ಬೆಂಗಳೂರು,ಜೂ.23- ವಿರೋಧಪಕ್ಷಗಳಿಗಿಂತಲೂ ಆಡಳಿತ ಪಕ್ಷದಲ್ಲಿನ ಶಾಸಕರೇ ಅದರಲ್ಲೂ ವಲಸಿಗ ಶಾಸಕರು ಕಾಂಗ್ರೆಸ್ ಸರ್ಕಾರಕ್ಕೆ ಮಗ್ಗಲು ಮುಳ್ಳಾಗಿದ್ದಾರೆ.ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಆಪರೇಷನ್ ಹಸ್ತ ನಡೆಸಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಬಿಜೆಪಿ-ಜೆಡಿಎಸ್ನಿಂದ ಹಲವು ಶಾಸಕರನ್ನು ಕಾಂಗ್ರೆಸ್ಗೆ ಕರೆತಂದಿದ್ದರು.
ಅವರಲ್ಲಿ ಬಹಳಷ್ಟು ಮಂದಿ ಗೆಲುವು ಸಾಧಿಸಿ ಶಾಸಕರಾಗಿದ್ದಾರೆ. ಬಿಜೆಪಿಯಲ್ಲಿ ತಿರಸ್ಕರಿಸಲ್ಪಟ್ಟಿದ್ದ ಅಥವಾ ಟಿಕೆಟ್ ದೊರೆಯದೇ ವಂಚಿತರಾಗಿದ್ದವರನ್ನು ಕಾಂಗ್ರೆಸ್ಗೆ ಸೆಳೆದಿದ್ದ ನಾಯಕರಿಗೆ ಈಗ ಮುಜುಗರದ ಸನ್ನಿವೇಶಗಳು ಎದುರಾಗುತ್ತಿವೆ.
ಕಾಂಗ್ರೆಸ್ಗೆ ವಲಸಿಗ ಅಳಂದ ಕ್ಷೇತ್ರದ ಶಾಸಕರಾದ ಬಿ.ಆರ್.ಪಾಟೀಲ್, ನಾಗಠಾಣಾ ಕ್ಷೇತ್ರದ ವಿಠ್ಠಲ್ ಕಟಕದೊಂಡ, ಕಾಗವಾಡ ಕ್ಷೇತ್ರದ ರಾಜು ಕಾಗೆ, ಸಾಗರ ಕ್ಷೇತ್ರದ ಬೇಳೂರು ಗೋಪಾಲಕೃಷ್ಣ ಮತ್ತಿತರರು ಕಾಂಗ್ರೆಸ್ ಶಿಸ್ತಿಗೆ ಎಳ್ಳುನೀರು ಬಿಟ್ಟು ಬಹಿರಂಗ ಹೇಳಿಕೆಗಳನ್ನು ನೀಡುವ ಮೂಲಕ ರಾಜ್ಯಸರ್ಕಾರಕ್ಕೆ ಉಸಿರುಗಟ್ಟಿಸುವಂತಹ ವಾತಾವರಣ ನಿರ್ಮಿಸುತ್ತಿದ್ದಾರೆ.
ಬಿ.ಆರ್.ಪಾಟೀಲ್ ಈ ಹಿಂದೆ ಮಾಜಿ ಮುಖ್ಯಮಂತ್ರಿ ವೀರಪ್ಪಮೊಯ್ಲಿ ಅವರ ಆಪ್ತರಾಗಿದ್ದು, ಕೆಜೆಪಿಯಿಂದ ಶಾಸಕರಾಗಿದ್ದರು. ಕೆಜೆಪಿಯಲ್ಲಿದ್ದ ಯಡಿಯೂರಪ್ಪ ಸೇರಿದಂತೆ ಹಲವು ನಾಯಕರು ಬಿಜೆಪಿಗೆ ಮರಳಿದ ವೇಳೆ ಬಿ.ಆರ್.ಪಾಟೀಲ್ ಕಾಂಗ್ರೆಸ್ ಸೇರ್ಪಡೆಯಾಗಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರಮ ಆಪ್ತರಾಗಿರುವ ಮೂಲತಃ ಜನತಾ ಪರಿವಾರದ ಬಿ.ಆರ್.ಪಾಟೀಲ್ 4 ಬಾರಿ ಶಾಸಕರಾಗಿದ್ದಾರೆ. ಅದರಲ್ಲಿ 2 ಬಾರಿ ಜನತಾದಳದಿಂದ ಶಾಸಕರಾಗಿದ್ದರೆ, ಒಂದು ಬಾರಿ ಕೆಜೆಪಿಯನ್ನು ಪ್ರತಿನಿಧಿಸಿದ್ದರು.
