Friday, June 27, 2025
Homeರಾಜಕೀಯ | Politicsರಾಜಣ್ಣ 'ರಾಜಕೀಯ ಕ್ರಾಂತಿ' ಹೇಳಿಕೆಗೆ ಮಿಶ್ರ ಪ್ರತಿಕ್ರಿಯೆ

ರಾಜಣ್ಣ ‘ರಾಜಕೀಯ ಕ್ರಾಂತಿ’ ಹೇಳಿಕೆಗೆ ಮಿಶ್ರ ಪ್ರತಿಕ್ರಿಯೆ

Rajanna's 'political revolution' statement gets mixed response

ಬೆಂಗಳೂರು, ಜೂ.27- ರಾಜಕೀಯ ಕ್ರಾಂತಿಯ ಕುರಿತು ಸಹಕಾರ ಸಚಿವ ಕೆ.ಎನ್.ರಾಜಣ್ಣ ನೀಡಿರುವ ಹೇಳಿಕೆಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸೆಪ್ಟೆಂಬರ್ ನಂತರ ಯಾವ ರೀತಿ ಕ್ರಾಂತಿಯಾಗುತ್ತದೆ ಎಂದು ನನಗೆ ಗೊತ್ತಿಲ್ಲ. ರಾಜಣ್ಣ ಅವರ ಜೊತೆ ಚರ್ಚೆ ಮಾಡಿ ಪ್ರತಿಕ್ರಿಯೆ ನೀಡುತ್ತೇನೆ.

ಪವರ್ ಸೆಂಟರ್‌ಗಳ ಬಗ್ಗೆ ಕೂಡ ನಾನು ಪ್ರತಿಕ್ರಿಯಿಸುವುದಿಲ್ಲ, ರಾಜಣ್ಣ ಅವರೇ ಉತ್ತರ ನೀಡಬೇಕೆಂದು ಸಿಡಿಮಿಡಿ ವ್ಯಕ್ತಪಡಿಸಿದರು. ಮತ್ತೊಂದೆಡೆ ಗೃಹಸಚಿವ ಡಾ.ಜಿ.ಪರಮೇಶ್ವರ್, ಯಾವ ಮಾಹಿತಿ ಆಧರಿಸಿ ರಾಜಣ್ಣ ಹೇಳಿದ್ದಾರೋ ಗೊತ್ತಿಲ್ಲ. ಜವಾಬ್ದಾರಿಯುತ ಸ್ಥಾನದಲ್ಲಿರುವ ರಾಜಣ್ಣ ಸೂಕ್ತ ಮಾಹಿತಿ ಇಲ್ಲದೇ ಆ ರೀತಿ ಹೇಳಲು ಸಾಧ್ಯವಿಲ್ಲ.

ಯಾವುದೋ ಮಾಹಿತಿ ಇರಬಹುದು ಎಂದು ಹೇಳುವ ಮೂಲಕ ಮತ್ತಷ್ಟು ಕುತೂಹಲ ಕೆರಳಿಸಿದರು. ರಾಜಕೀಯ ಬದಲಾವಣೆಗಳ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಗುಪ್ತದಳ ಮುಖ್ಯಮಂತ್ರಿಯವರ ಬಳಿ ಇದೆ, ನನ್ನ ಬಳಿ ಇಲ್ಲ. ಆದರೂ ನನಗೆ ಯಾವುದೇ ಮಾಹಿತಿ ಇಲ್ಲ. ಸಚಿವರಾದ ಕೆ.ಎನ್.ರಾಜಣ್ಣ, ಸತೀಶ್ ಜಾರಕಿಹೊಳಿ ತಮಗೆ ತಿಳಿದ ಹಾಗೆ ಹೇಳಿಕೆಗಳನ್ನು ನೀಡಿದ್ದಾರೆ. ನನ್ನ ಬಳಿ ಅಂತಹ ಯಾವುದೇ ಮಾಹಿತಿಗಳಿಲ್ಲ ಎಂದಿದ್ದಾರೆ.

ನಿನ್ನೆ ರಾತ್ರಿ ನಾನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದೇನೆ. ನಾನು ಮತ್ತು ಅವರು ಪದೇಪದೇ ಭೇಟಿಯಾಗುತ್ತಲೇ ಇರುತ್ತೇವೆ. ಅದರಲ್ಲೇನೂ ವಿಶೇಷ ಇರುವುದಿಲ್ಲ. ಪೊಲೀಸ್ ಇಲಾಖೆಯಲ್ಲಿನ ಅನೇಕ ವಿಚಾರಗಳ ಬಗ್ಗೆ ಚರ್ಚೆ ಮಾಡುವ ಸಲುವಾಗಿ ದಿನವು ಭೇಟಿ ಮಾಡುತ್ತಲೇ ಇರುತ್ತೇನೆ. ಪೊಲೀಸ್‌ ಇಲಾಖೆಯ ವಾರ್ಷಿಕ ಸಮ್ಮೇಳನ ಇಂದು ನಡೆಯಲಿದ್ದು, ಅದರ ಕುರಿತು ಮುಖ್ಯಮಂತ್ರಯವರಿಗೆ ಮಾಹಿತಿ ನೀಡಿದ್ದೇನೆ. ಇದರಲ್ಲಿ ರಾಜಕೀಯವಾಗಲೀ, ವಿಶೇಷವಾಗಲೀ ಏನೂ ಇಲ್ಲ ಎಂದಿದ್ದಾರೆ.

ರಾಜಣ್ಣ ಅವರ ಹೇಳಿಕೆಗಳು ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನವನ್ನೇ ಸೃಷ್ಟಿಸಿದೆ. ಸಚಿವರು, ಪಕ್ಷದ ಅಧ್ಯಕ್ಷರ ಬದಲಾವಣೆಯ ಕುರಿತು ರಾಜಣ್ಣ ಮಾತನಾಡಿದ್ದು, ಕರ್ನಾಟಕದಲ್ಲಿರುವ ಹೆಚ್ಚುವರಿ ಪವರ್‌ಸೆಂಟರ್‌ಗಳಿಗೆ ಕಡಿವಾಣ ಬೀಳಲಿದೆ ಎಂದು ರಾಜಣ್ಣ ಹೇಳಿದರು. ಇದು ಕಾಂಗ್ರೆಸ್ ಸರ್ಕಾರದಲ್ಲಿ ಯಾವುದೂ ಸರಿ ಇಲ್ಲ ಎಂಬ ವ್ಯಾಖ್ಯಾನಗಳಿಗೆ ಇಂಬು ನೀಡುವಂತಿದೆ.

ಕೆಂಪೇಗೌಡ ಪ್ರಶಸ್ತಿ ಆಯ್ಕೆಯಲ್ಲಿ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳ ನಡುವೆ ಭಿನ್ನಾಭಿಪ್ರಾಯಗಳು ಕಂಡುಬಂದಿದ್ದು, ಸಿದ್ದರಾಮಯ್ಯ ಪ್ರಶಸ್ತಿ ಪ್ರದಾನ ಸಮಾರಂಭದಿಂದ ದೂರ ಉಳಿಯುವ ಸಾಧ್ಯತೆ ಇದೆ.

RELATED ARTICLES

Latest News