ಬೆಂಗಳೂರು,ಆ.13- ರಾಜ್ಯದ ಮುಜರಾಯಿ ಇಲಾಖೆ ವ್ಯಾಪ್ತಿಗೆ ಒಳಪಡುವ ದೇವಸ್ಥಾನಗಳಲ್ಲಿ ಇದೇ ಆ.15ರಿಂದ ಪ್ಲಾಸ್ಟಿಕ್ ಬಳಕೆ ಮಾಡುವುದನ್ನು ಸಂಪೂರ್ಣವಾಗಿ ನಿಷೇಧ ಮಾಡಲಾಗುವುದು ಎಂದು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ವಿಧಾನಪರಿಷತ್ಗೆ ತಿಳಿಸಿದರು.
ಸದಸ್ಯ ಮಧುಮಾದೇಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಮುಜರಾಯಿ ಇಲಾಖೆಯು ಆ.15ರಿಂದ ರಾಜ್ಯದ ಎಲ್ಲ ದೇವಸ್ಥಾನಗಳಲ್ಲಿ ಪ್ಲಾಸ್ಟಿಕ್ ನಿಷೇಧ ಮಾಡಿ, ಆದೇಶ ಹೊರಡಿಸಲಾಗುವುದು. ಬಳಕೆ ಮಾಡಿದವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದರು.
ದೇವಸ್ಥಾನದ ಒಳಗಡೆ ಮುಜರಾಯಿ ಇಲಾಖೆಯವರು ನಿಷೇಧ ಮಾಡಲು ಅವಕಾಶವಿದೆ. ಆವರಣದ ಒಳಗಡೆ ಜಿಲ್ಲಾಧಿಕಾರಿ ಗಳು ಆದೇಶ ಹೊರಡಿಸಬೇಕು. ಪ್ಲಾಸ್ಟಿಕ್ ಬಳಕೆಯಿಂದ ಪರಿಸರ, ಮಾನವನ ಆರೋಗ್ಯದ ಮೇಲ ದುಷ್ಪರಿಣಾಮ ಬೀರುತ್ತಿ ರುವುದರಿಂದ ಇದನ್ನು ನಿಷೇಧ ಮಾಡುತ್ತಿರುವುದಾಗಿ ಸರ್ಕಾರದ ಕ್ರಮ ಸಮರ್ಥಿಸಿ ಕೊಂಡರು.
ಮುಜರಾಯಿ ದೇವಸ್ಥಾನಗಳ ನಿರ್ವಹಣೆಗಾಗಿ ಧಾರ್ಮಿಕ ಪರಿಷತ್ಗಳನ್ನು ನಿರ್ಮಿಸಲಾಗಿದೆ. ಈ ಸಮಿತಿಗೆ ಮುಜರಾಯಿ ಸಚಿವರು ಅಧ್ಯಕ್ಷರಾಗಿರುತ್ತಾರೆ. ಎ ಗ್ರೇಡ್, ಬಿ ಗ್ರೇಡ್, ಸಿ ಗ್ರೇಡ್ ದೇವಸ್ಥಾನಗಳನ್ನು ನಿರ್ವಹಣೆ ಮಾಡಲಾಗುತ್ತದೆ ಎಂದರು.