Saturday, June 28, 2025
Homeರಾಜ್ಯನಾಡಿನೆಲ್ಲೆಡೆ ಕೆಂಪೇಗೌಡರ ಜನ್ಮದಿನೋತ್ಸವ ಸಂಭ್ರಮ

ನಾಡಿನೆಲ್ಲೆಡೆ ಕೆಂಪೇಗೌಡರ ಜನ್ಮದಿನೋತ್ಸವ ಸಂಭ್ರಮ

Kempegowda's birthday celebrated across the country

ಬೆಂಗಳೂರು,ಜೂ.27- ನಾಡಪ್ರಭು ಕೆಂಪೇಗೌಡರ 516ನೇ ಜನದಿನೋತ್ಸವ ಅಂಗವಾಗಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್‌ರವರು ಇಂದು ಸರಣಿ ಕಾರ್ಯ ಕ್ರಮಗಳಲ್ಲಿ ತೊಡಗಿಸಿಕೊಂಡಿದ್ದು, ಬೆಂಗಳೂರು ಸೇರಿದಂತೆ ಹಲವು ಕಡೆಗಳಲ್ಲಿರುವ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿದ್ದಾರೆ.

ನಾಡಪ್ರಭು ಕೆಂಪೇಗೌಡರ ಜಯಂತಿಯನ್ನು ಸಂಭ್ರಮ ಹಾಗೂ ಸಡಗರದಿಂದ ನಾಡಿನಾದ್ಯಂತ ಆಚರಿಸಲಾಗಿದೆ. ಸರ್ಕಾರಿ ಕಚೇರಿ, ಶಾಲಾ-ಕಾಲೇಜುಗಳಲ್ಲಿ ಕೆಂಪೇಗೌಡರ ಪ್ರತಿಮೆಗೆ ಪೂಜೆ ಸಲ್ಲಿಸಿ ನಮನ ಅರ್ಪಿಸಲಾಗಿದೆ. ಬೆಂಗಳೂರು ನಿರ್ಮಾತೃ ಹಾಗೂ ದಕ್ಷ ಆಡಳಿತಗಾರ ಕೆಂಪೇಗೌಡರ ಸರಣೆಯ ಮೂಲಕ ಅರ್ಥಪೂರ್ಣ ಆಚರಣೆಗಳು ನಡೆದವು.

ಬೆಂಗಳೂರು ಸೇರಿದಂತೆ ಹೊರವಲಯಗಳಲ್ಲಿ 7 ಕಡೆಗಳಿಂದ ಪುರಜ್ಯೋತಿ ಯಾತ್ರೆ ನಡೆಯಿತು. ನಗರದ ಹಲವೆಡೆ ಕೆಂಪೇಗೌಡರ ಪುತ್ಥಳಿ ಹಾಗೂ ಭಾವಚಿತ್ರಗಳ ಮೆರವಣಿಗೆ ನಡೆದಿದೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ನಿರ್ಮಿಸಲಾಗಿರುವ ಐತಿಹಾಸಿಕ ಬೃಹತ್‌ ಪ್ರತಿಮೆಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಮಾಲಾರ್ಪಣೆ ಮಾಡಿದರು. ಶ್ರೀ ಆದಿ ಚುಂಚನಗಿರಿ ಸಂಸ್ಥಾನದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಸಚಿವರಾದ ಕೆ.ಎಚ್‌.ಮುನಿಯಪ್ಪ, ಕೃಷ್ಣ ಭೈರೇಗೌಡ ಮತ್ತಿತರರು ಉಪಸ್ಥಿತರಿದ್ದರು.

