ಬೆಂಗಳೂರು,ಜೂ.17- ನಗರದ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಆರ್ಸಿಬಿ ವಿಜಯೋತ್ಸವದ ಸಂದರ್ಭದಲ್ಲಿ ಉಂಟಾದ ಕಾಲ್ತುಳಿತದ ಸಂಬಂಧ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳ ರಾಜೀನಾಮೆಗೆ ಒತ್ತಾಯಿಸಿ ನಗರದ ಫ್ರೀಡಂಪಾರ್ಕ್ನಲ್ಲಿ ಬಿಜೆಪಿ ಬೃಹತ್ ಪ್ರತಿಭಟನೆ ನಡೆಸಿತು. ಪ್ರತಿಭಟನೆಯಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಧಾನಮಂಡಲದ ಉಭಯ ಸದನಗಳ ಪ್ರತಿಪಕ್ಷದ ನಾಯಕರಾದ ಆರ್.ಅಶೋಕ್, ಚಲವಾದಿ ನಾರಾಯಣಸ್ವಾಮಿ, ಸಂಸದರಾದ ಗೋವಿಂದ ಕಾರಜೋಳ, ಪಿ.ಸಿ.ಮೋಹನ್, ಶಾಸಕರಾದ ಕೆ.ಗೋಪಾಲಯ್ಯ,ಸಿ.ಕೆ.ರಾಮಮೂರ್ತಿ, ಭೈರತಿ ಬಸವರಾಜ್, ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ್ ಹಾಗೂ ಪಕ್ಷದ ನೂರಾರು ಕಾರ್ಯಕರ್ತರು ಭಾಗಿಯಾಗಿದ್ದರು.
ಪ್ರತಿಭಟನೆಯಲ್ಲಿ ಪಾಲ್ಗೊಂಡ ಬಹುತೇಕರು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರುಗಳು ನೈತಿಕ ಹೊಣೆ ಹೊತ್ತು ತಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಇಲ್ಲದಿದ್ದರೆ ಈ ಸರ್ಕಾರವನ್ನು ಕರ್ನಾಟಕದ ಜನತೆ ಶಾಶ್ವತವಾಗಿ ಮನೆಗೆ ಕಳುಹಿಸುತ್ತಾರೆ ಎಂದು ಎಚ್ಚರಿಕೆ ಕೊಟ್ಟರು. ಈ ಸಂದರ್ಭದಲ್ಲಿ ಫ್ರೀಡಂಪಾರ್ಕ್ನಿಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಧಿಕೃತ ನಿವಾಸ ಕಾವೇರಿಗೆ ಮುತ್ತಿಗೆ ಹಾಕಲು ಹೊರಟಾಗ ಮಾರ್ಗಮಧ್ಯೆ ಪೊಲೀಸರು ಬ್ಯಾರಿಕೇಡ್ಗಳನ್ನು ಹಾಕಿ ತಡೆದರು.
ಈ ವೇಳೆ ಪೊಲೀಸರು ಮತ್ತು ಪ್ರತಿಭಟನಾನಿರತರ ನಡುವೆ ಭಾರೀ ಮಾತಿನ ಚಕಮಕಿ ನಡೆಯಿತು. ಇದರ ನಡುವೆಯೇ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು. ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿ, ಆರ್ಸಿಬಿ ವಿಜಯೋತ್ಸವ ವಿಚಾರದಲ್ಲಿ ಸಿಎಂ, ಡಿಸಿಎಂಗೆ ಪ್ರತಿಷ್ಠೆ, ಪೈಪೋಟಿ ಏರ್ಪಟ್ಟಿತ್ತು. ತಮ ಇಮೇಜ್ ಹೆಚ್ಚಿಸಿಕೊಳ್ಳಲು ಹುಚ್ಚಾಟ ನಡೀತು. ಇವರ ಹುಚ್ಚಾಟದ ಪರಿಣಾಮ 11 ಜನ ಅಪಾಯಕರ ಪ್ರಾಣ ಹೋಗಿದೆ. ಸಿಎಂ, ಡಿಸಿಎಂ ತಮ ಜನಪ್ರಿಯತೆ ಹೆಚ್ಚಿಸಿಕೊಳ್ಳಲು ಹುಚ್ಚಾಟಕ್ಕೆ ಬಿದ್ದಿದ್ದರು. ಇಂಥ ಭಂಡ ಸಿಎಂ, ಡಿಸಿಎಂ ಅನ್ನು ನಾವು ಎಲ್ಲಿಯೂ ನೋಡಿರಲಿಲ್ಲ ಎಂದು ಕಿಡಿಕಾರಿದರು.
