ಬೆಂಗಳೂರು, ಆ.11- ಬಡತನರೇಖೆ (ಬಿಪಿಎಲ್) ಪಡಿತರ ಚೀಟಿಯಲ್ಲಿರುವ ಅನರ್ಹ ಫಲಾನುಭವಿಗಳನ್ನು ಸರಾಸರಿ ಬಡತನ ರೇಖೆ (ಎಪಿಎಲ್)ಗೆ ಸೇರ್ಪಡೆ ಮಾಡಲು ಸದನದ ಸದಸ್ಯರು ಸರ್ವಸಮತಿ ಒಪ್ಪಿಗೆ ನೀಡಿದರೆ ಶೀಘ್ರದಲ್ಲೇ ಕಾರ್ಯಾರಂಭ ಮಾಡಲಾಗುವುದು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್.ಮುನಿಯಪ್ಪ ವಿಧಾನಪರಿಷತ್ನಲ್ಲಿ ತಿಳಿಸಿದರು.
ಸದಸ್ಯ ಎನ್.ನಾಗರಾಜ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಈ ಹಿಂದೆ ಬಿಪಿಎಲ್ ಕಾರ್ಡ್ನಲ್ಲಿದ್ದ ಫಲಾನುಭವಿಗಳನ್ನು ಎಪಿಎಲ್ಗೆ ವರ್ಗಾವಣೆ ಮಾಡಲು ಇಲಾಖೆ ಮುಂದಾದಾಗ ದೊಡ್ಡ ವಿವಾದವೇ ಸೃಷ್ಟಿಯಾಯಿತು ಎಂದು ವಿಷಾದಿಸಿದರು.
ಸದನದ ಸದಸ್ಯರೆಲ್ಲರೂ ಒಪ್ಪಿಗೆಯನ್ನು ಸೂಚಿಸಿದರೆ ಎಪಿಎಲ್ನಿಂದ ಬಿಪಿಎಲ್ಗೆ ಅನರ್ಹ ಫಲಾನುಭವಿಗಳನ್ನು ವರ್ಗಾವಣೆ ಮಾಡಲಾಗುವುದು. ನಮ ಇಲಾಖೆ ನಡೆಸಿರುವ ಸಮೀಕ್ಷೆ ಪ್ರಕಾರ ಇಂತಹ 15 ಲಕ್ಷ ಫಲಾನುಭವಿಗಳು ಬಿಪಿಎಲ್ಗೆ ಸೇರ್ಪಡೆಯಾಗಿದ್ದಾರೆ. ಅಂದಾಜು 50 ರಿಂದ 60 ಲಕ್ಷ ಫಲಾನುಭವಿಗಳು ಲಾಭ ಪಡೆಯುತ್ತಿದ್ದಾರೆ ಎಂದು ಹೇಳಿದರು.
ಅನರ್ಹ ಫಲಾನುಭವಿಗಳು ಪಡಿತರ ಆಹಾರಧಾನ್ಯಗಳನ್ನು ಪಡೆಯುತ್ತಿರುವ ಪರಿಣಾಮ ಸರ್ಕಾರದ ಬೊಕ್ಕಸಕ್ಕೂ ಹೊರೆಯಾಗುತ್ತದೆ. ಇದನ್ನು ಮಾಡುವಾಗ ಕೆಲವು ಸಮಸ್ಯೆಗಳು ಎದುರಾಗುತ್ತವೆ. ಕೆಲವರು ಅರ್ಹ ಫಲಾನುಭವಿಗಳನ್ನೇ ತೆಗೆದುಹಾಕುತ್ತಾರೆ ಎಂದು ಅಪಪ್ರಚಾರ ನಡೆಸುತ್ತಾರೆ. ಇದಕ್ಕೆ ಸದಸ್ಯರು ಅವಕಾಶ ಮಾಡಿಕೊಡಬಾರದು. ನಿಮ ಒಪ್ಪಿಗೆ ಇದ್ದರೆ ಅನರ್ಹರನ್ನು ತೆಗೆದುಹಾಕಲು ಸರ್ಕಾರ ಸಿದ್ಧವಿದೆ ಎಂದು ಘೋಷಿಸಿದರು.
