ಬೆಂಗಳೂರು, ಜೂ.8- ಕೆಎಸ್ಸಿಎ ಬಳಿ ನಡೆದ ಕಾಲ್ತುಳಿತದಲ್ಲಿ 11 ಮಂದಿ ಮೃತಪಟ್ಟಿರುವುದಕ್ಕೆ ರಾಜ್ಯ ಸರ್ಕಾರವೇ ನೇರ ಹೊಣೆಯಾಗಿದ್ದು, ನೈತಿಕತೆ ಇದ್ದರೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ರಾಜೀನಾಮೆ ನೀಡಬೇಕೆಂದು ವಿಪಕ್ಷ ನಾಯಕ ಆರ್. ಅಶೋಕ್ ಒತ್ತಾಯಿಸಿದ್ದಾರೆ.ಇದು ಸರ್ಕಾರಿ ಪ್ರಯೋಜಿತ ಕೊಲೆಯಾಗಿದ್ದು, ಸಿಎಂ-ಡಿಸಿಎಂ ವಿರುದ್ಧವೇ ಪ್ರಕರಣ ದಾಖಲಿಸಿಬೇಕೆಂದು ಅವರು ಕಿಡಿಕಾರಿದ್ದಾರೆ.
ಪೊಲೀಸ್ ಅಧಿಕಾರಿಯೊಬ್ಬರು ಪತ್ರ ಬರೆದು ವಿಧಾನಸೌಧದ ಮುಂದೆ ಕಾರ್ಯಕ್ರಮ ಬೇಡವೆಂದರೂ ಅದನ್ನು ಧಿಕ್ಕರಿಸಿ ಆಯೋಜನೆ ಮಾಡಿದ್ದು ಏಕೆ? ಕಾನೂನು ಎಲ್ಲರಿಗೂ ಒಂದೇ ಎಂದಾದರೇ, ಸಿಎಂ ಸಿದ್ದರಾಮಯ್ಯ ನೈತಿಕ ಹೊಣೆ ಹೊರಬೇಕೆಂದು ಹೇಳಿದ್ದಾರೆ. ಬಿಜೆಪಿ ಶಾಸಕರು ವಿಧಾನಪರಿಷತ್ ಸದಸ್ಯರು ಹಾಗೂ ಸಂಸದರ ನೇತೃತ್ವದಲ್ಲಿ ಇಂದು ಬೆಳಗ್ಗೆ ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ನಡೆದ ಬೃಹತ್ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ಧೋರಣೆಯನ್ನು ಕಟುವಾಗಿ ಟೀಕಿಸಿದರು.
ವಿಧಾನಸೌಧದಲ್ಲಿ ನಡೆಸಿದ ಕಾರ್ಯಕ್ರಮಕ್ಕೆ ಸಿಎಂ ಉಸ್ತುವಾರಿ ಕೆಎಸ್ಸಿಎಯಲ್ಲಿ ನಡೆಸಿದ್ದಕ್ಕೆ ಇನ್ನೊಬ್ಬರು ಎಂದು ಹೇಳಿದ್ದೀರಲ್ಲ, ನೀವು ಕಾನೂನು ನಿಯಮ ಮೀರಿ ನಡೆದುಕೊಂಡಿರುವುದು ಅಕ್ಷಮ್ಯ ಅಪರಾಧವಾಗಿದ್ದು, ಯಾವುದೇ ಕಾರಣಕ್ಕೂ ಅಧಿಕಾರದಲ್ಲಿರಲು ಯೋಗ್ಯರಲ್ಲ ಎಂದು ಆಕ್ರೋಶವ್ಯಕ್ತಪಡಿಸಿದ್ದಾರೆ.
ಹೆಣದ ಮೇಲೆ ರಾಜಕೀಯವೆಂದು ಟೀಕಿಸುವ ಕಾಂಗ್ರೆಸ್ಸಿಗರಿಗೆ ತಪ್ಪಿನ ಅರಿವಾಗಿದೆ. ಪಶ್ಚತ್ತಾಪ ಪಡುವ ಬದಲು ಪೊಲೀಸರ ಮೇಲೆ, ನಂತರ ಕೆಎಸ್ಸಿಎ ಮೇಲೆ ಕ್ರಮ ಕೈಗೊಳ್ಳುತ್ತಿದ್ದಾರೆ, ಮುಂದೆ ಅದು ವಿಧಾನಸೌಧಕ್ಕೂ ಬಂದರೆ ಅಚ್ಚರಿಪಡಬೇಕಾಗಿಲ್ಲ ಎಂದು ಅವರು ಎಚ್ಚರಿಸಿದ್ದಾರೆ.
