ಬೆಂಗಳೂರು,ಜೂ.27- ಸಿಸಿ ಮತ್ತು ಓಸಿ ಇಲ್ಲದ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ಮತ್ತು ಕುಡಿಯುವ ನೀರು, ಒಳಚರಂಡಿ ವ್ಯವಸ್ಥೆ ಕಲ್ಪಿಸಬಾರದೆಂಬ ನಿಯಮಕ್ಕೆ ನಿರ್ಧಿಷ್ಟ ಅವಧಿಯನ್ನು ನಿಗದಿಪಡಿಸಿ ಪರಿಹಾರ ಸೂತ್ರಗಳನ್ನು ಜಾರಿಗೊಳಿಸುವಂತೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಮತ್ತಿತರನ್ನು ಬಿಜೆಪಿ ಮುಖಂಡ ಎನ್.ಆರ್.ರಮೇಶ್ ಒತ್ತಾಯಿಸಿದ್ದಾರೆ.
ಸುಪ್ರೀಂ ಕೋರ್ಟ್ ಆದೇಶದಂತೆ ಜಾರಿಯಾಗಿರುವ ಈ ನಿರ್ಧಾರ ಕಳೆದ ಆರೇಳು ತಿಂಗಳ ಅವಧಿಯಲ್ಲಿ ನಿರ್ಮಿಸಿರುವ ಸುಮಾರು ಹತ್ತು ಲಕ್ಷಕ್ಕೂ ಹೆಚ್ಚು ಅನಧಿಕೃತ ಕಟ್ಟಡಗಳ ಮಾಲೀಕರು ತೀವ್ರ ಸಂಕಷ್ಟಕ್ಕೊಳಗಾಗಿದ್ದಾರೆ. ಅದರಲ್ಲೂ ನಗರದಲ್ಲಿ ಬಹುತೇಕ ರೆವಿನ್ಯೂ ಬಡಾವಣೆಗಳೇ ಹೆಚ್ಚಾಗಿರುವುದರಿಂದ ಸಾಕಷ್ಟು ತೊಂದರೆ ಎದುರಾಗಿದೆ. ಹೀಗಾಗಿ ಸಮರ್ಪಕರ ಅಧ್ಯಯನ ನಡೆಸಿದ ನಂತರವಷ್ಟೇ ಸುಪ್ರೀಂ ಆದೇಶ ಪಾಲನೆಗೆ ಮುಂದಾಗುವುದು ಸೂಕ್ತ ಎಂದು ಅವರು ಪತ್ರದಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಅಥವಾ ಬಿಡಿಎ ಬಡಾವಣೆಗಳಲ್ಲಿ ಎ ಖಾತಾ ಇರುವ ಸ್ವತ್ತುಗಳಲ್ಲಿ ನಕ್ಷೆ ಮಂಜೂರಾತಿ ಪಡೆದು, ವ್ಯತಿರಿಕ್ತ ಕಟ್ಟಡ ನಿರ್ಮಾಣವಾಗಿರುವ ಕಟ್ಟ ಡಗಳಿಗೆ ಬಿಬಿಎಂಪಿ ಅಥವಾ ಬಿಡಿಎ ಗಳಲ್ಲಿರುವ ನಗರ ಯೋಜನೆ ಇಲಾಖೆಗಳಿಂದ ಸಿಸಿ ಮತ್ತು ಓಸಿ ನೀಡುವ ಹಾಗಿಲ್ಲ. ಹಾಗೆಯೇ ಬಿ ವಹಿ ಇರುವ ಸ್ವತ್ತುಗಳಲ್ಲಿ ನಿರ್ಮಿಸುವ ಕಟ್ಟಡಗಳಿಗೆ ಸಹಜವಾಗಿಯೇ ನಕ್ಷೆ ಮಂಜೂರಾತಿ ದೊರೆಯಲ್ಲ. ಇಂತಹ ಕಟ್ಟಡಗಳಿಗೆ ಸಿಸಿ ಅಥವಾ ಓಸಿ ನೀಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ.
