Friday, June 20, 2025
Homeರಾಜ್ಯಕಾಂಗ್ರೆಸ್‌‍ ಸರ್ಕಾರದ ಪಾಪದ ಕೊಡ ತುಂಬಿದೆ : ಯಡಿಯೂರಪ್ಪ ಆಕ್ರೋಶ

ಕಾಂಗ್ರೆಸ್‌‍ ಸರ್ಕಾರದ ಪಾಪದ ಕೊಡ ತುಂಬಿದೆ : ಯಡಿಯೂರಪ್ಪ ಆಕ್ರೋಶ

Yediyurappa Angry on Congress government

ಬೆಂಗಳೂರು,ಜೂ.20– ಸರ್ಕಾರದ ಯೋಜನೆಗಳು ಅನುಷ್ಠಾನವಾಗಬೇಕಾದರೆ ಹಣ ನೀಡಲೇಬೇಕಾದ ದುಸ್ತಿತಿ ರಾಜ್ಯದಲ್ಲಿ ನಿರ್ಮಾಣವಾಗಿದ್ದು, ಕಾಂಗ್ರೆಸ್‌‍ನ ಪಾಪದ ಕೊಡ ತುಂಬಿದೆ. ಜನತೆ ಶೀಘ್ರದಲ್ಲೇ ಉತ್ತರ ಕೊಡಲಿದ್ದಾರೆ ಎಂದು ಮಾಜಿ ಸಿಎಂ ಯಡಿಯೂರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌‍ ಸರ್ಕಾರದಲ್ಲಿ ಹಣ ನೀಡದಿದ್ದರೆ ಯೋಜನೆಗಳು ಅನುಷ್ಠಾನಗೊಳ್ಳುವುದಿಲ್ಲ. ಫಲಾನುಭವಿಗಳು ಇಂತಿಷ್ಟು ಕಮೀಷನ್‌ ನೀಡಿದರೆ ಮಾತ್ರ ಕಾರ್ಯರೂಪಕ್ಕೆ ಬರುತ್ತದೆ. ರಾಜ್ಯದಲ್ಲಿರುವುದು ಅತ್ಯಂತ ಭ್ರಷ್ಟ ಸರ್ಕಾರ ಎಂದು ಕಿಡಿಕಾರಿದರು.

ಭ್ರಷ್ಟಾಚಾರದಿಂದ ಜನತೆ ರೋಸಿ ಹೋಗಿದ್ದಾರೆ. ಯಾವಾಗ ಈ ಸರ್ಕಾರ ತೊಲಗುತ್ತದೆಯೋ ಎಂದು ಕಾದು ಕುಳಿತಿದ್ದಾರೆ. ಸಹನೆಯ ಕಟ್ಟೆ ಒಡೆಯುವ ಮುನ್ನ ಎಚ್ಚೆತ್ತುಕೊಳ್ಳದಿದ್ದರೆ ಕಾಂಗ್ರೆಸ್‌‍ಗೆ ಉಳಿಗಾಲವಿಲ್ಲ ಎಂದು ಎಚ್ಚರಿಕೆ ಕೊಟ್ಟರು.

ರಾಜ್ಯ ಸರ್ಕಾರದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಬಹುತೇಕ ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಂಡಿದೆ. ಜನರ ಸಂಕಷ್ಟ ಕೇಳೋರಿಲ್ಲ. ತುಘಲಕ್‌ ಸರ್ಕಾರ ರಾಜ್ಯದಲ್ಲಿದೆ. ಕಾಂಗ್ರೆಸ್‌‍ನವರು ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸರ್ಕಾರ ಅಭಿವೃದ್ಧಿ ಕಡೆ ಗಮನ ಕೊಡುತ್ತಿಲ್ಲ. ಅಲ್ಪಸಂಖ್ಯಾತರ ತೃಪ್ತಿ ಪಡಿಸುವ ಕೆಲಸದಲಷ್ಟೇ ತೊಡಗಿದೆ. ವೋಟ್‌ ಬ್ಯಾಂಕ್‌ ರಾಜಕಾರಣ ಮಾಡುತ್ತಿದೆ ಎಂದು ದೂರಿದರು.

