ಬೆಂಗಳೂರು,ಜೂ.7– ಜಾತಿ ಜನಗಣತಿಯ ಕುರಿತಂತೆ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಗಳಿದ್ದು, ವಿವಾದ ಮತ್ತೊಂದು ಮಜಲು ಪಡೆಯುವ ನಿರೀಕ್ಷೆಗಳಿವೆ.
ಉನ್ನತ ಮೂಲಗಳ ಪ್ರಕಾರ, ಜಾತಿ ಜನಗಣತಿಯ ವರದಿ ಅನುಷ್ಠಾನಕ್ಕೆ ರಾಜ್ಯಸರ್ಕಾರ ಮುಂದಾಗಿದೆ. ಕೆಲವರು ಏಕಾಏಕಿ ನಿರ್ಧಾರ ತೆಗೆದುಕೊಳ್ಳುವುದು ಬೇಡ. ವಾಸ್ತವಾಂಶಗಳನ್ನು ಅಧ್ಯಯನ ಮಾಡಲು ಉಪ ಸಂಪುಟದ ಸಮಿತಿ ರಚನೆ ಮಾಡಿ ವರದಿಯ ಬಳಿಕ ಕ್ರಮ ಕೈಗೊಳ್ಳಬೇಕು ಎಂದು ಒತ್ತಡ ಹಾಕುತ್ತಿರುವುದಾಗಿ ತಿಳಿದುಬಂದಿದೆ. ಆದರೆ ಸಂಪುಟದ ಮುಕ್ಕಾಲು ಭಾಗ ಸಚಿವರು ವರದಿ ಜಾರಿಯಾಗಬೇಕು ಎಂದು ಹಠ ಹಿಡಿದಿದ್ದಾರ ಎನ್ನಲಾಗಿದೆ.
ಕೇಂದ್ರ ಸರ್ಕಾರ ಜನಗಣತಿಯೊಂದಿಗೆ ಜಾತಿ ಗಣತಿ ನಡೆಸಲು ಮುಂದಾಗಿದೆ. ಹೀಗಾಗಿ ರಾಜ್ಯಸರ್ಕಾರ ನಡೆಸಿರುವ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷಾ ವರದಿ ಅಸಂವಿಧಾನಿಕ ಅಥವಾ ಜನವಿರೋಧಿ ಎಂದು ಹೇಳಲು ವಿರೋಧಪಕ್ಷಗಳಿಗೆ ಸೂಕ್ತ ಆಧಾರವಿಲ್ಲ. ಒಂದು ರೀತಿ ಆ ರೀತಿ ಹೇಳಿದರೆ ಉತ್ತರ ನೀಡಲು ನಮಗೂ ಇದು ಸೂಕ್ತ ಸಮಯ. ಹೀಗಾಗಿ ವಿಳಂಬ ಮಾಡದೇ ಸಮೀಕ್ಷಾ ವರದಿಯನ್ನು ಅನುಷ್ಠಾನಕ್ಕೆ ತರಬೇಕು ಎಂದು ಸಚಿವರು ಒತ್ತಡ ಹೇರುತ್ತಿದ್ದಾರೆ ಎನ್ನಲಾಗಿದೆ.
ಲಿಂಗಾಯತ ಹಾಗೂ ಒಕ್ಕಲಿಗ ಸಮುದಾಯಗಳು ವರದಿಯನ್ನು ನೇರವಾಗಿ ವಿರೋಧಸಿದ್ದು ಇದನ್ನು ಅನುಷ್ಠಾನಗೊಳಿಸಿದರೆ ತೀವ್ರ ಸ್ವರೂಪದ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದೆ. ಅದರ ನಡುವೆಯೂ ಮುಖ್ಯಮಂತ್ರಿ ಸಿದ್ದರಾಮಯ್ಯನವರು ದಿಟ್ಟ ನಿರ್ಧಾರ ತೆಗೆದುಕೊಳ್ಳಲು ಮುಂದಾಗಿದ್ದಾರೆ.