ಸಿಎಂ, ಡಿಸಿಎಂ, ಸಚಿವರಿಗೆ ಭದ್ರತೆ ಕೊಡಬೇಕು ಎಂದು ವಿಧಾನಸೌಧಕ್ಕೆ ಭದ್ರತೆ ತಗೊಂಡರು. ವೇದಿಕೆ ಮೇಲೆ ಸಿಎಂ, ಡಿಸಿಎಂ, ಸಚಿವರ ಮಕ್ಕಳೂ ಇದ್ದರು. ಚಿನ್ನಸ್ವಾಮಿ ಕ್ರೀಡಾಂಗಣದ ಕಾರ್ಯಕ್ರಮಕ್ಕೆ ಭದ್ರತೆ ಕೊರತೆ ಆಯಿತು. ಇದರ ಪರಿಣಾಮ 11 ಜನರ ಸಾವಾಯಿತು. ಸಾವಿಗೆ ಸಿಎಂ, ಡಿಸಿಎಂ ಕಾರಣರಾಗಿದ್ದು ಇಬ್ಬರೂ ರಾಜೀನಾಮೆ ಕೊಡಬೇಕು. ಸರ್ಕಾರವೇ 11 ಜನರ ಕೊಲೆ ಮಾಡಿದೆ, ಇದು ಸರ್ಕಾರದ ಪ್ರಾಯೋಜತ್ವದ ಕೊಲೆಗಳು. ಲಜ್ಜೆಗೆಟ್ಟ ಮಂತ್ರಿಗಳು ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು.
ಸಿಎಂ, ಡಿಸಿಎಂ ಮನೆಗಳಿಗೂ ಮುತ್ತಿಗೆ ಹಾಕುತ್ತೇವೆ. ಈ ಸರ್ಕಾರ ಹೋದರೆ ಮಾತ್ರ ರಾಜ್ಯಕ್ಕೆ ಒಳ್ಳೆಯದಾಗುತ್ತದೆ ಎಂದರು. ಪ್ರತಿಪಕ್ಷದ ನಾಯಕ ಆರ್.ಅಶೋಕ್ ಮಾತನಾಡಿ, ಕಪ್ ಗೆದ್ದಿದ್ದು ಆರ್ಸಿಬಿನೋ? ಸರ್ಕಾರನೋ? ಅಥವಾ ಸಿದ್ದರಾಮಯ್ಯ ಇಲ್ಲವೇ ಡಿಕೆಶಿ ಟೀಮೋ? ಎಂದು ಪ್ರಶ್ನಿಸಿದ ಅವರು, ರಾಜ್ಯಪಾಲರಿಗೆ ಏನೂ ಗೊತ್ತಿರಲಿಲ್ಲ, ಅವರನ್ನೂ ಕರೆದಿದ್ದರು. ಸಿಎಂ ಅವರೇ ರಾಜ್ಯಪಾಲರನ್ನ ಕರೆದಿದ್ದವರು. ಇದು ಮನೆಹಾಳ ಸರ್ಕಾರ ಎಂದು ಆಕ್ರೋಶ ಹೊರಹಾಕಿದರು.
