ಬೆಂಗಳೂರು,ಜೂ.27-ಹಾಡ ಹಗಲೇ ಉದ್ಯಮಿಯೊಬ್ಬರಿಗೆ ಚಾಕುವಿನಿಂದ ಹೆದರಿಸಿ 2 ಕೋಟಿ ರೂ. ಹಣ ದರೋಡೆ ಮಾಡಿಕೊಂಡು ಡಕಾಯಿತರು ಪರಾರಿಯಾಗಿರುವ ಘಟನೆ ವಿದ್ಯಾರಣ್ಯಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ಕೆಂಗೇರಿ ನ್ಯೂಟೌನ್ ನಿವಾಸಿ, ಉದ್ಯಮಿ ಶ್ರೀಹರ್ಷ ಹಣ ಕಳೆದುಕೊಂಡವರು.
ಕೆಂಗೇರಿ ಉಪನಗರದಲ್ಲಿ ಶ್ರೀಹರ್ಷ ಅವರು ಕಂಪನಿಯೊಂದನ್ನು ನಡೆಸುತ್ತಿದ್ದು, ಕೋಲ್್ಡ ಪ್ರೇಸೀಡ್ ಆಯಿಲ್ ಎಂಬ ಉದ್ಯಮ ಆರಂಭಿಸುವ ಸಲುವಾಗಿ ತಮ ಬಳಿ ಇದ್ದ ಹಾಗೂ ಸ್ನೇಹಿತರ
ಬಳಿ ಸಾಲವಾಗಿ ಪಡೆದುಕೊಂಡಿದ್ದ ಹಣ ಸೇರಿಸಿ ಒಟ್ಟು 2 ಕೋಟಿ ರೂ. ಹಣ ಒಟ್ಟುಗೂಡಿಸಿದ್ದಾರೆ. ಹೊಸ ಉದ್ಯಮಕ್ಕೆ ಯಂತ್ರೋಪಕರಣಗಳು ಜರ್ಮನಿಯಲ್ಲಿ ಲಭ್ಯವಿರುವುದರಿಂದ ತಮ ಬಳಿ ಇದ್ದ 2 ಕೋಟಿ ರೂ. ಹಣವನ್ನು ಯುಎಸ್ಡಿಟಿ ಕರೆನ್ಸಿಗೆ ಪರಿವರ್ತಿಸುವ ಸಲುವಾಗಿ ಸ್ನೇಹಿತ ರಕ್ಷಿತ್ ಹಾಗೂ ಪರಿಚಯಸ್ಥ ಪ್ರಕಾಶ್ಅಗರವಾಲ್ಗೆ ತಿಳಿಸಿದ್ದಾರೆ. ಈ ಇಬ್ಬರು ನಾರಾಯಣ ಭರತ್ ಎಂಬುವವರನ್ನು ಶ್ರೀಹರ್ಷ ರವರಿಗೆ ಪರಿಚಯಿಸಿದ್ದಾರೆ. ನಾರಾಯಣ ಭರತ್ ಅವರು ಬೆಂಜಮಿನ್ ಹರ್ಷ ಎಂಬುವವರನ್ನು ಪರಿಚಯಿಸಿ ಇವರ ಕಡೆಯಿಂದ ನಿಮ ಕೆಲಸ ಆಗುತ್ತದೆಂದು ತಿಳಿಸಿದ್ದಾರೆ.
ನಂತರದ ದಿನದಲ್ಲಿ ಬೆಂಜಮಿನ್ ಹರ್ಷ ಅವರಿಗೆ ಕರೆ ಮಾಡಿ 2 ಕೋಟಿ ರೂ. ಹಣವನ್ನು ಯುಎಸ್ಡಿಟಿ ಕರೆನ್ಸಿ ಗೆ ಪರಿವರ್ತಿಸಿ ಕೊಡುವ ಬಗ್ಗೆ ಶ್ರೀಹರ್ಷ ಕೇಳಿಕೊಂಡಾಗ, ಹಣವನ್ನು ತೆಗೆದುಕೊಂಡು ವಿದ್ಯಾರಣ್ಯಪುರದ ಎಂಎಸ್ ಪಾಳ್ಯ ಸರ್ಕಲ್ ಬಳಿ ಬರುವಂತೆ ತಿಳಿಸಿದ್ದಾರೆ. ಜೂ.25 ರಂದು ಶ್ರೀಹರ್ಷ ರವರು 2 ಕೋಟಿ ರೂ. ಹಣವನ್ನು ತೆಗೆದುಕೊಂಡು ಸ್ನೇಹಿತರಾದ ನಾಗೇಂದ್ರ ಜೊತೆ ಮತ್ತೊಬ್ಬ ಸ್ನೇಹಿತ ಶಾಂತಕುಮಾರ್ ರವರ ಕಾರಿನಲ್ಲಿ ಎಂಎಸ್ ಪಾಳ್ಯ ಸರ್ಕಲ್ ಬಳಿ ಮಧ್ಯಾಹ್ನ 3 ಗಂಟೆ ಸುಮಾರಿಗೆ ಹೋಗಿದ್ದಾರೆ.
