ಬೆಂಗಳೂರು,ಜೂ.27– ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ದರ್ಶನಕ್ಕೆ ಸೂಕ್ತ ವ್ಯವಸ್ಥೆಗಳಿಲ್ಲ ಎಂದು ಭಕ್ತಾದಿಗಳು ಆಕ್ರೋಶ ವ್ಯಕ್ತ ಪಡಿಸಿದ್ದು, ಸರ್ಕಾರಕ್ಕೆ ಹಿಡಿಶಾಪ ಹಾಕಿದ್ದಾರೆ. ಆಷಾಡ ಮಾಸದ ಮೊದಲ ವಿಶೇಷ ಪೂಜೆ ಸಲುವಾಗಿ ಇಂದು ಕರ್ನಾಟಕವಷ್ಟೇ ಅಲ್ಲದೆ ನೆರೆಯ ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳುನಾಡು, ತೆಲಂಗಾಣ ಸೇರಿದಂತೆ ಇತರ ರಾಜ್ಯಗಳಿಂದಲೂ ಲಕ್ಷಾಂತರ ಮಂದಿ ಭಕ್ತರು ಆಗಮಿಸಿದ್ದರು.
ಚಾಮುಂಡಿಬೆಟ್ಟದಲ್ಲಿ 2 ಸಾವಿರ ರೂ.ಗಳ ವಿವಿಐಪಿ ದರ್ಶನಕ್ಕೆ ಹೆಚ್ಚಿನ ಅನುಕೂಲ ಕಲ್ಪಿಸಲಾಗಿದೆ. ಜನಸಾಮಾನ್ಯರು ಮಧ್ಯರಾತ್ರಿಯಿಂದಲೇ ಸರದಿ ಸಾಲಿನಲ್ಲಿ ನಿಂತಿದ್ದರೂ 12 ಗಂಟೆಯಾದರೂ ದರ್ಶನಕ್ಕೆ ಅವಕಾಶ ನೀಡಿಲ್ಲ ಎಂಬ ಆರೋಪಗಳು ಕೇಳಿಬಂದಿವೆ. ಅದರಲ್ಲೂ ಕಾಲ್ನಡಿಗೆಯಲ್ಲಿ ಬೆಟ್ಟ ಹತ್ತಿ ಬಂದ ಭಕ್ತಾದಿಗಳ ಪಾಡು ಹೇಳತೀರದಾಗಿದೆ ಎಂಬ ಆಕ್ರೋಶಗಳು ಕೇಳಿಬಂದಿವೆ.
ನೀರು, ಶೌಚಾಲಯದಂತಹ ಕನಿಷ್ಟ ಸೌಲಭ್ಯಗಳಿಲ್ಲದೆ ಮಕ್ಕಳು, ಮಹಿಳೆಯರು ಪರದಾಡುತ್ತಿದ್ದರು. ಇನ್ನೂ ಕೆಲವರು ತಾಳೆ ಕಳೆದುಕೊಂಡು ಬ್ಯಾರಿಕೇಡ್ಗಳನ್ನು ಬಿಗಿದು ಬೇರೆ ಸಾಲಿನ ದರ್ಶನಕ್ಕೆ ನಿಂತಿದ್ದು ಕಂಡುಬಂದಿತ್ತು.
ದೇವಸ್ಥಾನದ ಆಡಳಿತ ಮಂಡಳಿ ಭಕ್ತಾದಿಗಳಿಗೆ ಬಾದಾಮಿ ಹಾಲು, ನೀರು, ಡ್ರೈಪ್ರೂಟ್್ಸಗಳನ್ನು ಒದಗಿಸಲಾಗುತ್ತಿದೆ ಎಂದು ಹೇಳಿಕೊಂಡಿದೆ. ಆದರೆ ಇದನ್ನು ತಳ್ಳಿ ಹಾಕಿರುವ ಭಕ್ತಾದಿಗಳು, ಅಧಿಕಾರಿಗಳು ದುಡ್ಡು ಹೊಡೆಯಲು ಈ ರೀತಿಯ ಸುಳ್ಳು ಮಾಹಿತಿಗಳನ್ನು ನೀಡಿರಬಹುದು, ನಮಗೆ ಇಲ್ಲಿ ಕುಡಿಯಲು ನೀರನ್ನೂ ಕೊಟ್ಟಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಮಿಂದ ಮತ ಪಡೆದವರು ಸರದಿ ಸಾಲಿನಲ್ಲಿ ಬಂದು ದರ್ಶನ ಪಡೆದು ಹೋಗಿದ್ದಾರೆ. ಆದರೆ ನಾವು ಪ್ರಜಾಪ್ರಭುತ್ವದಲ್ಲಿ ಪ್ರಭುಗಳು ಎಂದು ಹೇಳಿಕೊಳ್ಳುವ ಮತದಾರರಾದ ನಾವು ಮಧ್ಯರಾತ್ರಿ 3 ಗಂಟೆಯಿಂದಲೂ ಕಾದುನಿಂತಿದ್ದೇವೆ. ನಮನ್ನು ಹೇಳುವವರು, ಕೇಳುವವರು ಇಲ್ಲದಂತಾಗಿದೆ ಎಂದು ಕಿಡಿಕಾರಿದ್ದಾರೆ.ಸರ್ಕಾರ ಎಲ್ಲದರಲ್ಲೂ ಲೂಟಿ ಹೊಡೆಯುವುದನ್ನೇ ನೋಡುತ್ತಿದೆ. ಜನಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸುತ್ತಿಲ್ಲ ಎಂದು ಸಾರ್ವಜನಿಕರು ಕಿಡಿಕಾರಿದ್ದಾರೆ.