ಮಾಲಾರ್ಪಣೆ ಮಾಡಿದ ಬಳಿಕ ಮಾತನಾಡಿದ ಡಿ.ಕೆ.ಶಿವಕುಮಾರ್‌, ವಿಮಾನನಿಲ್ದಾಣದಲ್ಲಿ ಹೊಸದಾಗಿ ನಿರ್ಮಿಸಲಾಗಿರುವ ಪ್ರತಿಮೆಗೆ ಈ ವರ್ಷದಿಂದ ಮಾಲಾರ್ಪಣೆ ಮಾಡುವ ಪರಿಪಾಠವನ್ನು ಆರಂಭಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಬೆಂಗಳೂರಿನ ಉಸ್ತುವಾರಿ ಇರುವವರು ಕೆಂಪೇಗೌಡರ ಜಯಂತಿ ಸಂದರ್ಭದಲ್ಲಿ ಇಲ್ಲಿನ ಪ್ರತಿಮೆಗೆ ಗೌರವ ಸಲ್ಲಿಸಬೇಕು. ನಂತರ ಉಳಿದ ಕಾರ್ಯಕ್ರಮಗಳನ್ನು ಆರಂಭಿಸಬೇಕು ಎಂಬ ರೂಢಿಯನ್ನು ಆರಂಭಿಸಲಾಗುತ್ತಿದೆ ಎಂದರು.

ಅಂತಾರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಕೆಂಪೇಗೌಡ ಥೀಂ ಪಾರ್ಕ್‌ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಸಚಿವ ಕೃಷ್ಣಭೈರೇಗೌಡರಿಗೆ ಜವಾಬ್ದಾರಿ ವಹಿಸಲಾಗಿದ್ದು, 2-3 ತಿಂಗಳಲ್ಲಿ ಎಲ್ಲಾ ಸಮಸ್ಯೆಯನ್ನು ಬಗೆಹರಿಸಲಿದ್ದಾರೆ. ಈವರೆಗೂ ಅದಕ್ಕಾಗಿ ಹಣಕಾಸು ಬಿಡುಗಡೆಯಾಗಿರಲಿಲ್ಲ. ಯೋಜನೆ ಸೇರಿದಂತೆ ಇತರ ವಿಚಾರಗಳನ್ನು ಶೀಘ್ರವೇ ಇತ್ಯರ್ಥಪಡಿಸಲಾಗುವುದು ಎಂದರು.

ಅಂತಾರಾಷ್ಟ್ರೀಯ ವಿಮಾನನಿಲ್ದಾಣದ ಬಳಿ ನಿರ್ಮಿಸಲಾಗಿರುವ ಬೃಹತ್‌ ಪ್ರತಿಮೆಯನ್ನು ಸಂರಕ್ಷಿಸುವುದು ಸರ್ಕಾರ ಮತ್ತು ವಿಮಾನನಿಲ್ದಾಣ ಅಭಿವೃದ್ಧಿ ಪ್ರಾಧಿಕಾರದ ಜವಾಬ್ದಾರಿಯಾಗಿದೆ. ಇನ್ನು ಮುಂದೆ ಪ್ರತಿವರ್ಷವೂ ಇಲ್ಲಿಂದಲೇ ಕೆಂಪೇಗೌಡ ಜಯಂತಿಗೆ ಚಾಲನೆ ನೀಡಲಾಗುವುದು ಎಂದು ಹೇಳಿದರು.

ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರಕ್ಕೆ 5 ಎಕರೆ ಜಮೀನನ್ನು ಕಂದಾಯ ಇಲಾಖೆಯಿಂದ ಮಂಜೂರು ಮಾಡಲಾಗಿದೆ. ಅಲ್ಲಿ ಭವ್ಯ ಕಟ್ಟಡ ನಿರ್ಮಾಣ ಸೇರಿದಂತೆ ವಿವಿಧ ಯೋಜನೆಗಳನ್ನು ಕೈಗೊಳ್ಳಲಾಗುವುದು ಎಂದರು.ಬೆಂಗಳೂರಿನ ವಾತಾವರಣ ಹಾಗೂ ಸ್ಥಾನಮಾನಗಳನ್ನು ಮನಗಂಡು ಕೆಂಪೇಗೌಡರು ನಗರ ನಿರ್ಮಾಣ ಮಾಡಿದರು. ಇಲ್ಲದೇ ಹೋದರೆ ನಾವ್ಯಾರೂ ಇಲ್ಲಿರುತ್ತಿರಲಿಲ್ಲ ಎಂದು ಡಿ.ಕೆ.ಶಿವಕುಮಾರ್‌ ಹೇಳಿದರು.

