Monday, June 23, 2025
Homeರಾಜ್ಯಸಂಚಲನ ಮೂಡಿಸಿದೆ ಕಾಂಗ್ರೆಸ್‌‍ ಶಾಸಕರ ಆಪ್ತ ಸಹಾಯಕನ ಮತ್ತೊಂದು ಆಡಿಯೋ

ಸಂಚಲನ ಮೂಡಿಸಿದೆ ಕಾಂಗ್ರೆಸ್‌‍ ಶಾಸಕರ ಆಪ್ತ ಸಹಾಯಕನ ಮತ್ತೊಂದು ಆಡಿಯೋ

Another audio of a close aide of a Congress MLA has created a stir

ಬೆಂಗಳೂರು,ಜೂ.22- ವಸತಿ ಇಲಾಖೆಯಲ್ಲಿ ಮನೆ ಹಂಚಿಕೆಗೆ ಸಂಬಂಧಪಟ್ಟಂತೆ ಕರ್ಮಕಾಂಡಗಳು ಒಂದೊಂದೇ ಬಯಲಾಗುತ್ತಿದ್ದು, ಪ್ರತಿ ಮನೆಗೆ 40 ಸಾವಿರ ರೂ. ಲಂಚ ಕೇಳಿರುವ ಕಾಂಗ್ರೆಸ್‌‍ ಶಾಸಕರ ಆಪ್ತ ಸಹಾಯಕನ ಮತ್ತೊಂದು ಆಡಿಯೋ ಸಂಚಲನ ಮೂಡಿಸಿದೆ.

ವಿಜಯಪುರ ಜಿಲ್ಲೆ ನಾಗಠಾಣಾ ಕ್ಷೇತ್ರದ ಕಾಂಗ್ರೆಸ್‌‍ ಶಾಸಕ ವಿಠಲ್‌ ಕಠಕದೊಂಡ ಅವರ ಆಪ್ತ ಸಹಾಯಕ ಎಂದು ಹೇಳಲಾದ ವ್ಯಕ್ತಿಯೊಬ್ಬರು ಮನೆ ಹಂಚಿಕೆಗೆ ಸಂಬಂಧಪಟ್ಟಂತೆ ಲಂಚ ಕೇಳಿರುವ ಆಡಿಯೋ ಕಾಂಗ್ರೆಸ್‌‍ ಸರ್ಕಾರವನ್ನು ಮುಜುಗರಕ್ಕೀಡು ಮಾಡಿದೆ.

ರಾಮಪುರ ಗ್ರಾಮಪಂಚಾಯ್ತಿಯ ತಾಂಡಾವೊಂದಕ್ಕೆ ಮನೆ ಮಂಜೂರು ಮಾಡುವುದಕ್ಕೆ ಸಂಬಂಧಪಟ್ಟಂತೆ ಆಡಿಯೋದಲ್ಲಿ ಚರ್ಚೆಯಾಗಿದೆ. ಶಾಸಕರ ಆಪ್ತ ಸಹಾಯಕರು ಎನ್ನಲಾದ ವ್ಯಕ್ತಿ ಮಾತನಾಡಿದ್ದು, ತಮ ಬಳಿ 21 ಮನೆಗಳಿವೆ. ಪ್ರತಿ ಮನೆಗೆ ನಿಮ ತಾಂಡಾಕ್ಕೆ ಸೇರಿದವರು 40 ಸಾವಿರ ನೀಡುತ್ತಿದ್ದಾರೆ. ನೀವು 40 ಸಾವಿರ ಕೊಟ್ಟರೆ ಮನೆ ನಿಮಗೆ ಮಂಜೂರಾಗುತ್ತದೆ. ಇಲ್ಲವಾದರೆ ಬೇರೆಯವರ ಪಾಲಾಗುತ್ತದೆ ಎಂದು ಹೇಳಿರುವ ಆಡಿಯೋ ಸಾಮಾಜಿಕ ಜಾಲತಾಣದಲ್ಲಿದೆ.

ಸರ್ಕಾರ ಬಡವರ ಮನೆ ನಿರ್ಮಾಣಕ್ಕೆ ತಲಾ ಒಂದೂವರೆ ಲಕ್ಷ ರೂ. ಮಾತ್ರ ಕೊಡುತ್ತದೆ. ಅದರಲ್ಲಿ ಲಂಚ ಕೇಳಲು ಸಾಧ್ಯವೇ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ , ಶಾಸಕ ಬಿ.ಆರ್‌.ಪಾಟೀಲ್‌ ಅವರ ಆಡಿಯೋ ವಿವಾದಕ್ಕೆ ಸಂಬಂಧಪಟ್ಟಂತೆ ಪ್ರತಿಕ್ರಿಯಿಸಿದ್ದರು. ಬಿ.ಆರ್‌.ಪಾಟೀಲ್‌ ಅವರ ಹೇಳಿಕೆಯನ್ನು ನಾನು ಒಪ್ಪುವುದಿಲ್ಲ. ಆ ರೀತಿ ಆಗಲು ಸಾಧ್ಯವೇ ಇಲ್ಲ ಎಂದು ಡಿ.ಕೆ.ಶಿವಕುಮಾರ್‌ ಹೇಳಿದ ಬೆನ್ನಲ್ಲೇ, ಕಾಂಗ್ರೆಸ್‌‍ ಶಾಸಕರ ಆಪ್ತನ ಮತ್ತೊಂದು ಆಡಿಯೋಗ ಬಹಿರಂಗವಾಗಿರುವುದು ವಸತಿ ಇಲಾಖೆಯ ಬ್ರಹಾಂಡ ಭ್ರಷ್ಟಾಚಾರಕ್ಕೆ ಪುರಾವೆ ನೀಡಿದಂತಾಗಿದೆ.

