ನವದೆಹಲಿ,ಜು.25- ಸಂವಿಧಾನದ ಪೀಠಿಕೆಯಿಂದ ಸಮಾಜವಾದ ಮತ್ತು ಜಾತ್ಯತೀತತೆ ಪದಗಳನ್ನು ಮರುಪರಿಶೀಲಿಸುವ ಅಥವಾ ತೆಗೆದುಹಾಕುವ ಯಾವುದೇ ಯೋಜನೆ ಅಥವಾ ಉದ್ದೇಶ ಕೇಂದ್ರ ಸರ್ಕಾರಕ್ಕೆ ಇಲ್ಲ ಎಂದು ವದಂತಿಗಳಿಗೆ ತೆರೆ ಎಳೆದಿದೆ.
ಕೆಲ ದಿನಗಳ ಹಿಂದೆ ಆರ್ಎಸ್ಎಸ್ ಪ್ರಧಾನ ಕಾರ್ಯದರ್ಶಿ ದತ್ತಾತ್ರೀಯ ಹೊಸಬಾಳೆ ಅವರು ಸಂವಿಧಾನದ ಪೀಠಿಕೆಯಿಂದ ಸಮಾಜವಾದ ಮತ್ತು ಜಾತ್ಯತೀತತೆ ಪದಗಳು ಬೇಕೆ ಎಂಬುದರ ಬಗ್ಗೆ ಚರ್ಚೆಯ ಅಗತ್ಯವಿದೆ ಎಂದು ಹೇಳಿದ್ದರು. ಇದಕ್ಕೆ ದೇಶದ ನಾನಾ ಕಡೆ ಪರ- ವಿರೋಧ ಅಭಿಪ್ರಾಯ ವ್ಯಕ್ತವಾಗಿತ್ತು.
ಈ ಎಲ್ಲಾ ಗೊಂದಲಗಳಿಗೆ ಪೂರ್ಣವಿರಾಮ ಹಾಕಿರುವ ಕೇಂದ್ರ ಸರ್ಕಾರ ಅಂತಹ ಯಾವುದೇ ಪ್ರಸ್ತಾವನೆ ನಮ ಸರ್ಕಾರದ ಮುಂದೆ ಇಲ್ಲ ಎಂದು ಹೇಳಿದೆ. ಸಂವಿಧಾನದ ಪೀಠಿಕೆಯಲ್ಲಿ ಸಮಾಜವಾದ ಮತ್ತು ಜಾತ್ಯತೀತತೆ ಎಂಬ ಪದಗಳ ಬಳಕೆಯನ್ನು ಸರ್ಕಾರ ಮರುಪರಿಶೀಲಿಸುತ್ತಿದೆಯೇ ಎಂದು ಸಮಾಜವಾದಿ ಪಕ್ಷದ ಸಂಸದ ರಾಮ್ಜಿ ಲಾಲ್ ಸುಮನ್ ಕೇಳಿದ್ದ ಲಿಖಿತ ಪ್ರಶ್ನೆಗೆ ಉತ್ತರಿಸಿರುವ ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು, 1976 ರ ತಿದ್ದುಪಡಿಯನ್ನು (42 ನೇ ಸಾಂವಿಧಾನಿಕ ತಿದ್ದುಪಡಿ) ಪ್ರಶ್ನಿಸುವ ಅರ್ಜಿಗಳನ್ನು ಸುಪ್ರೆಂ ಕೋರ್ಟ್ 2024 ರ ನವೆಂಬರ್ನಲ್ಲಿ ವಜಾಗೊಳಿಸಿದೆ.ಆದರೆ ಸಂವಿಧಾನವನ್ನು ತಿದ್ದುಪಡಿ ಮಾಡುವ ಸಂಸತ್ತಿನ ಅಧಿಕಾರವು ಪೀಠಿಕೆಗೆ ವಿಸ್ತರಿಸುತ್ತದೆ ಎಂದು ದೃಢಪಡಿಸಿದರು.
ಭಾರತೀಯ ಸಂದರ್ಭದಲ್ಲಿ ಸಮಾಜವಾದವು ಕಲ್ಯಾಣ ರಾಜ್ಯವನ್ನು ಸೂಚಿಸುತ್ತದೆ ಮತ್ತು ಖಾಸಗಿ ವಲಯದ ಬೆಳವಣಿಗೆಗೆ ಅಡ್ಡಿಯಾಗುವುದಿಲ್ಲ. ಆದರೆ ಜಾತ್ಯತೀತತೆ ಸಂವಿಧಾನದ ಮೂಲ ರಚನೆಯ ಅವಿಭಾಜ್ಯ ಅಂಗವಾಗಿದೆ ಎಂದು ಉತ್ತರದಲ್ಲಿ ತಿಳಿಸಲಾಗಿದೆ.
