ಶೃಂಗೇರಿ,ಮೇ11- ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆಮತಗಳ ಮರು ಎಣಿಕೆ ಸಂದರ್ಭದಲ್ಲಿ 2023ರ ಮೇ 13ರಂದು ನಡೆದ ಮತ ಎಣಿಕೆ ಸಂದರ್ಭದಲ್ಲಿ ಮಾನ್ಯವಾಗಿದ್ದ ಅಂಚೆಮತಗಳು ಅಮಾನ್ಯಗೊಂಡಿವೆ. ಇದು ಫಲಿತಾಂಶದ ಮೇಲೆ ಪರಿಣಾಮ ಬೀರಿರುವುದರಿಂದ ಇಡೀ ಪ್ರಕರಣವನ್ನು ಸರಿಯಾದ ರೀತಿಯಲ್ಲಿ ತನಿಖೆಗೆ ಒಳಪಡಿಸಬೇಕೆಂದು 2023ರಲ್ಲಿ ಬಿಜೆಪಿ ಅಭ್ಯರ್ಥಿಯ ಮತ ಎಣಿಕೆ ಏಜೆಂಟ್ ಆಗಿದ್ದ ಬಿ.ಎಸ್.ಸತೀಶ್ ಆಗ್ರಹಿಸಿದ್ದಾರೆ.
ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, 2023ರಲ್ಲಿ ನಡೆದ ಮತ ಎಣಿಕೆ ಸಂದರ್ಭದಲ್ಲಿ ಮಾನ್ಯವಾಗಿದ್ದ ಅಂಚೆಮತಗಳು ಅಮಾನ್ಯಗೊಂಡಿರುವುದು ಸಂಶಯಕ್ಕೆ ಎಡೆ ಮಾಡಿಕೊಟ್ಟಿರುವುದಲ್ಲದೆ ಅಂದು ಬಿಜೆಪಿ ಅಭ್ಯರ್ಥಿಯಾಗಿರುವ ಶಾಸಕ ಡಿ.ಎನ್.ಜೀವರಾಜ್ ಅವರ ಏಜೆಂಟ್ ಆಗಿದ್ದ ನಮ ಮೇಲೆ ದೊಡ್ಡ ಕಳಂಕ ಬಂದಿದೆ. ಹೀಗಾಗಿ ಇಡೀ ಪ್ರಕರಣವನ್ನು ತನಿಖೆಗೊಳಪಡಿಸಿ ನಮನ್ನು ಸೇರಿದಂತೆ ಯಾರೇ ತಪ್ಪಿತಸ್ಥರಾದರೂ ಶಿಕ್ಷೆಗೆ ಒಳಪಡಿಸಬೇಕೆಂದು ಆಗ್ರಹಿಸಿದ್ದಾರೆ.
ನಾನು ಮತ್ತು ಎಸ್.ಎನ್.ರಾಮಸ್ವಾಮಿ ಅವರು 2023ರಲ್ಲಿ ನಡೆದ ಮತ ಎಣಿಕೆ ಸಂದರ್ಭದಲ್ಲಿ ಬಿಜೆಪಿ ಅಭ್ಯರ್ಥಿಯ ಏಜೆಂಟರಾಗಿದ್ದೆವು. ಎಲ್ಲಾ ಅಭ್ಯರ್ಥಿಗಳ ಏಜೆಂಟರ ಸಮುಖದಲ್ಲಿ ಪಾರದರ್ಶಕವಾಗಿ ಮತ ಎಣಿಕೆ ನಡೆದಿತ್ತು. ನಾವು ಗುರುತು ಹಾಕಿಕೊಂಡಿದ್ದ ಸಂಖ್ಯೆಗೂ, ಅಧಿಕಾರಿಗಳು ಎಣಿಕೆ ಮಾಡಿದ ಸಂಖ್ಯೆಗೂ ತಾಳೆಯಾದ ನಂತರ ಏಜೆಂಟರು ಸಹಿ ಮಾಡಿದ್ದೆವು ಎಂದು ಅವರು ಹೇಳಿದ್ದಾರೆ.
ಅಂದು ಬಿಜೆಪಿ ಅಭ್ಯರ್ಥಿಗೆ 689 ಹಾಗೂ ಕಾಂಗ್ರೆಸ್ ಅಭ್ಯರ್ಥಿಗೆ 562 ಅಂಚೆಮತಗಳು ದೊರೆತಿದ್ದವು. 2023ರ ಮೇ 13ರಂದು ನಡೆದ ಮತ ಎಣಿಕೆಯಲ್ಲಿ ನನ್ನ ಉಪಸ್ಥಿತಿಯಲ್ಲಿ ಅಮಾನ್ಯಗೊಂಡಿದ್ದ 257 ಅಂಚೆಮತಗಳಲ್ಲಿ ಹೈಕೋರ್ಟ್ ನಿರ್ದೇಶನದಂತೆ ಮೇ 2ರಂದು ನಡೆದ ಮರು ಮತಎಣಿಕೆ ಸಂದರ್ಭದಲ್ಲಿ 2 ಮತಗಳು ಬಿಜೆಪಿ ಅಭ್ಯರ್ಥಿಗೆ ಸೇರಿದ್ದರೆ 255 ಮತಗಳು ಕಾಂಗ್ರೆಸ್ ಅಭ್ಯರ್ಥಿಗೆ ಸೇರಿವೆ ಎಂದಿದ್ದಾರೆ.
ಮರುಮತ ಎಣಿಕೆ ಸಂದರ್ಭದಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಮಾನ್ಯಗೊಂಡ ಮತಗಳು ತಿರಸ್ಕೃತಗೊಂಡಿರುವುದು ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ. ಹೀಗಾಗಿ ರಾಮಸ್ವಾಮಿ ಮತ್ತು ನಾನು ಆಮಿಷಕ್ಕೆ ಒಳಗಾಗಿ ಅನ್ಯಪಕ್ಷದವರಿಗೆ ಸಹಕರಿಸಿದ್ದೇವೆ ಎಂಬ ಅಪಪ್ರಚಾರ ಮಾಡುತ್ತಿರುವ ಹಿನ್ನೆಲೆಯಲ್ಲಿ ನಾವು ನಂಬಿದ ದೇವರ ಸನ್ನಿಧಿಯಲ್ಲಿ ನಾವು ಸಂಪೂರ್ಣವಾಗಿ ನಿರ್ದೋಷಿಗಳು, ಯಾವುದೇ ತಪ್ಪು ಆಗಿಲ್ಲ. ನಮ ಪಕ್ಷಕ್ಕೆ ನಿಷ್ಠೆಯಿಂದ ಇದ್ದೇವೆಂದು ಆಣೆ, ಪ್ರಮಾಣ ಮಾಡಿದ್ದೇವೆ ಎಂದು ಸತೀಶ್ ಹೇಳಿದ್ದಾರೆ.
