ಪಣಜಿ, ಜೂ.18– ಮದುವೆಯಾಗಿ ನಂಬಿಸಿ ತನ್ನ ಗೆಳತಿಯನ್ನೇ ಬರ್ಬರವಾಗಿ ಕೊಂದ ಆರೋಪದ ಮೇಲೆ ಬೆಂಗಳೂರು ಮೂಲದ ಯುವಕನನ್ನು ದಕ್ಷಿಣ ಗೋವಾದ ಪೊಲೀಸರು ಬಂಧಿಸಿದ್ದಾರೆ. ಗೋವಾದ ಪ್ರತಾಪ್ನಗರದ ಅರಣ್ಯ ಪ್ರದೇಶದಲ್ಲಿ ತನ್ನ ಗೆಳತಿಯನ್ನು ಕೊಂದಿದ್ದ ಆರೋಪದ ಮೇಲೆ ಉತ್ತರ ಬೆಂಗಳೂರಿನ ನಿವಾಸಿ ಸಂಜಯ್.ಕೆವಿನ್.ಎಂ ಎಂಬಾತನನ್ನು ಬಂಧಿಸಲಾಗಿದೆ.
ಕೊಲೆಯಾದ ಯುವತಿಯನ್ನು ಇದೇ ಪ್ರದೇಶದ ರೋಶಿ (22) ಮೋಸೆಸ್ ಎಂದು ಹೇಳಲಾಗಿದೆ.
ಇಬ್ಬರೂ ಇತ್ತೀಚೆಗೆ ಗೋವಾಕ್ಕೆ ಆಗಮಿಸಿದ್ದರು. ಅವರು ಮದುವೆಯಾಗಲು ಬೆಂಗಳೂರಿನಿಂದ ಗೋವಾಕ್ಕೆ ಬಂದರು. ಆದರೆ ಯಾವುದೋ ಕಾರಣಕ್ಕಾಗಿ, ಇಬ್ಬರ ನಡುವೆ ಜಗಳ ಉಂಟಾಗಿ ಎರಡು ದಿನಗಳ ಹಿಂದೆ ಸಂಜಯ್ ರೋಕ್ಷಿ ಅವರನ್ನು ಕೊಂದು ಶವವನ್ನು ಕಾಡಿನಲ್ಲಿ ಎಸೆದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ದಕ್ಷಿಣಗೋವಾದ ಪ್ರತಾಪ್ ನಗರದ ಆರಣ್ಯಪ್ರದೇಶದಲ್ಲಿ ರೋಶಿಯ ಶವ ಪತ್ತೆಯಾದಾಗ ಕೊಲೆ ಪ್ರಕರಣ ಬೆಳಕಿಗೆ ಬಂದಿತು.ಶವ ಪತ್ತೆಯಾದ ನಂತರ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸ್ ವರಿಷ್ಠಾಧಿಕಾರಿ (ದಕ್ಷಿಣ ಗೋವಾ) ಟಿಕಮ್ ಸಿಂಗ್ ವರ್ಮಾ, ಈ ಕೊಲೆ ಪ್ರೇಮ ಸಂಬಂಧ, ಮದುವೆ ಪ್ರಸ್ತಾಪ ಮತ್ತು ಅದರಿಂದ ಉಂಟಾದ ವಿವಾದದ ಪರಿಣಾಮವಾಗಿ ಸಂಭವಿಸಿದೆ ಎಂದು ಶಂಕಿಸಲಾಗಿದೆ.
ಮೃತದೇಹ ಪತ್ತೆಯಾದ ನಂತರ, ಪೊಲೀಸರು ತನಿಖೆ ಆರಂಭಿಸಿದ ಬಳಿಕ ಸಂಜಯ್ ಬಗ್ಗೆ ಸುಳಿವು ಸಿಕ್ಕಿತು. ಅಪರಾಧ ಪತ್ತೆಯಾದ 24 ಗಂಟೆಗಳ ಒಳಗೆ ಬೆಂಗಳೂರಿನಲ್ಲಿ ಆತನನ್ನು ಪತ್ತೆಹಚ್ಚಿ ಬಂಧಿಸಲಾಗಿದೆ. ಪ್ರಕರಣ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.