ಬಿ.ಆರ್.ಪಾಟೀಲ್ ಕಾಂಗ್ರೆಸ್ ಸೇರ್ಪಡೆಯಾಗಿದ್ದರಿಂದ ಪಕ್ಷದಲ್ಲಿದ್ದ ಪ್ರಭಾವಿ ನಾಯಕ ಸುಭಾಷ್ ಗುತ್ತೇದಾರ್ ಅನ್ಯಪಕ್ಷದತ್ತ ವಲಸೆ ಹೋದರು. ಕಾಂಗ್ರೆಸ್ ಒಳಗಿದ್ದೇ ಬಿ.ಆರ್.ಪಾಟೀಲ್, ಸರ್ಕಾರ ರಚನೆಯಾದ ಆರಂಭದಿಂದಲೂ ಹಲವಾರು ಹೇಳಿಕೆ ನೀಡಿ ಪಕ್ಷಕ್ಕೆ ಮುಜುಗರ ಉಂಟು ಮಾಡುತ್ತಿದ್ದಾರೆ. ಈಗ ವಸತಿ ಇಲಾಖೆ ಹಾಗೂ ಅಲ್ಪಸಂಖ್ಯಾತರ ಇಲಾಖೆಯ ಭ್ರಷ್ಟಾಚಾರದ ಬಗ್ಗೆ ಪದೇಪದೇ ಪ್ರಸ್ತಾಪ ಮಾಡಿ ಸಚಿವ ಜಮೀರ್ ಅಹಮದ್ ಖಾನ್ರ ಸ್ಥಾನಕ್ಕೆ ಕುತ್ತು ತರುವ ಸನ್ನಿವೇಶ ಸೃಷ್ಟಿಸಿದ್ದಾರೆ.
ಬಿ.ಆರ್.ಪಾಟೀಲ್ ಹೇಳಿಕೆಗೆ ಪೂರಕವಾಗಿ ಸಾಗರ ಕ್ಷೇತ್ರದ ಬೇಳೂರು ಗೋಪಾಲಕೃಷ್ಣ ಸಚಿವ ಜಮೀರ್ ಅಹಮದ್ ಖಾನ್ರ ರಾಜೀನಾಮೆಗೆ ಒತ್ತಾಯಿಸಿದ್ದಾರೆ.ಭ್ರಷ್ಟಾಚಾರದ ಆರೋಪಗಳು ಕೇಳಿಬಂದಾಗ ಹಲವಾರು ಮಂದಿ ರಾಜೀನಾಮೆ ನೀಡಿದ ಉದಾಹರಣೆಗಳಿವೆ. ಈಗಲೂ ಜಮೀರ್ ಅಹಮದ್ ಖಾನ್ ತಮ ಸ್ಥಾನಕ್ಕೆ ರಾಜೀನಾಮೆ ನೀಡಿ ತನಿಖೆ ಎದುರಿಸಲಿ, ನಿರ್ದೋಷಿ ಎಂದಾದರೆ ಮತ್ತೆ ಸಂಪುಟಕ್ಕೆ ಸೇರ್ಪಡೆಯಾಗಲಿ ಎಂದು ಹೇಳುವ ಮೂಲಕ ವಿರೋಧಪಕ್ಷಗಳಿಗಿಂತಲೂ ಮೊದಲೇ ಆಡಳಿತ ಪಕ್ಷದ ಶಾಸಕರು ರಾಜೀನಾಮೆ ಕೇಳಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಷ್ಟೇ ಕಾಂಗ್ರೆಸ್ ಸೇರ್ಪಡೆಯಾಗಿ ಕಾಗವಾಡ ಕ್ಷೇತ್ರದಿಂದ ಗೆಲುವು ಸಾಧಿಸಿದ್ದ ರಾಜು ಕಾಗೆ ಬಹಿರಂಗವಾಗಿ ಆಕ್ರೋ ವ್ಯಕ್ತಪಡಿಸುವ ಮೂಲಕ ರಾಜ್ಯಸರ್ಕಾರದ ಆಡಳಿತ ವ್ಯವಸ್ಥೆಯೇ ಕುಸಿದಿದೆ ಎಂದು ವಿರೋಧಪಕ್ಷಕ್ಕಿಂತಲೂ ಮೊದಲೇ ವಾಗ್ದಾಳಿ ನಡೆಸಿದ್ದಾರೆ.