ಬಿ.ಆರ್‌.ಪಾಟೀಲ್‌ ಆಡಿಯೋ ವೈರಲ್‌ ವಿಚಾರದ ಕುರಿತು ಮಾತನಾಡಿದ ಬಿಎಸ್‌‍ವೈ, ಪಾಟೀಲ್‌ ಹೇಳಿರುವುದು ಸತ್ಯ. ಹಣ ನೀಡದೇ ಯಾವ ಕೆಲಸವೂ ಆಗುವುದಿಲ್ಲ ಎಂದು ಅವರ ಪಕ್ಷದ ಶಾಸಕರೇ ಹೇಳುತ್ತಿದ್ದಾರೆ. ಸರ್ಕಾರ ತನ್ನ ತಪ್ಪನ್ನು ಸರಿಪಡಿಸಿಕೊಳ್ಳಬೇಕು ಎಂದು ಹೇಳಿದರು.
ಜೆಡಿಎಸ್‌‍ ರಾಜ್ಯ ಪ್ರವಾಸದ ಕುರಿತು ಮಾತನಾಡಿದ ಅವರು, ಜೆಡಿಎಸ್‌‍ ಪ್ರವಾಸವನ್ನ ಸ್ವಾಗತಿಸುತ್ತೇನೆ. ಜೆಡಿಎಸ್‌‍ ಬೇರೆ ಅಲ್ಲ ಬಿಜೆಪಿ ಬೇರೆ ಅಲ್ಲ ಎಂದು ದೇವೇಗೌಡರು ಅನೇಕ ಬಾರಿ ಹೇಳಿದ್ದಾರೆ. ಮೋದಿ ನಾಯಕತ್ವದ ಬಗ್ಗೆ ವಿಶ್ವಾಸ ಇಟ್ಟಿದ್ದಾರೆ. ರಾಜ್ಯದಲ್ಲಿ ಈ ಸರ್ಕಾರವನ್ನು ತೊಲಗಿಸಬೇಕು ಅದಕ್ಕಾಗಿ ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದರು.

ಭಿನ್ನರ ಕರೆದು ಪ್ರಹ್ಲಾದ್‌ ಜೋಶಿ ಮಾತಾಡಿದ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಜೋಶಿ ಪ್ರಯತ್ನ ಸ್ವಾಗತಾರ್ಹ.ಅಸಮಾಧಾನಿತರ ಜೊತೆ ನಾನು ಮಾತನಾಡಲು ಸಿದ್ದ. ಪ್ರತಿನಿತ್ಯ ಬಿಜೆಪಿ ಕಚೇರಿಗೆ ಬರುತ್ತೇನೆ. ವಾರಕ್ಕೊಮೆ ಜಿಲ್ಲೆಗಳಿಗೆ ಹೋಗುತ್ತೇನೆ. ಇದರಿಂದ ಅಭಿವೃದ್ಧಿ ಕೆಲಸಕ್ಕೂ ಅನುಕೂಲವಾಗಲಿದೆ ಎಂದು ಹೇಳಿದರು.

ಕೇಂದ್ರದಿಂದಲೇ ಟಿಕೆಟ್‌ ತರುವೆ ಎಂಬ ಎಚ್‌.ಡಿ.ಕುಮಾರಸ್ವಾಮಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಯಿಸಿದ ಯಡಿಯೂರಪ್ಪ, ಕುಮಾರಸ್ವಾಮಿ ಹೇಳಿಕೆಗೆ ಭಿನ್ನಾಭಿಪ್ರಾಯವಿಲ್ಲ. ಅವರ ಹೇಳಿಕೆಯಲ್ಲಿ ಯಾವುದೇ ತಪ್ಪಿಲ್ಲ. ಕೇಂದ್ರ ಸಚಿವರಾಗಿ ಅವರು ಮಾತಾಡಿದ್ದಾರೆ. ಎಲ್ಲರೂ ಒಟ್ಟಾಗಿ ಹೋಗ್ತೇವೆ ಎಂಬ ಅರ್ಥದಲ್ಲಿ ಹೇಳದ್ದಾರಷ್ಟೇ ಎಂದು ಗೊಂದಲಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದರು.

RELATED ARTICLES

Latest News