ಹೈದರಾಬಾದ್, ಜೂ.30- ತೆಲಾಂಗಣ ರಾಜಧಾನಿ ಹೈದರಾಬಾದ್ ಬಳಿಯ ಪಾಶಮೈಲಾರಂನಲ್ಲಿರುವ ಕೈಗಾರಿಕಾ ಘಟಕದಲ್ಲಿ ಇಂದು ಸಂಭವಿ ಸಿದ ಬೃಹತ್ ರಿಯಾಕ್ಟರ್ ಸ್ಪೋಟದಲ್ಲಿ 10 ಕಾರ್ಮಿಕರು ಸಾವನ್ನಪ್ಪಿ,20 ಜನರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಸಂಭವಿಸಿದೆ.
ಈ ಘಟನೆಯಲ್ಲಿ ಗಾಯಗೊಂಡಿರುವವರ ಕೆಲವರ ಸ್ಥಿತಿ ಗಂಭೀರವಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಸಂಗರೆಡ್ಡಿ ಜಿಲ್ಲೆಯ ಕೈಗಾರಿಕಾ ಪ್ರದೇಶದ ರಾಸಾಯನಿಕ ಕಾರ್ಖಾನೆಯಲ್ಲಿ ಬೆಳಿಗ್ಗೆ 9 ಗಂಟೆ ಸುಮಾರಿಗೆ ಈ ಘಟನೆ ಸಂಭವಿಸಿದೆ. ಸ್ಪೋಟದ ಪರಿಣಾಮವಾಗಿ ಭಾರಿ ಬೆಂಕಿ ಕಾಣಿಸಿಕೊಂಡಿದ್ದು, ಸಿಗಾಚಿ ಕೆಮಿಕಲ್ಸ್ ಸಂಪೂರ್ಣ ಆವರಣ ಆವರಿಸಿಕೊಂಡಿತು. ಬೆಂಕಿಯನ್ನು ನಿಯಂತ್ರಿಸಲು ಹನ್ನೊಂದು ಅಗ್ನಿಶಾಮಕ ವಾಹನಗಳನ್ನು ಸೇವೆಗೆ ನಿಯೋಜಿಸಲಾಗಿದೆ.
ಪೊಲೀಸರು, ಅಗ್ನಿಶಾಮಕ ದಳ ಮತ್ತು ಇತರ ಸಿಬ್ಬಂದಿ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳನ್ನು ನಡೆಸಿದರು. ಗಾಯಾಳುಗಳನ್ನು ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಗಾಯಾಳುಗಳಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗಳಿಗೆ ಸ್ಥಳಾಂತರಿಸಲು ಆ್ಯಂಬುಲೆನ್್ಸಗಳು ಸಹ ಸ್ಥಳದಲ್ಲಿ ಕಂಡುಬಂದವು.
ಹತ್ತು ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಶಂಕಿಸಲಾಗಿದೆ ಮತ್ತು ಗಾಯಗೊಂಡ ಕಾರ್ಮಿಕರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಅಧಿಕಾರಿಗಳು ಇನ್ನೂ ಸಾವುಗಳನ್ನು ದೃಢಪಡಿಸಿಲ್ಲ.ಸ್ಪೋಟವು ಎಷ್ಟು ಪ್ರಬಲವಾಗಿತ್ತೆಂದರೆ, ಕೆಲವು ಕಾರ್ಮಿಕರ ದೇಹಗಳು ಸುಮಾರು 100 ಮೀಟರ್ ದೂರದವರೆಗೂ ಬಿದ್ದಿದ್ದವು. ಬೆಂಕಿಯ ಕೆನ್ನಾಲಿಗೆ ಕ್ಷಣಾರ್ಧದಲ್ಲಿ ಎಲ್ಲೆಡೆ ಆವರಿಸಿತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಸ್ಪೋಟದ ಪರಿಣಾಮ ಕಾರ್ಖಾನೆಯಲ್ಲಿನ ಉತ್ಪಾದನಾ ಘಟಕ ಕುಸಿದು ಬಿದ್ದರೆ, ಬೆಂಕಿ ಕಾರ್ಖಾನೆ ಆವರಣದೊಳಗಿನ ಪಕ್ಕದ ಕಟ್ಟಡಕ್ಕೂ ಹರಡಿತ್ತು.ರಿಯಾಕ್ಟರ್ ಸ್ಪೋಟಗೊಂಡಾಗ ಹಲವಾರು ಕಾರ್ಮಿಕರು ಅದರ ಬಳಿ ಕೆಲಸ ಮಾಡುತ್ತಿದ್ದರು. ಒಡಿಶಾ, ಉತ್ತರ ಪ್ರದೇಶ ಮತ್ತು ಇತರ ರಾಜ್ಯಗಳಿಂದ ವಲಸೆ ಬಂದ ಕಾರ್ಮಿಕರು ಕೈಗಾರಿಕಾ ಘಟಕದಲ್ಲಿ ಕೆಲಸ ಮಾಡುತ್ತಿದ್ದರು. ಸ್ಪೋಟ ಮತ್ತು ಬೆಂಕಿಯ ಶಬ್ದವು ರಾಸಾಯನಿಕ ಘಟಕ ಮತ್ತು ಪಕ್ಕದ ಕಾರ್ಖಾನೆಗಳ ನೌಕರರಲ್ಲಿ ಭಯಭೀತರನ್ನಾಗಿ ಮಾಡಿತು.ತಮ ಪ್ರಾಣ ರಕ್ಷಣೆಗಾಗಿ ಕಟ್ಟಡದ ಆವರಣದಿಂದ ಹೊರಗೆ ಓಡಿಹೋಗಿದ್ದಾರೆ.
ಕೆಲವು ಕಾರ್ಮಿಕರು ಕಟ್ಟಡದ ಅಡಿಯಲ್ಲಿ ಸಿಲುಕಿಕೊಂಡಿರಬಹುದು ಎಂಬ ಶಂಕೆ ಇರುವುದರಿಂದ, ರಕ್ಷಣಾ ಕಾರ್ಯಕರ್ತರು ಕಟ್ಟಡದ ಅವಶೇಷಗಳನ್ನು ತೆಗೆದುಹಾಕಲು ಮಣ್ಣು ತೆಗೆಯುವ ಯಂತ್ರಗಳನ್ನು ಬಳಸಿದ್ದಾರೆ. ಸಂಗರೆಡ್ಡಿ ಜಿಲ್ಲಾಧಿಕಾರಿ ಪಿ. ಪ್ರವಿಣ್ಯ ಮತ್ತು ಪೊಲೀಸ್ ವರಿಷ್ಠಾಧಿಕಾರಿ ಪರಿತೋಷ್ ಪಂಕಜ್ ಕೂಡ ಸ್ಥಳಕ್ಕೆ ಧಾವಿಸಿ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳ ಮೇಲ್ವಿಚಾರಣೆ ನಡೆಸಿದರು. ವಿವಿಧ ಕೈಗಾರಿಕಾ ಘಟಕಗಳ ಸಿಬ್ಬಂದಿ ಮತ್ತು ವಿವಿಧ ಇಲಾಖೆಗಳ ಸಿಬ್ಬಂದಿ ಕೂಡ ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.