ರಾಯಚೂರು,ಜೂ.16- ರಾಜಕೀಯ ನಿಂತ ನೀರಲ್ಲ. ಸಚಿವ ಸಂಪುಟ ಪುನರ್ ರಚನೆಯಲ್ಲಿ ನಾವು ನಮ್ಮ ಸ್ಥಾನವನ್ನು ಉಳಿಸಿಕೊಂಡರೆ ಸಾಕಾಗಿದೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಪಕ್ಷದ ನಾಯಕರು ಇತ್ತೀಚೆಗೆ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿದ್ದರು. ಅಲ್ಲಿ ಯಾವ ಚರ್ಚೆಯಾಗಿದೆಯೋ ಗೊತ್ತಿಲ್ಲ. ಸಂಪುಟ ಪುನರ್ರಚನೆ ಅಥವಾ ವಿಸ್ತರಣೆ ಮಾಡುವುದು ವರಿಷ್ಠರ ನಿರ್ಧಾರ. ನಾವು ಸಂಪುಟದ ಭಾಗವಷ್ಟೆ. ಬೇರೆಯವರನ್ನು ಸೇರಿಸಿಕೊಳ್ಳುವುದು, ಬಿಡುವುದು ನಮ್ಮ ಕೈಲಿಲ್ಲ. ನಮ್ಮ ಸ್ಥಾನಗಳನ್ನು ಉಳಿಸಿಕೊಂಡರೆ ಸಾಕಾಗಿದೆ ಎಂದರು.
ರಾಜಕೀಯ ನಿಂತ ನೀರಲ್ಲ. ನದಿ ಹರಿದು ವಿಜಯವಾಡದ ಬಳಿ ಸಮುದ್ರ ಸೇರಬಹುದು ಎಂದು ಮಾರ್ಮಿಕವಾಗಿ ಹೇಳಿದರು.
ಸರ್ಕಾರದಲ್ಲಿ ಏರಿಳಿತಗಳು ಸಾಮಾನ್ಯ. ಹಿಂದೆ ಬಿಜೆಪಿಯಲ್ಲಿ ಮೂರು ಜನ ಮುಖ್ಯಮಂತ್ರಿಗಳಾಗಿದ್ದರು. ನಮಲ್ಲಿ ಅಂತಹ ಪರಿಸ್ಥಿತಿ ಇಲ್ಲ. ಮುಖ್ಯಮಂತ್ರಿ ಸ್ಥಾನ ಗಟ್ಟಿಯಾಗಿದೆ. ಅಧಿಕಾರ ಯಾರಿಗೂ ಶಾಶ್ವತ ಅಲ್ಲ. ಸಚಿವರ ಸ್ಥಾನಗಳಲ್ಲಿ ಬದಲಾವಣೆಯಾಗಬಹುದು ಎಂದರು. ಬಹಳಷ್ಟು ಮಂದಿ ಹಿರಿಯರು ನಮಗೂ ಅವಕಾಶ ಕೊಡಿ ಎಂದು ಮನವಿ ಮಾಡುತ್ತಿದ್ದಾರೆ. ಹೊಸ ನಾಯಕತ್ವ ಬಳಸಲು ಬಿಜೆಪಿಯಲ್ಲಿ ಮೊದಲ ಬಾರಿ ಗೆದ್ದವರನ್ನೇ ಮುಖ್ಯಮಂತ್ರಿ ಮಾಡಿದ್ದಾರೆ. ವಿಧಾನಪರಿಷತ್ನ ಆಯ್ಕೆಯಲ್ಲೂ ಕಾರ್ಯಕರ್ತರಿಗೆ ಅವಕಾಶ ಕೊಟ್ಟಿದ್ದಾರೆ. ಆ ಮಾದರಿ ನಮಲ್ಲೂ ಅನುಷ್ಠಾನಕ್ಕೆ ಬರಬೇಕು ಎಂದು ಹೇಳಿದರು.