ಮನೆ ಹಂಚಿಕೆಗೆ ಸಂಬಂಧಪಟ್ಟಂತೆ ಮೊದಲಿನಿಂದ ಲಂಚ ನಡೆಯುತ್ತಲೇ ಇದೆ. ಇದೇನು ಹೊಸದೇನಲ್ಲ ಎಂದು ಹಲವಾರು ಮಂದಿ ತಿಪ್ಪೆ ಸಾರಿಸಿದ್ದಾರೆ. ಬಡವರಿಗೆ ಹಂಚಿಕೆ ಮಾಡಲಾಗುವ ಮನೆಗಳಿಗೂ ಲಂಚ ಪಡೆಯುವ ಈ ಸರ್ಕಾರ ಜನ ವಿರೋಧಿಯಾಗಿದೆ ಎಂದು ವಿರೋಧ ಪಕ್ಷಗಳು ಟೀಕೆ ಮಾಡುತ್ತಿವೆ.

ಆಡಿಯೋ ಬಿಡುಗಡೆಯಾದ ಬೆನ್ನಲ್ಲೇ ಶಾಸಕ ವಿಠಲ್‌ ಕಠಕದೊಂಡ, ತಾವು ಯಾವುದೇ ಫಲಾನುಭವಿಯಿಂದ 10 ಪೈಸೆ ಪಡೆದಿರುವುದನ್ನು ಸಾಬೀತುಪಡಿಸಿದರೆ ತಕ್ಷಣವೇ ನೈತಿಕ ಹೊಣೆ ಹೊತ್ತು ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಸವಾಲು ಹಾಕಿದ್ದಾರೆ.

ಬಡವರಿಗೆ ಹಂಚಿಕೆ ಮಾಡಲಾಗುವ ಮನೆಗಳಿಗೆ ಲಂಚ ಕೇಳುವುದು ಜನದ್ರೋಹಿ ಕೆಲಸ. ಇದನ್ನು ಯಾರೇ ಮಾಡಿದರೂ ಮುಲಾಜಿಲ್ಲದೆ ಕ್ರಮ ಜರುಗಿಸಬೇಕು ತಮ ಆಪ್ತ ಕಾರ್ಯದರ್ಶಿ ಎನ್ನಲಾದ ವ್ಯಕ್ತಿಯಾದರೂ ತಪ್ಪು ಮಾಡಿದ್ದರೆ ಶಿಕ್ಷೆಯಾಗಲೇಬೇಕು ಎಂದು ವಿಠಲ್‌ ಕಠಕದೊಂಡ ಪ್ರತಿಕ್ರಿಯಿಸಿದ್ದಾರೆ.

ಇತ್ತೀಚೆಗಷ್ಟೇ ಕಾಂಗ್ರೆಸ್‌‍ನ ಅಳಂದ ಶಾಸಕ ಬಿ.ಆರ್‌.ಪಾಟೀಲ್‌, ಆಡಿಯೋವೊಂದನ್ನು ಬಹಿರಂಗ ಮಾಡಿ ವಸತಿ ಇಲಾಖೆಯಿಂದ ಮನೆಗಳ ಹಂಚಿಕೆಗೆ ಲಂಚ ಪಡೆಯಲಾಗುತ್ತಿದೆ. ಹೀಗಾಗಿ ಶಾಸಕರ ಪತ್ರಗಳಿಗೂ ಕಿಮತ್ತು ನೀಡದೆ ಪಂಚಾಯ್ತಿ ಅಧ್ಯಕ್ಷರಿಂದ ಲಂಚ ಪಡೆದು ಮನೆ ಹಂಚಿಕೆ ಮಾಡಲಾಗಿದೆ ಎಂದು ಗಂಭೀರ ಆರೋಪ ಮಾಡಿದರು.

ಈಗ ಶಾಸಕರ ಕಚೇರಿಯ ಸಿಬ್ಬಂದಿಗಳಿಂದಲೇ ಮನೆಗಾಗಿ ಲಂಚ ಪಡೆಯುತ್ತಿರುವ ಆರೋಪಗಳು ಎದುರಾಗಿವೆ. ಬಡವರಿಗಾಗಿ ನೀಡುವ ಮನೆಗಳಿಗೆ ಲಂಚ ಕೇಳುತ್ತಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಗುರಿಯಾಗಿದೆ. ಅದರಲ್ಲೂ ಆಡಳಿತಾರೂಢ ಕಾಂಗ್ರೆಸ್‌‍ ಪಕ್ಷದ ಶಾಸಕರುಗಳೇ ಆರೋಪ-ಪ್ರತ್ಯಾರೋಪಗಳ ಕೇಂದ್ರ ಬಿಂದುವಾಗಿರುವುದು ಮತ್ತಷ್ಟು ಕುತೂಹಲ ಕೆರಳಿಸಿದೆ.

RELATED ARTICLES

Latest News