ಮೈಸೂರು, ಜೂ.23- ಜಿಲ್ಲೆಯಾದ್ಯಂತ ಅಂಗನವಾಡಿ ಹಾಗೂ ಶಾಲೆಗಳು ಪ್ರಾರಂಭವಾಗಿವೆ. ಆದರೆ ಇಲ್ಲೊಂದು ಪ್ರಾಥಮಿಕ ಶಾಲೆ ಮಕ್ಕಳನ್ನು ವಿಶೇಷವಾಗಿ ಬರಮಾಡಿಕೊಂಡಿತು. ನೂತನ ಶೌಚಾಲಯಗಳನ್ನು ಕಟ್ಟಿ ಚಿಣ್ಣರನ್ನು ಬರಮಾಡಿಕೊಳ್ಳಲಾಯಿತು. ಇದಕ್ಕೆ ನರೇಗಾ ನೆರವಾಗಿದೆ.
ಮಹಾತ್ಮಗಾಂಧಿಯವರ ಕನಸಿನಂತೆ ಅಭಿವೃದ್ಧಿ ಎಂಬುದು ಗ್ರಾಮಗಳಿಂದಲೇ ಆಗಬೇಕೆಂಬ ಪರಿಕಲ್ಪನೆಯಲ್ಲೇ ಮುಂದೆ ಸಾಗುತ್ತಿರುವ ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಶಾಲೆಗಳ ಅಭಿವೃದ್ಧಿಯ ನೆರವಿಗೆ ಸಹಕಾರಿಯಾಗಿದೆ.
ಇಂತಹ ಪ್ರಯತ್ನ ಯಶಸ್ವಿಯಾಗಿರುವುದು ಮೈಸೂರು ಜಿಲ್ಲೆಯ ತಿ.ನರಸೀಪುರ ತಾಲ್ಲೂಕಿನ ಮಲಿಯೂರು ಗ್ರಾಮ ಪಂಚಾಯಿತಿಯ ಮೇಗಳಕೊಪ್ಪಲು ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ, ಹಲವು ವರ್ಷಗಳಿಂದ ಈ ಗ್ರಾಮದಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆ ನಡೆಯುತ್ತಿದೆ. 15 ವರ್ಷಗಳ ಹಿಂದೆ ಶೌಚಾಲಯ, ನಿರ್ಮಾಣಗೊಂಡಿತ್ತು. ಆದರೆ ಇತ್ತೀಚೆಗೆ ಬಳಕೆಗೆ ಯೋಗ್ಯವಾಗಿರಲಿಲ್ಲ.
ಅಲ್ಲದೇ ಶೌಚಾಲಯಕ್ಕೆ ನೀರಿನ ವ್ಯವಸ್ಥೆಯೂ ಇರಲಿಲ್ಲ, ಮಕ್ಕಳಿಗೆ ಕಷ್ಟವಾಗಿತ್ತು. ಇದನ್ನು ಅರಿತ ಮುಖ್ಯೋಪಾಧ್ಯಾಯರು ಗ್ರಾಮ ಪಂಚಾಯಿತಿ ಅಧಿಕಾರಿಗಳ ಗಮನಕ್ಕೆ ತಂದು ಶೌಚಾಲಯ ನಿರ್ಮಾಣಕ್ಕೆ ಮುಂದಾದರು.
ಇದರ ಫಲವಾಗಿ 2023-24ನೇ ಸಾಲಿನಲ್ಲಿ 5.20 ಲಕ್ಷ ರೂ.ಗಳ ಕ್ರಿಯಾ ಯೋಜನೆ ಸಿದ್ದಪಡಿಸಿ ಪುರುಷ ಹಾಗೂ ಹೆಣ್ಣು ಮಕ್ಕಳ ಸುಸಜ್ಜಿತ ಶೌಚಾಲಯಗಳ ನಿರ್ಮಾಣಕ್ಕೆ ಚಾಲನೆ ನೀಡಲಾಯಿತು.
ಹಾಗಾಗಿ 2024-25ನೇ ಸಾಲಿಗೆ ಕಾಮಗಾರಿ ಪೂರ್ಣಗೊಂಡು, ಈ ಸಾಲಿನಲ್ಲಿ ಆಗಮಿಸಿದ ಮಕ್ಕಳನ್ನು ನೂತನ ಶೌಚಾಲಯಗಳೊಂದಿಗೆ ಸಂತಸದಿಂದ ಸ್ವಾಗತಿಸಲಾಯಿತು.
ನೂತನ ಶೌಚಾಲಯ ಕಂಡ ಮಕ್ಕಳು ಸಂತಸದಿಂದಲೇ ನಮ್ಮ ಶಾಲೆ ಯಾವುದಕ್ಕೂ ಕಮ್ಮಿ ಇಲ್ಲ ಎಂಬಂತೆ ಸಂಭ್ರಮಿಸಿದವು.
