ಬೆಂಗಳೂರು, ಜೂ.9- ನೈಋತ್ಯ ಮುಂಗಾರು ರಾಜ್ಯದಲ್ಲಿ ಕಳೆದ ಎರಡು ದಿನಗಳಿಂದ ಚೇತರಿಕೆಯಾಗಿದ್ದು, ಇಂದಿನಿಂದ ಮಳೆ ಪ್ರಮಾಣ ಹೆಚ್ಚಾಗಲಿದೆ. ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ ಈ ವಾರಾಂತ್ಯದವರೆಗೂ ರಾಜ್ಯದಲ್ಲಿ ಮಳೆ ಮುಂದುವರೆಯಲಿದೆ. ರಾಜ್ಯದಲ್ಲಿ ಮತ್ತೊಂದು ಸುತ್ತಿನ ಮಳೆಯಾಗಲಿದ್ದು, ಹವಾಮಾನ ಇಲಾಖೆ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ನೀಡಿದೆ. ನಿನ್ನೆ ರಾಜ್ಯದ ಹಲವೆಡೆ ಮಳೆಯಾಗಿದ್ದು, ಕೆಲವೆಡೆ ಭಾರೀ ಮಳೆಯಾಗಿದ್ದರೆ, ಹಲವೆಡೆ ಚದರಿದಂತೆ ಸಾಧಾರಣ ಮಳೆಯಾಗಿದೆ.
ವಿಜಯನಗರ, ದಕ್ಷಿಣ ಕನ್ನಡ, ಉಡುಪಿ, ವಿಜಯಪುರ ಬಾಗಲಕೋಟೆ ಜಿಲ್ಲೆಗಳಲ್ಲಿ ವ್ಯಾಪಕ ಪ್ರಮಾಣದ ಮಳೆಯಾಗಿದೆ. ರಾಯಚೂರು, ಬೆಂಗಳೂರು ನಗರ, ರಾಮನಗರ, ಕೋಲಾರ, ಬೆಳಗಾವಿ, ಕಲಬುರಗಿ, ಯಾದಗಿರಿ, ಮಂಡ್ಯ, ದಾವಣಗೆರೆ, ಬೀದರ್, ಕೊಪ್ಪಳ ಹಾಗೂ ಬಳ್ಳಾರಿ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಿದೆ. ಉಳಿದಂತೆ ಕೆಲವೆಡೆ ಚದುರಿದಂತೆ ಸಾಧಾರಣ ಮಳೆಯಾಗಿದೆ.
ಧಾರವಾಡದ ಶಿವಳ್ಳಿಯಲ್ಲಿ 154 ಮಿ.ಮೀಟರ್ನಷ್ಟು ಭಾರೀ ಮಳೆಯಾಗಿದು, ಚಿತ್ರದುರ್ಗ ಜಿಲ್ಲೆಯ ಪರಶುರಾಮಪುರದಲ್ಲಿ 12 ಸೆಂ.ಮೀಟರ್, ಕುಂದಾಪುರ-ಯಾದಗಿರಿ ಜಿಲ್ಲೆಯ ಘಟಗೇರಿಯಲ್ಲಿ ತಲಾ 8 ಸೆಂ.ಮೀ., ಸಿಂಧನೂರು, ಧಾರವಾಡ, ರಾಯಚೂರು ಜಿಲ್ಲೆಯ ಬಾಲಗಣನೂರಿನಲ್ಲಿ ತಲಾ 5 ಸೆಂ.ಮೀ, ಕೋಟಾ, ಮಸ್ಕಿ, ಹಿಂಡಿ, ವಿಜಯಪುರ, ಮಂತಾಳ, ನಿಪ್ಪಾಣಿ, ಹುಮ್ನಾಬಾದ್, ಕೂಡಲ ಸಂಗಮ, ಆಗುಂಬೆ, ರಾಯಲ್ಪಡುಗಳಲ್ಲಿ ತಲಾ 4 ಸೆಂ.ಮೀಟರ್ನಷ್ಟು ಮಳೆಯಾಗಿದೆ. ಉಳಿದಂತೆ ಸಾಧಾರಣ ಮಳೆಯಾಗಿದೆ.
ಒಳನಾಡಿನಲ್ಲಿ ಟ್ರಿಪ್ ನಿರ್ಮಾಣವಾಗಿದ್ದು, ಬಂಗಾಳ ಕೊಲ್ಲಿಯಲ್ಲಿ ಮೇಲೆ ಸುಳಿಗಾಳಿ ಉಂಟಾಗಿದ್ದು, ಇದರ ಪ್ರಭಾವದಿಂದ ರಾಜ್ಯದಲ್ಲಿ ಮಳೆ ಪ್ರಮಾಣ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆಯ ಬೆಂಗಳೂರು ಪ್ರಾದೇಶಿಕ ಕೇಂದ್ರದ ನಿರ್ದೇಶಕ ಸಿ.ಎಸ್. ಪಾಟೀಲ್ ತಿಳಿಸಿದ್ದಾರೆ.
ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆಯ ಪ್ರಮಾಣ ಹೆಚ್ಚಾಗಲಿದೆ. ಇಂದಿನಿಂದ ಜೂ.15ರವರೆಗೂ ರಾಜ್ಯಾದ್ಯಂತ ವ್ಯಾಪಕ ಮಳೆಯಾಗಲಿದೆ. ಜೂ.12ರನಂತರ ಮಳೆಯ ತೀವ್ರತೆ ಹೆಚ್ಚಾಗಲಿದೆ. ಅಲ್ಲದೇ ಗಂಟೆಗೆ 40-50ಕಿ.ಮೀ. ವೇಗದಲ್ಲಿ ಬಲವಾದ ಮೇಲೆ ಗಾಳಿ ಬೀಸಲಿದೆ. ಕೆಲವೆಡೆ ಗಡುಗು-ಮಿಂಚಿನಿಂದ ಕೂಡಿದ ಮಳೆಯಾಗಲಿದೆ ಎಂದು ಅವರು ಹೇಳಿದ್ದಾರೆ.
ಕರಾವಳಿಮತ್ತುಮಲೆನಾಡು ಭಾಗದ ಜಿಲ್ಲೆಗಳು ಸೇರಿದಂತೆ ಕೆಲವೆಡೆ ಭಾರೀ ಮಳೆಯಾಗುವ ಮುನ್ಸೂಚನೆಗಳಿವೆ ಎಂದು ಅವರು ಹೇಳಿದ್ದಾರೆ. ದಕ್ಷಿಣ ಒಳನಾಡಿನಲ್ಲಿ ವ್ಯಾಪಕ ಪ್ರಮಾಣದ ಮಳೆಯಾಗಲಿದ್ದು, ಕಲ್ಯಾಣ ಕರ್ನಾಟಕ ಹಾಗೂ ಉತ್ತರ ಕರ್ನಾಟಕದ ಭಾಗದಲ್ಲಿ ಚದುರಿದಂತೆ ಅಲ್ಲಲ್ಲಿ ಸಾಧಾರಣ ಮಳೆಯಾಗುವ ಮುನ್ಸೂಚನೆಯಿದೆ. ಬೆಂಗಳೂರಿನ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಭಾಗಶಃ ಮೋಡಕವಿದ ವಾತಾವರಣ ಕಂಡುಬರಲಿದ್ದು, ಸಾಧಾರಣ ಮಳೆಯಾಗುವ ಸಾಧ್ಯತೆ ಹೆಚ್ಚಾಗಲಿದೆ ಎಂದು ತಿಳಿಸಿದ್ದಾರೆ.