ಬೆಂಗಳೂರು, ಜೂ.24- ಇಂದು ಬೆಳ್ಳಂಬೆಳಗ್ಗೆ ಲೋಕಾಯುಕ್ತ ಪೊಲೀಸರು 8 ಸರ್ಕಾರಿ ಅಧಿಕಾರಿಗಳ ಮನೆ, ಕಚೇರಿ, ಫಾರ್ಮ್ ಹೌಸ್ ಹಾಗೂ ವಾಣಿಜ್ಯ ಕೇಂದ್ರಗಳ ಮೇಲೆ ಏಕಕಾಲದಲ್ಲಿ ಮಿಂಚಿನ ದಾಳಿ ನಡೆಸಿದ್ದಾರೆ.ಚಳಿಯಲ್ಲಿ ಬೆಚ್ಚಗೆ ಮಲಗಿದ್ದ ಭ್ರಷ್ಟ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ್ದು, ಅಪಾರ ಪ್ರಮಾಣದ ಚರ-ಚಿರ ಆಸ್ತಿ, ಚಿನ್ನಾಭರಣ, ನಗದು ಸೇರಿದಂತೆ ಅಪಾರ ಪ್ರಮಾಣದ ಅಕ್ರಮ ಸಂಪತ್ತನ್ನು ಬಯಲಿಗೆಳೆದಿದ್ದಾರೆ.
ಅಕ್ರಮ ಸಂಪಾದನೆ ಕುರಿತಂತೆ ದೂರುಗಳು ಬಂದ ಹಿನ್ನೆಲೆಯಲ್ಲಿ ಸಂಪೂರ್ಣ ಪರಿಶೀಲನೆ ನಡೆಸಿ, ನಂತರ ದಾಳಿ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.ಪ್ರಮುಖವಾಗಿ ಈ ಬಾರಿ ಪೊಲೀಸ್ ಇನ್ಸ್ಪೆಕ್ಟರ್ ಸೇರಿ ಹಿರಿಯ ಅಧಿಕಾರಿಗಳು ಖೆಡ್ಡಕ್ಕೆ ಬಿದ್ದಿದ್ದಾರೆ.ಬೆಂಗಳೂರು, ಶಿವಮೊಗ್ಗ, ಕಲಬುರಗಿ, ಬೀದರ್, ಬೆಳಗಾವಿ, ಚಿಕ್ಕಮಗಳೂರು, ತುಮಕೂರು, ಧಾರವಾಡ, ವಿಜಯಪುರ ಸೇರಿದಂತೆ ಸುಮಾರು 12ಕ್ಕೂ ಹೆಚ್ಚು ಜಿಲ್ಲೆಗಳ 40ಕ್ಕೂ ಹೆಚ್ಚು ಕಡೆ ದಾಳಿ ನಡೆದಿದೆ.
ಕಲಬುರ್ಗಿಯಲ್ಲಿ ಎರಡು ಕಡೆ ಇಬ್ಬರು ಅಧಿಕಾರಿಗಳಿಗೆ ಚಳಿ ಬಿಡಿಸಿದ್ದಾರೆ. ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಎಂಜಿನಿಯರ್ ಮಲ್ಲಿಕಾರ್ಜುನ ಅಲಿಪುರ ಅವರ ಬೆಂಗಳೂರಿನ ಮನೆ ಹಾಗೂ ಕಲಬುರಗಿಯಲ್ಲಿರುವ ನಿವಾಸ ಸೇರಿದಂತೆ ಹಲವೆಡೆ ದಾಳಿ ನಡೆದಿದೆ.
ಇನ್ನು ಎರಡು ದಿನದಲ್ಲಿ ನಿವೃತ್ತಿಯಾಗುತ್ತಿದ್ದ ಇವರಿಗೆ ಇಂದು ಅವರ ಕಚೇರಿಯಲ್ಲಿ ಬೀಳ್ಕೊಡುಗೆ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಆದರೆ, ಲೋಕಾಯುಕ್ತ ದಾಳಿ ಅವರನ್ನು ದೆಂಗು ಬಡಿಸಿದೆ. ಮನೆಯಲ್ಲಿದ್ದ ದಾಖಲೆಗಳು, ಬೆಲೆಬಾಳುವ ವಸ್ತುಗಳನ್ನು ಪತ್ತೆ ಹಚ್ಚಿ ಅವುಗಳ ಮೌಲ್ಯಗಳನ್ನು ಅಂದಾಜು ಮಾಡಲಾಗುತ್ತಿದೆ.
