Friday, October 31, 2025
Homeರಾಜ್ಯಆರ್‌ಎಸ್‌‍ಎಸ್‌‍ ಪಥಸಂಚಲನದಲ್ಲಿ ಭಾಗಿಯಾದ 4 ಶಿಕ್ಷಕರಿಗೆ ನೋಟೀಸ್‌‍

ಆರ್‌ಎಸ್‌‍ಎಸ್‌‍ ಪಥಸಂಚಲನದಲ್ಲಿ ಭಾಗಿಯಾದ 4 ಶಿಕ್ಷಕರಿಗೆ ನೋಟೀಸ್‌‍

Notice to 4 teachers who participated in RSS procession

ಬೆಂಗಳೂರು,ಅ.30- ಆರ್‌ಎಸ್‌‍ಎಸ್‌‍ ಹಾಗೂ ಸರ್ಕಾರದ ನಡುವಿನ ಜಟಾಪಟಿ ಬೆನ್ನಲ್ಲೇ, ಬೀದರ್‌ ಜಿಲ್ಲೆಯ ಔರಾಧ್‌ ತಾಲ್ಲೂಕಿನಲ್ಲಿ ಅ. 7 ಮತ್ತು 13 ರಂದು ನಡೆದ ಪಥ ಸಂಚಲನದಲ್ಲಿ ಭಾಗವಹಿಸಿದ್ದ ನಾಲ್ವರು ಶಿಕ್ಷಕರಿಗೆ ಕಾರಣ ಕೇಳಿ ಕ್ಷೇತ್ರ ಶಿಕ್ಷಣಾಧಿಕಾರಿ ನೋಟೀಸ್‌‍ ಜಾರಿ ಮಾಡಿದ್ದಾರೆ.

ಇದು ಮತ್ತೊಂದು ವಿವಾದಕ್ಕೆ ಕಾರಣವಾಗಿದ್ದು, ಸರ್ಕಾರದ ಈ ಕ್ರಮಕ್ಕೆ ಪ್ರತಿಪಕ್ಷ ಬಿಜೆಪಿ ಕಿಡಿಕಾರಿದೆ. ಅ. 7, 13ರಂದು ಔರಾಧ್‌ನಲ್ಲಿ ಆರ್‌ಎಸ್‌‍ಎಸ್‌‍ ಪಥಸಂಚಲನ ನಡೆದಿತ್ತು. ಶಿಕ್ಷಕರಾದ ಮಹದೇವ, ಶಾಲಿವಾನ್‌, ಪ್ರಕಾಶ್‌ ಮತ್ತು ಸತೀಶ್‌ ಭಾಗವಹಿಸಿದ್ದರು. ನಾಲ್ಕು ಜನ ಶಿಕ್ಷಕರಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ನೋಟೀಸ್‌‍ ಜಾರಿ ಮಾಡಿದ್ದಾರೆ.

- Advertisement -

ದಲಿತ ಸೇನೆ ವತಿಯಿಂದ ಔರಾಧ್‌ (ಬಿ) ನ ಆದರ್ಶ ವಿದ್ಯಾಲಯದ ಸಹ ಶಿಕ್ಷಕ ಮಹಾದೇವ್‌ ಚಿಟಗಿರೆ, ಬಿ.ಆರ್‌.ಸಿ ಕಚೇರಿಯ ಸಿಬ್ಬಂದಿ ಶಾಲಿವಾನ್‌ ಉದಗಿರಿ ಹಾಗೂ ಎಕಂಬಾ ಗ್ರಾಮದ ಸಿ ಆರ್‌ ಪಿ ಪ್ರಕಾಶ್‌ ಬರದಾಪೂರೆ ಅವರ ವಿರುದ್ಧ ದೂರು ನೀಡಲಾಗಿತ್ತು.

ಹಾಗೆಯೇ ಬಹುಜನ ಸೇವಾ ಸಮಿತಿ ವತಿಯಿಂದ ಬಳತ್‌ (ಕೆ) ಸಹಿಪ್ರಾ ಶಾಲೆಯ ಸಹ ಶಿಕ್ಷಕ ಸತೀಶ್‌ ಮಾನಕಾರಿ ಅವರ ವಿರುದ್ಧ ದೂರು ನೀಡಲಾಗಿತ್ತು.ಜೊತೆಗೆ ಶಿಕ್ಷಕರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದರು.

