ಬೆಂಗಳೂರು,ಆ.2- ಅಂತೂ ಇಂತೂ ಬಿಬಿಎಂಪಿಗೆ ಎಲೆಕ್ಷನ್ ನಡೆಯುವ ಸಾಧ್ಯತೆಗಳು ಗೋಚರಿಸುತ್ತಿವೆ.ಬಿಬಿಎಂಪಿ ಆಡಳಿತಾಧಿಕಾರಿ ತುಷಾರ್ ಗಿರಿನಾಥ್ ಅವರು ಸುಪ್ರೀಂ ಕೋರ್ಟ್ಗೆ ಸಲ್ಲಿಸಿರುವ ಅಫಿಡವಿಟ್ನಲ್ಲಿ ಡಿಸಂಬರ್ ಒಳಗೆ ಬಿಬಿಎಂಪಿಯ ಐದು ಪಾಲಿಕೆಗೆ ಎಲೆಕ್ಷನ್ ನಡೆಸಲು ಸರ್ಕಾರ ಸಿದ್ದವಿದೆ ಎನ್ನುವುದನ್ನು ಸ್ಪಷ್ಟಪಡಿಸಿದ್ದಾರೆ.
ಅವರು ಸುಪ್ರೀಂ ಕೋರ್ಟ್ಗೆ ಸಲ್ಲಿಸಿರುವ ಅಫಿಡವಿಟ್ ಈ ಸಂಜೆಗೆ ಲಭ್ಯವಿದೆ. 26 ಪುಟಗಳ ಪ್ರಮಾಣ ಪತ್ರದಲ್ಲಿ ಬಿಬಿಎಂಪಿಯನ್ನು ಐದು ಪಾಲಿಕೆಗಳನ್ನಾಗಿ ವಿಂಗಡಿಸಿ, ಗಡಿ ಗುರುತಿಸಲಾಗಿದೆ. ಈ ಐದು ಪಾಲಿಕೆಗೆ ಚುನಾವಣೆ ನಡೆಸಲು ಸಿದ್ದವಿರೋದಾಗಿ ತಿಳಿಸಲಾಗಿದೆ.
ಬೆಂಗಳೂರು ಪಶ್ಚಿಮ ನಗರ ಪಾಲಿಕೆ,ಚ ಬೆಂಗಳೂರು ದಕ್ಷಿಣ ನಗರ ಪಾಲಿಕೆ, ಬೆಂಗಳೂರು ಕೇಂದ್ರ ನಗರ ಪಾಲಿಕೆ, ಬೆಂಗಳೂರು ಪೂರ್ವ ನಗರ ಪಾಲಿಕೆ ಹಾಗೂ ಬೆಂಗಳೂರು ಉತ್ತರ ನಗರ ಪಾಲಿಕೆ ರಚನೆ ಮಾಡಲಾಗಿದೆ ಎಂದು ಹೇಳಲಾಗಿದೆ.
ಗರಿಗೆದರಿದ ಚಟುವಟಿಕೆ: ನವಂಬರ್ ಒಳಗೆ ಎಲ್ಲಾ ಜಿಬಿಎ ರಚನೆ ಕಾರ್ಯಗಳನ್ನು ಪೂರ್ಣಗೊಳಿಸಿ ಚುನಾವಣೆ ನಡೆಸಲು ಸಿದ್ದ ಎಂದು ಸರ್ಕಾರ ಪ್ರಮಾಣ ಪತ್ರ ಸಲ್ಲಿಸುತ್ತಿದ್ದಂತೆ ಕಳೆದ ಐದು ವರ್ಷಗಳಿಂದ ಚುನಾವಣೆಗಾಗಿ ಕಾಯುತ್ತಿದ್ದ ಆಕಾಂಕ್ಷಿಗಳು ನಿದ್ದೆಯಿಂದ ಎಚ್ಚೆತ್ತವರಂತೆ ಚುರುಕಾಗಿದ್ದಾರೆ.ಈಗಾಗಲೇ ಕೆಲ ಶಾಸಕರು ತಮ ಬೆಂಬಲಿಗರೊಂದಿಗೆ ಚುನಾವಣೆ ಸಾಧಕ-ಬಾಧಕಗಳ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಇದುವರೆಗೂ ಶಾಸಕರ ಕೈಗೆ ಸಿಗದೆ ಸಬೂಬು ಹೇಳಿ ತಪ್ಪಿಸಿಕೊಳ್ಳುತ್ತಿದ್ದ ಆಕಾಂಕ್ಷಿಗಳು ತಮ ನಾಯಕರ ಮನೆಗಳಿಗೆ ದೌಡಾಯಿಸಿ ಅವರ ಆರ್ಶೀವಾದ ಪಡೆದು ಟಿಕೆಟ್ ಗಿಟ್ಟಿಸಿಕೊಳ್ಳುವ ಕಾರ್ಯಕ್ಕೂ ಕೈ ಹಾಕಿದ್ದಾರೆ ಎಂದು ತಿಳಿದುಬಂದಿದೆ.
2026ಕ್ಕೆ ಚುನಾವಣೆ: ಸರ್ಕಾರ ಜಿಬಿಎ ಕಾರ್ಯವನ್ನು ನವಂಬರ್ ಅಂತ್ಯದೊಳಗೆ ಪೂರ್ಣಗೊಳಿಸಿದರೂ ಚುನಾವಣೆ ನಡೆಸಲು ನಮಗೆ ಎರಡು ತಿಂಗಳ ಸಮಯ ಬೇಕು ಎಂದು ಚುನಾವಣಾ ಆಯೋಗ ನ್ಯಾಯಾಲಯಕ್ಕೆ ತಿಳಿಸಿರುವುದರಿಂದ ಎಲ್ಲಾ ಅಂದುಕೊಂಡಂತೆ ನಡೆದರೆ 2026ರ ಆರಂಭದಲ್ಲಿ ಬಿಬಿಎಂಪಿಯ ಐದು ಪಾಲಿಕೆಗಳಿಗೆ ಚುನಾವಣೆ ನಡೆಯುವ ಸಾಧ್ಯತೆಗಳಿವೆ.
- ಮತಗಳ್ಳತನ ಸಹಿ ಸಂಗ್ರಹ ಅಭಿಯಾನದಲ್ಲಿ ಪಾಲ್ಗೊಳ್ಳದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ವಜಾ: ಡಿಕೆಶಿ ಎಚ್ಚರಿಕೆ
- ಚಿಲ್ಲರೆ ಕೇಳುವ ಹಾಗೂ ಲಗ್ನ ಪತ್ರಿಕೆ ನೀಡುವ ನೆಪದಲ್ಲಿ ಎರಡು ಕಡೆ ದರೋಡೆ
- ಪೊಲೀಸರಿಗೆ ಸವಾಲಾಗಿದ್ದ ನಟೋರಿಯಸ್ ಕಳ್ಳನ ರೋಚಕ ಕಥೆ
- ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ವಿದೇಶಿ ಡ್ರಗ್ಸ್ ಜಾಲ..!
- ಮತ್ತಷ್ಟು ತೀವ್ರಗೊಂಡ ರೈತರ ಪ್ರತಿಭಟನೆ, 8ನೇ ದಿನಕ್ಕೆ ಕಾಲಿಟ್ಟ ಕಿಚ್ಚು
