ಮಂಡ್ಯ,ಜೂ.22- ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿ ಸ್ಥಾನದ ಕನಸು ಕಾಣಬೇಕು ಅಷ್ಟೇ ಎಂದು ಕೇಂದ್ರದ ಬೃಹತ್ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ವ್ಯಂಗ್ಯವಾಡಿದರು. ಬಸ್ ನಿಲ್ದಾಣದ ಮುಂಭಾಗ ಆಟೋ ನಿಲ್ದಾಣ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
2028ಕ್ಕೆ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದು ಶಿವಕುಮಾರ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂಬ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಪಕ್ಷದಲ್ಲಿ ಶಿವಕುಮಾರ್ ಅವರಿಗೆ ಯಾರು ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡುತ್ತಾರೆ. ನಮ ಕೈಯಲ್ಲಿ ಏನೂ ಇಲ್ಲ. ಎಲ್ಲವೂ ಭಗವಂತನ ಕೈಯಲ್ಲಿದೆ ಎಂದು ಅವರು ಈ ರೀತಿ ತಿಳಿಸಿದರು.
ಮೈ ಶುಗರ್ ಶಾಲೆಯನ್ನು ಮಾದರಿ ಶಾಲೆಯನ್ನಾಗಿ ಅಭಿವೃದ್ದಿಪಡಿಸಲು ಸಿದ್ದವಿದ್ದು, ಈ ವಿಚಾರವನ್ನು ಶಾಲೆಯ ಟ್ರಸ್ಟಿಗಳಿಗೆ ತಿಳಿಸಲಾಗಿದೆ. ಅದನ್ನು ಬಳಸಿಕೊಳ್ಳುವುದು ಅವರಿಗೆ ಸೇರಿದ್ದು. ಇಂತಹ ಆಸ್ತಿಯನ್ನು ಗುತ್ತಿಗೆ ಆಧಾರದ ಮೇಲೆ ನೀಡುವುದು ಎಂದರೆ ಹೇಗೆ? ಇದು ಹಗಲು ದರೋಡೆಯಾಗಿದೆ.
ಶಾಲೆಯ ಅಭಿವೃದ್ಧಿಗೆ 25 ಕೋಟಿ ಬೇಕು ಎಂದರೂ ಒದಗಿಸಲು ಸಿದ್ದನಿದ್ದೇನೆ. ಮಂಡ್ಯ ಜಿಲ್ಲೆಗೆ ನಾನು ಏನೂ ಮಾಡಿಲ್ಲ ಅಂತಾರೆ. ಕಾಂಗ್ರೆಸ್ ನಾಯಕರು ಗುಡ್ಡೆ ಹಾಕಿರುವುದಾದರೂ ಏನು ಎಂದು ಪ್ರಶ್ನಿಸಿದರು. ಅಧಿಕಾರಕ್ಕೆ ಬಂದು ಎರಡು ವರ್ಷ ಆದಮೇಲೆ ಕಾನೂನು ಸಚಿವ ಎಚ್.ಕೆ.ಪಾಟೀಲ್ ಗೆದ್ದಿದ್ದಾರೆ. ಯಾರ ಮೇಲೂ ಕ್ರಮ ಆಗುವುದಿಲ್ಲ. ಪ್ರಸಕ್ತ ವಿಚಾರಗಳನ್ನು ಡೈವರ್ಶನ್ ಮಾಡಲು ನಾಟಕವಾಡುತ್ತಿದ್ದಾರೆ ಅಷ್ಟೇ ಎಂದರು.
ಬೀದರ್ನಲ್ಲಿ ಪಶು ವೈದ್ಯಕೀಯ ವಿಶ್ವವಿದ್ಯಾಲಯ ಮುಚ್ಚುವ ಹಂತಕ್ಕೆ ಬಂದಿದೆ. ಮಂಡ್ಯ ಕೃಷಿ ವಿವಿಗೆ ಎಷ್ಟು ಅನುದಾನ ಕೊಟ್ಟಿದ್ದಾರೆ? ಎಷ್ಟು ವಿವಿಗಳನ್ನು ಮುಚ್ಚಿದ್ದಾರೆ? ಪ್ರಚಾರಕ್ಕಾಗಿ ಕೆಲಸ ಮಾಡಬಾರದು ಎಂದು ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದರು.
ವಿಧಾನಸೌಧದಲ್ಲಿ ಮಧ್ಯವರ್ತಿಗಳ ಅವಶ್ಯಕತೆಯಿಲ್ಲ. ಆಯಾಯ ಇಲಾಖೆಗಳಲ್ಲಿ ಎಷ್ಟು ಕೊಡಬೇಕು ಎಂಬುದನ್ನು ನಿಗದಿ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.