ಫೋಟೋ ತೆಗೆಸಿಕೊಂಡವರು ನಿಮ ಮಕ್ಕಳು, ಅಮಾನತುಗೊಂಡವರು ಬೇರೆಯವರ ಮಕ್ಕಳು. ಈ ಘಟನೆ ಇಡೀ ದೇಶ ನೋಡಿದೆ. ಅಪರಾಧಿ ಯಾರು ಅನ್ನೋದು ಸಾಬೀತಾಗಿದೆ.ಈ ಸರ್ಕಾರಕ್ಕೆ ಜನರ ಶಾಪ ತಟ್ಟದೆ ಇರದು ಎಂದರು. ನಮ ಪ್ರತಿಭಟನೆಗೆ ಭಾರೀ ಸಂಖ್ಯೆಯಲ್ಲಿ ಪೊಲೀಸ್ ಭದ್ರತೆ ಕೊಟ್ಟಿದ್ದರು. ವಿಜಯೋತ್ಸವ ದಿನ ಲಕ್ಷ ಲಕ್ಷ ಅಭಿಮಾನಿಗಳು ಬಂದಿದ್ರು..ಎಷ್ಟು ಭದ್ರತೆ ಕೊಡಬೇಕಿತ್ತು? ಈ ಬಗ್ಗೆ ಕನಿಷ್ಟ ಜ್ಞಾನವೂ ಕೂಡ ಸರ್ಕಾರಕ್ಕೆ ಇಲ್ಲ ಎಂದು ಟೀಕಿಸಿದರು.
ತೆಲುಗು ನಟ ಅಲ್ಲು ಅರ್ಜುನ್ ಅವನ ಮನೆಗೆ ಹೋಗಿ ಎಳೆದುತಂದು ಜೈಲಿಗೆ ಹಾಕಿದ್ದೀರಿ. ಅಲ್ಲೂ ಕಾಂಗ್ರೆಸ್ ಸರ್ಕಾರ, ಇಲ್ಲೂ ಕಾಂಗ್ರೆಸ್ ಸರ್ಕಾರ. ನಾಚಿಕೆ ಆಗೋದಿಲ್ಲವೇ? ಎಂದು ಪ್ರಶ್ನಿಸಿದರು.
ಸಂಸದ ಕಾರಜೋಳ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ವೃದ್ಧಾಪ್ಯ ವೇತನಕ್ಕೂ ಕೊಕ್ಕೆ ಹಾಕಲು ಸರ್ಕಾರ ಹೊರಟಿದೆ. ಇದು ಕೆಟ್ಟ ಸರ್ಕಾರ, ಇದನ್ನು ತೊಲಗಿಸಬೇಕು ಎಂದು ಒತ್ತಾಯಿಸಿದರು.
ಸಿದ್ದರಾಮಯ್ಯ ಸರ್ಕಾರ ಶಾಪಗ್ರಸ್ಥ ಸರ್ಕಾರ. ಮಾನ ಮರ್ಯಾದೆ ಬಿಟ್ಟವರು ಊರಿಗೆ ದೊಡ್ಡವರು. ಹಾಗೇ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ ಮೂರೂ ಬಿಟ್ಟು ಊರಿಗೆ ದೊಡ್ಡವರು.ಮಾನ ಮರ್ಯಾದೆ ಇದಿದ್ದರೆ ರಾಜೀನಾಮೆ ಕೊಡಬೇಕಿತ್ತು ಎಂದು ಪ್ರಶ್ನಿಸಿದರು.
