ಬೆಂಗಳೂರು,ಜು.19-ಖಚಿತ ಗುಪ್ತಚರ ಮಾಹಿತಿಯ ಮೇರೆಗೆ ಕಾರ್ಯನಿರ್ವಹಿಸಿದ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್ಐ) ಬೆಂಗಳೂರು ವಲಯ ಘಟಕದ ಅಧಿಕಾರಿಗಳು, 40 ಕೋಟಿ ಮೌಲ್ಯದ 4 ಕೆಜಿಗೂ ಹೆಚ್ಚು ಕೊಕೇನ್ನೊಂದಿಗೆ ಪುರುಷ ಪ್ರಯಾಣಿಕನನ್ನು ಬಂಧಿಸಿರುವ ಘಟನೆ ದೇವನಹಳ್ಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.
ವಶಪಡಿಸಿಕೊಂಡ ಕೊಕೇನ್ 4,006 ಗ್ರಾಂ (4 ಕೆಜಿಗಿಂತ ಹೆಚ್ಚು) ತೂಕವಿದ್ದು,ಇದರ ಅಂತರರಾಷ್ಟ್ರೀಯ ಮಾರುಕಟ್ಟೆ ಮೌಲ್ಯ ಸುಮಾರು 40 ಕೋಟಿ ರೂ ಎಂದು ಅಂದಾಜು ಮಾಡಲಾಗಿದೆ.ದೋಹಾದಿಂದ ಆಗಮಿಸಿದ ಆರೋಪಿಯನ್ನು ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತಡೆಹಿಡಿಯಲಾಯಿತು ಎಂದು ಹಣಕಾಸು ಸಚಿವಾಲಯದ ಪ್ರಕಟಣೆ ತಿಳಿಸಿದೆ.
ಪ್ರಯಾಣಿಕನ ಸಾಮಾನುಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಿದಾಗ, ಅತ ಎರಡು ಸೂಪರ್ಹೀರೋ ಕಾಮಿಕ್್ಸ/ನಿಯತಕಾಲಿಕೆಗಳನ್ನು ಹೊತ್ತೊಯ್ಯುತ್ತಿರುವುದು ಕಂಡುಬಂದಿತು. ಅವು ಅಸಾಧಾರಣವಾಗಿ ಭಾರವಾಗಿದ್ದವು. ಅಧಿಕಾರಿಗಳು ನಿಯತಕಾಲಿಕೆಗಳ ಮುಖಪುಟಗಳಲ್ಲಿ ಮುಚ್ಚಿಡಲಾಗಿದ್ದ ಬಿಳಿ ಪುಡಿಯನ್ನು ಎಚ್ಚರಿಕೆಯಿಂದ ವಶಪಡಿಸಿಕೊಂಡಿದ್ದಾರೆ.
ಪುಡಿಯಲ್ಲಿ ಕೊಕೇನ್ ಇರುವುದು ಪತ್ತೆಯಾಗಿದೆ ಇದನ್ನು ಎನ್ ಡಿಪಿಎಸ್ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ವಶಪಡಿಸಿಕೊಳ್ಳಲಾಗಿದೆ. ನಂತರ ಪ್ರಯಾಣಿಕನನ್ನು ಎನ್ಡಿಪಿಎಸ್ ಕಾಯ್ದೆ, 1985 ರ ನಿಬಂಧನೆಗಳ ಅಡಿಯಲ್ಲಿ ಬಂಧಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಕಳೆದ ಮಾರ್ಚ್ನಲ್ಲಿ ಇದೇ ರೀತಿಯ ಘಟನೆಯಲ್ಲಿ, ಬೆಂಗಳೂರು ವಿಮಾನ ನಿಲ್ದಾಣದಲ್ಲಿ 12.56 ಕೋಟಿ ಮೌಲ್ಯದ ವಿದೇಶಿ ಮೂಲದ ಚಿನ್ನದ ಗಟ್ಟಿಗಳನ್ನು ಸಾಗಿಸುತ್ತಿದ್ದ ಪ್ರಯಾಣಿಕನನ್ನು ಬಂದಿಸಲಾಗಿತ್ತು.
