ಹೆಚ್ ಡಿ ಕೋಟೆ,ನ.7- ಮತ್ತೆ ಸರಗೂರು ತಾಲ್ಲೂಕಿನಲ್ಲಿ ಹುಲಿ ಅಟ್ಟಹಾಸ ಮೆರೆದಿದ್ದು, ರೈತರೊಬ್ಬರನ್ನು ಕೊಂದು ಹಾಕಿದೆ. ಇಂದು ಬೆಳಗ್ಗೆ 8.30ರ ಸಂದರ್ಭದಲ್ಲಿ ಹಳೆ ಹೆಗಲು ಬಳಿ ಚೌಡನಾಯಕ ಅಲಿಯಾಸ್ ದಂಡನಾಯಕ ಎಂಬುವವರು ತಮ್ಮ ಜಮೀನಿನಲ್ಲಿ ವ್ಯವಸಾಯಕ್ಕಾಗಿ ಬಿತ್ತನೆ ಕೆಲಸಕ್ಕೆ ಬೀಜಗಳನ್ನು ತೆಗೆದುಕೊಂಡು ಹೋಗುವಾಗ ಮೊಳೆಯೂರು ಅರಣ್ಯ ಪ್ರದೇಶದ ನುಗು ಹಿನ್ನೀರಿನ ಬಳಿ ಹುಲಿಯೊಂದು ಚೌಡನಾಯಕನ ಮೇಲೆ ಎಗರಿದೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.
ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಅರಣ್ಯಸಿಬ್ಬಂದಿಗಳು ಹಾಗೂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈಗಾಗಲೇ ಮೂರು ಹುಲಿಗಳನ್ನು ಹಿಡಿಯಲಾಗಿತ್ತು. ಆದರೆ ಈಗ ಮತ್ತೆ ಹುಲಿ ದಾಳಿ ನಡೆದಿರುವುದು ಸ್ಥಳೀಯ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಹುಲಿ ಅಡ್ಡಾಡುವ ಅರಣ್ಯದಂಚಿನ ಪ್ರದೇಶಗಳಲ್ಲಿ ಯಾರೂ ಓಡಾಡಬಾರದು ಎಂಬ ಸೂಚನೆ ನೀಡಿದ್ದ ನಡುವೆಯೇ ಮತ್ತೊಬ್ಬ ರೈತ ಹುಲಿ ಬಾಯಿಗೆ ಸಿಕ್ಕಿರುವುದು ಭೀತಿ ಹುಟ್ಟಿಸಿದೆ.