: ಚಾಮುಂಡಿ ಬೆಟ್ಟಕ್ಕೆ ಭಕ್ತಸಾಗರ
ಚಾಮುಂಡಿ ಬೆಟ್ಟದಲ್ಲಿ ತುಂತುರು ಮಳೆ ಹಿಮದ ನಡುವೆ ಹೂವುಗಳ ತಳಿರು ತೋರಣ, ದೀಪಾಲಂಕಾರ ಭಕ್ತರನ್ನು ಸ್ವಾಗತಿಸುತ್ತಿತ್ತು.ಆಷಾಢ ಶುಕ್ರವಾರ ಪ್ರಯುಕ್ತ ನಾಡ ಅಧಿದೇವತೆ ಚಾಮುಂಡೇಶ್ವರಿ ತಾಯಿಗೆ ಇಂದು . ಮುಂಜಾನೆ ಪಂಚಾಮೃತ ಅಭಿಷೇಕ, ಅರ್ಚನೆ, ಸಹಸ್ರನಾಮ ಅರ್ಚನೆ ಮಾಡಲಾಯಿತು.ದೇವಿ ಚಾಮುಂಡಿ ವಿವಿಧ ಹೂವುಗಳ ನಡುವೆ ಮಹಾಲಕ್ಷಿ ಅಲಂಕಾರದಲ್ಲಿ ಕಂಗೊಳಿಸುತ್ತಾ ಭಕ್ತರಿಗೆ ದರ್ಶನ ನೀಡಿದರು.
ಕಳೆದ ಬಾರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಚಾಮುಂಡಿ ಬೆಟ್ಟಕ್ಕೆ ಆಗಮಿಸುವ ಹಿನ್ನಲೆಯಲ್ಲಿ ಸೂಕ್ತ ಬಂದೋಬ್ತ್ ವ್ಯವಸ್ಥೆ ಮಾಡಲಾಗಿದೆ.ಪ್ರತಿವರ್ಷದಂತೆ ಈ ಬಾರಿಯೂ ಖಾಸಗಿ ವಾಹನಗಳ ಪ್ರವೇಶ ನಿರ್ಭಂಧಿಸಲಾಗಿದ್ದು, ಕೆಎಸ್ಆರ್ಟಿಸಿ ವತಿಯಿಂದ ಉಚಿತ ಬಸ್ ವ್ಯವಸ್ಥೆ ಮಾಡಲಾಗಿದೆ. ಲಲಿತಮಹಲ್ ಪ್ಯಾಲೇಸ್ ಹೆಲಿಪ್ಯಾಡ್ ಆವರಣದಿಂದ ಉಚಿತ ಬಸ್ ವ್ಯವಸ್ಥೆ ಮಾಡಲಾಗಿದ್ದು, ಭಕ್ತರಿಗೆ ನಾಡದೇವಿಯ ದರುಶನ ಪಡೆಯಲು ಜಿಲ್ಲಾಡಳಿತದ ವತಿಯಿಂದ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿತ್ತು.
ಟಿಕೆಟ್ ವ್ಯವಸ್ಥೆ:
ಭಕ್ತರ ಅನುಕೂಲಕ್ಕಾಗಿ 300ರೂ , 2 ಸಾವಿರ ರೂ. ಟಿಕೆಟ್ ವ್ಯವಸ್ಥೆ ಮಾಡಲಾಗಿದೆ. 2000 ಟಿಕೆಟ್ ಪಡೆದವರಿಗೆ ಲಲಿತ ಮಹಲ್ಯಿಂದ ಬೆಟ್ಟಕ್ಕೆ ಎಸಿ ಬಸ್ನಲ್ಲಿ ಕರೆದುಕೊಂಡು ಹೋಗಿ
ಬೆಟ್ಟದಲ್ಲಿ ನೇರವಾಗಿ ದರ್ಶನ ಮಾಡಿ ನಂತರ ಪ್ರಸಾದ ರೂಪದಲ್ಲಿ ಚಾಮುಂಡೇಶ್ವರಿ ವಿಗ್ರಹ, ಲಾಡು, ಕುಡಿಯುವ ನೀರಿನ ಬಾಟಲ್ ಒಳಗೊಂಡ ಬ್ಯಾಗ್ ವಿತರಿಸಲಾಯಿತು.
ಆಷಾಢ ಶುಕ್ರವಾರದ ಪ್ರಯುಕ್ತ ನಾಡ ಅಧಿದೇವತೆಯ ದರ್ಶನಕ್ಕಾಗಿ ಸಾವಿರಾರು ಮಂದಿ ಭಕ್ತರು ಮುಂಜಾನೆಯಿಂದಲೇ ಮೆಟ್ಟಿಲುಗಳನ್ನು ಹತ್ತಿ, ಆಗಮಿಸಿ ದೇವಿಯ ದರ್ಶನ ಪಡೆದರು. ರಾಜ್ಯದ ವಿವಿಧ ಕಡೆಗಳಿಂದ ಸಹಸ್ರಾರು ಭಕ್ತಾದಿಗಳು ಚಾಮುಂಡಿ ಬೆಟ್ಟಕ್ಕೆ ಆಗಮಿಸಿ, ಮುಂಜಾನೆ 4 ಗಂಟೆಯಿಂದಲೇ ಸರದಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆದು ಪುನೀತರಾದರು.