ಬಳಿಕ ಬಿಬಿಎಂಪಿಯ ಆವರಣದಲ್ಲಿರುವ ಕೆಂಪೇಗೌಡರ ಪ್ರತಿಮೆಗೆ ಹಾಗೂ ಲಕ್ಷ್ಮೀದೇವಿ ಅವರ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದರು. ವಿಧಾನಸೌಧದ ಮುಂದಿರುವ ಕೆಂಪೇಗೌಡರ ಪ್ರತಿಮೆಗೆ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳಿಬ್ಬರೂ ಪುಷ್ಪನಮನ ಸಲ್ಲಿಸಿದ್ದಾರೆ. ಬೆಂಗಳೂರಿನ 7 ಭಾಗಗಳಿಂದಲೂ ಆಗಮಿಸಿರುವ ಪುರಜ್ಯೋತಿಗಳನ್ನು ಸುಮನಹಳ್ಳಿ ಸರ್ಕಲ್‌ ಬಳಿ ಡಿ.ಕೆ.ಶಿವಕುಮಾರ್‌ ಸ್ವೀಕರಿಸಿದರು.

ಇದೇ ವೇಳೆ ಕೆಂಪೇಗೌಡ ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದರು. ಬಾಬು ಜಗಜೀವನರಾಮ್‌ ಭವನದಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೂಡ ವಿವಿಧ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದ್ದರು.

ನಾಡಹಬ್ಬದ ರೀತಿ ಕೆಂಪೇಗೌಡ ಜಯಂತಿ ಆಚರಣೆ
ಬೆಂಗಳೂರು, ಜೂ.27- ನಾಡ ಪ್ರಭು ಕೆಂಪೇಗೌಡರ 516ನೇ ಜನ ದಿನಾಚರಣೆಯನ್ನು ನಗರದಲ್ಲಿ ನಾಡ ಹಬ್ಬದ ರೀತಿ ಆಚರಿಸಲಾಗುತ್ತಿದೆ. ಸರ್ವಶ್ರೇಷ್ಠ ದಾರ್ಶನಿಕ, ಅಪ್ರತಿಮ ಆಡಳಿತಗಾರ, ಬೆಂಗಳೂರು ನಗರ ನಿರ್ಮಾತೃ ನಾಡಪ್ರಭು ಕೆಂಪೇಗೌಡರ 516ನೇ ಜಯಂತಿ ಅಂಗವಾಗಿ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಹಳ್ಳಿ ವಾತಾವರಣ ನಿರ್ಮಿಸಲಾಗಿದೆ. ಹೀಗಾಗಿ ಇಡೀ ಪ್ರದೇಶ ಹಳ್ಳಿಯಾಗಿ ಪರಿವರ್ತನೆಗೊಂಡಿದೆ.

ಕೆಂಪೇಗೌಡ ಜಯಂತಿ ಅಂಗವಾಗಿ ಏಳು ದಿಕ್ಕುಗಳಿಂದ ನಗರಕ್ಕೆ ಜ್ಯೋತಿ ಕರೆತರಲಾಯಿತು. ನಗರದ ನಾಲ್ಕು ದಿಕ್ಕುಗಳಲ್ಲಿರುವ ಲಾಲ್‌ ಬಾಗ್‌, ಮೇಕ್ರಿ ವೃತ್ತ, ಕೆಂಪಾಂಬುದಿ ಕೆರೆ ಹಾಗೂ ಹಲಸೂರು ಗಡಿ ಗೋಪುರಗಳಿಂದ ಹಾಗೂ 3 ಐತಿಹಾಸಿಕ ಸ್ಥಳಗಳಾದ ಮಾಗಡಿ ತಾಲ್ಲೂಕಿನ ಕೆಂಪಾಪುರ, ದೇವನಹಳ್ಳಿ ತಾಲ್ಲೂಕಿನಲ್ಲಿರುವ ಆವತಿ ಹಾಗೂ ಕುಣಿಗಲ್‌ ತಾಲ್ಲೂಕಿನ ಹುತ್ತರಿ ದುರ್ಗ ಸೇರಿದಂತೆ ಒಟ್ಟು 7 ಸ್ಥಳಗಳಿಂದ ಸಚಿವರುಗಳ ನೇತೃತ್ವದಲ್ಲಿ ಪುರ ಜ್ಯೋತಿಗಳನ್ನು ಕರೆ ತರಲಾಯಿತು.