ಆರೆಸ್ಸೆಸ್‌‍ ಪಥ ಸಂಚಲನದಲ್ಲಿ ತಾವು ಭಾಗಿಯಾಗಿರುವ ಕುರಿತು ವಿಡಿಯೋ ಮತ್ತು ಭಾವಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡಿದಿವೆ. ತಾವು ಸರಕಾರಿ ನೌಕರರು ಆಗಿರುವದರಿಂದ ಯಾವುದೇ ಪ್ರಕಾರ ರಾಜಕೀಯ ಮತ್ತು ಧಾರ್ಮಿಕ ಚಟುವಟಿಕೆಯಲ್ಲಿ ಭಾಗವಹಿಸುವಂತಿಲ್ಲ. ಸೇವಾ ನಿಯಮಗಳನ್ನು ಉಲ್ಲಂಸಿದ ಹಿನ್ನೆಲೆಯಲ್ಲಿ ನೋಟೀಸ್‌‍ ನೀಡಲಾಗಿದೆ ಎಂದು ಔರಾಧ್‌(ಬಿ) ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಹೇಳಿದ್ದಾರೆ.

ಬೀದರ ಜಿಲ್ಲೆಯ ಔರಾಧ್‌ ಬಿ ತಾಲೂಕಿನಲ್ಲಿ ಅಕ್ಟೋಬರ್‌ 7 ಮತ್ತು 13 ರಂದು ನಡೆದ ಆರ್‌ಎಸ್‌‍ಎಸ್‌‍ ಪಥಸಂಚಲನದಲ್ಲಿ ತಾವುಗಳು ಭಾಗಿಯಾಗಿರುತ್ತೀರಿ. ಈ ಕುರಿತು ವಿಡಿಯೋ ಮತ್ತು ಭಾವಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡಿದಿರುವ ದೃಶ್ಯಗಳು ಕಂಡು ಬಂದಿರುತ್ತವೆ.

ತಾವುಗಳು ಸರಕಾರಿ ನೌಕರರು ಆಗಿರುವುದರಿಂದ ಯಾವುದೇ ಪ್ರಕಾರ ರಾಜಕೀಯ ಮತ್ತು ಧಾರ್ಮಿಕ ಚಟುವಟಿಕೆಯಲ್ಲಿ ಭಾಗವಹಿಸುವಂತಿಲ್ಲ. ತಾವುಗಳು ಆರ್‌ಎಸ್‌‍ಎಸ್‌‍ ಪಥಸಂಚಲನದಲ್ಲಿ ಭಾಗವಹಿಸಿ ಸರಕಾರದ ಸೇವಾ ನಿಬಂಧನೆಗೆ ವಿರುದ್ದವಾಗಿ ಕರ್ತವ್ಯ ಮಾಡಿರುವಿರಿ.

ಈ ಪ್ರಯುಕ್ತ ತಾವುಗಳು ಈ ನೋಟಿಸ್‌‍ ತಲುಪಿದ ಬಳಿಕ ಕಾರಣ ಕೇಳುವ ನೋಟೀಸ್‌‍ಗೆ ಲಿಖಿತ ಹೇಳಿಕೆಯನ್ನು ನೀಡಿ ಖುದ್ದಾಗಿ ಬಂದು ಈ ಕಚೇರಿಗೆ ಸಲ್ಲಿಸುವುದು. ಇಲ್ಲವಾದಲ್ಲಿ ಏಕಪಕ್ಷೀಯವಾಗಿ ಕರ್ನಾಟಕ ನಾಗರಿಕ ಸೇವಾ (ವರ್ಗೀಕರಣ. ನಿಯಂತ್ರಣ ಮತ್ತು ಮೇಲನವಿ) ನಿಯಮಗಳು-1957ರನ್ವಯ ಮುಂದಿನ ಕ್ರಮ ತೆಗೆದುಕೊಳ್ಳಲಾಗುದೆಂದು ನೋಟಿಸ್‌‍ನಲ್ಲಿ ಉಲ್ಲೇಖಿಸಲಾಗಿದೆ.

- Advertisement -
RELATED ARTICLES

Latest News