ಆದರೂ ಭ್ರಷ್ಟ ಅಧಿಕಾರಿಗಳು ಲಂಚಪಡೆದು ಕುಡಿಯುವ ನೀರಿನ ಒಳಚರಂಡಿ ಸಂಪರ್ಕಗಳನ್ನು ನೀಡುತ್ತಿದ್ದರು.ಇಂತಹ ಭ್ರಷ್ಟ ಅಧಿಕಾರಿಗಳೇ ಇದೀಗ ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ಪಾಲಿಸುವ ನೆಪದಲ್ಲಿ ಜನರಿಂದ ಮ ತ್ತಷ್ಟು ಹಣ ಸುಲಿಗೆ ಮಾಡಲು ಮುಂದಾಗುತ್ತಿದ್ದಾರೆ ಹೀಗಾಗಿ ಇನ್ನು ಮುಂದೆ ಹೊಸದಾಗಿ ಕಟ್ಟಡ ನಿರ್ಮಾಣ ಮಾಡುವವರು ಕಡ್ಡಾಯವಾಗಿ ಸ್ಥಳೀಯ ಸಂಸ್ಥೆಗಳಿಂದ ಇಲ್ಲವೇ ಸಕ್ಷಮ ಪ್ರಾಧಿಕಾರದಿಂದ ನಕ್ಷೆ ಮಂಜೂರಾತಿ ಪಡೆದ ನಂತರವಷ್ಟೇ ಕಟ್ಟಡ ನಿರ್ಮಾಣಕ್ಕೆ ಮುಂದಾಗಬೇಕೆಂಬ ಎಚ್ಚರಿಕೆಯ ಷರತ್ತುಗಳನ್ನು ವಿಧಿಸಿ ಆದೇಶ ಹೊರಡಿಸುವುದು ಸೂಕ್ತ ಎಂದು ಅವರು ಸಲಹೆ ನೀಡಿದ್ದಾರೆ.
ಈ ಸಂಬಂಧ ಕಾನೂನು ತಜ್ಞರೊಡನೆ ಚರ್ಚಿಸಿ ಸೂಕ್ತವಾದ ಪರಿಹಾರದ ಸೂತ್ರಗಳನ್ನು ತಾತ್ಕಾಲಿಕವಾಗಿ ಅಥವಾ ನಿರ್ಧಿಷ್ಟ ಅವಧಿಯನ್ನು ನಿಗದಿಪಡಿಸಿ ಜಾರಿಗೊಳಿಸುವ ಮೂಲಕ ಸಾರ್ವಜನಿಕರ ಸಂಕಷ್ಟಗಳನ್ನು ಪರಿಹರಿಸಲು ಮುಂದಾಗಬೇಕೆಂದು ಅವರು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ. ಕೆ. ಶಿವಕುಮಾರ್, ಬಿಬಿಎಂಪಿ ಮುಖ್ಯ ಆಯುಕ್ತ ಮಹೇಶ್ವರ ರಾವ್, ಆಡಳಿತಾಧಿಕಾರಿ ತುಷಾರ್ ಗಿರಿನಾಥ್, ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ಅಧ್ಯಕ್ಷರಿಗೆ ಪತ್ರ ಬರೆದು ಮನವಿ ಮಾಡಿಕೊಂಡಿದ್ದಾರೆ.
- ಬೆಂಗಳೂರು : ಕಾರು ಡಿಕ್ಕಿಯಾಗಿ ಏರೋನಾಟಿಕಲ್ ಎಂಜಿನಿಯರ್ ದುರಂತ ಸಾವು
- ಬಸವರಾಜ ಬೊಮಾಯಿ ವಿರುದ್ಧದ ಎಫ್ಐಆರ್ ರದ್ದು
- ಸಾರ್ವಜನಿಕರ ಸುರಕ್ಷತೆಗಾಗಿ ಮನೆ-ಮನೆಗೆ ಬರಲಿದ್ದಾರೆ ಪೊಲೀಸರು
- ಮೈದುಂಬಿದ ಕೆಆರ್ಎಸ್ ಜಲಾಶಯ, ನಾಳೆ ಸಿಎಂ ಬಾಗಿನ ಅರ್ಪಣೆ
- ಚಾಮುಂಡಿ ಬೆಟ್ಟದಲ್ಲಿ ಆಷಾಢ ಸಂಭ್ರಮ, ಅವ್ಯವಸ್ಥೆಗೆ ಭಕ್ತರ ಆಕ್ರೋಶ