Saturday, June 28, 2025
Homeರಾಜಕೀಯ | Politicsದತ್ತಾತ್ರೇಯ ಹೊಸಬಾಳೆ ಹೇಳಿಕೆಗೆ ಕಾಂಗ್ರೆಸ್ ನಾಯಕರ ಖಂಡನೆ

ದತ್ತಾತ್ರೇಯ ಹೊಸಬಾಳೆ ಹೇಳಿಕೆಗೆ ಕಾಂಗ್ರೆಸ್ ನಾಯಕರ ಖಂಡನೆ

Congress leaders condemn Dattatreya Hosabale's statement

ಬೆಂಗಳೂರು, ಜೂ.28– ಸಂವಿಧಾನದಿಂದ ಜಾತ್ಯತೀತ ಪರಿಕಲ್ಪನೆಯನ್ನು ತೆಗೆಯಬೇಕು ಎಂದು ಆರ್‌ಎಸ್‌ಎಸ್‌ನ ದತ್ತಾತ್ರೇಯ ಹೊಸಬಾಳೆ ಹೇಳಿಕೆಯನ್ನು ಕಾಂಗ್ರೆಸ್ ನಾಯಕರು ಖಂಡಿಸಿದ್ದಾರೆ.

ಪಕ್ಷದ ಕಚೇರಿಯಲ್ಲಿಂದು ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಚಿವ ಎಚ್.ಎಂ.ರೇವಣ್ಣ, ಪ್ರಜಾಪ್ರಭುತ್ವದಲ್ಲಿ ಎಲ್ಲರೂ ಒಟ್ಟಾಗಿ ಬಾಳಬೇಕು ಎಂಬುದು ಕಾಂಗ್ರೆಸ್‌ನ ತತ್ವ, ಆದರೆ ಜನರನ್ನು ಜಾತಿ-ಧರ್ಮದ ಹೆಸರಿನಲ್ಲಿ ವಿಭಜಿಸುವ ಹಾಗೂ ಪ್ರಚೋದಿಸುವ ಪ್ರಯತ್ನವನ್ನು ನಡೆಸಲಾಗುತ್ತಿದೆ. ಕೇಂದ್ರ ಸರ್ಕಾರ ನಿರಂತರವಾಗಿ ವೈಫಲ್ಯ ಅನುಭವಿಸಿದೆ.

ಅದನ್ನು ಮರೆಮಾಚಲು ಇಂತಹ ವಿವಾದಿತ ಹೇಳಿಕೆಗಳನ್ನು ನೀಡಲಾಗುತ್ತಿದೆ ಎಂದರು.ಸಂವಿಧಾನ ರಚನೆ ವೇಳೆಯಲ್ಲೂ ಸಂಘ ಪರಿವಾರ ವಿರೋಧ ವ್ಯಕ್ತಪಡಿಸಿತ್ತು. ಹೊಸಬಾಳೆ ನೀಡಿರುವ ಹೇಳಿಕೆ ಚರ್ಚೆಯಾಗಬೇಕು. ಕಾಂಗ್ರೆಸ್ ಇದರ ವಿರುದ್ಧ ಹೋರಾಟ ಮಾಡುತ್ತದೆ. ಆರ್‌ಎಸ್ಎಸ್‌ನ ಚಿಂತನೆಗಳು ಜನರಿಗೆ ಅರ್ಥವಾಗಬೇಕು ಎಂದು ಹೇಳಿದರು. ಕೇಂದ್ರದಲ್ಲಿ ಅಲ್ಪ ಬಹುಮತದ ಸರ್ಕಾರ ಇದೆ. ಎನ್‌ಡಿಎ ಪಾಲುದಾರರಾದ ನಿತೀಶ್‌ ಕುಮಾರ್, ಚಂದ್ರಬಾಬು ನಾಯ್ಡು ಅವರು ಹೊಸಬಾಳೆ ಅವರ ಹೇಳಿಕೆಯನ್ನು ಒಪ್ಪುತ್ತಾರೆಯೇ? ಎಂದು ಪ್ರಶ್ನಿಸಿದರು.

ಅನ್ನೋನ್ಯ ಸಮಾಜದ ನಡುವೆ ಬಿರುಕು ಮೂಡಿಸುವ ಮನುಸ್ಮೃತಿಯೆಡೆಗೆ ಜನರನ್ನು ಕೊಂಡೊಯ್ಯುವ ಪ್ರವೃತ್ತಿಯನ್ನು ಅನುಸರಿಸಲಾಗುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಮಾಜಿ ಸಂಸದ ವಿ.ಎಸ್.ಉಗ್ರಪ್ಪ, 1975ರ ಜೂ.25 ರಂದು ತುರ್ತು ಪರಿಸ್ಥಿತಿ ಜಾರಿಯಾಗಿದ್ದು 50 ವರ್ಷ ಕಳೆದಿವೆ. ಅಂದಿನಿಂದ ಇದರ ಬಗ್ಗೆ ಮಾತನಾಡದೇ ಇರುವ ಆರ್‌ಎಸ್‌ಎಸ್. ಬಿಜೆಪಿ ನಾಯಕರು ಈಗ ಚರ್ಚೆ ಮಾಡುತ್ತಿದ್ದಾರೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ವಾಧಿಕಾರಿಯಾಗಿದ್ದು, ದೇಶದಲ್ಲಿ ತುರ್ತು ಪರಿಸ್ಥಿತಿ ಇದೆ. ಇದನ್ನು ಮರೆಮಾಚಲು ಹೊಸಬಾಳೆ ವಿವಾದ ಸೃಷ್ಟಿಸುತ್ತಿದ್ದಾರೆ. ಆ ಸಂದರ್ಭದಲ್ಲಿ ರಾಜಕೀಯ ವ್ಯಕ್ತಿಗಳನ್ನು ಜೈಲಿಗೆ ಹಾಕಲಾಗಿತ್ತು. ಈಗ ಇ.ಡಿ ಮತ್ತು ಆದಾಯ ತೆರಿಗೆ ಅಧಿಕಾರಿಗಳನ್ನು ಬಳಸಿಕೊಂಡು ದಾಳಿ ನಡೆಯುತ್ತಿದೆ.ಇದು ಒಂದು ರೀತಿಯ ಅಘೋಷಿತ ತುರ್ತು ಪರಿಸ್ಥಿತಿಯಾಗಿದೆ ಎಂದರು.

