ಬೆಂಗಳೂರು,ಜೂ.16- ಗುಜರಾತ್ನ ಅಹಮದಾಬಾದ್ನಲ್ಲಿ ನಡೆದ ವಿಮಾನ ದುರಂತ ಪ್ರಕರಣದಲ್ಲಿ ನಾವು ರಾಜಕೀಯ ಮಾಡಲು ಬಯಸುವುದಿಲ್ಲ. ಅದೇನಿದ್ದರೂ ಬಿಜೆಪಿ ಹಾಗೂ ಜನತಾದಳದ ಕೆಲಸ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಲೇವಡಿ ಮಾಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯ ಜೊತೆ ತಾವು ಗುಜರಾತಿನ ಅಹಮದಾಬಾದ್ಗೆ ತೆರಳಿ ವಿಮಾನ ದುರಂತವಾದ ಸ್ಥಳವನ್ನು ಪರಿಶೀಲನೆ ನಡೆಸಿದ್ದು, ಅದೊಂದು ಭಯಾನಕ ಘಟನೆ. ದುರ್ಘಟನೆಯಾಗಬಾರದಿತ್ತು. ಯಾವ ದೇಶದಲ್ಲೂ ಇಂತಹ ಘಟನೆಗಳಾಗಬಾರದು. ಕೆಲವರ ದೇಹಗಳು ಸುಟ್ಟು ಹೋಗಿವೆ. ಆ ಸ್ಥಳವನ್ನು ನೋಡಿದರೆ ಅಬ್ಬಬ್ಬಾ ಎನ್ನುವಂತಿದೆ. ವಿಮಾನ ಇನ್ನು 500 ಮೀಟರ್ ಮುಂದೆ ಹೋಗಿದ್ದರೆ ಸಾವಿರಾರು ಜನರಿಗೆ ತೊಂದರೆಯಾಗುತ್ತಿತ್ತು. ದೊಡ್ಡ ಅನಾಹುತವೇ ಸಂಭವಿಸುತ್ತಿತ್ತು ಎಂದು ಆತಂಕ ವ್ಯಕ್ತಪಡಿಸಿದರು.
ಈಗಲೂ ಸುತ್ತಮುತ್ತಲಿನವರು ಆಘಾತದಿಂದ ಹೊರಬಂದಿಲ್ಲ. ಕೆಲವರಿಗೆ ಮಾನಸಿಕ ಆಘಾತವಾಗಿದೆ. ಜನರ ಪರಿಸ್ಥಿತಿ ಕಂಡರೆ ಆತಂಕವಾಗುತ್ತಿದೆ. ಕಾಂಗ್ರೆಸ್ ಪಕ್ಷದಿಂದ ನಾವು ಸಾಂತ್ವಾನ ಹೇಳಿದ್ದೇವೆ. ನೊಂದವರ ಪರವಾಗಿ ಪ್ರಾರ್ಥಿಸಿದ್ದೇವೆ ಎಂದರು. ವಿಮಾನದ ಬ್ಲಾಕ್ಬಾಕ್್ಸನಲ್ಲಿನ ಸತ್ಯಾಂಶಕ್ಕಾಗಿ ನಿರೀಕ್ಷಿಸಲಾಗುತ್ತಿದೆ. ಈ ಪ್ರಕರಣದಲ್ಲಿ ನಾವು ರಾಜಕೀಯ ಮಾಡಿ ಆರೋಪ ಮಾಡುವುದಿಲ್ಲ. ಬಿಜೆಪಿಯವರು ಹಳೆಯ ವಿಚಾರಗಳನ್ನು ತಿರುಚಿ ಮಾತನಾಡಬಹುದು. ಆದರೆ ನಮಗೆ ಆ ಚರ್ಚೆ ಬೇಕಿಲ್ಲ. ನೊಂದ ಜನರಿಗೆ ನ್ಯಾಯ ಸಿಗಬೇಕು. ಕೇಂದ್ರ ಸಚಿವರು ಮತ್ತು ಡಿಜಿಸಿಐನವರು ಅಗತ್ಯವಿರುವ ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ. ನಾವು ತಾಂತ್ರಿಕವಾಗಿ ಪರಿಣಿತರಲ್ಲ. ಹಾಗಾಗಿ ಹೆಚ್ಚಿನ ಚರ್ಚೆ ಮಾಡುವುದಿಲ್ಲ ಎಂದು ಹೇಳಿದರು. ಇದೊಂದು ಗಂಭೀರವಾದ ಘಟನೆ. ಕೇಂದ್ರ ಸರ್ಕಾರ ಗಂಭೀರವಾಗಿ ತೆಗೆದುಕೊಂಡು ಮುಂದಿನ ದಿನಗಳಲ್ಲಿ ಈ ರೀತಿ ಆಗದಂತೆ ಎಚ್ಚರಿಕೆ ವಹಿಸಬೇಕು ಎಂದರು.