ಹೆಚ್.ಡಿ. ದೇವೇಗೌಡರು ಭಾರತದ ಇತಿಹಾಸದಲ್ಲಿ ಪ್ರಧಾನಿಯಾದ ಏಕೈಕ ಕನ್ನಡಿಗರೆಂಬ ಹಿರಿಮೆಯನ್ನು ಕನ್ನಡ ನಾಡಿಗೆ ತಂದುಕೊಟ್ಟಿರುವ ಅಪರೂಪದ ಸಾಧಕರು. ರೈತಾಪಿ ಕುಟುಂಬದಲ್ಲಿ ಜನಿಸಿ ಪ್ರಧಾನಿ ಪಟ್ಟವೇರಿದ ಮಣ್ಣಿನ ಮಗ ಎಂಬ ಕೀರ್ತಿಗೆ ಭಾಜನರಾದವರು.
ನಾನು ಅಧಿಕಾರದಲ್ಲಿದ್ದಾಗ ರೈತರ ಹಿತ ಕಾಯದಿದ್ದರೆ ಅಂಥ ಅಧಿಕಾರದಲ್ಲಿದ್ದೇನು ಪ್ರಯೋಜನ? ಎಂದು ಗುಡುಗಿದವರು. ಎಂದೂ ಅಧಿಕಾರಕ್ಕಾಗಿ ಹಪಹಪಿಸಿದವರಲ್ಲ. 1983ರಲ್ಲಿಯೇ ಕರ್ನಾಟಕದ ಮುಖ್ಯಮಂತ್ರಿಯಾಗುವ ಅವಕಾಶ ಹೊಂದಿದ್ದರಾದರೂ ಸಂದರ್ಭವಶಾತ್ ಈ ಅವಕಾಶ ಬಿಟ್ಟುಕೊಟ್ಟರು.
ಡಿಪ್ಲೊಮಾ ಎಂಜಿನಿಯರಿಂಗ್ ಶಿಕ್ಷಣ ಪಡೆದು ತಾಲ್ಲೂಕು ಬೋರ್ಡ್ ಸದಸ್ಯರಾಗಿ, ಶಾಸಕರಾಗಿ, ವಿರೋಧ ಪಕ್ಷದ ನಾಯಕರಾಗಿ, ವಿವಿಧ ಖಾತೆಗಳ ಸಚಿವ ರಾಗಿ, ಮುಖ್ಯಮಂತ್ರಿಯಾಗಿ,
ಭಾರತ ದೇಶದ ಪ್ರಧಾನಿಯಾಗಿ ದೇವೇಗೌಡರು ಮೂಡಿಸಿದ ಹೆಜ್ಜೆಗುರುತುಗಳು ಅನನ್ಯ, ಅನುಕರಣೀಯ.
ಅವರು ರಾಜ್ಯದ ಮುಖ್ಯಮಂತ್ರಿಯಾಗಿದ್ದದ್ದು 18 ತಿಂಗಳು ಮಾತ್ರ. ಆದರೆ ಈ ಅವಧಿಯಲ್ಲಿ ಉತ್ತಮ ಆಡಳಿತ ನೀಡಿ ರಾಜ್ಯದ ಜನತೆಯ ಕ್ಷೇಮಾಭಿವೃದ್ಧಿಗೆ ಹಲವಾರು ಉತ್ತಮ ಕೊಡುಗೆಗಳನ್ನು ಕೊಟ್ಟರು. ಎಲ್ಲಕ್ಕಿಂತ ಮುಖ್ಯವಾಗಿ, ತಲೆನೋವಾಗಿ ಪರಿಣಮಿಸಿದ್ದ ಹುಬ್ಬಳ್ಳಿ ಈದ್ಗಾ ಮೈದಾನದ ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸಿದ್ದು ಇವರ ಸಾಧನೆಗೆ ಕಳಸಪ್ರಾಯ ಎಂದೇ ಹೇಳಬಹುದು.
ಪ್ರಧಾನಿಯಾಗಿ ಕೇವಲ ಹತ್ತು ತಿಂಗಳ ಕಾಲ ಅಧಿಕಾರದಲ್ಲಿದ್ದರೂ ಭ್ರಷ್ಟಾಚಾರ ರಹಿತ, ಹಗರಣ ಮುಕ್ತ, ಕಳಂಕ ರಹಿತ ಆಡಳಿತ ನೀಡಿದವರು. ಇವರ ವಿದೇಶಾಂಗ ನೀತಿಯನ್ನು ವಿದೇಶೀ ಪತ್ರಿಕೆಗಳೂ ಹೊಗಳಿ ಬರೆದವು. ಕೃಷಿಕವರ್ಗಕ್ಕೆ ವಿಶೇಷ ಸಹಾನುಭೂತಿಯನ್ನು ಹೊಂದಿರುವ ಇವರ ಆರ್ಥಿಕ ದೃಷ್ಟಿಕೋನವನ್ನು ಗೌಡನಾಮಿಕ್ಸ್ ಎಂದೇ ಕರೆಯಲಾಗುವುದು.