ದಕ್ಷಿಣ ಭಾರತದ ರಾಜ್ಯಗಳ ಪೈಕಿ ಕರ್ನಾಟಕದಲ್ಲೇ ಅತೀ ಹೆಚ್ಚು ಬಿಪಿಎಲ್ ಫಲಾನುಭವಿಗಳಿದ್ದಾರೆ. ತಮಿಳುನಾಡು ಶೇ.50, ಕೇರಳ ಶೇ.45, ತೆಲಂಗಾಣ ಶೇ.50, ಆಂಧ್ರಪ್ರದೇಶ ಶೇ.50, ನಮಲ್ಲಿ ಮಾತ್ರ ಶೇ. 70 ರಿಂದ 75 ರಷ್ಟು ಬಿಪಿಎಲ್ ಫಲಾನುಭವಿಗಳು ಇದ್ದಾರೆ ಎಂದು ಅಂಕಿ ಸಂಖ್ಯೆಗಳ ವಿವರಣೆ ನೀಡಿದರು.
ಓರ್ವ ಬಿಪಿಎಲ್ ಫಲಾನುಭವಿ ಎಂದು ಗುರುತಿಸಬೇಕಾದರೆ ಕೇಂದ್ರ ಸರ್ಕಾರ 11 ಹಾಗೂ ರಾಜ್ಯಸರ್ಕಾರ 5 ಮಾನದಂಡಗಳನ್ನು ನಿಗದಿಪಡಿಸಿದೆ. ಈ ಮಾನದಂಡವನ್ನು ನಾವು ಪಾಲನೆ ಮಾಡಿದರೆ ಬಿಪಿಎಲ್ ಫಲಾನುಭವಿಗಳ ಸಂಖ್ಯೆ 35ಕ್ಕೆ ಇಳಿಕೆಯಾಗುತ್ತದೆ ಎಂದರು.
ರಾಜ್ಯದಲ್ಲಿ ಪಡಿತರ ದಾನ್ಯಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿರುವವರ ಮೇಲೆ ಇಲಾಖೆ ಹಲವು ದಿಟ್ಟ ಕ್ರಮಗಳನ್ನು ತೆಗೆದುಕೊಂಡಿದೆ. 2023-24ರಲ್ಲಿ 404 ಪ್ರಕರಣಗಳು- 20 ಕೋಟಿ ರೂ.ದಂಡ, 2024-25 ರಲ್ಲಿ 505 ಪ್ರಕರಣಗಳು-10 ಕೋಟಿ ರೂ. ದಂಡ, ಪ್ರಸಕ್ತ ವರ್ಷ 287 ಪ್ರಕರಣಗಳು-4 ಕೋಟಿ ರೂ. ದಂಡವನ್ನು ವಸೂಲಿ ಮಾಡಲಾಗಿದೆ.
ಪಡಿತರ ಆಹಾರಧಾನ್ಯಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಮಾಹಿತಿ ಬಂದ ತಕ್ಷಣ ನಮ ಅಧಿಕಾರಿಗಳು ಕೂಡ ತಕ್ಷಣ ದಾಳಿ ನಡೆಸಿ ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ತೆಗೆದುಕೊಂಡಿದ್ದಾರೆ.ಬಿಪಿಎಲ್ ಪಡಿತರ ಚೀಟಿಗೆ ಅರ್ಜಿ ಹಾಕಲು ತಂತ್ರಾಂಶದ ಕೊರತೆ ಎದುರಾಗಿತ್ತು. ಈಗ ಯಾವುದೇ ಸಮಸ್ಯೆಯಿಲ್ಲ ಎಂದು ಸಚಿವ ಮುನಿಯಪ್ಪ ಸ್ಪಷ್ಟಪಡಿಸದರು.