Thursday, June 19, 2025
Homeರಾಜ್ಯಮೆಟ್ರೋದಲ್ಲಿ ನಿಲ್ದಾಣಗಳಲ್ಲಿ ಅಮೂಲ್‌ಗೆ ಅವಕಾಶ, ನಂದಿನಿಗೆ ಅನ್ಯಾಯ : ವ್ಯಾಪಕ ಆಕ್ರೋಶ

ಮೆಟ್ರೋದಲ್ಲಿ ನಿಲ್ದಾಣಗಳಲ್ಲಿ ಅಮೂಲ್‌ಗೆ ಅವಕಾಶ, ನಂದಿನಿಗೆ ಅನ್ಯಾಯ : ವ್ಯಾಪಕ ಆಕ್ರೋಶ

Outrage on Congress over Amul kiosk in metro stations

ಬೆಂಗಳೂರು,ಜೂ.18– ಮೆಟ್ರೋದಲ್ಲಿ ಗುಜರಾತ್‌ ಮೂಲದ ಅಮೂಲ್‌ಗೆ ಅವಕಾಶ ನೀಡಿ, ರಾಜ್ಯದ ನಂದಿನಿ ಬ್ರಾಂಡ್‌ಗೆ ಅವಕಾಶ ನೀಡದೇ ಇರುವ ಬಗ್ಗೆ ಆಕ್ರೋಶಗಳು ಕೇಳಿಬರುತ್ತಿವೆ. ಈ ಹಿಂದೆ ಅಮೂಲ್‌ ಮಾರುಕಟ್ಟೆ ರಾಜ್ಯದಲ್ಲಿ ವಿಸ್ತರಣೆಯಾಗುವ ಬಗ್ಗೆ ವ್ಯಾಪಕ ಚರ್ಚೆಗಳಾಗಿದ್ದವು. ಅದು ಚುನಾವಣೆಯ ವಸ್ತು ಕೂಡ ಆಗಿತ್ತು. ಈಗ ಮೆಟ್ರೋ ರೈಲು ನಿಲ್ದಾಣದಲ್ಲಿ ಹಾಲು ಹಾಗೂ ಅದರ ಉತ್ಪನ್ನಗಳ ಮಾರಾಟಕ್ಕೆ ಮೊದಲ ಹಂತದಲ್ಲೇ ಅಮೂಲ್‌ಗೆ ಅವಕಾಶ ನೀಡಲಾಗಿದ್ದು, ಸಾರ್ವಜನಿಕರ ಒತ್ತಡ ಹೆಚ್ಚಾದ ಬಳಿಕ ನಂದಿನಿ ಮಾರಾಟ ಕೇಂದ್ರಗಳಿಗೆ ಸ್ಥಳಾವಕಾಶ ಕಲ್ಪಿಸಲಾಗುತ್ತಿದೆ.

ಖುದ್ದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿಯವರೇ ಅಮೂಲ್‌ಗೆ ಅವಕಾಶ ನೀಡಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಮೆಟ್ರೋ ಕ್ರಮವನ್ನು ಸಮರ್ಥಿಸಿಕೊಂಡಿದ್ದು, ಸಂಪುಟದ ಸಚಿವರಲ್ಲಿಯೇ ವ್ಯತಿರಿಕ್ತ ಅಭಿಪ್ರಾಯಗಳು ಕೇಳಿಬಂದಿವೆ. ಸುದ್ದಿಗಾರರೊಂದಿಗೆ ಮಾತನಾಡಿರುವ ರಾಮಲಿಂಗಾರೆಡ್ಡಿ, ಮೆಟ್ರೋದಲ್ಲಿ ಅಮೂಲ್‌ಗೆ ಅವಕಾಶ ನೀಡಲಾಗಿದೆ. ಕೆಎಂಎಫ್‌ನ ನಂದಿನಿ ಕರ್ನಾಟಕ ಬ್ರಾಂಡ್‌ ಬಾಡಿಗೆ ಕಡಿಮೆಯಾದರೂ ಕೂಡ ನಮ ಸಂಸ್ಥೆಯನ್ನು ಬೆಳೆಸಲು ಅವಕಾಶ ಮಾಡಿಕೊಡಬೇಕು ಎಂದಿದ್ದಾರೆ.

ಮೆಟ್ರೋ ಕೇಂದ್ರ ಸರ್ಕಾರದ ಅಧೀನದಲ್ಲಿದೆ. ಬಿಜೆಪಿ-ಜೆಡಿಎಸ್‌‍ನವರು ಟೀಕೆ ಮಾಡುವ ಮೊದಲು ವಾಸ್ತವಾಂಶ ತಿಳಿದುಕೊಳ್ಳಬೇಕು. ನಮ ಸರ್ಕಾರ ನಂದಿನಿ ಸಂಸ್ಥೆಯ ಪರವಾಗಿದೆ ಎಂದು ಹೇಳಿದ್ದಾರೆ. ಮತ್ತೊಂದೆಡೆ ಸುದ್ದಿಗಾರರೊಂದಿಗೆ ಮಾತನಾಡಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಬಿಎಂಆರ್‌ಸಿಎಲ್‌ ಮಾರಾಟ ಮಳಿಗೆಗಳ ಸ್ಥಾಪನೆಗೆ ಜಾಗತಿಕ ಟೆಂಡರ್‌ ಕರೆದಿತ್ತು. ಯಾರೂ ಅರ್ಜಿ ಸಲ್ಲಿಸಿರಲಿಲ್ಲ. ಅಮೂಲ್‌ರವರು ಹತ್ತು ಕಡೆ ಮಾರಾಟ ಕೇಂದ್ರಗಳಿಗೆ ಅರ್ಜಿ ಹಾಕಿದ್ದರು. ಕೆಎಂಎಫ್‌ ಅರ್ಜಿ ಹಾಕಿರಲಿಲ್ಲ ಎಂದು ಸಮರ್ಥನೆ ನೀಡಿದ್ದಾರೆ.

ಚರ್ಚೆ ಶುರುವಾದ ಬಳಿಕ ಕೆಎಂಎಫ್‌ಗೆ ಅರ್ಜಿ ಸಲ್ಲಿಸಲು ಸೂಚಿಸಲಾಗಿದ್ದು, ಹತ್ತು ನಿಲ್ದಾಣಗಳಲ್ಲಿ ಸ್ಥಳ ಗುರುತಿಸಲಾಗಿದ್ದು, ಎಂಟು ಕಡೆ ಕೆಎಂಎಫ್‌ಗೆ, ಎರಡು ಕಡೆ ಅಮೂಲ್‌ ಸಂಸ್ಥೆಗೆ ಮಾರಾಟ ಮಳಿಗೆ ತೆರೆಯಲು ಅವಕಾಶ ಕಲ್ಪಿಸಲಾಗುವುದು ಎಂದರು.ಅಮೂಲ್‌ರವರು ಎರಡು ಮಾರಾಟ ಕೇಂದ್ರಗಳನ್ನು ಈಗಾಗಲೇ ಆರಂಭಿಸಿದ್ದಾರೆ. ಜಾಗತಿಕ ಟೆಂಡರ್‌ ಆಗಿರುವುದರಿಂದ ಈಗಾಗಲೇ ತೆರೆದಿರುವ ಮಾರಾಟ ಮಳಿಗೆಗಳನ್ನು ಮುಚ್ಚಿಸುವುದು ಸೂಕ್ತವಲ್ಲ ಎಂದು ಅಭಿಪ್ರಾಯಪಟ್ಟರು.

RELATED ARTICLES

Latest News