Saturday, June 28, 2025
Homeರಾಜ್ಯಪ್ರಚೋದನಾತ್ಮಕ ಪೋಸ್ಟ್‌ ಮಾಡುವವರ ವಿರುದ್ಧ ಕಠಿಣ ಕ್ರಮ : ಗೃಹ ಸಚಿವ ಪರಮೇಶ್ವರ್

ಪ್ರಚೋದನಾತ್ಮಕ ಪೋಸ್ಟ್‌ ಮಾಡುವವರ ವಿರುದ್ಧ ಕಠಿಣ ಕ್ರಮ : ಗೃಹ ಸಚಿವ ಪರಮೇಶ್ವರ್

Strict action against those who post provocative posts: Home Minister Parameshwara

ಬೆಂಗಳೂರು,ಜೂ.27- ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಾತಕ ಪೋಸ್ಟ್‌ ಹಾಕುವವರ ವಿರುದ್ಧ, ಫೇಕ್‌ ನ್ಯೂಸ್‌‍ ಹರಡುವರ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸಬೇಕು. ಈ ನಿಟ್ಟಿನಲ್ಲಿ ಆ್ಯಕ್ಷನ್‌ ಪ್ಲಾನ್‌ ರೂಪಿಸುವಂತೆ ಗೃಹ ಸಚಿವ ಡಾ. ಜಿ.ಪರಮೇಶ್ವರ ಸೂಚನೆ ನೀಡಿದ್ದಾರೆ.

ರಾಜ್ಯ ಪೊಲೀಸ್‌‍ ಪ್ರಧಾನ ಕಚೇರಿಯಲ್ಲಿ ನಡೆಯುತ್ತಿರುವ ವಾರ್ಷಿಕ ಸಮಾವೇಶದಲ್ಲಿ ಪೊಲೀಸ್‌‍ ಪ್ರಗತಿ ಪರಿಶೀಲನೆ ವೇಳೆ ಮಾತನಾಡಿದ ಅವರು, ಕರಾವಳಿ ಭಾಗದಲ್ಲಿ ಸೌಹಾರ್ದತೆ ಕಾಪಾಡಲು ವಿವಿಧ ಧಾರ್ಮಿಕ ಸಂಘಟನೆಗಳ ಮುಖಂಡರೊಂದಿಗೆ ನಿರಂತರವಾಗಿ ಸಭೆ ನಡೆಸಬೇಕು. ದ್ವೇಷ ಭಾಷಣ, ಪ್ರಚೋದನಾತಕ ಭಾಷಣ ಮಾಡುವವರ ವಿರುದ್ಧ ಮುಲಾಜಿಲ್ಲದೆ ಕ್ರಮ ಜರುಗಿಸಬೇಕು ಎಂದು ಆದೇಶಿಸಿದ್ದಾರೆ.

ಕೋಮುಗಲಭೆಯ ಕಾರಣದಿಂದ ಆ ಭಾಗದ ಜನ ನೆಮದಿಯ ಜೀವನ ನಡೆಸಲು ಸಾಧ್ಯವಾಗುತ್ತಿಲ್ಲ. ಮಕ್ಕಳನ್ನು ವಿದ್ಯಾಭ್ಯಾಸಕ್ಕಾಗಿ ಮಂಗಳೂರು ಬಿಟ್ಟು ಬೆಂಗಳೂರು, ಮೈಸೂರಿಗೆ ಕಳುಹಿಸುತ್ತಿದ್ದಾರೆ. ಕೋಮು ಗಲಾಟೆಗಳು ಶಿವಮೊಗ್ಗ ಜಿಲ್ಲೆಯಲ್ಲಿ ಇರಲಿಲ್ಲ. ಈಗ ಆ ಜಿಲ್ಲೆಗೂ ವ್ಯಾಪಿಸಿದೆ. ಇದನ್ನು ಸಂಪೂರ್ಣವಾಗಿ ನಿಯಂತ್ರಿಸದಿದ್ದಲ್ಲಿ ರಾಜ್ಯದಾದ್ಯಂತ ಮುಂದುವರಿಯುತ್ತದೆ ಎಂದು ಎಚ್ಚರಿಸಿದ್ದಾರೆ.

