ಬೆಂಗಳೂರು,ಸೆ.26– ಸೀರೆ ಬಂಡಲ್ ಕಳ್ಳತನ ಮಾಡಿಕೊಂಡು ಹೋಗುತ್ತಿದ್ದ ಮಹಿಳೆಯನ್ನು ಗಮನಿಸಿ ನಡು ರಸ್ತೆಯಲ್ಲೇ ಮನಬಂದಂತೆ ಹಲ್ಲೆ ಮಾಡಿದ ಅಂಗಡಿ ಮಾಲೀಕ ಹಾಗೂ ಆತನ ಸಹಾಯಕನನ್ನು ಸಿಟಿ ಮಾರ್ಕೆಟ್ ಠಾಣೆ ಪೊಲೀಸರು ಬಂಧಸಿದ್ದಾರೆ.
ಅಂಗಡಿ ಮಾಲೀಕ ಉಮೇದರಾಮ ಹಾಗೂ ಆತನ ಸಹಾಯಕ ಮಹೇಂದ್ರ ಸಿರ್ವಿ ಬಂಧಿತರು.
ಅಲ್ಲದೇ ಸೀರೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.
ಚಿಕ್ಕಪೇಟೆಯ ಅವೆನ್ಯೂ ರಸ್ತೆಯಲ್ಲಿರುವ ಮಾಯಾ ಸಿಲ್ಕ್ ಮತ್ತು ಸ್ಯಾರೀಸ್ ಅಂಗಡಿಗೆ ಮೂಲತಃ ಆಂಧ್ರಪ್ರದೇಶದ ಗುಂತಕಲ್ನ ಮಹಿಳೆ ಹೋಗಿದ್ದು, ಸೆ.21 ರಂದು ಅಂಗಡಿ ಮುಂಭಾಗದಲ್ಲಿ ಇಟ್ಟಿದ್ದ ಸೀರೆಯ ಬಂಡಲ್ನ್ನು ಕಳ್ಳತನ ಮಾಡಿಕೊಂಡು ಹೋಗುತ್ತಿರುವುದನ್ನು ಅಂಗಡಿ ಮಾಲೀಕ ಉಮೇದುರಾಮ ಗಮನಿಸಿದ್ದಾರೆ.
ತಕ್ಷಣ ಮಾಲೀಕ ಆಕೆಯನ್ನು ಹಿಂಬಾಲಿಸಿಕೊಂಡು ಹೋಗಿ ಸೀರೆ ಸಮೇತ ಆಕೆಯನ್ನು ಹಿಡಿದು 112ಗೆ ಕರೆ ಮಾಡಿ ಪೊಲೀಸರಿಗೆ ತಿಳಿಸಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಹೊಯ್ಸಳ ಸಿಬ್ಬಂದಿ ಮಹಿಳೆಯನ್ನು ಬಂಧಿಸಿ, ಠಾಣೆಗೆ ಕರೆದೊಯ್ದಿದ್ದಾರೆ.ಪೊಲೀಸರಿಗೆ ತಿಳಿಸುವುದಕ್ಕೂ ಮೊದಲು ಅಂಗಡಿ ಮಾಲೀಕ ಹಾಗೂ ಸಹಾಯಕ ಆ ಮಹಿಳೆ ಮೇಲೆ ಮನಬಂದಂತೆ ಹಲ್ಲೆ ನಡೆಸಿ, ನೈತಿಕ ಪೊಲೀಸ್ಗಿರಿ ನಡೆಸಿರುತ್ತಾನೆ.
ಈ ದೃಶ್ಯವನ್ನು ಸ್ಥಳೀಯ ವ್ಯಕ್ತಿಯೊಬ್ಬರು ವಿಡಿಯೋ ಚಿತ್ರಿಕರಣ ಮಾಡಿ, ಸಾಮಾಜಿಕ ಜಾಲ ತಾಣದಲ್ಲಿ ಹಂಚಿಕೊಂಡಿದ್ದಾರೆ.ಈ ದೃಶ್ಯಾವಳಿ ಆಧರಿಸಿ ಮಹಿಳೆ ಮೇಲೆ ಹಲ್ಲೆ ಮಾಡಿರುವ ಮಾಲೀಕ ಹಾಗೂ ಸಹಾಯಕನನ್ನು ಸಿಟಿ ಮಾರ್ಕೆಟ್ ಠಾಣೆ ಪೊಲೀಸರು ಬಂಧಿಸಿ, ಮುಂದಿನ ಕ್ರಮಕೈಗೊಂಡಿದ್ದಾರೆ.