ಈ ಮೂಲಕ ಮ-ನರೇಗಾ ಯೋಜನೆ ಅನುಷ್ಠಾನ ಸದ್ದಿಲ್ಲದೆ ತನ್ನ ಸಾಧನೆ ಮಾಡಿ ಸರ್ಕಾರಿ ಶಾಲೆಗಳತ್ತ ಮಕ್ಕಳು ಬರುವುದಿಲ್ಲ ಎನ್ನುವ ಮೊದಲು ಶಾಲೆಯಲ್ಲಿ ಮಕ್ಕಳಿಗೆ ಖಾಸಗಿ ಶಾಲೆಯ ಮಾದರಿ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಸರ್ಕಾರಿ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಈ ದಿಸೆಯಲ್ಲಿ ಮ-ನರೇಗಾ ನಮ್ಮ ಶಾಲೆಯಲ್ಲಿ 30 ಮಂದಿ ಮಕ್ಕಳಿದ್ದು, ಈಗ ಶೌಚಾಲಯದಲ್ಲಿ ಹೊಸ ಹೆಜ್ಜೆ ಇರಿಸಿರುವುದು ಸಂತಸ ತಂದಿದೆ ಎಂದು ಶಾಲೆಯ ಮುಖ್ಯಶಿಕ್ಷಕ ರಾಮು ತಿಳಿಸಿದರು.
ಶಾಲಾ ಮುಖ್ಯ ಶಿಕ್ಷಕಿಯವರು ಇಲ್ಲಿನ ಸಮಸ್ಯೆ ತಿಳಿಸಿದಾಗ ಮ-ನರೇಗಾ ಯೋಜನೆ ಬಗ್ಗೆ ಮನವರಿಕೆ ಮಾಡಿಕೊಟ್ಟು ಕಾಮಗಾರಿ ಪ್ರಾರಂಭಿಸಿ ಈಗ ಮಕ್ಕಳಿಗೆ ಹೊಸ ಶೌಚಾಲಯ ಸಿಕ್ಕಿರುವುದು ಎಲ್ಲರಿಗೂ ಖುಷಿಯಾಗಿದೆ. ಶಾಲಾ ಶೌಚಾಲಯ, ಕಾಂಪೌಂಡ್ ಹಾಗೂ ಕಟ್ಟಡದಲ್ಲಿಯೂ ನರೇಗಾ ಅನುದಾನ ಬಳಕೆ ಮಾಡಿಕೊಂಡು ಶಾಲೆಗಳ ಅಭಿವೃದ್ಧಿ ಸಾಧಿಸಬಹುದು ಎಂಬುದಕ್ಕೆ ಇದು ಉದಾಹರಣೆಯಾಗಿದೆ ಎಂದು ತಿ.ನರಸೀಪುರ ತಾಲ್ಲೂಕು ಕಾರ್ಯ ನಿರ್ವಾಹಕ ಅಧಿಕಾರಿ ಪಿ.ಎಸ್.ಅನಂತರಾಜು ಹೆಮ್ಮೆ ಪಟ್ಟರು.
ಮೈಸೂರು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಎಸ್. ಯುಕೇಶ್ ಕುಮಾರ್ ಅವರು ಕೂಡಾ ಜಿಲ್ಲೆಯಲ್ಲಿ ಮ-ನರೇಗಾ ಕಾರ್ಯ ಯಶಸ್ವಿಯಾಗಿ ಮುನ್ನಡೆಯುತ್ತಿದೆ ಎಂದು ಹೇಳಿದರು.ಅನೇಕ ಶಾಲೆಗಳಲ್ಲಿ ಕಟ್ಟಡ ಸಮಸ್ಯೆಗಳಿದ್ದು, ನರೇಗಾ ಮೂಲಕ ನಿವಾರಿಸಿಕೊಳ್ಳಲು ಆಯಾ ಶಿಕ್ಷಕರು ಹಾಗೂ ಪಂಚಾಯಿತಿ ಅಧಿಕಾರಿಗಳು ಮುಂದೆ ಬಂದರೆ ಸರ್ಕಾರಿ ಶಾಲೆಗಳು ತಾನಾಗಿಯೇ ಅಭಿವೃದ್ಧಿ ಕಾಣಲಿವೆ. ಇಂತಹ ಅಭಿವೃದ್ಧಿ ಕಾರ್ಯಕ್ಕೆ ಮ-ನರೇಗಾ ಯೋಜನೆ ಮುಕ್ತವಾಗಿದೆ ಎಂದು ತಿಳಿಸಿದರು.
- ಬಂಜೆತನ ಸಮಸ್ಯೆಗಳಿಗೆ ಉಚಿತ ಮಾರ್ಗದರ್ಶನ ನೀಡಲು ಬಂತು ಟೋಲ್-ಫ್ರೀ ಸಂಖ್ಯೆ
- ರಾಜ್ಯದಲ್ಲಿ ಶೀಘ್ರವೇ ಜಲಾಶಯಗಳು ಭರ್ತಿ.!
- ಇರಾನ್-ಇಸ್ರೇಲ್ ಯುದ್ಧಕ್ಕೆ ಅಮೆರಿಕ ರಂಗಪ್ರವೇಶ ಬೆನ್ನಲ್ಲೇ ಜಾಗತಿಕ ಷೇರು ಮಾರುಕಟ್ಟೆ ತಲ್ಲಣ
- ಶಾಸಕರ ಅಸಮಾಧಾನ ಬಗೆಹರಿಸುವೆ:ಸಿಎಂ
- ಗುಜರಾತ್ ವಿಧಾನಸಭೆಉಪಚುನಾವಣೆ ಫಲಿತಾಂಶ : ಬಿಜೆಪಿ,ಎಎಪಿ ಸಮಬಲ