Sunday, June 15, 2025
Homeರಾಜ್ಯಒಕ್ಕಲಿಗರ ಸಂಘದಿಂದ ಪ್ರತ್ಯೇಕ ಡಿಜಿಟಲ್‌ ಸರ್ವೆ

ಒಕ್ಕಲಿಗರ ಸಂಘದಿಂದ ಪ್ರತ್ಯೇಕ ಡಿಜಿಟಲ್‌ ಸರ್ವೆ

ಬೆಂಗಳೂರು,ಜೂ.13- ಹೊಸದಾಗಿ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಜಾತಿಗಣತಿ ಸಮೀಕ್ಷೆ ನಡೆಸುವ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿರುವ ರಾಜ್ಯ ಒಕ್ಕಲಿಗರ ಸಂಘವು ಪ್ರತ್ಯೇಕವಾಗಿ ತಮ್ಮ ಸಮುದಾಯದ ಡಿಜಿಟಲ್‌ ಸರ್ವೆ ಮಾಡಿಸುವುದಾಗಿ ಪ್ರಕಟಿಸಿದೆ. ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಬಿ.ಕೆಂಚಪ್ಪಗೌಡ ಅವರು, ಆದಿ ಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಡಾ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರ ಆದೇಶದಂತೆ ನಮ್ಮ ಸಮುದಾಯದ ಬಗ್ಗೆ ಒಕ್ಕಲಿಗರ ಸಂಘದಿಂದ ಡಿಜಿಟಲ್‌ ಸರ್ವೆ ಮಾಡಿಸುತ್ತೇವೆ. ಇದು ಯಾವುದೇ ಪಕ್ಷ ಹಾಗೂ ಸರ್ಕಾರಕ್ಕೆ ಸಂಬಂಧವಿಲ್ಲ. ಜನಾಂಗದ ಹಿತದೃಷ್ಟಿಯಿಂದ ಯಾವುದೇ ಕಾರಣಕ್ಕೂ ಅನ್ಯಾಯವಾಗಬಾರದು ಎಂಬ ಸದುದ್ದೇಶದಿಂದ ಸಮೀಕ್ಷೆ ಮಾಡಿಸುತ್ತೇವೆ ಎಂದರು.

ರಾಜ್ಯಸರ್ಕಾರ ಹೊಸದಾಗಿ ಮಾಡುವ ಜಾತಿಗಣತಿಯಲ್ಲಿ ಮತ್ತೆ ತಪ್ಪುಗಳಾದರೆ ಹೋರಾಟ ಮಾಡುತ್ತೇವೆ. ಆಯಾ ಜನಾಂಗಕ್ಕೆ ಸಿಗಬೇಕಾದ ಸೌಲಭ್ಯಗಳು ಸಿಗಲು ವೈಜ್ಞಾನಿಕ ರೀತಿಯಲ್ಲಿ ಗಣತಿ ಆಗಬೇಕು. ವೈಜ್ಞಾನಿಕ ಸಮೀಕ್ಷಾ ವರದಿ ಬಂದರೆ ಅದರಲ್ಲಿ ನಮ್ಮ ಜನಸಂಖ್ಯೆ ಹೆಚ್ಚು ಕಡಿಮೆಯಾದರೂ ಒಪ್ಪುತ್ತೇವೆ ಎಂದು ಅವರು ತಿಳಿಸಿದರು. ಕಾಂತರಾಜು ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಶಾಶ್ವತ ಹಿಂದುಳಿದ ವರ್ಗಗಳ ಆಯೋಗ ನಡೆಸಿದ ಸಾಮಾಜಿಕ, ಶೈಕ್ಷಣಿಕ ಸಮೀಕ್ಷಾ ವರದಿ ವೈಜ್ಞಾನಿಕವಾಗಿಲ್ಲ. 10 ವರ್ಷದಷ್ಟು ಹಳೆಯದು. ಹೊಸ ಸಮೀಕ್ಷೆ ಮಾಡಬೇಕೆಂಬ ಒತ್ತಾಯಪೂರ್ವಕ ಮನವಿ ಮಾಡಿದ್ದೆವು. ಇದಕ್ಕೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಯವರು ಸಮತಿಸಿ ಹೊಸ ಸಮೀಕ್ಷೆಗೆ ಅವಕಾಶ ಮಾಡಿಕೊಟ್ಟಿರುವುದಕ್ಕೆ ಧನ್ಯವಾದ ಸಲ್ಲಿಸಿ ಅಭಿನಂದಿಸುತ್ತೇವೆ ಎಂದರು.