ಇತ್ತೀಚೆಗೆ ರಾಜ್ಯದಲ್ಲಿ ಅದರಲ್ಲೂ ಬೆಂಗಳೂರಿನಲ್ಲಿ ಕೆಲವು ಕಹಿಘಟನೆಗಳು ವರದಿಯಾಗುತ್ತಿವೆ. ಪುಡಿರೌಡಿಗಳ ಹಾವಳಿ ಹೆಚ್ಚಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಇಂತಹ ಪ್ರಕರಣಗಳು ಹೆಚ್ಚು ಸದ್ದು ಮಾಡುತ್ತಿದ್ದು, ಬೆಂಗಳೂರಿಗೆ ಅಪಕೀರ್ತಿ ತರುತ್ತದೆ. ಪೊಲೀಸರು ಮುಂಜಾಗ್ರತಾ ಕ್ರಮವಾಗಿ ರೌಡಿ ಪೆರೇಡ್‌ ನಡೆಸಿ ಅಪರಾಧಗಳಲ್ಲಿ ಪುನರಾವರ್ತಿತವಾಗಿ ಭಾಗಿಯಾಗುವ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ತಾಕೀತು ಮಾಡಿದರು.

ಸಾರ್ವಜನಿಕವಾಗಿ ಮಾರಕ ಆಯುಧಗಳ ಪ್ರದರ್ಶನ, ಸಾರ್ವಜನಿಕರ ನೆಮದಿಗೆ ಭಂಗ ಬರುವಂತೆ ದುರ್ವರ್ತನೆ, ರಸ್ತೆ ಜಗಳದಲ್ಲಿ ಹದ್ದುಮೀರಿದ ವರ್ತನೆಯಂತಹ ಪ್ರಕರಣಗಳನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಯಾವುದೇ ಸಂದರ್ಭದಲ್ಲೂ ಆರೋಪಿಗಳನ್ನು ಸಹಿಸಬಾರದು. ಮತ್ತೊಮೆ ಸಾರ್ವಜನಿಕವಾಗಿ ದುರ್ವರ್ತನೆ ತೋರಿಸಲು ಹಿಂದೆಮುಂದೆ ನೋಡುವಂತಹ ವಾತಾವರಣ ಸೃಷ್ಟಿಸಬೇಕು ಎಂದು ತಿಳಿ ಹೇಳಿದರು.

ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಕಾಲ್ತುಳಿತ ಪ್ರಕರಣವನ್ನು ಪ್ರಸ್ತಾಪಿಸಿರುವ ಸಚಿವ ಪರಮೇಶ್ವರ್‌, ಕಾನೂನು ಸುವ್ಯವಸ್ಥೆ ಪಾಲನೆ ವಿಚಾರದಲ್ಲಿ ಅಧಿಕಾರಿಗಳು ಸದಾ ಜಾಗೃತರಾಗಿರಬೇಕು. ಗುಪ್ತದಳ ವೈಫಲ್ಯ, ಹಿರಿಯ ಅಧಿಕಾರಿಗಳ ನಡುವಿನ ಸಮನ್ವಯತೆಯ ಕೊರತೆಯಿಂದಾಗಿ ದುರ್ಘಟನೆಯಾಗಿ 11 ಮಂದಿ ಅಮಾಯಕರು ಜೀವ ಕಳೆದುಕೊಂಡರು. ಬೆಂಗಳೂರಿನಲ್ಲಿ ಹಲವಾರು ಜಾತ್ರೆ, ಸಾರ್ವಜನಿಕ ಸಮಾರಂಭಗಳು ನಡೆಯುತ್ತಲೇ ಇರುತ್ತವೆ. ಲಕ್ಷಾಂತರ ಮಂದಿ ಭಾಗವಹಿಸುತ್ತಾರೆ. ಎಂದೂ ನಡೆಯದೇ ಇರುವಂತಹ ದುರ್ಘಟನೆ ಆರ್‌ಸಿಬಿ ವಿಜಯೋತ್ಸವದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದೆ. ಮುಂದೆ ಈ ರೀತಿಯಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಗೃಹಸಚಿವರು ಆದೇಶಿಸಿದರು.

ಸೈಬರ್‌ ಕ್ರೈಂಗಳ ಸಂಖ್ಯೆ ದಿನೇದಿನೇ ಹೆಚ್ಚುತ್ತಿವೆ. ಪ್ರತಿಯೊಂದು ಪೊಲೀಸ್‌‍ ಠಾಣೆಯ ಸಿಬ್ಬಂದಿಗಳಿಗೂ ಸೈಬರ್‌ ಅಪರಾಧಗಳ ಬಗ್ಗೆ ತರಬೇತಿ ನೀಡಲು ನಮ ಸರ್ಕಾರ ಕಾರ್ಯಕ್ರಮ ರೂಪಿಸಿದೆ. ಅದನ್ನು ಸದ್ಬಳಕೆ ಮಾಡಿಕೊಳ್ಳಲು ಪೊಲೀಸ್‌‍ ಸಿಬ್ಬಂದಿಗಳು ತರಬೇತಿಯಲ್ಲಿ ಭಾಗವಹಿಸುವ ಮೂಲಕ ಅಪರಾಧ ಕೃತ್ಯಗಳನ್ನು ಹತ್ತಿಕ್ಕಲು ಶ್ರಮಿಸಬೇಕು ಎಂದು ಸಲಹೆ ನೀಡಿದರು.

