ಚಿಕ್ಕಮಗಳೂರು, ಸೆ.10– ಮಂಡ್ಯ ಜಿಲ್ಲೆಯ ಮದ್ದೂರಿನ ಪ್ರಕರಣವನ್ನು ಬೇರೆ ಸ್ವರೂಪಕ್ಕೆ ತೆಗೆದು ಕೊಂಡು ಹೋಗಲು ಬಿಜೆಪಿ ಯವರು ಸಂಚು ನಡೆಸಿದ್ದಾರೆ. ಅದಕ್ಕಾಗಿ ಎಲ್ಲಾ ರೀತಿಯ
ಪ್ರಯ ತ್ನಗಳನ್ನು ಮಾಡುತ್ತಿದ್ದಾರೆ ಎಂದು ಕೃಷಿ ಸಚಿವ ಚೆಲುವರಾಯ ಸ್ವಾಮಿ ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಕಲ್ಲು ತೂರಾಟಕ್ಕೆ ಸಂಬಂಧಪಟ್ಟಂತೆ ತಪ್ಪಿತಸ್ಥರ ವಿರುದ್ಧ ಈಗಾಗಲೇ ಕ್ರಮ ಕೈಗೊಂಡಿದ್ದೇವೆ. ಪರಿಸ್ಥಿತಿ ಹತೋಟಿಯಲ್ಲಿದೆ. ಆದರೆ, ಬಿಜೆಪಿಯವರು ರಾಜಕಾರಣಕ್ಕಾಗಿ ಪ್ರಚೋದನೆ ನೀಡುತ್ತಿದ್ದಾರೆ ಎಂದು ಕಿಡಿಕಾರಿದರು.
ಜಿಲ್ಲೆಯಲ್ಲಿ ಇಂದು ಎಲ್ಲಾ ಗಣಪತಿಗಳ ಸಾಮೂಹಿಕ ವಿಸರ್ಜನೆ ಕಾರ್ಯಕ್ರಮ ಹಮಿಕೊಳ್ಳಲಾಗಿದೆ. ಆ ವೇಳೆಯಲ್ಲಿ ಕಾನೂನು ಸುವ್ಯವಸ್ಥೆ ರಕ್ಷಣೆಗೆ ಅಗತ್ಯ ಕ್ರಮಕೈಗೊಳ್ಳಲಾಗಿದೆ. ಎಡಿಜಿಪಿ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ ಎಂದು ತಿಳಿಸಿದರು.
ಗೃಹಸಚಿವರು ಮತ್ತು ತಾವು ಈಗಾಗಲೇ ಘಟನೆಯ ಬಗ್ಗೆ ಹೆಚ್ಚಿನ ತನಿಖೆ ನಡೆಸಲು ಆದೇಶಿಸಿದ್ದೇವೆ. ನಿನ್ನೆ ಸಂಜೆ ಶಾಂತಿ ಸಭೆಯನ್ನು ನಡೆಸಲಾಗಿದೆ. ಸ್ಥಳೀಯ ಶಾಸಕರು ತಮ ಮಗಳನ್ನು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ದಾಖಲಿಸಲು ವಿದೇಶಕ್ಕೆ ತೆರಳಿದ್ದಾರೆ. ಅವರ ಅನುಪಸ್ಥಿತಿಯಲ್ಲಿ ನಾವು ಶಾಂತಿ ಸಭೆ ಮಾಡಿ ಜನರಲ್ಲಿ ಮನವಿ ಮಾಡಿಕೊಂಡಿದ್ದೇವೆ ಮತ್ತು ಸಾಮೂಹಿಕ ಗಣೇಶವಿಸರ್ಜನೆಗೆ ಅಗತ್ಯ ಬಂದೋಬಸ್ತ್ ಏರ್ಪಡಿಸುವುದಾಗಿ ವಿವರಿಸಿದರು.