ಆರ್ಸಿಬಿ ಎಂದರೆ ಈಗ ರಿಯಲ್ ಕಲ್ಬ್ರಿಟ್ ಆಫ್ ಬೆಂಗಳೂರು ಎಂದು ವ್ಯಂಗ್ಯವಾಡಿದ ಆಶೋಕ್, ಉದ್ಯಮಿ ಮಲ್ಯ ಅವರು ತಮ ವಿಸ್ಕಿ ಬ್ರಾಂಡ್ ಪ್ರಚಾರಕ್ಕಾಗಿ ತಂಡಕ್ಕೆ ಆರ್ಸಿಬಿ ಎಂದು ಹೆಸರಿಟ್ಟಿದ್ದರು. ಈಗ ಸಿಎಂ ಡಿಸಿಎಂಗಳೇ ಹೊಸ ರಾಯಭಾರಿಗಳಾಗಿದ್ದಾರೆ ಎಂದು ಟೀಕಿಸಿದರು.ಕ್ರಿಕೆಟ್ ಅಭಿಮಾನಿಗಳು ಮೃತಪಟ್ಟಿದ್ದಾರೆಂಬ ಮಾಹಿತಿ ಇದ್ದರೂ, ಕಾರ್ಯಕ್ರಮ ಮುಂದುವರೆಸಿದ್ದು, ಟ್ರೋಫಿಗೆ ಮುತ್ತಿಟ್ಟಿದ್ದು, ನಂತರ ಕೆಎಸ್ಸಿಎಯಲ್ಲಿ ಒಂದು ಕೋಟಿ ರೂ. ಪಟಾಕಿ ಸಿಡಿಸಿದ್ದನ್ನು ನೋಡಿದರೆ, ಮಾನವೀಯತೆ ಅಧೋಗತಿಗೆ ಇಳಿದಿದೆ ಎಂಬುದು ಗೊತ್ತಾಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸರ್ಕಾರದ ಕುತ್ತಿಗೆಗೆ ಬರುತ್ತಿದ್ದಂತೆಯೇ ಕೆಎಸ್ಸಿಎ ಬಲಿಪಶು ಮಾಡಲು ಸಿಎಂ ಸಿದ್ದರಾಮಯ್ಯ ಅವರು ಮುಂದಾಗಿದ್ದಾರೆ. ಇದರ ನಡುವೆ ಡಿಸಿಎಂ ಡಿಕೆ ಶಿವಕುಮಾರ್ ಅವರು ತೆರಿಗೆ ಮತ್ತು ಜಾಹೀರಾತಿನ ಬಾಕಿ ನೆಪದಲ್ಲಿ ಬಿಬಿಎಂಪಿ ಮೂಲಕ ಕೆಎಸ್ಸಿಎ ವಿರುದ್ಧ ಬೊಟ್ಟು ಮಾಡಿ ತಮ ತಪ್ಪನ್ನು ಮುಚ್ಚಿಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು.
ತಪ್ಪು ಮಾಡಿ ಈಗ ಕೈತೊಳೆದುಕೊಳ್ಳಲು ಸಾಧ್ಯವಿಲ್ಲ. ನಾ ಮುಂದು ತಾ ಮುಂದು ಎಂಬಂತೆ ಪೈಫೋಟಿಗೆ ಬಿದ್ದು, ಆರ್ಸಿಬಿ ಸಂಭ್ರಮಾಚರಣೆ ಕಾರ್ಯಕ್ರಮ ಮಾಡಿ 11 ಜನರನ್ನು ನೀವು ಕೊಂದಿದ್ದೀರಿ ಎಂದು ಮೇಲನವಿ ವಿಪಕ್ಷ ನಾಯಕ ಚಲವಾದಿ ನಾರಾಯಣ ಸ್ವಾಮಿ ಸವಾಲು ಹಾಕಿದರು.
ಪ್ರಯಾಗ್ರಾಜ್ ಘಟನೆಯೇ ಬೇರೆ, ಕಾಶೀರದ ಪುಲ್ವಾಮಾ ಘಟನೆಗೂ ಬೆಂಗಳೂರಿನಲ್ಲಿ ನಡೆದ ಈ ದುರಂತ ಘಟನೆಗೂ ಅಜಗಜಾಂತರ ವ್ಯತ್ಯಾಸವಿದೆ. ತರಾತರಿಯಲ್ಲಿ ಕಾರ್ಯಕ್ರಮ ಆಯೋಜಿಸುವ ಪ್ರಮೇಯವೇನಿತ್ತು, ತಪ್ಪು ಮಾಡಿದ ಮೇಲೆ ಪೊಲೀಸರನ್ನು ನೀವು ಬಲಿಪಶು ಮಾಡಿದ್ದೀರಿ. ಅಂದು ಅಸ್ವಸ್ಥಗೊಂಡವರನ್ನು ಆಸ್ಪತ್ರೆಗೆ ಹೊತ್ತವರು ಪೊಲೀಸರೇ ಹೊರತು ನೀವಲ್ಲ ಎಂದು ಅವರು ಛೇಡಿಸಿದರು.