ರಾಜು ಕಾಗೆ ಕೂಡ ಬಿಜೆಪಿಯಿಂದ ಮೂರು ಬಾರಿ ಶಾಸಕರಾಗಿದ್ದರು. ಕಳೆದ ವಿಧಾನಸಭೆಯ ಚುನಾವಣೆಯಲ್ಲಿ ಬಿಜೆಪಿ ಅವರಿಗೆ ಟಿಕೆಟ್ ನಿರಾಕರಿಸಿತ್ತು. ಹೀಗಾಗಿ ಕಾಂಗ್ರೆಸ್ನತ್ತ ವಲಸೆ ಬಂದಿದ್ದರು. ಸಾರ್ವಜನಿಕವಾಗಿ ಹೇಳಿಕೆ ನೀಡಿ ರಾಜ್ಯಸರ್ಕಾರದ ಆಡಳಿತ ವ್ಯವಸ್ಥೆ ಕುಸಿದಿದೆ. ತಾವು 2-3 ದಿನಗಳಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹೇಳಿದ್ದಾರೆ.ನಾಗಠಾಣಾ ಕ್ಷೇತ್ರದ ಶಾಸಕ ವಿಠ್ಠಲ್ ಕಟಕದೊಂಡ ಅವರ ಆಪ್ತ ಸಹಾಯಕರು ವಸತಿ ಇಲಾಖೆಯಲ್ಲಿ ಪ್ರತಿ ಮನೆಯ ಹಂಚಿಕೆಗೆ 40 ಸಾವಿರ ರೂ.ಗಳ ಲಂಚ ಕೇಳಿರುವ ಆಡಿಯೋ ವೈರಲ್ ಆಗಿದೆ.
ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ವಿರೋಧಪಕ್ಷದ ನಾಯಕರು, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ವಸತಿ ಸಚಿವ ಜಮೀರ್ ಅಹಮದ್ ಖಾನ್ ರಾಜೀನಾಮೆ ನೀಡಬೇಕೆಂದು ಆಗ್ರಹಿಸಲಾರಂಭಿಸಿದ್ದಾರೆ.ವಲಸಿಗ ಶಾಸಕರು ಮೂರ್ನಾಲ್ಕು ಬಾರಿ ಚುನಾಯಿತ ಪ್ರತಿನಿಧಿಗಳಾಗಿ ಜವಾಬ್ದಾರಿ ನಿರ್ವಹಿಸಿದ್ದು, ಸಾರ್ವಜನಿಕವಾಗಿ ತಮ ಹೇಳಿಕೆ ಯಾವ ರೀತಿಯ ಪರಿಣಾಮ ಬೀರಲಿದೆ ಎಂಬ ಅರಿವಿಲ್ಲದೇ ಇರುವ ಅಮಾಯಕರೇನಲ್ಲ. ಉದ್ದೇಶಪೂರಕವಾಗಿಯೇ ಹೇಳಿಕೆ ನೀಡಿ ತಮ ಮಾತೃಪಕ್ಷಕ್ಕೆ ಸಹಾಯ ಮಾಡುವಂತಹ ಸನ್ನಿವೇಶ ಸೃಷ್ಟಿಸುತ್ತಿದ್ದಾರೆ ಎಂಬ ಆಕ್ರೋಶಗಳು ಕಾಂಗ್ರೆಸ್ ಒಳವಲಯದಲ್ಲಿ ಕೇಳಿಬಂದಿವೆ.