ಇನ್ನು ಸಣ್ಣೂರು ಗ್ರಾಮದ ಪಿಡಿಓ ರಾಮಚಂದ್ರ ಅವರ ಸೇಡಂ ರಸ್ತೆಯಲ್ಲಿರುವ ಮಾನಸ ರೆಸಿಡಿನ್ಸಿ ಹಾಗೂ ವಿಜಯಪುರದ ಬೊಮ್ಮನಹಳ್ಳಿಯಲ್ಲಿರುವ ಅವರ ಮನೆಯ ಮೇಲೆ ದಾಳಿ ನಡೆಡೆಸಲಾಗಿದೆ.ಹಲವು ಕಡೆ ಕೃಷಿ ಜಮೀನು ಮನೆ ಸೇರಿದಂತೆ ಹಲವೆಡೆ ಆಸ್ತಿ ಸಂಪಾದನೆ ಮಾಡಿರುವುದು ಗೊತ್ತಾಗಿದೆ. ಜಿಲ್ಲಾ ಲೋಕಾ ಎಸ್.ಪಿ. ಉಮೇಶ್, ಡಿವೈಎಸ್ಪಿ. ಗೀತಾ ಬೇನಾಳ ನೇತೃತ್ವದಲ್ಲಿ ಸಿಬ್ಬಂದಿಗಳು ದಾಳಿ ನಡೆಸಿದ್ದಾರೆ.
ಶಿವಮೊಗ್ಗದ ಸಾವಾಯವ ಕೃಷಿ ವಿಭಾಗದ ಸಹ ಸಂಶೋಧನಾ ನಿರ್ದೇಶಕ ಡಾ. ಪ್ರದೀಪ್ ಅವರಿಗೆ ಲೋಕಾಯುಕ್ತ ಶಾಕ್ ನೀಡಿದೆ.ಭದ್ರಾಪುರದಲ್ಲಿರುವ ಫಾರ್ಮ್ ಹೌಸ್, ಹೊಸನಗರದಲ್ಲಿರುವ ಮನೆ ಸೇರಿದಂತೆ ಹಲವೆಡೆ ಎಸ್ಪಿ. ಮಂಜುನಾಥ್ ಚೌಧರಿ ನೇತೃತ್ವದಲ್ಲಿ ದಾಳಿ ನಡೆದಿದೆ. ಕೃಷಿ ಜಮೀನು, ರಾಜ್ಯದ ಹಲವೆಡೆ ನಿವೇಶನ ಸೇರಿದಂತೆ ಹಲವು ಕಡೆ ವಾಣಿಜ್ಯ
ವ್ಯವಹಾರಗಳನ್ನು ನಡೆಸಲಾಗುತ್ತಿರುವುದು ಕೂಡ ಗೊತ್ತಾಗಿದೆ.
ಶಿಕಾರಿಪುರದಲ್ಲಿರುವ ಅವರ ಮನೆ ಹಾಗೂ ಕಚೇರಿಗಳಲ್ಲಿ ಲೋಕಾ ಅಧಿಕಾರಿಗಳು ಇಂಚಿಂಚೂ ಜಾಲಾಡಿದ್ದಾರೆ. ಅಕ್ರಮ ಸಂಪತ್ತು ಪತ್ತೆಮಾಡಿದ್ದಾರೆ.ಚಿಕ್ಕಮಗಳೂರು ನಗರ ಸಭೆಯ ಲೆಕ್ಕಾಧಿಕಾರಿ ಲತಾಮಣಿ ಅವರ ನಿವಾಸ ಹಾಗೂ ಕಚೇರಿಗಳ ಮೇಲೆ ದಾಳಿ ನಡೆದಿದೆ. ನಗದು ಹಣ, ಚಿನ್ನಾಭರಣ ಸೇರಿದಂತೆ ಹಲವು ಬ್ಯಾಂಕ್ ಖಾತೆಗಳಲ್ಲಿರುವ ಠೇವಣಿಯ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ.
ಗದಗ ನಗರ ಠಾಣೆಯ ಇನ್ಸ್ಪೆಕ್ಟರ್ ಧೃವರಾಜ್ ಅವರ ಗದಗದ ಶಿವಾನಂದ ನಗರದಲ್ಲಿರುವ ಮನೆಗೆ ಲೋಕಾಯುಕ್ತ ಪೊಲೀಸರು ಬರುತ್ತಿದ್ದಂತೆಯೇ ಮನೆಯವರು, ಶಾಕ್ ಆಗಿದ್ದಾರೆ.
ಮನೆಯಲ್ಲಿದ್ದ ಕೆಲ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ. ಇವರಿಗೆ ಬಾಗಲಕೋಟೆ ಹಾಗೂ ಜಮಖಂಡಿಯಲ್ಲಿ ಮನೆಯಿದ್ದು, ಅಪಾರ ಸಂಪತ್ತು ಸಂಪಾದಿಸಿದ್ದಾರೆಂಬ ದೂರುಗಳು ಕೇಳಿಬಂದಿವೆ. ಪೊಲೀಸ್ ಜೀಪ್ ಅನ್ನು ಕೂಡ ತಪಾಸಣೆ ಮಾಡಲಾಗಿದ್ದು, ಡೈರಿ ಹಾಗೂ ಇತರೆ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ.
ಮನೆಯಲ್ಲಿ ನಗದು ಹಣ ಸೇರಿದಂತೆ ಹಲವು ಆಸ್ತಿ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ.
