Wednesday, June 25, 2025
Homeರಾಜ್ಯಸರ್ಕಾರದ ವಿರುದ್ಧ ಮತ್ತೆ ಗುಡುಗಿದ ಶಾಸಕ ರಾಜು ಕಾಗೆ

ಸರ್ಕಾರದ ವಿರುದ್ಧ ಮತ್ತೆ ಗುಡುಗಿದ ಶಾಸಕ ರಾಜು ಕಾಗೆ

MLA Raju Kage Speak against the government again

ಬೆಂಗಳೂರು,ಜೂ.24- ಅಧಿಕಾರಿಗಳಿಗೆ ಮನ್ನಣೆ ನೀಡಲಾಗುತ್ತಿದೆ. ಶಾಸಕರನ್ನು ಕಡೆಗಣಿಸಲಾಗುತ್ತಿದೆ, ಸಿಎಂ, ಡಿಸಿಎಂ, ಸಚಿವರುಗಳಿಗೆ ಮನವಿ ಕೊಟ್ಟರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಹೀಗಾಗಿ ಯಾವ ಪುರುಷಾರ್ಥಕ್ಕೆ ನಾನು ಶಾಸಕನಾಗಿರಬೇಕು ಎಂದು ನೊಂದು ರಾಜೀನಾಮೆ ನೀಡುವ ಮಾತುಗಳನ್ನಾಡಿದೆ ಎಂದು ಕಾಗವಾಡ ಕ್ಷೇತ್ರದ ಶಾಸಕ ರಾಜು ಕಾಗೆ ಪುನರುಚ್ಚರಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ ಮತಕ್ಷೇತ್ರ ಐನಾಪುರ ಪಟ್ಟಣ ಪಂಚಾಯಿತಿಯಲ್ಲಿ ಸಿಸಿ ರಸ್ತೆಯ ಗುದ್ದಲಿಪೂಜೆಗೆ ಹೋಗಿದ್ದೆ. ಅಲ್ಲೇ ಮತ್ತೊಂದು ರಸ್ತೆಗೆ ಮಂಜೂರಾತಿ ನೀಡಿ ವರ್ಷವಾಗಿದೆ. ಕೆಲಸ ಆಗಿರಲಿಲ್ಲ. ಗುತ್ತಿಗೆದಾರರನ್ನು ಕೇಳಿದಾಗ ಹಣ ಇಲ್ಲ ಎಂದಿದ್ದರು. ಮುಖ್ಯಮಂತ್ರಿಯವರ ವಿಶೇಷ ಅನುದಾನ 25 ಕೋಟಿ ರೂ.ಗಳಲ್ಲಿ, 12 ಕೋಟಿ ರೂ. ವೆಚ್ಚದ ರಸ್ತೆ ನಿರ್ಮಾಣಕ್ಕೆ ನಿರ್ಧರಿಸಲಾಗಿತ್ತು. ಅಲ್ಲಿಯೂ ಅಧಿಕಾರಿಗಳು ತಕರಾರು ತೆಗೆದರು.

ಜೆಲ್ಲಿ ರಸ್ತೆಗೆ ಹಣ ನೀಡುವುದಿಲ್ಲ, ಮಟ್ಲಿಂಗ್‌ ಹಾಸ್ಪಾಲ್‌್ಟ ಮಾಡಬೇಕು ಎಂದು ಹೇಳಿದರು. ಶಾಸಕರು ಪ್ರಸ್ತಾಪಿಸಿದ ಸಮುದಾಯ ಭವನಗಳಿಗೆ ನಿಬಂಧನೆಗಳನ್ನು ಹಾಕದೇ ಮಂಜೂರಾತಿ ನೀಡಿ ಎಂದು ನಿಯಮಗಳಲ್ಲಿ ಸೂಚಿಸಲಾಗಿದೆ. ಮುಖ್ಯಮಂತ್ರಿಯವರೂ ಆದೇಶ ಮಾಡಿದ್ದಾರೆ. 2024 ಏಪ್ರಿಲ್‌ 1 ರಂದು ಗ್ರಾಮೀಣ ಭಾಗದಲ್ಲಿ ಬೇಡಿಕೆ ಇರುವ ಕಡೆಗೆ 72 ಸಮುದಾಯ ಭವನಗಳನ್ನು 13 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಈವರೆಗೂ ಅದಕ್ಕೆ ವರ್ಕ್‌ಕಾರ್ಡ್‌ ಅನ್ನು ನೀಡಿಲ್ಲ. ನಮ ಶಾಸಕ ಸ್ಥಾನ ಮುಗಿದ ಮೇಲೆ ಕಾರ್ಯಾದೇಶ ಕೊಡುತ್ತಾರೆಯೇ ಎಂದು ಖಾರವಾಗಿ ಪ್ರಶ್ನಿಸಿದರು.

