ಬೆಂಗಳೂರು, ಜೂ.9-ತಾನು ಪ್ರೀತಿಸುತ್ತಿದ್ದ ಪ್ರಿಯತಮೆ ನನ್ನಿಂದ ದೂರವಾಗುತ್ತಾಳೆಂದು ತಿಳಿದು ಪ್ರಿಯಕರನೇ ಆಕೆಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಸುಬ್ರಮಣ್ಯಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಪ್ರಿಯಕರ ಯಶಸ್ನಿಂದಲೇ ಹರಿಣಿ (36) ಕೊಲೆಯಾದ ಪ್ರಿಯತಮೆ.
ಹೆಮ್ಮಿಗೆ ಪುರದ ನಿವಾಸಿ ಹರಿಣಿಗೆ ಈಗಾಗಲೇ ಮದುವೆಯಾಗಿ ಮಕ್ಕಳಿದ್ದಾರೆ. ಆದರೂ ಸಹ ಕೆಂಗೇರಿ ಉಪನಗರದ ನಿವಾಸಿ, ಬಿಸಿಎ ವ್ಯಾಸಂಗ ಮಾಡಿರುವ ಯಶಸ್ (25)ನ್ನು ಪರಿಚಯ ಮಾಡಿಕೊಂಡು ಪ್ರೀತಿಸುತ್ತಿದ್ದಳು.
ಸಾಫ್ಟ್ವೇರ್ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿರುವ ಯಶಸ್ ಸಹ ಹರಿಣಿಯನ್ನು ಪ್ರೀತಿಸುತ್ತಿದ್ದನು. ತದ ನಂತರದ ದಿನಗಳಲ್ಲಿ ಹರಿಣಿ ಬೇರೊಬ್ಬರ ಜೊತೆ ಸಂಬಂಧವಿಟ್ಟುಕೊಂಡಿರುವ ಬಗ್ಗೆ ಯಶಸ್ಗೆ ಶಂಖೆ ವ್ಯಕ್ತವಾಗಿದೆ.
ನಿನ್ನ ಜೊತೆ ಮಾತನಾಡಬೇಕೆಂದು ಜೂ. 6 ರಂದು ಹರಿಣಿಯನ್ನು ಪೂರ್ಣಪ್ರಜ್ಞಾ ಲೇಔಟ್ನ ಹೋಟೇಲ್ ಗೆ ಯಶಸ್ ಕರೆತಂದಿದ್ದಾನೆ. ಆ ವೇಳೆ ಹೋಟೇಲ್ನ ರೂಂ ನಲ್ಲಿ ಇವರಿಬ್ಬರ ನಡುವೆ ಮಾತಿಗೆ ಮಾತು ಬೆಳೆದು ಜಗಳವಾಗಿದೆ. ತಾಳ್ಮೆ ಕಳೆದುಕೊಂಡ ಯಶಸ್ ಚಾಕುವಿನಿಂದ ಹರಿಣಿಗೆ ಇರಿದು ಕೊಲೆ ಮಾಡಿದ್ದಾನೆ.
ಮಾರನೇ ದಿನ ಶನಿವಾರ ಮುಂಜಾನೆ ಈ ವಿಷಯ ಹೋಟೇಲ್ನವರಿಗೆ ತಿಳಿದು ತಕ್ಷಣ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಆರೋಪಿ ಯಶಸ್ನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಹರಿಣಿಯ ಮೃತದೇಹವನ್ನು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಿ ನಂತರ ವಾರಸುದಾರರಿಗೆ ಹಸ್ತಾಂತರಿಸಲಾಗಿದೆ.