ಬೆಂಗಳೂರಿನ ಹೊರವಲಯದ ಆನೇಕಲ್ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಅಮರ್ನಾಥ್ ಅವರ ನಿವಾಸ ಹಾಗೂ ಕಚೇರಿಗಳ ಮೇಲೆ ದಾಳಿ ನಡೆದಿದೆ ಇನ್ನು ಬಿಬಿಎಂಪಿಯ ಸಹಾಯಕ ಎಂಜಿನಿಯರ್ ಪ್ರಕಾಶ್ ಅವರ ಗೋವಿಂದರಾಜ ನಗರದಲ್ಲಿರುವ ಕಚೇರಿಯ ಮೇಲೆ ದಾಳಿ ನಡೆಸಲಾಗಿದೆ.
ಇವರು ಹಲವು ನಿವೇಶನಗಳು ಹಾಗೂ ವಾಣಿಜ್ಯ ಕೇಂದ್ರಗಳನ್ನು ಹೊಂದಿರುವುದು ಗೊತ್ತಾಗಿದೆ. ಮನೆಯಲ್ಲಿದ್ದ ನಗದು ಹಾಗೂ ಚಿನ್ನಾಭರಣಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ.
ಧಾರವಾಡದಲ್ಲಿ ಮಲಪ್ರಭಾ ಯೋಜನಾ ಪ್ರಾಧಿಕಾರದ ಇಂಜಿನಿಯರ್ ಅಶೋಕ್ ವಾಲ್ಟಂದ್ ಅವರ ನಿವಾಸ ಹಾಗೂ ಕಚೇರಿಗಳ ಮೇಲೆ ಲೋಕಾ ದಾಳಿ ನಡೆದಿದ್ದು, ಇವರ ಬಳಿಯೂ ಕೃಷಿ ಜಮೀನು, ನಿವೇಶನಗಳು ಹಾಗೂ ಅಪಾರ ಸಂಪತ್ತು ಪತ್ತೆಯಾಗಿದೆ.
ಬಲೆಗೆ ಬಿದ್ದ ಅಧಿಕಾರಿಗಳು:
ಕೆ.ಜಿ. ಅಮರ್ನಾಥ್- ಮುಖ್ಯಾಧಿಕಾರಿ, ಆನೇಕಲ್ ಪ.ಪಂ.
ಧೃವರಾಜ್- ಗದಗ ನಗರ ಠಾಣೆ ಇನ್ಸ್ಪೆಕ್ಟರ್
ಮಲ್ಲಿಕಾರ್ಜುನ ಅಲಿಪುರ- ಎಂಜಿನಿಯರ್, ಗ್ರಾಮೀಣ ಅಭಿವೃದ್ಧಿ ಇಲಾಖೆ, ಕಲಬುರಗಿ
ಲತಾಮಣಿ- ಲೆಕ್ಕಾಧಿಕಾರಿ, ಚಿಕ್ಕಮಗಳೂರು ನಗರ ಸಭೆ
ಅಶೋಕ್ ವಾಲ್ಕಂದ್- ಎಂಜಿನಿಯರ್ ಮಲಪ್ರಭಾ ಯೋಜನಾ ಪ್ರಾಧಿಕಾರ
ಡಾ. ಎಸ್. ಪ್ರದೀಪ್ – ಸಾವಯವ ಕೃಷಿ ಸಂಶೋಧನಾ ಇಲಾಖೆ ಸಹಾಯಕ, ನಿರ್ದೇಶಕ
ರಾಮಚಂದ್ರ- ಪಿಡಿಓ ಸಣ್ಣೂರು ಗ್ರಾ.ಪಂ. ಕಲಬುರಗಿ
- ಮರಕ್ಕೆ ಅಪ್ಪಳಿಸಿ ರಸ್ತೆ ವಿಭಜಕ ಹತ್ತಿ ನಿಂತ ಲಾರಿ, ತಪ್ಪಿದ ಅನಾಹುತ
- ಕಾಲ್ನಡಿಗೆಯಲ್ಲಿ ಗಸ್ತು ಕರ್ತವ್ಯ ನಿರ್ವಸುವಂತೆ ಪೊಲೀಸರಿಗೆ ಸೀಮಂತ್ಕುಮಾರ್ಸಿಂಗ್ ಸೂಚನೆ
- ಬೆಂಗಳೂರಲ್ಲಿ ಪುಂಡರ ಹಾವಳಿ ಹೆಚ್ಚಳ : ದೌರ್ಜನ್ಯ ಸಹಿಸುವುದಿಲ್ಲ ಎಂದ ಗೃಹ ಸಚಿವ ಪರಮೇಶ್ವರ್
- ಜು.7ರಂದು ಸಾಮೂಹಿಕ ಪ್ರತಿಭಟನೆಗೆ ಮಹಾನಗರ ಪಾಲಿಕೆಗಳ ನೌಕರರ ನಿರ್ಧಾರ
- ಸಿದ್ದರಾಮಯ್ಯನವರಿಗೆ ಕಿಂಚಿತ್ತಾದರೂ ಮಾನ-ಮರ್ಯಾದೆ ಇದ್ರೆ ತಕ್ಷಣವೇ ರಾಜೀನಾಮೆ ನೀಡಲಿ : ವಿಜಯೇಂದ್ರ ಸವಾಲು