ಸುರಂಗ ರಸ್ತೆ:
ಬೆಂಗಳೂರಿನಲ್ಲಿ ಸುರಂಗ ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಕೇವಲ ಬೆಂಗಳೂರು ಮಾತ್ರವಲ್ಲ. ಇಡೀ ರಾಜ್ಯದಲ್ಲಿ ಸುರಂಗ ರಸ್ತೆ ಮಾಡಲಿ. ಅವರ ಮಾತುಗಳು ಯಾವುವು ಕಾರ್ಯಗತವಾಗುವುದಿಲ್ಲ. 2027ಕ್ಕೆ ಎತ್ತಿನಹೊಳೆ ಯೋಜನೆಯ ನೀರನ್ನು ಕೋಲಾರಕ್ಕೆ ತರುವುದಾಗಿ ಉಪಮುಖ್ಯಮಂತ್ರಿ ಹೇಳಿದ್ದಾರೆ. ಆ ಯೋಜನೆ ಕಾಡುಮನೆ ಎಸ್ಟೇಟ್ನಿಂದ ಮುಂದೆ ಬಂದಿಲ್ಲ. ಈಗಾಗಲೇ 15 ಸಾವಿರ ಕೋಟಿ ರೂ. ಲೂಟಿಯಾಗಿದೆ.
2013ರಲ್ಲಿ ಗುದ್ದಲಿ ಸರ್ಕಾರು ಗುದ್ದಲಿ ಪೂಜೆ ಮಾಡಿತ್ತು. ಆಗ ಎರಡೇ ವರ್ಷದಲ್ಲಿ ಕೋಲಾರ, ಚಿಕ್ಕಬಳ್ಳಾಪುರಕ್ಕೆ ನೀರು ಕೊಡುತ್ತೇವೆ ಎಂದಿದ್ದರು. ಈಗ ಬೆಂಗಳೂರಿನ ಕೊಳಚೆ ನೀರನ್ನು ಪೂರೈಸಿದ್ದಾರೆ. ಬೆಳೆದ ತರಕಾರಿಯನ್ನೂ ಯಾರು ಖರಿದಿಸದಂತೆ ಮಾಡಿದ್ದಾರೆ. ಮಂಡ್ಯ ಜಿಲ್ಲೆಯ ಪ್ರತಿ ಪಂಚಾಯ್ತಿ ಮಟ್ಟದಲ್ಲಿ ಸುಜಜ್ಜಿತ ಶಾಲೆ, ಆಸ್ಪತ್ರೆ ಮಾಡಬೇಕೆಂಬ ಕನಸಿದೆ. 8 ಕೋಟಿ ರೂ. ವೆಚ್ಚದಲ್ಲಿ ಶಾಲೆಗಳ ನಿರ್ಮಾಣಕ್ಕೆ ನೀಲನಕ್ಷೆ ಸಿದ್ಧವಾಗಿದ್ದು, 100 ಬಸ್ ತಂಗುದಾಣಗಳನ್ನು ನಿರ್ಮಿಸಲಾಗಿದೆ. ರಾಜ್ಯ ಸರ್ಕಾರ ಸಹಕಾರ ಕೊಟ್ಟು ಪ್ರೋತ್ಸಾಹ ನೀಡಿದರೆ ಮಂಡ್ಯ ಜಿಲ್ಲೆಯಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪಿಸಲಾಗುವುದು ಎಂದರು.
- ಮಾಜಿ ಪ್ರಧಾನಿ ದೇವೇಗೌಡರಿಗೆ ಶ್ರೀಗಂಗ ಸಾಮ್ರಾಟ ಶ್ರೀಪುರುಷ ಪ್ರಶಸ್ತಿ ಪ್ರದಾನ
- ಡಿ.ಕೆ.ಶಿವಕುಮಾರ್ ಸಿಎಂ ಕನಸು ಕಾಣಬೇಕಷ್ಟೇ..! : ಹೆಚ್ಡಿಕೆ ವ್ಯಂಗ್ಯ
- ಭ್ರಷ್ಟಾಚಾರ ಬಯಲಿಗೆಳೆದ ಶಾಸಕರಿಗೆ ಬೆದರಿಕೆ : ವಿಜಯೇಂದ್ರ ಗಂಭೀರ ಆರೋಪ
- ಸಂಚಲನ ಮೂಡಿಸಿದೆ ಕಾಂಗ್ರೆಸ್ ಶಾಸಕರ ಆಪ್ತ ಸಹಾಯಕನ ಮತ್ತೊಂದು ಆಡಿಯೋ
- ಅಕ್ರಮ ಗಣಿ ಪ್ರಕರಣಗಳ ಕುರಿತು ಎಚ್.ಕೆ. ಪಾಟೀಲರ ಪತ್ರಕ್ಕೆ ಸಿಎಂ ಸ್ಪಂದನೆ ಏನು.. ?