ಡಿಜಿಟಲ್‌ ಆನ್‌ಲೈನ್‌ ತಂತ್ರಜ್ಞಾನವನ್ನು ಬಳಸಿಕೊಂಡು ಹಳ್ಳಿ, ಗಲ್ಲಿ, ಪಟ್ಟಣಗಳಲ್ಲಿ ಸಮೀಕ್ಷೆ ಮಾಡಬೇಕು. ಸಮೀಕ್ಷೆಗೆ ತಮ ಸಮುದಾಯದ ಸಹಕಾರ ನೀಡಲಿದ್ದು, ಸಮುದಾಯದ ಸ್ವಯಂ ಸೇವಕರನ್ನು ಅದಕ್ಕಾಗಿ ನೇಮಿಸುತ್ತೇವೆ ಎಂದರು. ಕೇಂದ್ರ ಸರ್ಕಾರ ಜಾತಿಗಣತಿಯನ್ನು ಮಾಡುವುದಾಗಿ ಘೋಷಿಸಿದೆ. ಆದರೂ ರಾಜ್ಯಸರ್ಕಾರ ಹೊಸದಾಗಿ ಸಮೀಕ್ಷೆ ಮಾಡುವುದಾಗಿ ಪ್ರಕಟಿಸಿದೆ. ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಜಾತಿಗಣತಿ ಮಾಡಿಸಿದರೆ ನ್ಯಾಯಸಮತವಾಗಿರಲಿದೆ. ಮೂರು ತಿಂಗಳ ಸಮಯಾವಕಾಶ ಸಾಲುವುದಿಲ್ಲ. ಇನ್ನೂ ಎರಡು ತಿಂಗಳು ಹೆಚ್ಚು ನೀಡಿದರೆ ಅನುಕೂಲವಾಗಲಿದೆ. ವೀರಶೈವ, ಒಕ್ಕಲಿಗ, ಬ್ರಾಹಣರು ಈಗಿರುವ ವರದಿಗೆ ವಿರೋಧ ವ್ಯಕ್ತಪಡಿಸಿ ಅನುಷ್ಠಾನ ಮಾಡಬಾರದು ಎಂದು ಆಗ್ರಹಿಸಿದ್ದೆವು ಎಂದರು.

ಸಂಘದ ಪ್ರಧಾನ ಕಾರ್ಯದರ್ಶಿ ಟಿ.ಕೋನಪ್ಪರೆಡ್ಡಿ ಮಾತನಾಡಿ, ಹತ್ತು ವರ್ಷಗಳಷ್ಟು ಹಳೆಯದಾದ ಹಾಗೂ ಕಾರ್ಯದರ್ಶಿ ಸಹಿ ಇಲ್ಲದೆ ಗೊಂದಲಮಯ ವರದಿ ಜಾರಿ ಮಾಡುವುದು ಬೇಡ ಎಂದು ಒತ್ತಡ ಹಾಕಿದ್ದೆವು. ಈಗ ಹೊಸದಾಗಿ ಜಾತಿಗಣತಿ ಮಾಡಲಿದ್ದು, ಆಧಾರ್‌ಲಿಂಕ್‌ನೊಂದಿಗೆ ಮಾಡಬೇಕು. ಜಿಯೋ ಟ್ಯಾಗ್‌ ಮಾಡಿದರೆ ಆಯಾ ಕುಟುಂಬದ ಆರ್ಥಿಕತೆಯ ಮಾಹಿತಿಯೂ ಪಡೆಯಬಹುದು. ಗ್ರಾಮ ಲೆಕ್ಕಿಗರು, ಪಂಚಾಯತ್‌ ಅಭಿವೃದ್ಧಿ ಅಧಿಕಾರಿಗಳನ್ನು ಇದರಲ್ಲಿ ಪಾಲ್ಗೊಳ್ಳುವಂತೆ ಮಾಡಬೇಕು. ಕರಾರುವಕ್ಕಾಗಿ ಜಾತಿಗಣತಿ ಮಾಡಿದಾಗ ಯಾರಿಗೂ ಅನ್ಯಾಯವಾಗುವುದಿಲ್ಲ ಎಂದು ಹೇಳಿದರು.