ಆ ಸಂದರ್ಭದಲ್ಲಿ ಬೆಂಜಮಿನ್ ಹರ್ಷ ಅವರು ಸ್ಥಳದಲ್ಲಿದ್ದರು. ಈ ಮೂವರನ್ನು ಕುಂದಾನ್ ಎಲೆಕ್ಟ್ರಾನಿಕ್್ಸ ಅಂಗಡಿಯ ಮೇಲಿರುವ ಎಕೆ ಎಂಟರ್ ಪ್ರೈಸಸ್ ಮಳಿಗೆಗೆ ತೆಗೆದುಕೊಂಡು ಹೋಗಿ ಹಣ ಎಣಿಕೆಯ ಯಂತ್ರದ ಸಹಾಯದಿಂದ ಶ್ರೀಹರ್ಷ ಅವರ ಬಳಿ ಇದ್ದ 2 ಕೋಟಿ ರೂ. ಹಣವನ್ನು ಎಣಿಕೆ ಮಾಡುತ್ತಿದ್ದರು.
ಸಂಜೆ 4.30 ರ ಸುಮಾರಿನಲ್ಲಿ ಆರೇಳು ಮಂದಿಯ ಗುಂಪೊಂದು ಏಕಾಏಕಿ ಇವರುಗಳಿದ್ದ ಮಳಿಗೆಗೆ ನುಗ್ಗಿ ಹಣ ಕೊಡುವಂತೆ ಹೆದರಿಸಿದ್ದಾರೆ.ಉದ್ಯಮಿ ಶ್ರೀಹರ್ಷ ರವರು ಗಾಬರಿಯಾಗಿ ನೀವು ಯಾರೆಂದು ಕೇಳುತ್ತಿದ್ದಂತೆ ಗುಂಪಿನಲ್ಲಿದ್ದವರ ಪೈಕಿ ಇಬ್ಬರು ಚಾಕುಗಳಿಂದ ಹೆದರಿಸಿ ನೀನು ಹಣ ಕೊಡದಿದ್ದರೆ ಚಾಕುವಿನಿಂದ ಚುಚ್ಚುವುದಾಗಿ ಜೀವ ಬೆದರಿಕೆ ಹಾಕಿದ್ದಾರೆ, ಅಲ್ಲದೇ ಚಾಕುವಿನ ಹಿಂಬದಿಯಿಂದ ಶ್ರೀಹರ್ಷ ರವರ ತೋಳಿಗೆ ಹಾಗೂ ಸೊಂಟಕ್ಕೆ ಬಲವಾಗಿ ಹೊಡೆದು, ಕೊರಳಿಗೆ ಚಾಕುಗಳನ್ನಿಟ್ಟು ಹಣ ಕೊಡುವಂತೆ ದಮ್ಕಿ ಹಾಕಿದ್ದಾರೆ.
ಶ್ರೀಹರ್ಷ ರವರ ಜೊತೆಯಲ್ಲಿದ್ದ ಸ್ನೇಹಿತರನ್ನು ಗುಂಪಿನಲ್ಲಿದ್ದ ಇನ್ನಿಬ್ಬರು ಹೆದರಿಸಿ 2 ಕೋಟಿ ರೂ. ಹಣ ಕಿತ್ತುಕೊಂಡು ಚೀಲದಲ್ಲಿ ಹಾಕಿಕೊಂಡು ಸ್ನೇಹಿತರ 4 ಮೊಬೈಲ್ಗಳನ್ನು ಕಸಿದುಕೊಂಡು ಪೊಲೀಸರಿಗೆ ಈ ವಿಷಯ ತಿಳಿಸಿದರೆ ನಿಮನ್ನು ಕೊಲೆಮಾಡುವುದಾಗಿ ಬೆದರಿಕೆ ಹಾಕಿ ಮಳಿಗೆಯೊಳಗೆ ಎಲ್ಲರನ್ನೂ ಕೂಡಿ ಹಾಕಿ ಡಕಾಯಿತರು ಪರಾರಿಯಾಗಿದ್ದಾರೆ.ಕೆಲ ಸಮಯದ ಬಳಿಕ ಶ್ರೀಹರ್ಷ ಹಾಗೂ ಸ್ನೇಹಿತರು ಮಳಿಗೆಯ ಶೆಟರನ್ನು ತೆಗೆದು ಹೊರ ಬಂದಿದ್ದಾರೆ. ಆ ಸಂದರ್ಭದಲ್ಲಿ ಏಕಾಏಕಿ ಬೆಂಜಮಿನ್ ಹರ್ಷ ಮತ್ತು ಅವರ ಜೊತೆಯಲ್ಲಿದ್ದ ಇನ್ನಿಬ್ಬರು ಸಹ ಸ್ಥಳದಿಂದ ಓಡಿ ಹೋಗಿದ್ದಾರೆ. ಈ ಬಗ್ಗೆ ಶ್ರೀಹರ್ಷ ರವರು ಪೊಲೀಸರಿಗೆ ದೂರು ನೀಡಿದ್ದಾರೆ.ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಡಕಾಯಿತರ ಪತ್ತೆಗಾಗಿ ಶೋಧ ಮುಂದುವರೆಸಿದ್ದಾರೆ.