ಶಾಸಕರ ಹೇಳಿಕೆಗಳು ಮತ್ತು ರಾಜೀನಾಮೆಯ ಹೇಳಿಕೆ ಹಿಂದೆ ಆಪರೇಷನ್ ಕಮಲದ ಶಂಕೆಗಳು ವ್ಯಕ್ತವಾಗಿವೆ. ಕಾಂಗ್ರೆಸ್ ಪಕ್ಷ ತಮ ಸಂಖ್ಯಾಬಲ 139ಕ್ಕಿಂತಲೂ ಹೆಚ್ಚಿದೆ ಎಂಬ ಅತಿಯಾದ ಆತವಿಶ್ವಾಸದಲ್ಲಿದ್ದು, ಸರ್ಕಾರ ಬೀಳಿಸುವುದು ಸುಲಭಸಾಧ್ಯವಲ್ಲ ಎಂಬ ನಂಬಿಕೆಯಲ್ಲಿದೆ. ಆದರೆ ದಿನೇದಿನೇ ನಡೆಯುತ್ತಿರುವ ಬೆಳವಣಿಗೆಗಳು ರಾಜಕೀಯ ಬೇರೆ ರೀತಿಯ ತಿರುವು ಪಡೆಯುವ ಸನ್ನಿವೇಶಗಳನ್ನು ಸೃಷ್ಟಿಸುತ್ತಿವೆ. ಇಡೀ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ.
ಜನವಿರೋಧಿಯಾಗಿದೆ ಎಂಬ ಭಾವನೆಗಳು ಆಡಳಿತ ಪಕ್ಷದ ಶಾಸಕರುಗಳ ಹೇಳಿಕೆಯಿಂದ ವ್ಯಕ್ತವಾಗುತ್ತಿದೆ. ವಿರೋಧಪಕ್ಷಗಳ ನಾಯಕರೇ ಜನಬೆಂಬಲದಿಂದ ಆಯ್ಕೆಯಾಗಿರುವ ಸರ್ಕಾರವನ್ನು ಟೀಕಿಸುವುದು ಹೇಗೆ ಎಂದು ತಡಕಾಡುತ್ತಿರುವ ಸಂದರ್ಭದಲ್ಲಿ ಆಡಳಿತ ಪಕ್ಷದ ಶಾಸಕರೇ ಬಹಿರಂಗ ಹೇಳಿಕೆಗಳ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಉಸಿರುಗಟ್ಟಿಸುವ ವಾತಾವರಣ ಸೃಷ್ಟಿಸುತ್ತಿದ್ದಾರೆ. ಗೆಲ್ಲಲೇಬೇಕು ಎಂಬ ಉಮೇದಿನಲ್ಲಿ ಸಿಕ್ಕಸಿಕ್ಕವರನ್ನೆಲ್ಲಾ ಪಕ್ಷಕ್ಕೆ ಸೇರಿಸಿಕೊಂಡಿದ್ದ ನಾಯಕರಿಗೆ ಈಗ ಎಲ್ಲವೂ ಬಿಸಿತುಪ್ಪವಾಗಿದೆ.
- ಬಂಜೆತನ ಸಮಸ್ಯೆಗಳಿಗೆ ಉಚಿತ ಮಾರ್ಗದರ್ಶನ ನೀಡಲು ಬಂತು ಟೋಲ್-ಫ್ರೀ ಸಂಖ್ಯೆ
- ರಾಜ್ಯದಲ್ಲಿ ಶೀಘ್ರವೇ ಜಲಾಶಯಗಳು ಭರ್ತಿ.!
- ಇರಾನ್-ಇಸ್ರೇಲ್ ಯುದ್ಧಕ್ಕೆ ಅಮೆರಿಕ ರಂಗಪ್ರವೇಶ ಬೆನ್ನಲ್ಲೇ ಜಾಗತಿಕ ಷೇರು ಮಾರುಕಟ್ಟೆ ತಲ್ಲಣ
- ಶಾಸಕರ ಅಸಮಾಧಾನ ಬಗೆಹರಿಸುವೆ:ಸಿಎಂ
- ಗುಜರಾತ್ ವಿಧಾನಸಭೆಉಪಚುನಾವಣೆ ಫಲಿತಾಂಶ : ಬಿಜೆಪಿ,ಎಎಪಿ ಸಮಬಲ