ಕಲಬುರಗಿ,ಸೆ.30– ಜಾತಿ ಗಣತಿ ವಿಷಯದಲ್ಲಿ ನಾವು ಗೊಂದಲ ಸೃಷ್ಟಿಸುತ್ತಿಲ್ಲ.ಕಾಂಗ್ರೆಸ್ ಸರಕಾರ ಮತ್ತು ಅವರ ಹೈಕಮಾಂಡ್ ಗೊಂದಲ ಮೂಡಿಸುತ್ತಿದೆ ಎಂದು ಸಂಸದ ಗೋವಿಂದ ಕಾರಜೋಳ ತಿರುಗೇಟು ನೀಡಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ಆರ್ಥಿಕ, ಶೈಕ್ಷಣಿಕ ಕಾಳಜಿ ಇದ್ದರೆ 2013ರಿಂದ 2018ರವರೆಗೆ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ ಆಗಿದ್ದರು. ಕಾಂತರಾಜುರವರನ್ನು ನೇಮಿಸಿ ವರದಿ ತೆಗೆದುಕೊಂಡರು. 180 ಕೋಟಿ ಖರ್ಚು ಮಾಡಿದ ಆ ವರದಿ ಏನಾಗಿದೆ? ಕಸದ ಬುಟ್ಟಿಗೆ ಹಾಕಿದ್ದಾರೆ ಎಂದು ಸಿದ್ದರಾಮಯ್ಯ ಅವರನ್ನು ತರಾಟೆಗೆ ತೆಗೆದುಕೊಂಡರು.
ನಾವು ದಾರಿ ತಪ್ಪಿಸುತ್ತಿಲ್ಲ. ಸಿದ್ದರಾಮಯ್ಯನವರು- ಕಾಂಗ್ರೆಸ್ ಪಕ್ಷ ದಾರಿ ತಪ್ಪಿಸುತ್ತಿವೆ. ಆವತ್ತು ಜಾತಿಗಳ ಅಂಕಿ ಸಂಖ್ಯೆ ಬಿಡುಗಡೆ ಮಾಡಿದ್ದರು. ಗೌಪ್ಯವಾಗಿ ಇಡಬೇಕಾದ ಅಂಕಿ ಅಂಶವನ್ನು ಯಾಕೆ ಗೌಪ್ಯವಾಗಿಡಲಿಲ್ಲ? ಎಂದು ಪ್ರಶ್ನೆ ಮಾಡಿದರು.
ಕ್ರಿಶ್ಚಿಯನ್ ಲಿಂಗಾಯತರು ಇದ್ದಾರಾ? ಜೈನ ಪಂಚಮಸಾಲಿ ಇದ್ದಾರಾ? ಕ್ರಿಶ್ಚಿಯನ್ ದಲಿತರು ಇದ್ದಾರಾ? ಕ್ರಿಶ್ಚಿಯನ್ ದಲಿತರು ಎನ್ನಬೇಡಿ; ಯಾವುದೇ ವ್ಯಕ್ತಿ ಧರ್ಮಾಂತರ ಆದರೆ ಧರ್ಮಾಂತರ ಆದ ದಿನದಿಂದ ಅವನ ಪೂರ್ವಾಶ್ರಮದ ಹಂಗು ಇರುವುದಿಲ್ಲ; ಪೂರ್ವಾಶ್ರಮದ ಸಂಬಂಧ ಕಡಿದು ಹೋಗುತ್ತದೆ. ಧರ್ಮಾಂತರ ವಾದರೆ ಕ್ರಿಶ್ಚಿಯನ್ ಆದರೆ ಕ್ರಿಶ್ಚಿಯನ್, ಇಸ್ಲಾಂ ಆಗಿದ್ದರೆ ಇಸ್ಲಾಂ ಧರ್ಮ ಇರುತ್ತದೆ ಎಂದು ತಿಳಿಸಿದರು.