ರಾಜ್ಯದ ಖಜಾನೆ ಖಾಲಿಯಾಗಿದೆ. ಕಾಂತರಾಜ್ ವರದಿಗೆ ನೂರಾರು ಕೋಟಿ ಹಣ ಖರ್ಚು ಮಾಡಿ ತಿರಸ್ಕಾರ ಮಾಡಿದ್ದಾರೆ. ರಾಜ್ಯದಲ್ಲಿ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ, ಕೊಲೆಗಳಾಗುತ್ತಿವೆ. ಇಂತಹ ಕೆಟ್ಟ ಸರ್ಕಾರವನ್ನು ನಾವು ನೋಡಿಲ್ಲ ಎಂದು ವಾಗ್ದಾಳಿ ನಡೆಸಿದರು. ವಿಧಾನಪರಿಷತ್ನ ನಾಯಕ ಛಲವಾದಿ ನಾರಾಯಣ ಸ್ವಾಮಿ ಮಾತನಾಡಿ, ಕಾಲ್ತುಳಿತಕ್ಕೆ ಇಂಟಲಿಜೆನ್್ಸ ದಳವೇ ಕಾರಣ. ನಿಂಬಾಳ್ಕರ್ ವಿರುದ್ಧ ಯಾಕೆ ಕ್ರಮ ತಗೊಂಡಿಲ್ಲ? ನಿಂಬಾಳ್ಕರ್ ವಿರುದ್ಧ ಕ್ರಮ ಕೈಗೊಳ್ಳಲು ಸಿಎಂಗೆ ತಾಕತ್ತು ಇಲ್ಲವೇ? ಕ್ರಮ ತಗೊಂಡಿದ್ದರೆ ಸಿದ್ದರಾಮಯ್ಯ ಮಾಜಿ ಸಿಎಂ ಆಗಿ ಬಿಡುತ್ತಿದ್ದರು ಎಂದು ವ್ಯಂಗ್ಯವಾಡಿದರು.
ಮಾಜಿ ಸಚಿವ ಸುನೀಲ್ ಕುಮಾರ್ ಮಾತನಾಡಿ, ಆರ್ಸಿಬಿ ವಿಜಯೋತ್ಸವದಲ್ಲಿ 11 ಜನರು ಬಲಿಯಾಗಿದ್ದರೂ ಈ ಸರ್ಕಾರಕ್ಕೆ ಸಾಸಿವೆ ಕಾಳಿನಷ್ಟೂ ಪಶ್ಚಾತ್ತಾಪವಿಲ್ಲ. ಸಿಎಂ, ಡಿಸಿಎಂ ನಡುವಿನ ಪೈಪೋಟಿಯಿಂದ ಈ ಸಾವುಗಳಾಗಿವೆ. ಆದರೆ ನಮ ತಪ್ಪಿಲ್ಲ ಎಂದು ಬಹಿರಂಗವಾಗಿ ಹೇಳಿಕೆ ಕೊಡುತ್ತಿದ್ದಾರೆ ಎಂದು ಹರಿಹಾಯ್ದರು.
ವಿಮಾನ ದುರಂತಕ್ಕೂ ಈ ದುರಂತಕ್ಕೂ ಹೋಲಿಕೆ ಸರಿಯಲ್ಲ. ವಿಮಾನ ದುರಂತ ಆಗಿದ್ದು ತಾಂತ್ರಿಕ ದೋಷದಿಂದ. ಕಾಲ್ತುಳಿತ ಸಾವುಗಳಾಗಿದ್ದು ನಾಯಕರ ವೈಫಲ್ಯದಿಂದ. ಇವರು ರಾಜೀನಾಮೆ ಕೊಡುವವರೆಗೂ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು. ನಮನ್ನ ಹೆಗಲ ಮೇಲೆ ಡಿಕೆಶಿ ಹೊತ್ಕೊಂಡು ಹೋಗೋದು ಆಮೇಲೆ ಇರಲಿ. ಮೊದಲು ಡಿಕೆಶಿ ಸರಿಯಾಗಿ ಸೈಕಲ್ ಹೊಡೆಯೋದನ್ನು ಕಲಿಯಲಿ ಎಂದು ಲೇವಡಿ ಮಾಡಿದ ಸುನೀಲ್ಕುಮಾರ್, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿಕೆಗೆ ತಿರುಗೇಟು ಕೊಟ್ಟರು.