ಗಾಂಧೀನಗರ, ಜೂ.14- ಅಹಮದಾಬಾದ್ನಲ್ಲಿ ನಡೆದ ಏರ್ ಇಂಡಿಯಾ ಡ್ರಿಮ್ಲೈನರ್ ಅಪಘಾತದಲ್ಲಿ ಶನಿವಾರದ ವೇಳೆಗೆ ಸಾವನ್ನಪ್ಪಿದವರ ಸಂಖ್ಯೆ 274 ಕ್ಕೆ ತಲುಪಿದ್ದು, ದುರಂತದ ವೇಳೆ ನೆಲದ ಮೇಲೆ ಸಾವನ್ನಪ್ಪಿದ 33 ಜನರಿಗೆ ಟಾಟಾ ಸಮೂಹವು ತಲಾ 1 ಕೋಟಿ ರೂ. ಪರಿಹಾರವನ್ನು ನೀಡುವುದಾಗಿ ಘೋಷಣೆ ಮಾಡಿದೆ.
ಟಾಟಾ ಗ್ರೂಪ್ ಪ್ರಕಾರ, ನೆಲದ ಮೇಲೆ ಸಾವನ್ನಪ್ಪಿದ ಜನರು ಒಂದು ಕೋಟಿ ರೂಪಾಯಿ ಪರಿಹಾರಕ್ಕೆ ಅರ್ಹರಾಗಿರುತ್ತಾರೆ.ಅಪಘಾತದಲ್ಲಿ ಗಾಯಗೊಂಡವರ ವೈದ್ಯಕೀಯ ವೆಚ್ಚವನ್ನು ಟಾಟಾಸ್ ಭರಿಸಲಿದೆ. ಗಾಯಗೊಂಡ ವ್ಯಕ್ತಿಗಳಿಗೆ ಅಗತ್ಯವಿರುವ ಎಲ್ಲಾ ಆರೈಕೆ ಮತ್ತು ಬೆಂಬಲ ದೊರೆಯುವುದನ್ನು ಅವರು ಖಚಿತಪಡಿಸಿಪಡಿಸಿದ್ದಾರೆ.
ಅಪಘಾತದಲ್ಲಿ ಸಾವನ್ನಪ್ಪಿದ ಮತ್ತು ಗಾಯಗೊಂಡವರಲ್ಲಿ ವೈದ್ಯರು, ವಿದ್ಯಾರ್ಥಿಗಳು, ಆಸ್ಪತ್ರೆ ಸಿಬ್ಬಂದಿ ಮತ್ತು ವಿಮಾನ ನಿಲ್ದಾಣಕ್ಕೆ ಹತ್ತಿರದಲ್ಲಿರುವ ಮೇಘಣಿನಗರ ಪ್ರದೇಶದ ಸ್ಥಳೀಯ ನಿವಾಸಿಗಳು ಸೇರಿದ್ದಾರೆಂದು ಹೇಳಲಾಗಿದೆ.
ಡೀಮ್ಲೈನರ್ ಅಪಘಾತದಲ್ಲಿ ಅಪಘಾತಕ್ಕೀಡಾಗಿ ತೀವ್ರವಾಗಿ ಹಾನಿಗೊಳಗಾದ ಬಿಜೆ ಮೆಡಿಕಲ್ನ ಹಾಸ್ಟೆಲ್ನ ಪುನರ್ನಿರ್ಮಾಣಕ್ಕೆ ಟಾಟಾ ಸಂಸ್ಥೆ ಆರ್ಥಿಕ ನೆರವು ನೀಡಲಿದೆ ಎಂದು ಈಗಾಗಲೇ ಘೋಷಣೆ ಮಾಡಿದೆ.
ವಿಮಾನದಲ್ಲಿದ್ದ 241 ಪ್ರಯಾಣಿಕರು ಮತ್ತು ಸಿಬ್ಬಂದಿ ಸಾವನ್ನಪ್ಪಿದ್ದಾರೆ ಎಂದು ದೃಢಪಡಿಸಲಾಗಿದೆ. ಅಪಘಾತದಲ್ಲಿ ಒಬ್ಬರು ಬದುಕುಳಿದಿದ್ದಾರೆ. ಉಳಿದ 33 ಮಂದಿ ಅಪಘಾತದ ಸಮಯದಲ್ಲಿ ಅಹಮದಾಬಾದ ಬಿಜೆ ವೈದ್ಯಕೀಯ ಕಾಲೇಜಿನ ಆವರಣದಲ್ಲಿದ್ದ ವ್ಯಕ್ತಿಗಳಾಗಿರಬಹುದು ಎಂದು ಅಂದಾಜಿಸಲಾಗಿದೆ.
ಹತ್ತಿರದ ಸಂಬಂಧಿಕರಿಗೆ ಉದ್ಯೋಗ ನೀಡುವಂತಹ ಆರ್ಥಿಕ ಪರಿಹಾರವನ್ನು ಹೊರತುಪಡಿಸಿ ಟಾಟಾಗಳು ಯಾವುದೇ ಸಹಾಯವನ್ನು ನೀಡುತ್ತವೆಯೇ ಎಂದು ಕೇಳಿದಾಗ, ಅಧಿಕಾರಿಯೊಬ್ಬರು, ಸದ್ಯಕ್ಕೆ ಏನನ್ನೂ ನಿರ್ಧರಿಸಲಾಗಿಲ್ಲ. ನಾವು ಇನ್ನೂ ಪರಿಸ್ಥಿತಿಯನ್ನು ನಿರ್ಣಯಿಸುತ್ತಿದ್ದೇವೆ ಮತ್ತು ತನಿಖೆ ಪ್ರಾರಂಭವಾಗಿದೆ ಎಂದು ಹೇಳಿದರು.