ಆಂಧ್ರಪ್ರದೇಶ, ಗೋವಾ ರಾಜ್ಯಗಳಿಂದ ಮಾದಕ ವಸ್ತುಗಳು ಹೆಚ್ಚಿನ ಪ್ರಮಾಣದಲ್ಲಿ ಸಾಗಣಿಕೆಯಾಗುತ್ತಿವೆ. ಯುವಕರ ಕೈಗೆ ಗಾಂಜಾ ಸುಲಭವಾಗಿ ಸಿಗುತ್ತಿದೆ ಎಂಬುದರ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಬೇಸರವಿದೆ. ಇದನ್ನು ಸಂಪೂರ್ಣವಾಗಿ ಮಟ್ಟಹಾಕಲು ಪೊಲೀಸರು ಮತ್ತಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಬೇಕು. ನಿರ್ಲಕ್ಷ್ಯ ವಹಿಸಿದರೆ ಯುವಜನತೆಯ ಭವಿಷ್ಯ ಹಾಳಾಗುತ್ತದೆ. ರಾಜ್ಯವನ್ನು ಉಡ್ತಾ ಪಂಜಾಬ್‌ನಂತೆ ಆಗಲು ಬಿಡಬಾರದು ಎಂದರು.

ಮಧ್ಯಾಹ್ನದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳ ಸಮೇಳನದಲ್ಲಿ ಭಾಗವಹಿಸಿ ಹಿರಿಯ ಪೊಲೀಸ್‌‍ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆಗಳನ್ನು ನೀಡಲಿದ್ದಾರೆ.ಕಾಲ್ತುಳಿತ ಪ್ರಕರಣದಲ್ಲಿ ಪೊಲೀಸ್‌‍ ಆಯುಕ್ತ ಬಿ.ದಯಾನಂದ ಸೇರಿದಂತೆ ಹಲವರನ್ನು ಅಮಾನತುಗೊಳಿಸಿದ ಬಳಿಕ ನಡೆಯುತ್ತಿರುವ ಈ ಸಮಾವೇಶ ಹೆಚ್ಚು ಗಮನ ಸೆಳೆದಿದೆ.

ಸಮಾವೇಶದಲ್ಲಿ ರಾಜ್ಯ ಪೊಲೀಸ್‌‍ ಮಹಾನಿರ್ದೇಶಕರಾದ ಡಾ. ಎಂ.ಎ.ಸಲೀಂ, ಹಿರಿಯ ಐಎಎಸ್‌‍ ಅಧಿಕಾರಿ ಗೌರವ ಗುಪ್ತಾ, ಸಿಐಡಿ ಸೈಬರ್‌ ಅಪರಾಧಗಳು ಮತ್ತು ಮಾದಕ ವಸ್ತು ವಿಭಾಗದ ಪೊಲೀಸ್‌‍ ಮಹಾನಿರ್ದೇಶಕರಾದ ಡಾ.ಪ್ರಣವ್‌ ಮಹಾಂತಿ, ರಾಜ್ಯ ಅಗ್ನಿಶಾಮಕ ಮತ್ತು ತುರ್ತುಸೇವೆಗಳ ಇಲಾಖೆಯ ಡಿಜಿ ಪ್ರಶಾಂತ್‌ ಕುಮಾರ್‌ ಠಾಕೂರ್‌, ರಾಜ್ಯ ಕಾರಾಗೃಹ ಮತ್ತು ಸುಧಾರಣಾ ಸೇವೆ ಇಲಾಖೆಯ ಡಿಜಿ ಮಾಲಿನಿ ಕೃಷ್ಣಮೂರ್ತಿ ಹಾಗೂ ರಾಜ್ಯದ ಎಲ್ಲ ವಲಯಗಳ ಐಜಿಪಿ, ಜಿಲ್ಲಾ ಪೊಲೀಸ್‌‍ ವರಿಷ್ಠಾಧಿಕಾರಿಗಳು ಇದ್ದರು.

RELATED ARTICLES

Latest News