ಬೆಂಗಳೂರು, ಜೂ.7– ಆಧುನಿಕ ಪ್ರಪಂಚದ ಒತ್ತಡದ ಜೀವನದಲ್ಲಿ ಪ್ರತಿಯೊಬ್ಬರು ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ತಮ ಆರೋಗ್ಯ ಕಾಪಾಡಿಕೊಳ್ಳಬಹುದಾಗಿದೆ ಎಂದು ಬೆಂಗಳೂರು ವಕೀಲರ ಸಂಘದ ಖಜಾಂಚಿ ಶ್ವೇತಾ ರವಿಶಂಕರ್ ಅಭಿಪ್ರಾಯಪಟ್ಟರು.
ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಸವಿನೆನಪಿಗಾಗಿ ಬಿಬಿಎಂಪಿ ಅಧಿಕಾರಿಗಳು ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘ ನಗರದ ವೈಎಂಸಿಎ ಮೈದಾನದಲ್ಲಿ ಹಮಿಕೊಂಡಿದ್ದ ಅಪ್ಪು ಕಪ್ ಲೆದರ್ಬಾಲ್ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಬಿಬಿಎಂಪಿ,ಪೊಲೀಸ್ ಇಲಾಖೆ, ನ್ಯಾಯಾಂಗ ಮತ್ತು ಮಾಧ್ಯಮ ರಂಗದ ಶ್ರಮದಿಂದ ಇಂದು ನಗರ ಸುರಕ್ಷತೆ ಮತ್ತು ಸ್ವಚ್ಚತೆ ನಗರವಾಗಿ ಬೆಳೆದಿದೆ. ಒತ್ತಡದ ಕೆಲಸ ನಡುವೆ ಪ್ರತಿಯೊಬ್ಬರು ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಬೇಕು ಇದರಿಂದ ಆರೋಗ್ಯಪೂರ್ಣ ಜೀವನ ಸಾಗಿಸಬಹುದು ಎಂದು ಅವರು ಹೇಳಿದರು.
ಸಂಘದ ಅಧ್ಯಕ್ಷ ಅಮೃತ್ ರಾಜ್ ಮಾತನಾಡಿ, ನಮ ಸಂಘವು ಅಧಿಕಾರಿ ಮತ್ತು ನೌಕರರ ಹಿತರಕ್ಷಣೆ ಹಾಗೂ ಸಮಸ್ಯೆಗಳ ನಿವಾರಣೆ ಸ್ಪಂದಿಸುವ ಜೊತೆಯಲ್ಲಿ ಕನ್ನಡ ನಾಡು, ನುಡಿ, ಪರಿಸರ ಆರೋಗ್ಯ ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿ ಏರ್ಪಡಿಸಿ ಸಮಾಜದ ಅಭಿವೃದ್ದಿ ಕೈಜೋಡಿಸಿದೆ ಎಂದರು.
ನೇಪಾಳ ,ಹರಿದ್ವಾರ, ಕಾಶಿಯಲ್ಲಿ ಕರ್ನಾಟಕ ರಾಜ್ಯೋತ್ಸವ. ಬಿಬಿಎಂಪಿ ಕೇಂದ್ರ ಕಛೇರಿಯಲ್ಲಿ ಮೇರುನಟ ಡಾ.ರಾಜ್ ಕುಮಾರ್, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಪುತ್ಥಳಿ ಸ್ಪಾಪನೆ, ಉಚಿತ ಆರೋಗ್ಯ ತಪಾಸಣೆ ಶಿಬಿರ ಮತ್ತು ಪರಿಸರ ಜಾಗೃತಿ ಮತ್ತು ಸಂಕಷ್ಟದಲ್ಲಿ ಇರುವವರಿಗೆ ಸಹಾಯಹಸ್ತ ನೀಡುತ್ತಾ ಸಾರ್ವಜನಿಕರಿಗೆ ಉತ್ತಮ ಸಲ್ಲಿಸಿಕೊಂಡು ಬರುತ್ತಿದೆ ಎಂದರು.
ತಲಾ 15 ಓವರ್ಗಳ ಕ್ರಿಕೆಟ್ ಪಂದ್ಯ ಇದಾಗಿದ್ದು, ಪ್ರಶಸ್ತಿಗಾಗಿ ಬಿಬಿಎಂಪಿ ನೌಕರರು, ಪೊಲೀಸ್, ವಕೀಲರು ಹಾಗೂ ಮಾಧ್ಯಮದ ತಂಡ ಸೆಣಸಾಡುತ್ತಿವೆ. ಫೈನಲ್ನಲ್ಲಿ ಪ್ರಶಸ್ತಿ ಗೆಲ್ಲುವ ತಂಡ ಒಂದು ಲಕ್ಷ ರೂ.ಗಳ ಬಹುಮಾನ ಗಳಿಸಲಿದೆ. ರನ್ನರ್ ಅಪ್ ತಂಡ 50 ಸಾವಿರ ನಗದು ಬಹುಮಾನ ಪಡೆದುಕೊಳ್ಳಲಿವೆ.ಪ್ರಶಸ್ತಿಗಾಗಿ ಸೆಣಸುತ್ತಿರುವ ತಂಡಗಳಿಗೆ ಹಿರಿಯ ವಕೀಲ ಜಿ.ಶಿವಕುಮಾರ್ ಮತ್ತಿತರ ಗಣ್ಯರು ಇದೇ ಸಂದರ್ಭದಲ್ಲಿ ಶುಭ ಕೋರಿದರು.