ಜಮ್ಮು ಮತ್ತು ಕಾಶೀರಕ್ಕೆ ಇವರು ಪ್ರಧಾನಿಯಾಗುವ ತನಕ ಆರು ವರ್ಷಗಳ ಕಾಲ ಯಾವೊಬ್ಬ ಪ್ರಧಾನಿಯೂ ಭೇಟಿ ನೀಡಿರಲಿಲ್ಲ. ಅಲ್ಲಿಗೆ ಭೇಟಿ ನೀಡಿ ಕಣಿವೆಯ ಜನತೆಯಲ್ಲಿ ಧೈರ್ಯ ತುಂಬಿ ಯಶಸ್ವಿಯಾಗಿ ಚುನಾವಣೆ ನಡೆಸಿದ್ದು ಇವರ ಸಾಧನೆ.ಈಗಲೂ ರಾಜ್ಯ ಸಭಾ ಸದಸ್ಯರಾಗಿ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾಗಿ ಸಕ್ರಿಯ ರಾಜಕಾರಣದಲ್ಲಿರುವ ದೇವೇಗೌಡರು ಭಾರತದ ಎಲ್ಲ ರಾಷ್ಟ್ರಪತಿಗಳನ್ನು, ಎಲ್ಲ ಪ್ರಧಾನಿಗಳನ್ನು ಕಂಡಿರುವ ಏಕೈಕ ಮಾಜಿ ಪ್ರಧಾನಿಯಾಗಿದ್ದಾರೆ.
92 ಸಾರ್ಥಕ ವಸಂತಗಳನ್ನು ಪೂರೈಸಿ ಶತಕದೆಡೆಗೆ ಹೆಜ್ಜೆ ಹಾಕಿರುವ ದೇವೇಗೌಡರ ನೆನಪಿನ ಶಕ್ತಿ, ಮಾನಸಿಕ ಸ್ಪಷ್ಟತೆ, ಮನೋಬಲ ವಿಸಯ ಮೂಡಿಸುತ್ತದೆ. ಸಂಸತ್ತಿನ ಚರ್ಚೆಗಳಲ್ಲಿ ಈಗಲೂ ಕ್ರಿಯಾಶೀಲವಾಗಿ ಭಾಗಿಯಾಗುವ ಈ ನೇಗಿಲಯೋಗಿ ಕರ್ಮಯೋಗಿ ಎಂಬ ಅಭಿಧಾನಕ್ಕೂ ನೈಜ ರೀತಿ ಅರ್ಹರು.
ದೇವೇಗೌಡರ ಜೀವನ- ಸಾಧನೆಗಳನ್ನು ಕುರಿತು ಸಾಕಷ್ಟು ಕೃತಿಗಳು ಬಂದಿವೆ. ಬರುತ್ತಲೂ ಇವೆ. ದೇವೇಗೌಡರ ಜೀವನ ಚರಿತ್ರೆ ಎಂದರೆ ಅದು ಕರ್ನಾಟಕದ ಮತ್ತು ಭಾರತದ ಆಯಾ ಕಾಲಘಟ್ಟಗಳ ಇತಿಹಾಸವಾಗಿಯೂ ದಾಖಲಾಗುವುದರಿಂದ ಮಹತ್ವ ಪಡೆಯುತ್ತದೆ.
ಅದೇ ರೀತಿ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅಭಿನಂದನಾ ಸಮಿತಿ ವತಿಯಿಂದ ಮಣ್ಣಿನ ಮಗ ಹೆಚ್.ಡಿ. ದೇವೇಗೌಡ: ಹಳ್ಳಿಯಿಂದ ದಿಲ್ಲಿವರೆಗೆ, ಬದುಕು ಮತ್ತು ಸಾಧನೆ ಎಂಬ ಕೃತಿಯನ್ನು ಹೊರತಂದಿದ್ದು ಇಂದು ಡಾ. ಬಾಬು ಜಗಜೀವನರಾಮ್ ಭವನದಲ್ಲಿ ಲೋಕಾರ್ಪಣೆಗೊಂಡಿದೆ.ಜೊತೆಗೆ ದೇವೇಗೌಡರಿಗೆ ಶ್ರೀ ಗಂಗಸಾಮ್ರಾಟ ಶ್ರೀ ಪುರುಷ ಪ್ರಶಸ್ತಿ ಪ್ರದಾನ ಮತ್ತು 93 ವಿವಿಧ ಸಾಧಕರಿಗೆ ಹೆಚ್.ಡಿ. ದೇವೇಗೌಡ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಹಮಿಕೊಳ್ಳಲಾಗಿದೆ.