ಪರಿಶಿಷ್ಟ ಜಾತಿಗಳಲ್ಲಿನ ಒಳಮೀಸಲಾತಿ ವಿಚಾರವಾಗಿ ಸೂಕ್ತ ನಿರ್ಧಾರವಾಗದಿದ್ದ ಹಿನ್ನೆಲೆಯಲ್ಲಿ ಸರ್ಕಾರದ ನೇಮಕಾತಿಗಳು, ಬಡ್ತಿ ಪ್ರಕ್ರಿಯೆಗಳು ನೆನೆಗುದಿಗೆ ಬಿದ್ದಿವೆ. ಈ ಹಂತದಲ್ಲಿ ಜಾತಿಜನಗಣತಿಯ ಅನುಷ್ಠಾನಕ್ಕೆ ಮುಂದಾದರೆ ಮತ್ತಷ್ಟು ಗೊಂದಲಗಳಾಗುತ್ತವೆ. ಮೀಸಲಾತಿ ಪರಿಷ್ಕರಣೆಯಾಗಬೇಕು ಎಂಬ ಬೇಡಿಕೆ ಹೆಚ್ಚಾಗುತ್ತದೆ. ಮೀಸಲಾತಿ ಪರಿಷ್ಕರಣೆ ಸದ್ಯಕ್ಕೆ ಬಗೆಹರಿಯುವ ವಿಷಯವಲ್ಲ.
ಜಾತಿ ಜನಗಣತಿ ವರದಿ ಅನುಷ್ಠಾನವಾಗಲಿದೆ ಎಂಬ ಚರ್ಚೆಯಾಗುತ್ತಿದ್ದಂತೆ ಮೀಸಲಾತಿ ಪರಿಷ್ಕರಣೆಯಾಗಬೇಕೆಂಬ ಬೇಡಿಕೆಯೂ ತೀವ್ರಗೊಳ್ಳುತ್ತದೆ. ಇದರಿಂದಾಗಿ ನೇಮಕಾತಿಗಳು ಹಾಗೂ ಬಡ್ತಿಗಳಿಗೆ ತೊಂದರೆಯಾಗುತ್ತದೆ. ಸದ್ಯಕ್ಕೆ ಸಚಿವ ಸಂಪುಟ ಉಪಸಮಿತಿ ರಚಿಸಿ ವಿಷಯವನ್ನು ಮುಂದೂಡುವುದು ಒಳ್ಳೆಯದು ಎಂದು ಕೆಲವರು ಸಲಹೆ ನೀಡಿದ್ದಾರೆ.
ಕಳೆದ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ವಿಚಾರ ಚರ್ಚೆಯಾಗಬೇಕಾಗಿತ್ತು. ಆದರೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತ ಪ್ರಕರಣದಿಂದಾಗಿ ಶೋಕಮಯ ವಾತಾವರಣವಿದ್ದುದ್ದರಿಂದ ಜಾತಿ ಜನಗಣತಿಯ ತಂಟೆಗೆ ಹೋಗದಿರಲು ಸರ್ಕಾರ ನಿರ್ಧರಿಸಿದೆ. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳುವುದು ಅನಿವಾರ್ಯ ಎಂಬ ಸಂದೇಶವನ್ನು ರವಾನಿಸಲಾಗಿದೆ.
ಜಾತಿ ಜನಗಣತಿಗೆ ಸಂಬಂಧಪಟ್ಟಂತ ಎಲ್ಲಾ ಸಚಿವರೂ ಲಿಖಿತ ಅಭಿಪ್ರಾಯ ನೀಡುವಂತೆ ಮುಖ್ಯಮಂತ್ರಿ ಸೂಚನೆ ನೀಡಿದ್ದರು. ಆದರೆ ಬಹುತೇಕ ಸಚಿವರು ಇನ್ನೂ ತಮ ವರದಿ ನೀಡಿಲ್ಲ ಎಂದು ಹೇಳಲಾಗಿದೆ. ಅಂತಹ ಸಚಿವರಿಗೆ ಶೀಘ್ರದಲ್ಲಿ ಲಿಖಿತ ಅಭಿಪ್ರಾಯ ನೀಡುವಂತೆ ಮುಖ್ಯಮಂತ್ರಿ ಕಚೇರಿ ಒತ್ತಡ ಹಾಕುತ್ತಿರುವುದಾಗಿಯೂ ತಿಳಿದುಬಂದಿದೆ.