ನಾಡಪ್ರಭು ಕೆಂಪೇಗೌಡ ಜಯಂತಿಯ ದಿನದ ಅಂಗವಾಗಿ 3 ಕಡೆ ಕೆಂಪೇಗೌಡ ಪ್ರತಿಮೆಗಳಿಗೆ ಹಾಗೂ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿರುವ ಲಕ್ಷ್ಮೀದೇವಮ ಅವರ ಪುತ್ಥಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಶಿವಕುಮಾರ್‌ ಮತ್ತಿತರ ಗಣ್ಯರುಗಳು ಪುಷ್ಪನಮನ ಸಲ್ಲಿಸಿದರು. ಕೆಂಪೇಗೌಡ ಅಧ್ಯಯನ ಕೇಂದ್ರಕ್ಕೆ ಮೀಸಲಿಟ್ಟಿರುವ ಸುಮನಹಳ್ಳಿ ಸಮೀಪದ ನಾಲ್ಕು ಎಕರೆ ಪ್ರದೇಶದಲ್ಲಿ ನಾಡಪ್ರಭು ಕೆಂಪೇಗೌಡ ಭವನ ನಿರ್ಮಾಣದ ಶಂಕುಸ್ಥಾಪನೆ ನೆರವೇರಿಸಲಾಯಿತು. ಸದರಿ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ರಾಜ್ಯ ಮಟ್ಟದ ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಬಿಬಿಎಂಪಿ ಮಟ್ಟದ ಕಾರ್ಯಕ್ರಮ:
ಬಿಬಿಎಂಪಿ ಮಟ್ಟದ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮವು ಬಿಬಿಎಂಪಿ ಕೇಂದ್ರ ಕಛೇರಿ ಆವರಣದಲ್ಲಿರುವ ಡಾ. ರಾಜ್‌ ಕುಮಾರ್‌ ಗಾಜಿನ ಮನೆಯಲ್ಲಿ ಸಂಜೆ ನೆರವೇರಲಿದೆ.
ಸಂಜೆ 4.30 ರಿಂದ 6.00 ಗಂಟೆಯವರೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ನಂತರ ಬಿಬಿಎಂಪಿಯಲ್ಲಿ ಉತ್ತಮ ಸೇವೆ ಸಲ್ಲಿಸಿರುವ 51 ಅಧಿಕಾರಿಗಳಿಗೆ ಉತ್ತಮ ನೌಕರ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಸಂಜೆ ಗಾಜಿನ ಮನೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ತೋರಿರುವ 53 ಸಾಧಕರಿಗೆ ಕೆಂಪೇಗೌಡ ಪ್ರಶಸ್ತಿ ನೀಡಿ ಗೌರವಿಸಲಾಗುವುದು.

