ಬೆಂಗಳೂರು,ಜೂ.13- ಮಾವಿನಹಣ್ಣುಗಳ ಬೆಲೆ ಮಾರುಕಟ್ಟೆಯಲ್ಲಿ ತೀವ್ರವಾಗಿ ಕುಸಿತವಾಗಿದ್ದು, ಕೇಂದ್ರ ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ಬೆಂಬಲ ಬೆಲೆ ಘೋಷಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ. ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವ ಶಿವರಾಜ್ ಸಿಂಗ್ ಚೌವ್ಹಾಣ್ ಅವರಿಗೆ ತುರ್ತು ಪತ್ರ ಬರೆದಿರುವ ಮುಖ್ಯಮಂತ್ರಿಯವರು, ಮಾವಿನಹಣ್ಣು ಮಾರುಕಟ್ಟೆ ಮಧ್ಯ ಪ್ರವೇಶಕ್ಕೆ ಮನವಿ ಮಾಡಿದ್ದಾರೆ.
ರಾಜ್ಯದಲ್ಲಿ 1.39 ಲಕ್ಷ ಹೆಕ್ಟೇರ್ನಲ್ಲಿ ಮಾವು ಬೆಳೆಯುತ್ತಿದ್ದು, ಸರಿಸುಮಾರು 8 ರಿಂದ 10 ಲಕ್ಷ ಮೆಟ್ರಿಕ್ ಟನ್ ಉತ್ಪಾದನೆ ನಿರೀಕ್ಷೆ ಇದೆ. ಪ್ರಮುಖವಾಗಿ ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ದಕ್ಷಿಣ (ರಾಮನಗರ) ಜಿಲ್ಲೆಗಳಲ್ಲಿ ಮಾವು ಹೆಚ್ಚಿನ ಉತ್ಪಾದನೆಯಾಗಿದೆ ಎಂದು ತಿಳಿಸಿದ್ದಾರೆ. ಮೇ, ಜೂನ್ ತಿಂಗಳಿನಲ್ಲಿ ಮಾವಿನಹಣ್ಣಿನ ಮಾರುಕಟ್ಟೆ ಸಹಜವಾಗಿ ಪ್ರತಿ ಕ್ವಿಂಟಾಲ್ಗೆ 12 ಸಾವಿರ ರೂ.ಗಳಿರುತ್ತದೆ. ಪ್ರಸ್ತುತ ಅದು 3 ಸಾವಿರಕ್ಕೆ ಕುಸಿದಿದೆ. ಕರ್ನಾಟಕ ರಾಜ್ಯ ಕೃಷಿ ಮೌಲ್ಯ ಆಯೋಗದ ವರದಿಯ ಪ್ರಕಾರ ಪ್ರತೀ ಕ್ವಿಂಟಾಲ್ ಮಾವು ಉತ್ಪಾದನೆಗೆ 5,460 ರೂ.ಗಳ ವೆಚ್ಚವಾಗುತ್ತಿದೆ. ಉತ್ಪಾದನೆ ಮತ್ತು ಮಾರುಕಟ್ಟೆ ದರದಲ್ಲಿ ಅಜಗಜಾಂತರ ವ್ಯತ್ಯಾಸವಿದೆ. ಹೀಗಾಗಿ ಕೇಂದ್ರ ಸರ್ಕಾರ ಕೂಡಲೇ ಬೆಂಬಲ ಬೆಲೆಯನ್ನು ಘೋಷಿಸಿ ನೆಫೆಡ್ ಮತ್ತು ಎನ್ಸಿಸಿಎಫ್ ಮೂಲಕ ಮಾವು ಖರೀದಿಯನ್ನು ಆರಂಭಿಸಬೇಕು ಎಂದು ಒತ್ತಾಯಿಸಿದ್ದಾರೆ.
ಕೇಂದ್ರ ಸರ್ಕಾರ ಸಕಾಲಿಕ ಮಧ್ಯಪ್ರವೇಶ ಮಾಡಿದರೆ ಭವಿಷ್ಯದಲ್ಲಿ ಗ್ರಾಮೀಣ ಭಾಗದಲ್ಲಾಗುವ ಏರುಪೇರುಗಳನ್ನು ತಡೆಗಟ್ಟಬಹುದು. ಸಾಮಾಜಿಕ, ಆರ್ಥಿಕ ಸಂಕಷ್ಟಗಳನ್ನು ನಿವಾರಿಸಲು ಸಾಧ್ಯವಾಗುತ್ತದೆ ಎಂದಿದ್ದಾರೆ.