Sunday, December 7, 2025
Homeರಾಜ್ಯಕುತೂಹಲ ಕೆರಳಿಸಿದ ಸೋನಿಯಾ ಗಾಂಧಿ ಸಭೆ..!

ಕುತೂಹಲ ಕೆರಳಿಸಿದ ಸೋನಿಯಾ ಗಾಂಧಿ ಸಭೆ..!

Sonia Gandhi's meeting aroused curiosity

ಬೆಂಗಳೂರು, ನ.30- ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಅವರ ಉಪಾಹಾರ ಕೂಟದ ಬಳಿಕ ರಾಜ್ಯದಲ್ಲಿ ಅಧಿಕಾರ ಹಂಚಿಕೆಯ ಗೊಂದಲಗಳ ಬಗ್ಗೆ ತಾತ್ಕಾಲಿಕ ವಿರಾಮ ದೊರೆತಿದೆಯಾದರೂ, ಅಂತಿಮ ತೀರ್ಮಾನದ ಬಗ್ಗೆ ದೆಹಲಿಯಲ್ಲಿಂದು ನಡೆಯುವ ಉನ್ನತ ಮಟ್ಟದ ಸಭೆಯಲ್ಲಿ ಚರ್ಚೆಯಾಗುವ ಸಾಧ್ಯತೆ ಇದೆ.

ನಾಳೆಯಿಂದ ಆರಂಭವಾಗಲಿರುವ ಸಂಸತ್‌ ಅಧಿವೇಶನ ಕುರಿತಂತೆ ಚರ್ಚೆ ನಡೆಸಲು ಇಂದು ಸಂಜೆ 5 ಗಂಟೆಗೆ ದೆಹಲಿಯಲ್ಲಿ ಕಾಂಗ್ರೆಸ್‌‍ ಸಂಸದೀಯ ಸಮಿತಿ ಸಭೆ ಅಧ್ಯಕ್ಷೆ ಸೋನಿಯಾಗಾಂಧಿ ಅವರ ನೇತೃತ್ವದಲ್ಲಿ ನಡೆಯಲಿದೆ.

ಈ ಸಂದರ್ಭದಲ್ಲಿ ಇತ್ತೀಚಿನ ರಾಜಕೀಯ ವಿದ್ಯಮಾನಗಳ ಕುರಿತಂತೆ ಚರ್ಚೆ ನಡೆಸಿ, ಸೂಕ್ತ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆ ಇದೆ. ಕಾಂಗ್ರೆಸ್‌‍ ಸಂಸದೀಯ ಸಮಿತಿಯಲ್ಲಿ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ಗಾಂಧಿ, ರಾಜ್ಯ ಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಸಂಸದರಾದ ಗೌರವ್‌ ಗೊಗೋಯ್‌, ಕೋಡಿಕುನೀಲ್‌ ಸುರೇಶ್‌, ಮಾಣಿಕಂ ಠಾಕೂರ್‌, ಮೊಹಮದ್‌ ಜಾವೇದ್‌, ಎಂ.ಕೆ.ರಾಘವನ್‌, ಡಾ. ಅಮರ್‌ಸಿಂಗ್‌, ರಾಜ್ಯಸಭಾ ಸದಸ್ಯರಾದ ಪ್ರಮೋದ್‌ ತಿವಾರಿ, ಜೈರಾಂ ರಮೇಶ್‌, ರಜಿನಿ ಪಾಟೀಲ್‌, ಸಯ್ಯದ್‌ ನಾಸೀರ್‌ ಹುಸೇನ್‌, ರಂಜಿತ್‌ ರಾಜನ್‌, ವಿಜಯ್‌ ವಸಂತ್‌ ಅವರು ಸದಸ್ಯರಾಗಿದ್ದಾರೆ.

ಸಂಸತ್‌ ಅಧಿವೇಶನದಲ್ಲಿ ಪ್ರಸ್ತಾಪಿಸಬೇಕಾದ ವಿಚಾರಗಳ ಬಗ್ಗೆ ಕಾಂಗ್ರೆಸ್‌‍ ಸಂಸದೀಯ ಸಭೆಯಲ್ಲಿ ಚರ್ಚೆಯಾಗಲಿದೆ. ಆ ಬಳಿಕ ಇತ್ತೀಚಿನ ರಾಜಕೀಯ ಬೆಳವಣಿಗೆಗಳ ಬಗ್ಗೆಯೂ ಕಾಂಗ್ರೆಸ್‌‍ ಹೈಕಮಾಂಡ್‌ ಪರಾಮರ್ಶೆ ನಡೆಸಲಿದೆ ಎಂದು ಮೂಲಗಳು ತಿಳಿಸಿವೆ.
ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್‌ ಉಪಾಹಾರ ಕೂಟ ನಡೆಸಿ, ನಗು ಮುಖದಲ್ಲಿ ತಮ ನಡುವೆ ಯಾವುದೇ ಭಿನ್ನಭಿಪ್ರಾಯಗಳಿಲ್ಲ ಎಂದು ಘೋಷಣೆ ಮಾಡಿದ್ದಾರೆ. ಆದರೆ, ಈ ವಿಚಾರ ಅಂದುಕೊಂಡಷ್ಟು ಸುಲಭವಾಗಿ ಬಗೆ ಹರಿದಿಲ್ಲ.