ನಮ್ಮ ಆಡಳಿತ ಅವಧಿಯಲ್ಲೇ ಕೆಂಪೇಗೌಡ ಭವನ ಉದ್ಘಾಟನೆ
ಚುನಾವಣೆಯ ಬಗ್ಗೆ ಯೋಚನೆ ಮಾಡುವವರು ರಾಜಕಾರಣಿಯಾಗಿರುತ್ತಾರೆ. ಅಭಿವೃದ್ಧಿ ಹಾಗೂ ದೂರದೃಷ್ಟಿಯ ಬಗ್ಗೆ ಯೋಚಿಸುವವರು ಮುತ್ಸದ್ದಿಗಳಾಗಿರುತ್ತಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.ಬಾಬು ಜಗಜೀವನರಾಮ್‌ ಭವನದಲ್ಲಿ ಆಯೋಜಿಸಲಾಗಿದ್ದ ನಾಡಪ್ರಭು ಕೆಂಪೇಗೌಡರ 516 ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ತಮ ಸರ್ಕಾರ ಆದಿಚುಂಚನಗಿರಿ ಸಂಸ್ಥಾನದ ಪೀಠಾಧ್ಯಕ್ಷರಾದ ಶ್ರೀ ನಿರ್ಮಲಾನಂದ ನಾಥ ಸ್ವಾಮೀಜಿಯವರ ಜೊತೆ ಸಮಾಲೋಚನೆ ನಡೆಸಿ ಕೆಂಪೇಗೌಡ ಜಯಂತಿ ಆಚರಣೆಯನ್ನು ಜಾರಿಗೆ ತಂದಿದೆ.

ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿ 5 ಎಕರೆ ಜಾಗವನ್ನು ಮಂಜೂರು ಮಾಡಲಾಗಿದೆ. ಅಲ್ಲಿ ಕೆಂಪೇಗೌಡ ಭವನವನ್ನು ನಿರ್ಮಾಣ ಮಾಡಲಾಗುತ್ತಿದೆ. ಇಂದು ಗುದ್ದಲಿಪೂಜೆ ನೆರವೇರಿಸಲಾಗಿದ್ದು, ತಮ ಸರ್ಕಾರದ ಅವಧಿಯಲ್ಲಿ ಭವನ ಉದ್ಘಾಟಿಸಲಾಗುವುದು ಎಂದರು.

ಕೆಂಪೇಗೌಡರು ಎಲ್ಲಾ ಜನರನ್ನು ಒಳಗೊಳ್ಳುವ ಆಡಳಿತ ನೀಡಿದರು. ಸಮಷ್ಠಿ ಸಮಾಜ ನಿರ್ಮಾಣಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಿದರು. ಎಲ್ಲಾ ಜನರನ್ನು ಒಟ್ಟಿಗೇ ತೆಗೆದುಕೊಂಡು ಹೋಗುವ ಅವರ ಆಶಯವನ್ನು ನಮ ಸರ್ಕಾರವೂ ಮುಂದುವರೆಸಿದೆ.

ವಿಜಯನಗರ ಸಾಮ್ರಾಜ್ಯದ ಹಂಪಿಯಂತೆ ಬೆಂಗಳೂರು ಬೆಳೆಯಬೇಕೆಂದು 16ನೇ ಶತಮಾನದಲ್ಲೇ ಸಾಮಂತರಾಗಿದ್ದ ಕೆಂಪೇಗೌಡರು ಬೆಂಗಳೂರಿಗೆ ಅಡಿಪಾಯ ಹಾಕಿದರು. ಅದರಂತೆ ಇಂದು ಏಷ್ಯಾದಲ್ಲೇ ಬೆಂಗಳೂರು ವೇಗವಾಗಿ ಬೆಳೆಯುತ್ತಿರುವ ನಗರವಾಗಿ ಗುರುತಿಸಿಕೊಂಡಿದೆ. ಸಿಲಿಕಾನ್‌ ವ್ಯಾಲಿ ಆಫ್‌ ಇಂಡಿಯಾ, ಸ್ಟಾರ್ಟ್‌ಅಪ್‌ ಕ್ಯಾಪಿಟಲ್‌, ಶಿಕ್ಷಣ, ಆರೋಗ್ಯದ ಹಬ್‌ ಆಗಿ ಅಭಿವೃದ್ಧಿಯಾಗಿದೆ ಎಂದು ಹೇಳಿದರು.