ಮದ್ದೂರಿನ ಗಲಭೆಯನ್ನು ಬೇರೆ ಸ್ವರೂಪಕ್ಕೆ ತೆಗೆದುಕೊಂಡು ಹೋಗುವುದೇ ಬಿಜೆಪಿಯವರ ಆದ್ಯತೆಯಾಗಿದೆ. ರಾಜ್ಯಸರ್ಕಾರ ಈಗಾಗಲೇ ಗಲಭೆಗೆ ಕಾರಣವಾಗಿರುವವರ ವಿರುದ್ಧ ಪ್ರಕರಣ ದಾಖಲಿಸಿ 21 ಮಂದಿಯನ್ನು ಬಂಧಿಸಿದೆ. ತಪ್ಪಿತಸ್ಥರ ವಿರುದ್ಧ ಮುಲಾಜಿಲ್ಲದೇ ಕಠಿಣ ಕ್ರಮಕೈಗೊಳ್ಳುವ ಸಂದೇಶವನ್ನು ರವಾನಿಸಲಾಗಿದೆ ಎಂದರು.
ಇಲ್ಲಿ ಹಿಂದೂ-ಮುಸ್ಲಿಂ ಎಂದು ಮಿಶ್ರಣ ಮಾಡಿಲ್ಲ, ಮುಸ್ಲಿಮರು ಕಲ್ಲು ತೂರಾಟ ಮಾಡಿದವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಹಿಂದೂ ಸಂಘಟನೆಗಳು ಹಾಗೂ ಕಾರ್ಯಕರ್ತರ ವಿರುದ್ಧ ಈವರೆಗೂ ಯಾವುದೇ ಪ್ರಕರಣ ದಾಖಲಾಗಿಲ್ಲ, ಯಾರನ್ನೂ ಬಂಧಿಸಿಲ್ಲ. ಒಂದು ವೇಳೆ ಹೆಚ್ಚಿನ ತನಿಖೆಯಲ್ಲಿ ಸಾಕ್ಷ್ಯಗಳು ಲಭ್ಯವಾದರೆ ಆ ಸಂದರ್ಭದಲ್ಲಿ ಅಗತ್ಯ ಕ್ರಮ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ.
ಸಾಮೂಹಿಕ ವಿಸರ್ಜನೆಗೆ ಗಣೇಶನ ಮೂರ್ತಿಗಳು ಲಭ್ಯವಿಲ್ಲದೇ ಇದ್ದರೂ ಬೇರೆ ಜಿಲ್ಲೆಗಳಿಂದ ಖರೀದಿಸಿ ತರಲಾಗುತ್ತಿದೆ. ಮದ್ದೂರು ಸೇರಿದಂತೆ ಜಿಲ್ಲೆಯಾದ್ಯಂತ ಗಣೇಶನ ವಿಸರ್ಜನೆಗೆ ಸಮಾಧಾನದಿಂದಲೇ ರಕ್ಷಣೆ ನೀಡುತೇವೆ. ಮುಂದಿನ ದಿನಗಳಲ್ಲಿ ಬಿಜೆಪಿಯವರ ರಾಜಕೀಯಕ್ಕೆ ಸೂಕ್ತ ಉತ್ತರ ನೀಡುತ್ತೇವೆ ಎಂದರು.
ಬಿಜೆಪಿಯವರಿಗೆ ರಾಜಕೀಯವಾಗಿ ಚರ್ಚೆ ಮಾಡಲು ವಿಷಯಗಳು ಇಲ್ಲದೇ ಇದ್ದಾಗ ಕೋಮುಗಲಭೆಯನ್ನು ಸೃಷ್ಟಿಸಿ, ಕೋಮು ಭಾವನೆಗಳ ಮೂಲಕವೇ ರಾಜಕಾರಣ ಮಾಡುವ ಪ್ರಯತ್ನ ಮಾಡುವುದು ಮೊದಲಿನಿಂದಲೂ ನಡೆದುಕೊಂಡು ಬಂದಿದೆ. ಈಗಲೂ ಅವರು ಅದೇ ಪ್ರವೃತ್ತಿಯನ್ನು ಅನುಸರಿಸುತ್ತಿದ್ದಾರೆ ಎಂದು ಆಕ್ಷೇಪಿಸಿದರು.