ಇಂದಿರಾಗಾಂಧಿಯವರ ಬಗ್ಗೆ ಮಾತನಾಡುವ ನೈತಿಕತೆ ಬಿಜೆಪಿಯವರಿಗಿಲ್ಲ. ಇಷ್ಟು ವರ್ಷಗಳಾದ ಮೇಲೆ ಚರ್ಚೆ ಮಾಡುತ್ತಿರುವುದನ್ನು ನೋಡಿದರೆ ಪ್ರಸ್ತುತ ಜಾರಿಯಲ್ಲಿರುವ ಸರ್ವಾಧಿಕಾರವನ್ನು ಮರೆಮಾಚುವ ಹುನ್ನಾರವಾಗಿದೆ. ಆ‌ರ್ಎಸ್‌ಎಸ್‌ನಲ್ಲಿ ನಂಬರ್ ಒನ್ ಸ್ಥಾನಕ್ಕೇರಲು ಹೊಸಬಾಳೆ ವಿವಾದಿತ ಹೇಳಿಕೆ ನೀಡುತ್ತಿದ್ದಾರೆ. ಸ್ವತಂತ್ರ್ಯ ಹೋರಾಟದಲ್ಲಿ ಸಂಘ ಪರಿವಾರ ಮತ್ತು ಬಿಜೆಪಿಯ ಪೂರ್ವಪಕ್ಷದ ಪಾತ್ರ ಏನಿತ್ತು? ಎಂದು ಪ್ರಶ್ನಿಸಿದರು.

ಆರ್‌ಎಸ್‌ಎಸ್ ಕಚೇರಿಗಳಲ್ಲಿ ರಾಷ್ಟ್ರಧ್ವಜ ಹಾರಿಸುತ್ತಿರಲಿಲ್ಲ. ರಾಷ್ಟ್ರಗೀತೆ ಹಾಡುತ್ತಿರಲಿಲ್ಲ, ಸಂವಿಧಾನದ ಬಗ್ಗೆ ಗೌರವ ಇರಲಿಲ್ಲ. ಶ್ರೇಣೀಕೃತ ವ್ಯವಸ್ಥೆಯನ್ನು ಪೋಷಣೆ ಮಾಡಿದ್ದರು ಎಂದು ಆರೋಪಿಸಿದ್ದಾರೆ.

ಹೊಸಬಾಳೆ ವಿರುದ್ಧ ಸ್ವಯಂಪ್ರೇರಿತ ಪ್ರಕರಣಗಳನ್ನು ದಾಖಲಿಸಬೇಕು. ಜಾತ್ಯತೀತತೆ ಬಗ್ಗೆ ಸುಪ್ರೀಂಕೋರ್ಟ್ ಸ್ಪಷ್ಟವಾಗಿ ಹೇಳಿದೆ. ಬಿಜೆಪಿ ಮತ್ತು ಅದರ ಬೆಂಬಲಿತ ಸಂಘಟನೆಗಳಿಂದ ಸಂವಿಧಾನಕ್ಕೆ ಅಗೌರವ ತರುವ ಪ್ರಯತ್ನ ನಡೆಯುತ್ತಿದೆ. ಕೂಡಲೇ ಹೊಸಬಾಳೆ ಅವರನ್ನು ಬಂಧಿಸಬೇಕು. ದೇಶದ ಅಭಿವೃದ್ಧಿ, ಉದ್ಯೋಗ ಸೃಷ್ಟಿಯ ಬಗ್ಗೆ ಮಾತನಾಡುವ ಬದಲಾಗಿ ಅನಗತ್ಯ ವಿವಾದಗಳನ್ನು ಪ್ರಸ್ತಾಪಿಸಲಾಗುತ್ತಿದೆ. ಭಾರತವನ್ನು ಅಮೆರಿಕಕ್ಕೆ ಅಡಮಾನ ಇಟ್ಟಂತೆ ವರ್ತಿಸುತ್ತಿದ್ದಾರೆ. ಆರ್‌ಎಸ್‌ಎಸ್ ಹೆಸರನ್ನು ಬ್ರಾಹ್ಮಣ ಸ್ವಯಸೇವಕ ಸಂಘ ಎಂದು ಇಟ್ಟರೆ ಸೂಕ್ತ. ಅಲ್ಲಿ ಬೇರೆ ಯಾರಿಗೂ ಅವಕಾಶಗಳಿಲ್ಲ ಎಂದರು.

RELATED ARTICLES

Latest News