ವಿಧಾನಮಂಡಲ ಅಧಿವೇಶನದ ಸಂದರ್ಭದಲ್ಲಿ ಪಕ್ಷಕ್ಕೆ ಮುಜುಗರವಾಗಬಾರದು ಎಂಬ ಕಾರಣಕ್ಕೆ ಉಪಾಹಾರ ಕೂಟ ನಡೆಸಿ, ಒಗ್ಗಟ್ಟು ಪ್ರದರ್ಶಿಲಾಗಿದೆ. ಆದರೆ ಆಂತರಿಕವಾಗಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅಧಿಕಾರ ಕಸಿದುಕೊಳ್ಳಲು ನಾನಾ ರೀತಿಯ ಹರಸಾಹಸ ನಡೆಸುತ್ತಿದ್ದಾರೆ.

ಸಿದ್ದರಾಮಯ್ಯ ಅಧಿಕಾರ ಬಿಟ್ಟುಕೊಡುವ ಲಕ್ಷಣಗಳಿಲ್ಲ, ಹೈಕಮಾಂಡ್‌ ನಂತರ ಸೂಚನೆಯ ಮೇರೆಗೆ ಸದ್ಯಕ್ಕೆ ರಾಜೀ ಸಂಧಾನವಾಗಿದೆ. ಮುಂದಿನ ದಿನಗಳಲ್ಲಿ ಅಧಿಕಾರ ಹಂಚಿಕೆಯ ಬಗ್ಗೆ ಯಾವ ನಿರ್ಧಾರ ತೆಗೆದುಕೊಳ್ಳಬೇಕು ಎಂಬ ಕುರಿತಂತೆ ಸಂಜೆಯ ಸಭೆಯಲ್ಲಿ ಚರ್ಚೆಯಾಗಲಿದೆ. ಮಲ್ಲಿಕಾರ್ಜುನ ಖರ್ಗೆ, ರಾಹುಲ್‌ಗಾಂಧಿ, ಸೋನಿಯಾಗಾಂಧಿ ಅವರು ಸಂಸದೀಯ ಸಭೆಯ ಬಳಿಕ ಕರ್ನಾಟಕ ರಾಜಕಾರಣ ಕುರಿತಂತೆ ಪ್ರತ್ಯೇಕ ಮಾತುಕತೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಒಂದು ವೇಳೆ ಹೈಕಮಾಂಡ್‌ ಸಿದ್ದರಾಮಯ್ಯ ಅವರನ್ನೇ ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರಿಸಲು ಬಯಸಿದ್ದಾದರೆ, ಡಿ.ಕೆ.ಶಿವಕುಮಾರ್‌ ಅವರ ಮುಂದಿನ ನಡೆ ಏನು ಎಂಬ ಬಗ್ಗೆ ಎಲ್ಲರಲ್ಲೂ ಕುತೂಹಲವಿದೆ.

ಪ್ರಸ್ತುತ ರಾಜಕೀಯ ಸನ್ನಿವೇಶದಲ್ಲಿ ಡಿ.ಕೆ.ಶಿವಕುಮಾರ್‌ ಅವರನ್ನು ಯಾವ ರೀತಿ ಸಮಾಧಾನ ಪಡಿಸಬಹುದು ಎಂಬ ನಿಟ್ಟಿನಲ್ಲಿ ಹೈಕಮಾಂಡ್‌ ಗಂಭೀರ ಚರ್ಚೆ ನಡೆಸಲಿದೆ ಅಥವಾ ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಕೆಳಗಿಳಿಸಬೇಕೆಂದಾದರೆ ಯಾವ ರೀತಿ ಪರ್ಯಾಯ ಕ್ರಮಗಳನ್ನು ತೆಗೆದುಕೊಳ್ಳಬಹುದು ಎಂಬ ಬಗ್ಗೆಯೂ ಚರ್ಚೆಯಾಗಲಿದೆ. ರಾಜ್ಯ ರಾಜಕೀಯದ ಬಗ್ಗೆ ಚರ್ಚಿಸಲು ಮುಂದಿನವಾರ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಅವರನ್ನು ಹೈಕಮಾಂಡ್‌ ದೆಹಲಿಗೆ ಕರೆಸಿಕೊಳ್ಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

RELATED ARTICLES

Latest News