ಡಾ. ಬಿ.ಆರ್. ಸತ್ಯನಾರಾಯಣ ಮತ್ತು ಸ್ನೇಹಿತರು ಈ ಕೃತಿಯನ್ನು ಸಂಗ್ರಹಿಸಿಕೊಟ್ಟಿದ್ದು, ಇದರಲ್ಲಿ ದೇವೇಗೌಡರ ಬಾಲ್ಯ, ಶಿಕ್ಷಣ, ಶಾಸಕರಾಗಿ, ವಿರೋಧ ಪಕ್ಷದ ನಾಯಕರಾಗಿ, ಸಚಿವರಾಗಿ, ಮುಖ್ಯಮಂತ್ರಿಯಾಗಿ, ಪ್ರಧಾನಿಯಾಗಿ, ಮಾಜಿ ಪ್ರಧಾನಿಯಾಗಿ ದೇವೇಗೌಡರ ಯಶೋಗಾಥೆಯನ್ನು ಸಂಕ್ಷಿಪ್ತವಾಗಿ ದಾಖಲಿಸಲಾಗಿದೆ.
ದೇವೇಗೌಡರು ಪ್ರಧಾನಿಯಾದ ಬಳಿಕ ಲೋಕಸಭೆಯಲ್ಲಿ ಮಾಡಿದ ಮೊದಲ ಭಾಷಣ ಮತ್ತು ಪ್ರಧಾನಿ ಹುದ್ದೆಯಿಂದ ನಿರ್ಗಮಿಸುವ ಮುನ್ನ ವಿಶ್ವಾಸಮತ ಕೋರಿ ಮಾಡಿದ ಕೊನೆಯ ಭಾಷಣದ ಕನ್ನಡಾನುವಾದವನ್ನೂ ಕೊಡಲಾಗಿದೆ.ದೇವೇಗೌಡರ ಜೀವಿತದ ವಿವಿಧ ಮಜಲುಗಳ ಅಪರೂಪದ ಛಾಯಾಚಿತ್ರಗಳನ್ನು ಆಕರ್ಷಕವಾಗಿ ಮುದ್ರಿಸಲಾಗಿದೆ.
ದೇವೇಗೌಡರು ರಾಜಕೀಯ ಪ್ರವೇಶ ಮಾಡಿದಂದಿನಿಂದ ಇಂದಿನವರೆಗಿನ ಅಪರೂಪದ ಘಟನಾವಳಿಗಳನ್ನು ಮೆಲುಕು ಹಾಕುವಂತೆ ಮಾಡುವ, ದೇಶವಿದೇಶಗಳ ಮಹಾನ್ ನಾಯಕರು, ಗಣ್ಯರೊಂದಿಗಿನ ಛಾಯಾಚಿತ್ರಗಳು, ಅವರ ಬದುಕು- ಸಾಧನೆಯನ್ನು ಅನಾವರಣ ಮಾಡುವ ಲೇಖನಗಳು ಈ ಕೃತಿಯ ಪ್ರಮುಖ ಆಕರ್ಷಣೆಯಾಗಿವೆ.
- ಮಾಜಿ ಪ್ರಧಾನಿ ದೇವೇಗೌಡರಿಗೆ ಶ್ರೀಗಂಗ ಸಾಮ್ರಾಟ ಶ್ರೀಪುರುಷ ಪ್ರಶಸ್ತಿ ಪ್ರದಾನ
- ಡಿ.ಕೆ.ಶಿವಕುಮಾರ್ ಸಿಎಂ ಕನಸು ಕಾಣಬೇಕಷ್ಟೇ..! : ಹೆಚ್ಡಿಕೆ ವ್ಯಂಗ್ಯ
- ಭ್ರಷ್ಟಾಚಾರ ಬಯಲಿಗೆಳೆದ ಶಾಸಕರಿಗೆ ಬೆದರಿಕೆ : ವಿಜಯೇಂದ್ರ ಗಂಭೀರ ಆರೋಪ
- ಸಂಚಲನ ಮೂಡಿಸಿದೆ ಕಾಂಗ್ರೆಸ್ ಶಾಸಕರ ಆಪ್ತ ಸಹಾಯಕನ ಮತ್ತೊಂದು ಆಡಿಯೋ
- ಅಕ್ರಮ ಗಣಿ ಪ್ರಕರಣಗಳ ಕುರಿತು ಎಚ್.ಕೆ. ಪಾಟೀಲರ ಪತ್ರಕ್ಕೆ ಸಿಎಂ ಸ್ಪಂದನೆ ಏನು.. ?