ಬೆಂಗಳೂರು,ಜೂ.9- ಮಹತ್ವದ ಬೆಳವಣೆಗೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾಳೆ ದೆಹಲಿಗೆ ಭೇಟಿ ನೀಡುತ್ತಿದ್ದು, ರಾಜಕೀಯವಾಗಿ ನಾನಾ ರೀತಿಯ ವ್ಯಾಖ್ಯಾನಗಳಿಗೆ ಕಾರಣವಾಗಿದೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿನ ಕಾಲ್ತುಳಿತ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ನಡುವೆ ಭಾರೀ ಪ್ರಮಾಣದ ಆಂತರಿಕ ಜಿದ್ದಾಜಿದ್ದಿ ನಡೆಯುತ್ತಿದೆ. ಜೊತೆಗೆ ವಿಧಾನಪರಿಷತ್ ಸದಸ್ಯರ ನೇಮಕಾತಿ ಕುರಿತಂತೆಯೂ ಹೈಕಮಾಂಡ್ ಜೊತೆಗೆ ಚರ್ಚಿಸಲು ಸಿದ್ದರಾಮಯ್ಯ ದೆಹಲಿಗೆ ತೆರಳುತ್ತಿದ್ದಾರೆ.
ಈಗಾಗಲೇ ಡಿ.ಕೆ.ಶಿವಕುಮಾರ್ ದೆಹಲಿಯಲ್ಲಿದ್ದು ಹೈಕಮಾಂಡ್ ನಾಯಕರ ಜೊತೆ ಚರ್ಚಿಸುವ ಸಾಧ್ಯತೆಗಳಿವೆ. ಇದರ ಬೆನ್ನಲ್ಲೇ ಸಿದ್ದರಾಮಯ್ಯ ಕೂಡ ಭೇಟಿ ನೀಡುತ್ತಿದ್ದು ರಾಜ್ಯ ರಾಜಕೀಯ ಜಿದ್ದಾಜಿದ್ದಿ ದೆಹಲಿಯ ಅಂಗಳದಲ್ಲಿ ಇತ್ಯರ್ಥವಾಗಲಿದೆಯೇ ಎಂಬ ಕುತೂಹಲ ಹೆಚ್ಚಾಗಿದೆ.
ಸಚಿವ ಸಂಪುಟ ಪುನಾರಚನೆ ಹಾಗೂ ವಿಧಾನ ಪರಿಷತ್ ಸದಸ್ಯರ ನೇಮಕಾತಿ ಕುರಿತು ಚರ್ಚಿಸಲು ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಜೂನ್ 6ರಂದು ದೆಹಲಿಗೆ ಭೇಟಿ ನೀಡಬೇಕಿತ್ತು. ಆದರೆ ಐಪಿಎಲ್ ವಿಜಯೋತ್ಸವ ಕಾಲ್ತುಳಿತದಿಂದಾಗಿ ಪ್ರವಾಸ ಮುಂದೂಡಿಕೆ ಯಾಗಿತ್ತು. ಜೂನ್ 12ರಂದು ಭೇಟಿ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿದ್ದವು.
ಆದರೆ ದಿಢೀರೆಂದು ಪ್ರವಾಸ ನಿಗದಿಯಾಗಿರು ವುದು ಪರಿಸ್ಥಿಯ ಗಂಭೀರತೆಯನ್ನು ಹೆಚ್ಚಿಸಿದೆ. ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ನಡುವೆ ಸಚಿವ ಸಂಪುಟ ಸಭೆಯಲ್ಲಿ ಕಾವೇರಿದ ಮಾತುಕತೆಗಳಾಗಿದ್ದವು. ಕಾಲ್ತುಳಿತ ಪ್ರಕರಣದ ಹೊಣೆಗಾರಿಕೆ ವಿಚಾರವಾಗಿ ಒಬ್ಬರ ಮೇಲೆ ಮತ್ತೊಬ್ಬರು ದೋಷಾರೋಪಣೆಗೆ ಮುಂದಾಗಿದ್ದರು. ಬಹಿರಂಗವಾಗಿ ಅಲ್ಲದೇ ಇದ್ದರೂ ಆಂತರಿಕವಾಗಿ ಇಬ್ಬರ ನಡುವೆ ಮಾತಿನ ಚಕಮಕಿಗಳು ನಡೆದಿದ್ದವು ಎಂದು ಮೂಲಗಳು ತಿಳಿಸಿವೆ.
ವಾತಾವರಣ ಸಾಕಷ್ಟು ಹದಗೆಟ್ಟಿತ್ತು. ವಿಧಾನ ಪರಿಷತ್ತಿನ ಸದಸ್ಯರ ನೇಮಕಾತಿಯಲ್ಲೂ ಗೊಂದಲಗಳಾಗಿವೆ. ಹೀಗಾಗಿ ಹೈಕಮಾಂಡ್ ಮಧ್ಯ ಪ್ರವೇಶಿಸುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ದೆಹಲಿಗೆ ಬರುವಂತೆ ದಿಢೀರ್ ಬುಲಾವ್ ನೀಡಿದೆ.