ಪವಿತ್ರ ವಿಧಾನಸೌಧದ ಮುಂದೆ ಇಂತಹ ಖಾಸಗಿ ಕಾರ್ಯಕ್ರಮ ಆಯೋಜಿಸುವಾಗ ನಿಮ ಕುಟುಂಬ ಸಮೇತರನ್ನು ಕರೆದು ಫೋಟೋ ತೆಗೆಸಿಕೊಂಡು ಸಂಭ್ರಮಿಸುವಾಗ ಅತ್ತ 11 ಜೀವಗಳು ಬಲಿಯಾಗಿವೆ. ನಿಮ ಸರ್ಕಾರ ಬಂದಾಗಿನಿಂದಲೂ ಒಂದಲ್ಲ ಒಂದು ಹಗರಣಗಳು ದುರಂತಗಳು ನಡೆಯುತ್ತಿವೆ. ಸಿಎಂ ಸಿದ್ದರಾಮಯ್ಯ ಅವರು ಕ್ಷಮೆ ಕೇಳಿ ಗೌರವಯುತವಾಗಿ ತಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು.
ಇದು ನ್ಯಾಯಕ್ಕಾಗಿ ಹೋರಾಟ ಇದರಲ್ಲಿ ಯಾವುದೇ ರಾಜಕೀಯವಿಲ್ಲ, ಸರ್ಕಾರ ತಮ ತಪ್ಪಿನಿಂದ ನುಣುಚಿಕೊಳ್ಳಲು ಪ್ರಯತ್ನಿಸುತ್ತಿದೆ. ಈಗಾಗಲೇ ಸಚಿವರು, ಕಾಂಗ್ರೆಸ್ ಮುಖಂಡರೇ ತಪ್ಪಾಗಿದೆ ಎಂದು ಒಪ್ಪಿಕೊಂಡಿರುವಾಗ ಅಧಿಕಾರಕ್ಕೆ ಅಂಟಿಕೊಂಡಿರುವುದು ನಾಚಿಕೆಗೇಡು ಎಂದು ಬಿಜೆಪಿ ನಾಯಕರು ಕಿಡಿಕಾರಿದರು.
ತಮ ಇಷ್ಟಕ್ಕೆ ಬಂದಂತೆ ಅಮಾಯಕರನ್ನು ಕಾನೂನು ಸುಳಿಗೆ ಸಿಲುಕಿಸಲು ಹುನ್ನಾರ ನಡೆಸಲಾಗುತ್ತಿದೆಯೆಂದು ಕಿಡಿಕಾರಿದ್ದಾರೆ. ದೇಶದಾದ್ಯಂತ ಈ ದುರುಂತದ ಬಗ್ಗೆ ಚರ್ಚೆಯಾಗಿದೆ. ಇದರಲ್ಲಿ ರಾಜ್ಯ ಸರ್ಕಾರದ ಲೋಪ ಎದ್ದು ಕಾಣುತ್ತಿದ್ದರೂ ತಮ ತಪ್ಪಿಲ್ಲವೆಂಬಂತೆ ವರ್ತಿಸುತ್ತಿದ್ದಾರೆ. ಹಲವು ಪೊಲೀಸ್ ಅಧಿಕಾರಿಗಳನ್ನು ಅಮಾನತ್ತು ಮಾಡಿರುವುದು ಅವರ ಘನತೆಗೆ ತಕ್ಕದ್ದಲ್ಲ ಎಂದು ಟೀಕಿಸಿದ್ದಾರೆ.
ಕಾರ್ಯಕ್ರಮ ಆಯೋಜನೆ ಕುರಿತಂತೆ ಕೆಲವರು ಒತ್ತಡ ಹಾಕಿದ್ದು ಈಗ ಗೊತ್ತಾಗಿದೆ. ಜನಸಾಮಾನ್ಯರು ಹಾಗೂ ದುರುಂತದಲ್ಲಿ ಬಲಿಯಾದ ಕುಟುಂಬ ಸದಸ್ಯರು ಸರ್ಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ ತಮ ತಪ್ಪನ್ನು ಮರೆ ಮಾಚಲು ಅಧಿಕಾರಿಗಳು ಹಾಗೂ ಸಂಸ್ಥೆಗಳನ್ನು ಹರಕೆ ಕುರಿ ಮಾಡಲಾಗುತ್ತಿದೆ ಎಂದು ಕಿಡಿ ಕಾರಿದ್ದಾರೆ. ಯಾವುದೇ ಕಾರಣಕ್ಕೂ ನಮ ಹೋರಾಟ ನಿಲ್ಲುವುದಿಲ್ಲ. ದುರಂತದಲ್ಲಿ ಮಡಿದವರಿಗೆ ನ್ಯಾಯ ಸಿಗಲೇಬೇಕೆಂಬ ನಿಟ್ಟಿನಲ್ಲಿ ಬಿಜೆಪಿ ಹೋರಾಟ ನಡೆಸಿದೆ ಎಂದು ಹೇಳಿದ್ದಾರೆ.