ಬಸವೇಶ್ವರ ಏತ ನೀರಾವರಿಗೆ 200 ಕೋಟಿ ರೂ. ಬೇಕು. 100 ಕೋಟಿ ರೂ. ಗುತ್ತಿಗೆದಾರರಿಗೆ ಬಿಡುಗಡೆಯಾಗಬೇಕಿದೆ. ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಯವರ ಬಳಿ ಈ ವಿಚಾರವಾಗಿ ನೂರು ಬಾರಿ ಕೇಳಿದ್ದೇನೆ. ಪ್ರಯೋಜನವಾಗಿಲ್ಲ. ಅಧಿಕಾರಿಗಳು ಸಂಬಳ ಪಡೆದು ಕಚೇರಿಯಲ್ಲಿ ಕುಳಿತುಕೊಳ್ಳುತ್ತಾರೆ. ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿಲ್ಲ. ಆಡಳಿತ ವ್ಯವಸ್ಥೆ ಸಂಪೂರ್ಣ ಹಾಳಾಗಿದೆ ಎಂದರು.

ಇಂತಹ ಹೊಲಸು ವ್ಯವಸ್ಥೆಯಲ್ಲಿ ಶಾಸಕರಾಗಿದ್ದವರು ಏನು ಮಾಡಬೇಕು?, ರಾಜೀನಾಮೆ ನೀಡುವುದು ಒಳ್ಳೆಯದು ಎಂದು ನಾನು ನೊಂದು ಹೇಳಿದ್ದೆ. ಅದಕ್ಕೆ ನನ್ನ ಕ್ಷೇತ್ರದ ಜನ ಪ್ರತಿಕ್ರಿಯಿಸಿದ್ದು, ನೀವು ರಾಜೀನಾಮೆ ನೀಡುವ ಅಗತ್ಯವಿಲ್ಲ. ನಾವು 10 ಸಾವಿರ ಜನ ಬರುತ್ತೇವೆ. ವಿಧಾನಸೌಧದ ಮುಂದೆ ಹೋಗಿ ಧರಣಿ ಮಾಡೋಣ ಎಂದಿದ್ದಾರೆ. ಜನ ಬರುವುದು ಬೇಡ, ನಾನೇ ಸಮರ್ಥನಿದ್ದೇನೆ. ಸಮಸ್ಯೆ ಬಗೆಹರಿಸುತ್ತೇನೆ ಎಂದು ಸಮಾಧಾನ ಪಡಿಸುವುದಾಗಿ ತಿಳಿಸಿದರು.

ಆಡಳಿತ ವ್ಯವಸ್ಥೆ ಚುರುಕಾಗಬೇಕು. ಶಾಸಕರಷ್ಟೇ ಅಲ್ಲ, ಜನಸಾಮಾನ್ಯರ ಕೆಲಸಗಳು ತ್ವರಿತವಾಗಿ ಆಗಬೇಕು. ಖಾಸಗಿ ಶಾಲೆಗಳಿಗೆ ಅಗ್ನಿ ಅವಘಡಗಳ ಸುರಕ್ಷತಾ ಪರಿಕರ ಅಳವಡಿಸಬೇಕು ಎಂದು ಸೂಚಿಸಲಾಗಿದೆ. ಕೆಲಸ ಮುಗಿದು ಒಂದೆರೆಡು ವರ್ಷವಾದರೂ ಎನ್‌ಓಸಿ ಕೊಡುತ್ತಿಲ್ಲ. ಯಾವುದೇ ಕೆಲಸವಾದರೂ ಮೂರ್ನಾಲ್ಕು ದಿನಗಳಲ್ಲಿ ಇತ್ಯರ್ಥವಾಗುವಂತಹ ಆಡಳಿತ ಜಾರಿಗೆ ಬರಬೇಕು ಎಂದು ರಾಜು ಕಾಗೆ ಒತ್ತಾಯಿಸಿದರು.

