಡಿ ನೋಟೀಸ್‌‍ ಕೊಡಲಿದೆ.ಹಾಗೆಯೇ ಆರ್‌ಸಿಬಿ ಪ್ರಾಂಚೈಸಿಯ ಹಲವರಿಗೂ ಹಾಗೂ ಡಿಎನ್‌ಎ ಎಂಟರ್‌ಟೇನೆಂಟ್‌ ಪ್ರೈ.ಲಿ ಕೆಲವು ಸದಸ್ಯರಿಗೂ ವಿಚಾರಣೆಗೆ ಹಾಜರಾಗುವಂತೆ ನೋಟೀಸ್‌‍ ನೀಡಲಿದೆ.

ಆರ್‌ಸಿಬಿ ವಿಜಯೋತ್ಸವ ಅಂಗವಾಗಿ ಜೂ.4 ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್‌ ಕ್ರೀಡಾಪಟುಗಳಿಗೆ ಆಯೋಜಿಸಿದ್ದ ಕಾರ್ಯಕ್ರಮ ಕಣ್ತುಂಬಿಕೊಳ್ಳಲು ನಿರೀಕ್ಷಿಸಿದಕ್ಕಿಂತಲೂ ಹೆಚ್ಚು ಪ್ರಮಾಣದಲ್ಲಿ ಅಂದರೆ ಸಾಗರೋಪಾಧಿಯಲ್ಲಿ ಕ್ರೀಡಾಭಿಮಾನಿಗಳು ಆಗಮಿಸಿದ್ದರಿಂದ ಜನಜಂಗುಳಿಯಲ್ಲಿ ಕಾಲ್ತುಳಿತವಾಗಿ 11 ಮಂದಿ ಮೃತಪಟ್ಟು 45 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.

ಈ ಘಟನೆ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಪ್ರಕರಣ ಸಂಬಂಧ ಹಲವು ಪೊಲೀಸ್‌‍ ಅಧಿಕಾರಿಗಳ ತಲೆದಂಡವೂ ಆಗಿವೆ.ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಸಿಎಂ ಅವರು ತನಿಖೆಯನ್ನು ಸಿಐಡಿಗೆ ವಹಿಸಿದ್ದಾರೆ.

RELATED ARTICLES

Latest News