ಬೆಂಗಳೂರು,ಆ.17- ನಗರದ ಪೀಣ್ಯ ಫ್ಲೈ ಓವರ್ ಮೇಲೆ ಇಂದು ಮುಂಜಾನೆ ಸಂಭವಿಸಿದ ಅಪಘಾತದಲ್ಲಿ ಗ್ಯಾಸ್ ಸಿಲಿಂಡರ್ ಡೆಲಿವರಿ ಬಾಯ್ ಒಬ್ಬರು ಮೃತಪಟ್ಟಿದ್ದಾರೆ. ಶಶಿಕುಮಾರ್ (26) ಮೃತಪಟ್ಟ ಡೆಲಿವರಿ ಬಾಯ್. ಇವರು ಮೂಲತಃ ಚಿತ್ರದುರ್ಗ ಜಿಲ್ಲೆಯವರು, ಇವರು ಮಾದನಾಯಕನಹಳ್ಳಿಯಲ್ಲಿ ವಾಸವಾಗಿದ್ದಾರೆ.
ಕೆಲಸದ ನಿಮಿತ್ತ ಮಾದನಾಯಕನಹಳ್ಳಿಯಿಂದ ನಗರಕ್ಕೆ ಇಂದು ಮುಂಜಾನೆ 6.30ರ ಸಂದರ್ಭದಲ್ಲಿ ನಾಗಸಂದ್ರ ಮೆಟ್ರೋ ಸ್ಟೇಷನ್ ಸಮೀಪ ಪೀಣ್ಯ ಫ್ಲೈ ಓವರ್ ಮೇಲೆ ಬರುತ್ತಿದ್ದಾಗ ಹಿಂದಿನಿಂದ ಅತಿವೇಗವಾಗಿ ಬಂದ ವಾಹನವೊಂದು ಇವರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ತೀವ್ರವಾಗಿ ಗಾಯಗೊಂಡ ಅವರು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ.
ಅಪಘಾತವೆಸಗಿದ ವಾಹನ ಚಾಲಕ ವಾಹನವನ್ನು ಸ್ಥಳದಲ್ಲಿ ನಿಲ್ಲಿಸದೆ ಚಾಲನೆ ಮಾಡಿಕೊಂಡು ಹೋಗಿದ್ದಾನೆ.ಸುದ್ದಿ ತಿಳಿದ ಪೀಣ್ಯ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ಚಾಲಕನಿಗಾಗಿ ಶೋಧ ನಡೆಸುತ್ತಿದ್ದಾರೆ.