ಕೆಲವು ಸಾಮಾಜಿಕ ಸಂಘಟನೆಗಳ ಪದಾಧಿಕಾರಿಗಳು ಈ ನಿಟ್ಟಿನಲ್ಲಿ ವಾತಾವರಣ ಸೃಷ್ಟಿಸುತ್ತಿದ್ದಾರೆಯೇ ಎಂಬ ಎಸ್ಪಿ ಸಂಸದರ ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಮೇಘವಾಲ್, ಕೆಲವು ಗುಂಪುಗಳು ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿರಬಹುದು ಅಥವಾ ಈ ಪದಗಳ ಮರುಪರಿಶೀಲನೆಗೆ ಪ್ರತಿಪಾದಿಸುತ್ತಿರಬಹುದು. ಅಂತಹ ಚಟುವಟಿಕೆಗಳು ಸಮಸ್ಯೆಯ ಸುತ್ತ ಸಾರ್ವಜನಿಕ ಚರ್ಚೆ ಅಥವಾ ವಾತಾವರಣವನ್ನು ಸೃಷ್ಟಿಸಬಹುದು, ಆದರೆ ಸರ್ಕಾರದ ಅಧಿಕೃತ ನಿಲುವು ಅಥವಾ ಕ್ರಮಗಳನ್ನು ಪ್ರತಿಬಿಂಬಿಸುವುದಿಲ್ಲ ಎಂದು ಅವರು ಹೇಳಿದರು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಧಾನ ಕಾರ್ಯದರ್ಶಿ ದತ್ತಾತ್ರೀಯ ಹೊಸಬಾಳೆ ಕಳೆದ ತಿಂಗಳು ಜಾತ್ಯತೀತತೆ ಮತ್ತು ಸಮಾಜವಾದವು ಬಾಬಾಸಾಹೇಬ್ ಅಂಬೇಡ್ಕರ್ ರಚಿಸಿದ ಸಂವಿಧಾನದ ಪೀಠಿಕೆಯ ಭಾಗವಾಗಿರಲಿಲ್ಲ ಮತ್ತು ಪ್ರಸ್ತುತ ಕಾಲದಲ್ಲಿ ಅವುಗಳ ಪ್ರಸ್ತುತತೆಯನ್ನು ಪರಿಶೀಲಿಸಬೇಕು ಎಂದು ಹೇಳಿದ್ದರು.
ಆರ್ಎಸ್ಎಸ್ ಪ್ರಧಾನ ಕಾರ್ಯದರ್ಶಿಯವರ ಹೇಳಿಕೆಗಳ ಕೆಲವು ದಿನಗಳ ನಂತರ, ಮಾಜಿ ಉಪಾಧ್ಯಕ್ಷ ಜಗದೀಪ್ ಧನಕರ್ ಅವರು ತುರ್ತು ಪರಿಸ್ಥಿತಿಯ ಸಮಯದಲ್ಲಿ ಪೀಠಿಕೆಯಲ್ಲಿ ಸೇರಿಸಲಾದ ಪದಗಳು ಕೊಳೆಯುವ ಗಾಯ ಎಂದು ಪ್ರತಿಪಾದಿಸಿದ್ದರು. ಪೀಠಿಕೆ ಪವಿತ್ರವಾಗಿದ್ದು ಬದಲಾಯಿಸಲಾಗದು ಮತ್ತು ಆ ಪದಗಳು ಸನಾತನದ ಚೈತನ್ಯಕ್ಕೆ ತ್ಯಾಗ ಎಂದು ಅವರು ಪ್ರತಿಪಾದಿಸಿದ್ದರು.
ಪೀಠಿಕೆಗೆ ತಿದ್ದುಪಡಿಗಳ ಕುರಿತು ಯಾವುದೇ ಚರ್ಚೆಗಳಿಗೆ ಸಂಪೂರ್ಣ ಚರ್ಚೆ ಮತ್ತು ವಿಶಾಲವಾದ ಒಮತದ ಅಗತ್ಯವಿರುತ್ತದೆ, ಆದರೆ ಇಲ್ಲಿಯವರೆಗೆ, ಈ ನಿಬಂಧನೆಗಳನ್ನು ಬದಲಾಯಿಸಲು ಸರ್ಕಾರ ಯಾವುದೇ ಔಪಚಾರಿಕ ಪ್ರಕ್ರಿಯೆಯನ್ನು ಪ್ರಾರಂಭಿಸಿಲ್ಲ ಎಂದು ಅವರು ಹೇಳಿದರು.
- ಬೆಂಗಳೂರು : ಟೆಕ್ಕಿ ಮನೆಯಲ್ಲಿ 30 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು
- ಕುಡುಕ ಗಂಡನ ಕಾಟ ಮತ್ತು ಬಡತನಕ್ಕೆ ಬೇಸತ್ತು ಮೂವರು ಹೆಣ್ಣು ಮಕ್ಕಳಿಗೆ ವಿಷವಿಟ್ಟು ಕೊಂದ ತಾಯಿ
- SHOCKING : ಮೈಸೂರಿನಲ್ಲಿ ಡ್ರಗ್ಸ್ ಫ್ಯಾಕ್ಟರಿ ಪತ್ತೆ, ಕೋಟ್ಯಂತರ ರೂ. ಬೆಲೆಯ ಮಾದಕ ವಸ್ತು ವಶ
- ಅಮೆರಿಕದಲ್ಲಿ 11 ಮಂದಿಗೆ ಇರಿದ ಯುವಕ, 6 ಜನರ ಸ್ಥಿತಿ ಗಂಭೀರ
- ರಾಜ್ಯದಲ್ಲಿ ಗೊಬ್ಬರ ಅಭಾವ : ನಾಳೆಯಿಂದ ಬಿಜೆಪಿ ಹೋರಾಟ