ಸಂಘದ ಗೌರವಾಧ್ಯಕ್ಷ ಎಲುವಳ್ಳಿ ರಮೇಶ್‌ ಮಾತನಾಡಿ, ಮನೆಮನೆಗೂ ಭೇಟಿ ನೀಡಿ ವೈಜ್ಞಾನಿಕವಾಗಿ ಸಮೀಕ್ಷೆ ಮಾಡಬೇಕು. ಸಮೀಕ್ಷೆ ನಂತರ ಆಕ್ಷೇಪಣಾ ಸಲ್ಲಿಕೆಗೂ ಅವಕಾಶ ಇರಬೇಕು. ಎಲ್ಲಾ ಸಮುದಾಯಗಳಿಗೂ ನ್ಯಾಯ ದೊರಕುವ ರೀತಿ ಇರಬೇಕು. ಆದಿಚುಂಚನಗಿರಿ ಮಠಾಧೀಶರಾಗಿದ್ದ ಪದಭೂಷಣ ಡಾ.ಬಾಲಗಂಗಾಧರನಾಥ ಸ್ವಾಮೀಜಿಯವರ ಕರೆಯಂತೆ ಜಾತಿಗಣತಿ ಸಂದರ್ಭದಲ್ಲಿ ಉಪಜಾತಿಗಳ ಬದಲಾಗಿ ಒಕ್ಕಲಿಗ ಎಂಬುದನ್ನೇ ನಮೂದಿಸಬೇಕು ಎಂದು ಕರೆ ನೀಡಿದರು.

ಸಂಘದ ಕಾರ್ಯಾಧ್ಯಕ್ಷ ಬಿ.ಪಿ.ಮಂಜೇಗೌಡ ಮಾತನಾಡಿ, ಹೊಸದಾಗಿ ಜಾತಿಗಣತಿ ಮಾಡುವುದಕ್ಕೆ ವಿರೋಧ ಮಾಡುವುದು ಸರಿಯಲ್ಲ. ಅದರ ಬದಲು ಎಲ್ಲಾ ಸಮುದಾಯಕ್ಕೂ ನ್ಯಾಯ ಸಿಗಲು ವೈಜ್ಞಾನಿಕ ಸಮೀಕ್ಷೆಗೆ ಸಹಕಾರ ನೀಡಬೇಕು. ವೈಜ್ಞಾನಿಕ ಸಮೀಕ್ಷೆಯಿಂದ ಸಮತೋಲನವಾದ ಸಾಮಾಜಿಕ ಸೌಲಭ್ಯ ಎಲ್ಲಾ ಸಮುದಾಯಕ್ಕೂ ಸಿಗುವಂತಾಗುತ್ತದೆ ಎಂದರು. ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಶ್ರೀನಿವಾಸ್‌‍, ಕೊಳ್ಳುವ ಸಮಿತಿ ಅಧ್ಯಕ್ಷ ವೆಂಕಟರಾಮೇಗೌಡ, ಒಕ್ಕಲಿಗರ ದಂತ ಮಹಾವಿದ್ಯಾಲಯದ ಆಡಳಿತ ಮಂಡಳಿ ಅಧ್ಯಕ್ಞ ಜೆ.ರಾಜು ಉಪಸ್ಥಿತರಿದ್ದರು.

RELATED ARTICLES

Latest News