ನಿರ್ದಿಷ್ಟ ಗುಪ್ತಚರ ಮಾಹಿತಿಯ ಮೇರೆಗೆ ಕಾರ್ಯನಿರ್ವಹಿಸಿದ ಡಿಆರ್ಐ ಅಧಿಕಾರಿಗಳು, ಮಾರ್ಚ್ 3, 2025 ರಂದು ಎಮಿರೇಟ್ಸ್ ವಿಮಾನದ ಮೂಲಕ ದುಬೈನಿಂದ ಬೆಂಗಳೂರಿಗೆ ಆಗಮಿಸಿದ್ದ ಸುಮಾರು 33 ವರ್ಷ ವಯಸ್ಸಿನ ಭಾರತೀಯ ಮಹಿಳಾ ಪ್ರಯಾಣಿಕರನ್ನು ತಡೆದು ಪರಿಶೀಲಿಸಿದಾಗ, ಆ ವ್ಯಕ್ತಿಯ ಮೇಲೆ 14.2 ಕೆಜಿ ತೂಕದ ಚಿನ್ನದ ಗಟ್ಟಿಗಳನ್ನು ಚಾತುರ್ಯದಿಂದ ಮರೆಮಾಚಲಾಗಿತ್ತು.
12.56 ಕೋಟಿ ರೂ. ಮೌಲ್ಯದ ಈ ಅಕ್ರಮ ಸರಕನ್ನು 1962 ರ ಕಸ್ಟಮ್ಸ್ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ವಶಪಡಿಸಿಕೊಳ್ಳಲಾಗಿತ್ತು. ಈ ದಾಳಿಯ ನಂತರ, ಡಿರ್ಆಐ ಅಧಿಕಾರಿಗಳು ಬೆಂಗಳೂರಿನ ಲ್ಯಾವೆಲ್ಲೆ ರಸ್ತೆಯಲ್ಲಿರುವ ಅವರ ನಿವಾಸದಲ್ಲಿ ಶೋಧ ನಡೆಸಿದರು, ಅಲ್ಲಿ ಅವರು ತಮ ಪತಿಯೊಂದಿಗೆ ವಾಸಿಸುತ್ತಿದ್ದರು. ಈ ಶೋಧದಲ್ಲಿ 2.06 ಕೋಟಿ ಮೌಲ್ಯದ ಚಿನ್ನಾಭರಣಗಳು ಮತ್ತು 2.67 ಕೋಟಿ ಮೌಲ್ಯದ ಭಾರತೀಯ ಕರೆನ್ಸಿಯನ್ನು ವಶಪಡಿಸಿಕೊಳ್ಳಲಾಗಿತ್ತು.
- ಹಾಸನಾಂಬೆ ದರ್ಶನೋತ್ಸವಕ್ಕೆ ವಿದ್ಯುಕ್ತ ತೆರೆ, 26 ಲಕ್ಷಕ್ಕೂ ಹೆಚ್ಚು ಭಕ್ತರಿಂದ ದೇವಿ ದರ್ಶನ
- ನಾಳೆ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಪಟ್ಟಾಭಿಷೇಕದ 58ನೇ ವರ್ಧಂತ್ಯುತ್ಸವ
- ಮೈಸೂರು ಮತ್ತು ಮಂಡ್ಯ ಜಿಲ್ಲೆಯಲ್ಲಿ ಭ್ರೂಣ ಪತ್ತೆ-ಹತ್ಯೆ ಜಾಲ ಪತ್ತೆ, ಅಧಿಕಾರಿಗಳ ದಾಳಿ
- ಕಾಂಗ್ರೆಸ್ನಲ್ಲಿ ನಾಯಕತ್ವ ಕೊರತೆ ಇಲ್ಲ : ಎಂ.ಬಿ.ಪಾಟೀಲ್
- ಬೆಂಗಳೂರಲ್ಲಿ ಟೆರೇಸ್ನಿಂದ ಬಿದ್ದು ಯುವಕ ಸಾವು