ಸಚಿವರ ವಿರುದ್ಧ ಆಕ್ರೋಶ :
ಜಿಲ್ಲಾ ಸಚಿವರು ಶಾಸಕರನ್ನು ಚಪ್ರಾಸಿಗಳಂತೆ ನೋಡುತ್ತಿದ್ದಾರೆ. ಯಾವುದಾದರೂ ಅರ್ಜಿ ಕೊಟ್ಟರೆ ಅದನ್ನು ಓದಿ ಕೆಲಸವಾಗುತ್ತದೆ ಅಥವಾ ಇಲ್ಲ ಎಂದು ಹೇಳುವ ಸೌಜನ್ಯ ಇಲ್ಲ. ಬೇರೆ ಯಾರ ಜೊತೆಯಲ್ಲೋ ಮಾತನಾಡಿಕೊಂಡು, ಕಾಗದ ಕೈಯಲ್ಲಿ ಹಿಡಿದು ತಮ ಪಾಡಿಗೆ ಹೋಗುತ್ತಾರೆ. ನಾವು ಸಾರ್‌, ಸಾರ್‌ ಎಂದು ಅವರ ಹಿಂದೆ ಹೋಗಬೇಕು. ನಮಗೇನೂ ಮರ್ಯಾದೆ ಇಲ್ಲವೇ? ಎಂದು ಪ್ರಶ್ನಿಸಿದರು.

ನಾನು ಜಿ.ಪಂ. ಸದಸ್ಯನಾಗಿ, ಅಧ್ಯಕ್ಷನಾಗಿ, ಶಾಸಕನಾಗಿ ಕೆಲಸ ಮಾಡಿದ್ದೇನೆ. 8 ಚುನಾವಣೆ ಎದುರಿಸಿ 5 ರಲ್ಲಿ ಗೆದ್ದಿದ್ದೇನೆ. ನಮ ತಂದೆ ದೇವೇಗೌಡರ ಆಪ್ತರಾಗಿದ್ದವರು. ಊರಿನಲ್ಲಿ ಒಬ್ಬ ಭಿಕ್ಷಕನಿಗೂ ನಾವು ಮರ್ಯಾದೆ ಕೊಡುತ್ತೇವೆ. ಸಚಿವರು ನಮನ್ನು ಕಡೆಗಣ್ಣಿನಿಂದ ನೋಡುತ್ತಿದ್ದಾರೆ ಎಂದು ಆರೋಪಿಸಿದರು.

ಮುಖ್ಯಮಂತ್ರಿ ಅಥವಾ ಉಪಮುಖ್ಯಮಂತ್ರಿಯವರ ಬಳಿ ದೂರು ಹೇಳಬೇಕಿದ್ದರೆ ಬಹಿರಂಗವಾಗಿ ಮಾತನಾಡಬಾರದು ಎಂದು ಹಲವರು ಹೇಳುತ್ತಿದ್ದಾರೆ. ನನಗೆ ಕಂದಾಯ ಇಲಾಖೆಯ ಕಾರ್ಯದರ್ಶಿ ರಾಜೇಂದ್ರ ಕಟಾರಿಯಾ ಅಪಮಾನ ಮಾಡಿದ್ದರು. ಅವರ ವಿರುದ್ಧ ವಿಧಾನಸಭೆಯಲ್ಲಿ ಹಕ್ಕುಚ್ಯುತಿ ತಂದಿದ್ದೆ.

ಚರ್ಚೆಯೂ ಆಗಿತ್ತು. ಸದರಿ ಅಧಿಕಾರಿಯನ್ನು ವರ್ಗಾವಣೆ ಮಾಡಲು 60 ಮಂದಿ ಶಾಸಕರು ಮುಖ್ಯಮಂತ್ರಿಯವರಿಗೆ ಪತ್ರ ಕೊಟ್ಟಿದ್ದರು. ಆದರೆ ಯಾವ ಕ್ರಮವೂ ಆಗಲಿಲ್ಲ. ಇಲ್ಲಿ ಅಧಿಕಾರಿ ಮುಖ್ಯವೋ, ಶಾಸಕರೋ? ಎಂಬ ಪ್ರಶ್ನೆ ಉದ್ಭವಿಸುತ್ತದೆ. ನಮಗೇನೂ ಮಾನ, ಮರ್ಯಾದೆ ಇಲ್ಲವೇ? ಎಂದು ಆಕ್ರೋಶ ವ್ಯಕ್ತಪಡಿಸಿದರು.

RELATED ARTICLES

Latest News