ವಿಧಾನಪರಿಷತ್ ಸದಸ್ಯರನ್ನು ಸಚಿವರ ಸ್ಥಾನಕ್ಕೆ ಸೇರಿಸಿಕೊಳ್ಳುವುದು ಅಥವಾ ಬಿಡುವುದು ವರಿಷ್ಠರ ಹಂತದಲ್ಲಿರುವ ಚರ್ಚೆ. ನಾನು ಅದಕ್ಕೆ ಪ್ರತಿಕ್ರಿಯಿಸುವುದಿಲ್ಲ. ಸದ್ಯಕ್ಕೆ ನಮಗೆ ವಹಿಸಿರುವ ಜವಾಬ್ದಾರಿಯತ್ತ ಗಮನ ಹರಿಸುತ್ತೇನೆ. ಮುಖ್ಯಮಂತ್ರಿ ಬದಲಾವಣೆಯಂತೂ ಸದ್ಯಕ್ಕಿಲ್ಲ ಎಂದು ಪುನರುಚ್ಚರಿಸಿದರು. ಜಾತಿಗಣತಿಗೆ ನೂರಾರು ಕೋಟಿ ರೂ. ವ್ಯಯವಾಗುತ್ತದೆ ಎಂದು ಟೀಕೆ ಮಾಡುವುದು ಸರಿಯಲ್ಲ. ಕೋವಿಡ್ ಸಂದರ್ಭದಲ್ಲಿ ಎರಡೂವರೆಯಿಂದ ಮೂರು ಸಾವಿರ ಕೋಟಿ ರೂ.ಗಳಷ್ಟು ನಷ್ಟವಾಯಿತು. ಅದರ ಬಗ್ಗೆ ಯಾರೂ ಚರ್ಚೆ ಮಾಡುವುದಿಲ್ಲ ಎಂದು ಆರೋಪಿಸಿದರು.
ಇಲ್ಲಿ ದುಡ್ಡಿನ ಪ್ರಶ್ನೆ ಉದ್ಭವಿಸುವುದಿಲ್ಲ. ಜನರನ್ನು ಅಸಮಾಧಾನದಲ್ಲಿಟ್ಟು ವರದಿ ಜಾರಿ ಮಾಡಿದರೆ ಪ್ರಯೋಜನವಾಗುವುದಿಲ್ಲ. ಎಲ್ಲರನ್ನೂ ಸಮಾಧಾನಪಡಿಸಲು ಮತ್ತೆ 300 ಕೋಟಿ ರೂ. ವ್ಯರ್ಥವಾದರೂ ಚಿಂತೆಯಿಲ್ಲ ಎಂದರು. ಹೈಕಮಾಂಡ್ ಸೂಚನೆ ನೀಡಿರುವುದರಲ್ಲಿ ತಪ್ಪಿಲ್ಲ. ಜನರ ಭಾವನೆಗಳಿಗೆ ಬೆಲೆ ಕೊಡುವುದು ಸರ್ಕಾರ ಮತ್ತು ಪಕ್ಷದ ಜವಾಬ್ದಾರಿ. ವಿರೋಧ ಮಾಡುವವರು ದೆಹಲಿಗೆ ಹೋಗಿ ದೂರು ನೀಡಿದರು. ಮತ್ತೊಮೆ ಸಮೀಕ್ಷೆ ಮಾಡಿದಾಗ ಯಾರ ಆಕ್ಷೇಪವೂ ಇರುವುದಿಲ್ಲ ಎಂದು ಹೈಕಮಾಂಡ್ ಸಲಹೆ ನೀಡಿದೆ ಎಂದರು.
ವಿರೋಧ ಮಾಡಿರುವವರಲ್ಲಿ ನಮ ಪಕ್ಷದ ಶಾಸಕರು, ಸಚಿವರೂ ಇದ್ದಾರೆ. ಬಿಜೆಪಿ, ಜೆಡಿಎಸ್ನಿಂದಲೂ ವಿರೋಧಗಳು ವ್ಯಕ್ತವಾಗಿದ್ದವು ಎಂದರು. ರಾಜ್ಯಸರ್ಕಾರದಿಂದ ಅಭಿವೃದ್ಧಿ ಕುಂಠಿತವಾಗಿದೆ ಎಂದು ಆರೋಪಿಸುವುದು ರಾಜಕೀಯ ಪ್ರೇರಿತ. ಬಿಜೆಪಿಯವರು ಮುಂದಿನ ಮೂರು ವರ್ಷಗಳ ಕಾಲವೂ ಈ ರೀತಿಯ ಮಾತುಗಳನ್ನು ಹೇಳಿಕೊಳ್ಳುತ್ತಲೇ ಕಾಲ ಕಳೆಯುತ್ತಾರೆ. ಅವರಿಗೆ ಬೇರೆ ವಿಚಾರಗಳಿಲ್ಲ. ಆದರೆ ನಮಲ್ಲಿ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುತ್ತಿದ್ದೇವೆ ಎಂದು ತಿಳಿಸಿದರು. ಲೋಕೋಪಯೋಗಿ ಇಲಾಖೆಯಿಂದ ಗುತ್ತಿಗೆ ನೀಡುವಲ್ಲಿ ಯಾಂತ್ರೀಕೃತ ವ್ಯವಸ್ಥೆ ಇದೆ. ಕಡಿಮೆ ದರಕ್ಕೆ ಯಾರು ಟೆಂಡರ್ ಹಾಕುತ್ತಾರೋ ಅವರಿಗೆ ಅವಕಾಶ ಸಿಗುತ್ತದೆ. ಇದರಲ್ಲಿ ನಾವು ಹಸ್ತಕ್ಷೇಪ ಮಾಡುವುದಿಲ್ಲ ಎಂದರು.