Friday, June 20, 2025
Homeಬೆಂಗಳೂರುಬೆಂಗಳೂರು : ಶಾಲಾ ಕಟ್ಟಡದಲ್ಲಿ ವ್ಯಕ್ತಿ ಆತ್ಮಹತ್ಯೆ

ಬೆಂಗಳೂರು : ಶಾಲಾ ಕಟ್ಟಡದಲ್ಲಿ ವ್ಯಕ್ತಿ ಆತ್ಮಹತ್ಯೆ

Bengaluru: Man commits suicide in school building

ಬೆಂಗಳೂರು,ಜೂ.19-ಶಾಲಾ ಕಟ್ಟಡವೊಂದರ ಕಾಮಗಾರಿಗಾಗಿ ತಮಿಳುನಾಡಿನಿಂದ ಬಂದಿದ್ದ ವ್ಯಕ್ತಿ ಕಟ್ಟಡದೊಳಗೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಅಮೃತಹಳ್ಳಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ತಮಿಳುನಾಡು ಮೂಲದ ರಾಜೇಂದ್ರ (55) ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿ.

ಅಮೃತಹಳ್ಳಿ ವ್ಯಾಪ್ತಿಯಲ್ಲಿರುವ ನಿರ್ಮಾಣ ಹಂತದ ಖಾಸಗಿ ಶಾಲೆಯ ಕಟ್ಟಡವೊಂದರ ಕಾಮಗಾರಿ ನಡೆಯುತ್ತಿದೆ. ಈ ಕಾಮಗಾರಿಗಾಗಿ ರಾಜೇಂದ್ರ ಅವರು ಬಂದಿದ್ದರು.ಅಂದಿನ ಕೆಲಸ ಮುಗಿದ ನಂತರ ಶಾಲೆ ಕಟ್ಟಡದಲ್ಲೇ ಮಲಗುತ್ತಿದ್ದರು.ರಾತ್ರಿ ಪತ್ನಿಗೆ ಕರೆ ಮಾಡಿ 20 ಸಾವಿರ ಹಣ ಕೊಡುವಂತೆ ರಾಜೇಂದ್ರ ಕೇಳಿದ್ದಾರೆ. ಪತ್ನಿ ಹಣ ಕೊಡಲು ನಿರಾಕರಿಸಿದಾಗ ಫೋನಿನಲ್ಲೇ ಜಗಳ ವಾಡಿದ್ದಾರೆ.

ಪತ್ನಿ ಹಣ ಕೊಡದಿದ್ದಕ್ಕೆ ಬೇಸರಗೊಂಡು ರಾಜೇಂದ್ರ ಅವರು ರಾತ್ರಿ ಮದ್ಯಪಾನ ಮಾಡಿ ಶಾಲಾ ಆವರಣದಲ್ಲಿರುವ ಕಟ್ಟಡದಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇಂದು ಬೆಳಗ್ಗೆ ಎಂದಿನಂತೆ ವಿದ್ಯಾರ್ಥಿಗಳು ಶಾಲೆಗೆ ಬಂದಿದ್ದಾರೆ. ಆ ವೇಳೆ ಇಸ್ಕಾನ್‌ನಿಂದ ಶಾಲೆಗೆ ಊಟ ಬಂದಿತ್ತು. ಅದನ್ನು ಇಡಲು ಶಾಲೆಯ ಪಕ್ಕದಲ್ಲಿರುವ ಕಟ್ಟಡಕ್ಕೆ ಹೋದಾಗ ವ್ಯಕ್ತಿಯ ಶವ ನೋಡಿ ಹೆದರಿಕೊಂಡು ಹೊರಗೆ ಓಡಿ ಬಂದು ಶಿಕ್ಷಕರಿಗೆ ಹೇಳಿದ್ದಾರೆ.

ಶಿಕ್ಷಕರು ಕೊಠಡಿಯೊಳಗೆ ಹೋಗಿ ನೋಡಿ ನಂತರ ಪೊಲೀಸರಿಗೆ ವಿಷಯ ತಿಳಿಸಿ ಶಾಲೆಗೆ ರಜೆ ನೀಡಿ ಮಕ್ಕಳನ್ನು ವಾಪಸ್‌ ಕಳುಹಿಸಿದ್ದಾರೆ.ಅಮೃತಹಳ್ಳಿ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡು ಮೃತದೇಹವನ್ನು ಆಸ್ಪತ್ರೆಗೆ ರವಾನಿಸಿ, ಮೃತರ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ಕಲೆ ಹಾಕುತ್ತಿದ್ದಾರೆ.

ಶಾಲಾ ಕಟ್ಟಡದಿಂದ ಬಿದ್ದ ವಿದ್ಯಾರ್ಥಿನಿ ಚೇತರಿಕೆ ಶಾಲಾ ಕಟ್ಟಡದ ಎರಡನೇ ಮಹಡಿಯಿಂದ ನಿತ್ರಾಣಗೊಂಡು ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿರುವ ವಿದ್ಯಾರ್ಥಿನಿ ಚೇತರಿಸಿಕೊಳ್ಳುತ್ತಿದ್ದಾಳೆ.ಮಲ್ಲೇಶ್ವರದ 13 ನೇ ಅಡ್ಡ ರಸ್ತೆಯಲ್ಲಿರುವ ಕರ್ನಾಟಕ ಪಬ್ಲಿಕ್‌ ಶಾಲೆಯಲ್ಲಿ ಈ ಘಟನೆ ನಡೆದಿದೆ.

ವಿದ್ಯಾರ್ಥಿನಿ ಕೃತಿಕಾ (14) ಬೆಳಗಿನ ಉಪಾಹಾರ ಸೇವಿಸದೆ ಶಾಲೆಗೆ ಹೋಗಿದ್ದಳು. ಎರಡನೇ ಮಹಡಿಯ ಕಾರಿಡಾರ್‌ ಗೋಡೆಯ ಬಳಿ ನಿಂತಿದ್ದಾಗ ಪ್ರಜ್ಞೆ ತಪ್ಪಿ ಕೆಳಗೆ ಬಿದ್ದಿದ್ದಾಳೆಂದು ತಿಳಿದುಬಂದಿದೆ.ಕೂಡಲೇ ಶಾಲಾ ಸಿಬ್ಬಂದಿ ವಿದ್ಯಾರ್ಥಿನಿಯನ್ನು ಕೆಸಿ ಜನರಲ್‌ ಆಸ್ಪತ್ರೆಗೆ ಕರೆದೊಯ್ದು, ಚಿಕಿತ್ಸೆಗೆ ದಾಖಲಿಸಿದ್ದಾರೆ. ವಿದ್ಯಾರ್ಥಿನಿ ಬಿದ್ದ ರಭಸಕ್ಕೆ ತಲೆ ಹಾಗೂ ದೇಹದ ಇತರೆ ಭಾಗಗಳಿಗೆ ಗಾಯಗಳಾಗಿದ್ದು, ಆರೋಗ್ಯ ಸ್ಥಿರವಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

RELATED ARTICLES

Latest News