ಬೆಂಗಳೂರು,ಆ.10– ರಾಜಧಾನಿ ಬೆಂಗಳೂರು ಹಾಗೂ ಉತ್ತರ ಕರ್ನಾಟಕಕ್ಕೆ ಸಂಪರ್ಕ ಕಲ್ಪಿಸುವ ಬೆಳಗಾವಿ-ಬೆಂಗಳೂರು ನಡುವೆ ಪ್ರಯಾಣಿಸುವ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿಗೆ ಪ್ರಧಾನಿ ನರೇಂದ್ರ ಮೋದಿಯವರು ವಿದ್ಯುಕ್ತವಾಗಿ ಚಾಲನೆ ನೀಡಿದರು.
ವಾರದ 6 ದಿನದಲ್ಲಿ (ಗುರುವಾರ ಹೊರತುಪಡಿಸಿ) ಸಂಚರಿಸುವ ಈ ರೈಲು ಪ್ರತಿದಿನ ಬೆಳಗಾವಿಯಿಂದ ಬೆಳಿಗ್ಗೆ 5.20ಕ್ಕೆ ಹೊರಟು 1.50ಕ್ಕೆ ಬೆಂಗಳೂರು ತಲುಪಲಿದೆ. ನಂತರ 2.20ಕ್ಕೆ ಬೆಂಗಳೂರಿನಿಂದ ಹೊರಟು 10.40ಕ್ಕೆ ಬೆಳಗಾವಿ ತಲುಪಲಿದೆ.
ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ಮೋದಿಯವರು ರೈಲಿಗೆ ಹಸಿರು ನಿಶಾನೆ ತೋರಿ ಶುಭ ಕೋರಿದರು.
ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಸಚಿವರಾದ ಅಶ್ವಿನಿ ವೈಷ್ಣವ್, ಶೋಭಾ ಕರಂದ್ಲಾಜೆ, ವಿ.ಸೋಮಣ್ಣ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಭೈರತಿ ಸುರೇಶ್, ದಿನೇಶ್ಗುಂಡೂರಾವ್, ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ಸಂಸದರಾದ ತೇಜಸ್ವಿ ಸೂರ್ಯ, ಪಿ.ಸಿ.ಮೋಹನ್ ಮತ್ತಿತರರು ಪ್ರಧಾನಿಗೆ ಸಾಥ್ ನೀಡಿದರು.
ಉದ್ಘಾಟನೆಗೂ ಮುನ್ನ ಮೋದಿಯವರು ರೈಲಿನಲ್ಲಿದ್ದ ಕೆಲವು ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿ ವಂದೇ ಭಾರತ್ ರೈಲಿನ ಬಗ್ಗೆ ಮಾಹಿತಿ ಪಡೆದುಕೊಂಡರು. ನಂತರ ಕಾರ್ಯಕರ್ತರತ್ತ ಕೈಬೀಸಿದರು.ಇದೇ ಸಮಯದಲ್ಲಿ ಅಮೃತ್ಸರ್ದಿಂದ ಶ್ರೀ ಮಾತಾ ವೈಷ್ಣೋದೇವಿ ಕತ್ರಾ ಹಾಗೂ ನಾಗ್ಪುರ್ (ಅಜ್ನಿ) ಯಿಂದ ಪುಣೆಯ ವರೆಗೆ ಚಲಿಸಲಿರುವ ವಂದೇ ಭಾರತ್ ಎಕ್್ಸಪ್ರೆಸ್ ರೈಲುಗಳಿಗೂ ಸಹ ವರ್ಚುವಲ್ ಮೂಲಕ ಚಾಲನೆ ನೀಡಿದರು.
ಪ್ರಯಾಣಿಕರ ಅನುಕೂಲಕ್ಕಾಗಿ ಹಾಗೂ ಉತ್ತರ ಕರ್ನಾಟಕ ಮತ್ತು ರಾಜ್ಯ ರಾಜಧಾನಿಯ ನಡುವಿನ ಸಂಪರ್ಕವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಬೆಂಗಳೂರು – ಬೆಳಗಾವಿ ನಡುವೆ ಹೊಸ ವಂದೇ ಭಾರತ್ ರೈಲು ಸೇವೆ ಆ.10 ರಿಂದ ಲಭ್ಯವಾಗಲಿದೆ. ನೈಋತ್ಯ ರೈಲ್ವೆಯು ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣ ಮತ್ತು ಬೆಳಗಾವಿ ನಡುವೆ ಹೊಸ ವಂದೇ ಭಾರತ್ ರೈಲು ಸೇವೆ (ರೈಲು ಸಂಖ್ಯೆ 26752/26751) ಪರಿಚಯಿಸಿದೆ.
ಈ ಅರೆ – ಹೈಸ್ಪೀಡ್ ರೈಲು ಸೇವೆ ಬುಧವಾರ ಹೊರತುಪಡಿಸಿ, ವಾರದಲ್ಲಿ ಆರು ದಿನಗಳು ಸಂಚರಿಸಲಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಆಗಸ್ಟ್ 10 ರಂದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ ಈ ಹೊಸ ವಂದೇ ಭಾರತ್ ಎಕ್್ಸಪ್ರೆಸ್ ರೈಲಿಗೆ ಹಸಿರು ನಿಶಾನೆ ತೋರಿದ್ದಾರೆ.
