Thursday, August 21, 2025
Homeರಾಷ್ಟ್ರೀಯ | Nationalತ್ರಿವಳಿ ಕೊಲೆಗೆ ಬೆಚ್ಚಿಬಿದ್ದ ರಾಷ್ಟ್ರ ರಾಜಧಾನಿ ದೆಹಲಿ

ತ್ರಿವಳಿ ಕೊಲೆಗೆ ಬೆಚ್ಚಿಬಿದ್ದ ರಾಷ್ಟ್ರ ರಾಜಧಾನಿ ದೆಹಲಿ

Delhi triple murder: Man, wife and son found dead

ನವದೆಹಲಿ, ಆ.21- ರಾಷ್ಟ್ರ ರಾಜಧಾನಿಯಲ್ಲಿ ಒಂದೇ ಮನೆಯವರ ತ್ರಿವಳಿ ಕೊಲೆ ನಡೆದಿದೆ. ಈ ಘೋರ ಕೃತ್ಯಕ್ಕೆ ಇಡಿ ದೆಹಲಿ ತತ್ತರಿಸಿಹೋಗಿದೆ.ದೆಹಲಿಯ ಮೈದಾನಗಢಿ ಪ್ರದೇಶದಲ್ಲಿ ಈ ತ್ರಿವಳಿ ಕೊಲೆ ನಡೆದಿದೆ. ನಾಪತ್ತೆಯಾಗಿರುವ ಕಿರಿ ಮಗನೇ ತನ್ನ ಕುಟುಂಬದವರ ಕೊಲೆ ಮಾಡಿ ಪರಾರಿಯಾಗಿರುವ ಅನುಮಾನ ವ್ಯಕ್ತವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಧ್ಯವಯಸ್ಸಿನ ದಂಪತಿ ಹಾಗೂ 24 ವರ್ಷದ ಮಗ ಶವವಾಗಿ ಮನೆಯಲ್ಲಿ ಪತ್ತೆಯಾಗಿದ್ದಾರೆ. ಆದರೆ ಅವರ ಇನ್ನೊಬ್ಬ ಮಗನ ಸುಳಿವೇ ಇಲ್ಲ. ಮನೆಯಿಂದ ದುರ್ವಾಸನೆ ಬರುತ್ತಿದೆ ಎಂದು ಅಕ್ಕಪಕ್ಕದ ಮನೆಯವರು ಪೊಲೀಸರಿಗೆ ತಿಳಿಸಿದ್ದರು. ಪೊಲೀಸರು ಬಂದು ಪರಿಶೀಲಿಸಿದಾಗ ಕೊಲೆ ರಹಸ್ಯ ಬಯಲಾಗಿದೆ.

45 ರಿಂದ 50 ವರ್ಷ ವಯಸ್ಸಿನ ಪ್ರೇಮ್‌ ಸಿಂಗ್‌ ಮತ್ತು ಅವರ ಮಗ 24 ವರ್ಷ ವಯಸ್ಸಿನ ಹೃತಿಕ್‌ ಅವರ ಮೃತದೇಹಗಳು ರಕ್ತದ ಮಡುವಿನಲ್ಲಿ ಬಿದ್ದಿದ್ದವು. ಸುಮಾರು 40 ರಿಂದ 45 ವರ್ಷ ವಯಸ್ಸಿನ ಮಹಿಳೆ ರಜನಿ ಅವರ ಶವ ಮೊದಲ ಮಹಡಿಯಲ್ಲಿ ಬಾಯಿ ಕಟ್ಟಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ದಂಪತಿಯ ಕಿರಿಯ ಮಗ ಸಿದ್ಧಾರ್ಥ್‌ ನಾಪತ್ತೆಯಾಗಿದ್ದಾನೆ. ಆತ ಮಾನಸಿಕ ಸಮಸ್ಯೆಗಳಿಗೆ ಚಿಕಿತ್ಸೆ ಪಡೆಯುತ್ತಿದ್ದ ಎಂದು ಸ್ಥಳೀಯರು ಪೊಲೀಸರಿಗೆ ತಿಳಿಸಿದ್ದಾರೆ. ನಂತರ, ಮನೆಯಿಂದ ದಾಖಲೆಗಳು ಮತ್ತು ಔಷಧಿಗಳು ಪತ್ತೆಯಾಗಿದ್ದು, ಕಳೆದ 12 ವರ್ಷಗಳಿಂದ ಆತ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.

ಸಿದ್ಧಾರ್ಥ್‌ ಪೋಷಕರು ಮತ್ತು ಸಹೋದರನನ್ನು ಚಾಕುವಿನಿಂದ ಇರಿದು, ಇಟ್ಟಿಗೆಯಿಂದ ತಲೆಗೆ ಹೊಡೆದು ಕೊಂದಿದ್ದಾನೆ ಎಂದು ಶಂಕಿಸಲಾಗಿದೆ.ಇದಲ್ಲದೆ, ಪ್ರಾಥಮಿಕ ತನಿಖೆಯಲ್ಲಿ ಅವನು ತನ್ನ ಕುಟುಂಬದವರನ್ನು ಕೊಂದಿರುವುದಾಗಿ ಮತ್ತು ಇನ್ನುಮುಂದೆ ಮೈದಾನಗಢಿ ಮನೆಯಲ್ಲಿ ವಾಸಿಸುವುದಿಲ್ಲ ಎಂದು ಯಾರಿಗೋ ಹೇಳಿದ್ದಾನೆ ಎಂದು ತಿಳಿದುಬಂದಿದೆ. ಗ್ರಾಮದ ಪ್ರಧಾನ್‌ ಮೊಹಮ್ಮದ್‌ ಶಕೀಲ್‌ ಅಹ್ಮದ್‌ ಖಾನ್‌ ಅವರು ಸಿದ್ದಾರ್ಥ್‌ ತಂದೆ ಮದ್ಯವ್ಯಸನಿಯಾಗಿದ್ದು, ಅವರ ಮನೆಯಲ್ಲಿ ಆಗಾಗ ಜಗಳಗಳು ನಡೆಯುತ್ತಿದ್ದವು ಎಂದು ತಿಳಿಸಿದ್ದಾರೆ.

ಮನೆಯನ್ನು ಸೀಲ್‌ ಮಾಡಲಾಗಿದೆ ಮತ್ತು ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಸ್ಥಳದಲ್ಲಿರುವ ವಿಧಿವಿಜ್ಞಾನ ತಂಡಗಳು ಬೆರಳಚ್ಚುಗಳು ಮತ್ತು ಇತರ ಪುರಾವೆಗಳನ್ನು ಸಂಗ್ರಹಿಸುತ್ತಿವೆ. ಪೊಲೀಸರು ಸಿದ್ಧಾರ್ಥ್‌ಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

RELATED ARTICLES

Latest News