ಕೆಂಪೇಗೌಡರು ವೃತ್ತಿ ಆಧಾರಿತವಾಗಿ ಜನರಿಗೆ ಬಡಾವಣೆಗಳನ್ನು ನಿರ್ಮಿಸಿಕೊಟ್ಟಿದ್ದರು. ಕೆಂಪೇಗೌಡರ ದೃರದೃಷ್ಟಿಯಿಂದಾಗಿ ಬೆಂಗಳೂರಿಗೆ ವಿಶ್ವಮಾನ್ಯತೆ ದೊರೆತಿದೆ. ಅದನ್ನು ಇನ್ನಷ್ಟು ಅಭಿವೃದ್ಧಿಪಡಿಸುವುದ ನಮ ಸರ್ಕಾರದ ಜವಾಬ್ದಾರಿ ಎಂದರು.ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನನಿಲ್ದಾಣ ನಾಮಕರಣ ಮಾಡಿದ್ದು ತಮದೇ ಸರ್ಕಾರ. ಕಿತ್ತೂರು ರಾಣಿ ಚೆನ್ನಮ, ಕೃಷ್ಣ ಜಯಂತಿ, ಮಹಾವೀರ ಜಯಂತಿ ಸೇರಿದಂತೆ 33 ಜಯಂತಿಗಳನ್ನು ಸರ್ಕಾರ ಆಚರಣೆ ಮಾಡುತ್ತಿದೆ. ಅದರಲ್ಲಿ ಹೆಚ್ಚಿನ ಜಯಂತಿಗಳನ್ನು ನಮ ಸರ್ಕಾರವೇ ಜಾರಿ ಮಾಡಿದೆ ಎಂದು ಹೇಳಿದರು.

ಕೆಂಪೇಗೌಡರ ಬಗ್ಗೆ ನಮಗೆ ಅಗಾಧ ಗೌರವ ಇದೆ. ಅವರ ಆಡಳಿತದಿಂದ ಸ್ಫೂರ್ತಿ ಪಡೆದು ಸರ್ವರಿಗೂ ನ್ಯಾಯ ದೊರಕಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದರು.
ಇದೇ ವೇಳೆ ಭಾರತೀಯ ವಿಜ್ಞಾನ ಸಂಸ್ಥೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನನಿಲ್ದಾಣ, ಕರ್ನಾಟಕ ಸಾಬೂನು ಮತ್ತು ಮಾರ್ಜಕ ಸಂಸ್ಥೆಗೆ ಅಂತಾರಾಷ್ಟ್ರೀಯ ಪ್ರಶಸ್ತಿ ನೀಡಿ ಸನಾನಿಸಲಾಯಿತು.

ಸುತ್ತೂರು ಮಹಾ ಸಂಸ್ಥಾನದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಆದಿಚುಂಚನಗಿರಿ ಮಹಾಸಂಸ್ಥಾನದ ಡಾ.ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಸ್ಫಟಿಕಪುರಿ ಮಹಾಸಂಸ್ಥಾನದ ಶ್ರೀ ನಂಜಾವದೂತ ಸ್ವಾಮೀಜಿ, ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠದ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಸಚಿವರಾದ ಕೃಷ್ಣಾಭೈರೇಗೌಡ, ಕೆ.ಜೆ.ಜಾರ್ಜ್‌, ಶಿವರಾಜ್‌ ತಂಗಡಗಿ, ಕೆ.ಎಚ್‌.ಮುನಿಯಪ್ಪ, ಎಚ್‌.ಸಿ.ಮಹದೇವಪ್ಪ, ಶಾಸಕರಾದ ಮುನಿರತ್ನ, ಎನ್‌.ಎ.ಹ್ಯಾರಿಸ್‌‍, ಎಸ್‌‍.ಟಿ.ಸೋಮಶೇಖರ್‌, ಎ.ಸಿ.ಶ್ರೀನಿವಾಸ್‌‍, ಎಚ್‌.ಸಿ.ಬಾಲಕೃಷ್ಣ, ವಿಧಾನಪರಿಷತ್‌ ಸದಸ್ಯರಾದ ನಾಗರಾಜ್‌ ಯಾದವ್‌, ಪುಟ್ಟಣ್ಣ ಮತ್ತಿತರರು ಉಪಸ್ಥಿತರಿದ್ದರು.

RELATED ARTICLES

Latest News