ಉದ್ಘಾಟನೆಯ ನಂತರ, ವಿಶೇಷ ರೈಲು ಸಂಖ್ಯೆ 06575 ಕೆಎಸ್ಆರ್ ಬೆಂಗಳೂರಿನಿಂದ 11:15 ಗಂಟೆಗೆ ಹೊರಡಲಿದೆ. ಇದು ಯಶವಂತಪುರ, ತುಮಕೂರು, ದಾವಣಗೆರೆ, ಎಸ್ಎಂಎಂ ಹಾವೇರಿ, ಎಸ್ಎಸ್ಎಸ್ ಹುಬ್ಬಳ್ಳಿ ಮತ್ತು ಧಾರವಾಡ ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದ್ದು, ಬಳಿಕ ಅದೇ ದಿನ 20:00 ಗಂಟೆಗೆ ಬೆಳಗಾವಿಯನ್ನು ತಲುಪಲಿದೆ.
ಎಲ್ಲೆಲ್ಲಿ ಯಾವ ಸಮಯಕ್ಕೆ ನಿಲುಗಡೆ?:
ರೈಲು ಸಂಖ್ಯೆ 26751/26752ರ ನಿಯಮಿತ ಸೇವೆಗಳು ಆಗಸ್ಟ್ 11, 2025 ರಿಂದ ಪ್ರಾರಂಭವಾಗಲಿವೆ. ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಸಂಖ್ಯೆ 26751 ಬೆಳಗಾವಿಯಿಂದ 05:20 ಗಂಟೆಗೆ ಹೊರಟು, 13:50 ಗಂಟೆಗೆ ಕೆಎಸ್ಆರ್ ಬೆಂಗಳೂರನ್ನು ತಲುಪಲಿದೆ. ಇದು ಮಾರ್ಗ ಮಧ್ಯೆ ಧಾರವಾಡ (07:08/07:10 ಗಂಟೆ), ಎಸ್ಎಸ್ಎಸ್ ಹುಬ್ಬಳ್ಳಿ (07:30/07:35 ಗಂಟೆ), ಎಸ್ಎಂಎಂ ಹಾವೇರಿ (08:35/08:37 ಗಂಟೆ), ದಾವಣಗೆರೆ (09:25/09:27 ಗಂಟೆ), ತುಮಕೂರು (12:15/12:17 ಗಂಟೆ) ಮತ್ತು ಯಶವಂತಪುರ (13:03/13:05 ಗಂಟೆ) ನಿಲ್ದಾಣಗಳಲ್ಲಿ ನಿಲ್ಲಲಿದೆ.
ಮರಳಿ ಪ್ರಯಾಣಿಸುವಾಗ, ರೈಲು ಸಂಖ್ಯೆ 26752 – ಬೆಂಗಳೂರಿನಿಂದ 14:20 ಗಂಟೆಗೆ ಹೊರಟು, 22:40 ಗಂಟೆಗೆ ಬೆಳಗಾವಿಯನ್ನು ತಲುಪಲಿದೆ. ಮಾರ್ಗ ಮಧ್ಯೆ ಯಶವಂತಪುರ (14:28/14:30 ಗಂಟೆ), ತುಮಕೂರು (15:03/15:05 ಗಂಟೆ), ದಾವಣಗೆರೆ (17:48/17:50 ಗಂಟೆ), ಎಸ್ಎಂಎಂ ಹಾವೇರಿ (18:48/18:50 ಗಂಟೆ), ಎಸ್ಎಸ್ಎಸ್ ಹುಬ್ಬಳ್ಳಿ (20:00/20:05 ಗಂಟೆ) ಮತ್ತು ಧಾರವಾಡ (20:25/20:27 ಗಂಟೆ) ನಿಲ್ದಾಣಗಳಲ್ಲಿ ನಿಲ್ಲುತ್ತದೆ.
ಈ ವಂದೇ ಭಾರತ್ ರೈಲು 8 ಬೋಗಿಗಳನ್ನು ಒಳಗೊಂಡಿದ್ದು, ಇದರಲ್ಲಿ 4 ಮೋಟರ್ ಕಾರ್ಗಳು, 1 ಟ್ರೈಲಿಂಗ್ ಕಾರ್, 1 ಎಕ್ಸಿಕ್ಯುಟಿವ್ ಕ್ಲಾಸ್/ಟ್ರೈಲಿಂಗ್ ಕಾರ್ ಮತ್ತು 2 ಡ್ರೈವಿಂಗ್ ಟ್ರೈಲರ್ ಕಾರ್ಗಳು ಇರಲಿವೆ. ಪ್ರಯಾಣಿಕರಿಗೆ ವೇಗವಾದ, ಸುರಕ್ಷಿತ ಮತ್ತು ಹೆಚ್ಚು ಆರಾಮದಾಯಕ ಪ್ರಯಾಣ ಒದಗಿಸಲು ಇದನ್ನು ವಿನ್ಯಾಸಗೊಳಿಸಲಾಗಿದೆ. ಇದು ವಿಶ್ವ ದರ್ಜೆಯ ಸೌಲಭ್ಯಗಳು ಮತ್ತು ಸುಧಾರಿತ ಪ್ರಯಾಣದ ಅನುಭವವನ್ನು ನೀಡಲಿದೆ.